Don't Miss!
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- News ಹಿರಿಯೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಆಟೋ ಪಲ್ಟಿ: NHAIನ ಆ ಒಂದು ಯಡವಟ್ಟಿನ ವಿರುದ್ಧ ಭುಗಿಲೆದ್ದ ಆಕ್ರೋಶ
- Technology Poco: ಹೊಸದಾಗಿ ಲಾಂಚ್ ಆದ ಪೊಕೊ X6 ಪ್ರೊ 5G ಸ್ಮಾರ್ಟ್ಫೋನ್ಗೆ 17% ರಿಯಾಯಿತಿ!8 GB RAM
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರೆಸೆಂಟ್ ಸಾರ್ ಕಿರುಚಿತ್ರ ತಂಡದೊಡನೆ ಸಮಾಲೋಚನೆ
ಕರ್ನಾಟಕದ ಗಡಿಭಾಗದಲ್ಲಿರುವ ಕನ್ನಡ ಶಾಲೆಗಳು ಮತ್ತು ಅಲ್ಲಿನ ವಿದ್ಯಾರ್ಥಿಗಳ ಸ್ಥಿತಿಗತಿಗಳ ಒಂದು ಕಿರು ಚಿತ್ರಣವನ್ನು ಕಥನ ತಂಡದ ಆಕರ್ಷ" ಮತ್ತು ಅವರ ತಂಡ 'ಪ್ರೆಸೆಂಟ್ ಸರ್' ಮೂಲಕ ಮಾಡಿದ್ದಾರೆ.
ಫ್ರೆಂಚ್ ಲೇಖಕ ಆಲ್ಫೋನ್ಸ್ ದೋದೆ ಹೆಣೆದಿರುವ ಸಣ್ಣ ಕಥೆಯನ್ನು ಆಧರಿಸಿದ್ದು ಇದನ್ನು ಕೇಶವ ಮಳಗಿಯವರು ಕೊನೆಯ ಪಾಠ ಎಂಬ ಶೀರ್ಷಿಕೆಯಡಿ ಕನ್ನಡಕ್ಕೆ ರೂಪಾಂತರಿಸಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಪ್ರೆಸೆಂಟ್ ಸಾರ್ ಚಿತ್ರದ ಬಗ್ಗೆ ಸಾಕಷ್ಟು ಅಭಿಪ್ರಾಯಗಳು ಬಂದಿವೆ. ಕುತೂಹಲದಿಂದ ಚಿತ್ರ ವೀಕ್ಷಿಸಿದ ಹಲವಾರು ಮಂದಿಗೆ ತಮ್ಮ ಊರು, ಶಾಲೆ ನೆನಪಾಗಿದೆ. ಸ್ವಯಂಪ್ರೇರಿತರಾಗಿ ಚಿತ್ರದ ಬಗ್ಗೆ ನಾಲ್ಕು ಮೆಚ್ಚುಗೆ ಮಾತು ಬರೆದು ಫೇಸ್ ಬುಕ್, ಟ್ವಿಟ್ಟರ್ ಗಳಲ್ಲಿ ಹಂಚಿಕೊಂಡಿದ್ದಾರೆ.
ಜನಮನ ಗೆದ್ದ ಈ ಕಿರುಚಿತ್ರ ಕನ್ನಡ ಶಾಲೆ, ಭಾಷೆ ಅಳಿವು ಉಳಿವಿನ ಪ್ರಶ್ನೆಯನ್ನು ನಮ್ಮ ಮುಂದಿಡುತ್ತದೆ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ವಟದ ಹೊಸಹಳ್ಳಿ ಎಂಬ ಗ್ರಾಮದಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರವೂ ಈಗಾಗಲೇ ಬೆಂಗಳೂರು ಅಂತರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಖ್ಯವಾಗಿ ಗಡಿಭಾಗದ ಜನರಿಗೆ ಈ ಚಿತ್ರ ತಲುಪಿಸಬೇಕು ಎಂಬ ಆಶಯ ಹೊಂದಿರುವ ಚಿತ್ರತಂಡ ಒನ್ ಇಂಡಿಯಾ ಕನ್ನಡಕಚೇರಿಯಲ್ಲಿ ಕುಳಿತು ಹಂಚಿಕಂಡ ವಿಷಯಗಳು, ಕನಸುಗಳತ್ತ ಒಂದು ನೋಟ ಮುಂದಿದೆ.
ಈ ಕಿರುಚಿತ್ರ ಮಾಡುವ ಐಡಿಯಾ ಹೇಗೆ ಬಂತು?
ಆಕರ್ಷ್: ನನಗೂ ನನ್ನ ತಂಗಿ (ಸ್ಪರ್ಶ) ಗೆ ಫಿಲಂ ಅಂದರೆ ಸಿಕ್ಕಾಪಟ್ಟೆ ಆಸಕ್ತಿ. ದಿನಕ್ಕೊಂದು ಸಿನಿಮಾ ನೋಡುವಷ್ಟು ಅಭ್ಯಾಸ, ನಂತರ ಕಥೆಗಳ ಹುಡುಕಾಟದಲ್ಲಿದ್ದಾಗ ನಾನು ಒಂದು ಫ್ರೆಂಚ್ ಕಥೆಯನ್ನು ಓದಿದ್ದೆ. ಈ ಕಥೆ ಬಗ್ಗೆ ಕೇಶವ ಮಳಗಿ ಅವರಿಗೆ ಹೇಳಿದಾಗ, ಇದನ್ನು ನಾನು ಕನ್ನಡಕ್ಕೆ ಭಾಷಾಂತರ ಮಾಡಿದ್ದೀನಿ, ಬೇಕಾದರೆ ಬಳಸಿಕೊಳ್ಳಿ ಎಂದರು.
ಸ್ಪರ್ಶ : ಕಥನದಿಂದ ಪ್ರಕಾಶನವಿತ್ತು. ನನ್ನ ತಾಯಿ(ಸಾಹಿತಿ ಎಂ.ಆರ್ ಕಮಲ), ಚಂದ್ರಶೇಖರ್ ಆಲೂರು, ಕೇಶವ ಮಳಗಿ ಅವರು ನೋಡಿಕೊಳ್ಳುತ್ತಿದ್ದಾರೆ. ಇದು ಪ್ರಕಾಶನಕ್ಕೆ ಸೀಮಿತವಾಗಬಾರದು ವಿಷ್ಯುಯಲ್ ಮೀಡಿಯಾಕ್ಕೂ ವಿಸ್ತಾರವಾಗಬೇಕು ಎಂದು ಅನ್ನಿಸಿತು.
ರಿಯಲ್ ಟೈಮ್ ಸನ್ನಿವೇಶಗಳು ನಿಮ್ಮ ಗಮನಕ್ಕೆ ಬಂದಿತ್ತಾ?
ಮಳಗಿ ಅವರು ನಮಗೆ ಶಾಲೆಗಳ ಬಗ್ಗೆ ರಿಫರೆನ್ಸ್ ಆರ್ಟಿಕಲ್ ಕಳಿಸಿದ್ರು, ಗಡಿಭಾಗದಲ್ಲಿರುವ ಶಾಲೆಗಳ ಬಗ್ಗೆ, ಶಾಲೆಗಳು ಮುಚ್ಚುತ್ತಿರುವ ಬಗ್ಗೆ, ಹಾಜರಾತಿ ಸಂಖ್ಯೆ ಬಗ್ಗೆ ಆರ್ಟಿಕಲ್ಸ್ ಇತ್ತು. ಆಂಧ್ರದಿಂದ ಎರಡು ಕಿ.ಮೀ ದೂರದಲ್ಲಿರುವ ಶಾಲೆಗೆ ಭೇಟಿ ನೀಡಿ ಪರಿಸ್ಥಿತಿ ಬಗ್ಗೆ ತಿಳಿದುಕೊಂಡೆವು.
ಸ್ಪರ್ಶ: ನನ್ನ ತಾಯಿ ಸರ್ಕಾರಿ ಕಾಲೇಜಿನಲ್ಲಿ ಪ್ರಾಂಶುಪಾಲರು. ಹೀಗಾಗಿ ಸರ್ಕಾರಿ ಶಾಲೆ ಬಗ್ಗೆ ಒಂದು ಐಡಿಯಾ ಇತ್ತು. ಮಾಧ್ಯಮಗಳಲ್ಲಿ ಸುದ್ದಿಗಳನ್ನು ನೋಡುತ್ತಿದ್ದೆವು. ಹೀಗಾಗಿ ನಾವು ನಗರಕೆರೆ, ವಾಡದ ಹೊಸಳ್ಳಿ ಹೀಗೆ ಸುಮಾರು ಕಡೆ ಹೋಗಿ ರಿಸರ್ಚ್ ಮಾಡಿ ಸಿನಿಮಾ ಮಾಡಿದ್ವಿ.
ಕನಿಷ್ಠ ಹಾಜರಾತಿ ಬಗ್ಗೆ ಮಾಹಿತಿ
ನವೀನ್ ಅವರು ಶಿಕ್ಷಣ ಇಲಾಖೆಗೆ ಭೇಟಿ ನೀಡಿ ಕನಿಷ್ಠ ಹಾಜರಾತಿ ಬಗ್ಗೆ ಮಾಹಿತಿ ಪಡೆದರು. ಈ ಸಮಸ್ಯೆ 2009-10ರಲ್ಲಿ ಇತ್ತು. ಆದರೆ, ಈಗ ಹಾಜರಾತಿ ಕಡಿಮೆ ಇರೋ ಶಾಲೆಗಳನ್ನು ಮುಚ್ಚುತ್ತಿಲ್ಲ. ಅಂಥ ಶಾಲೆಗಳನ್ನು ದೊಡ್ಡ ಶಾಲೆ ಜೊತೆ ಸೇರಿಸುತ್ತಿದ್ದಾರೆ. ಇಂಥ ವ್ಯವಸ್ಥೆ ಕಣ್ಣೊರೆಸುವ ತಂತ್ರದಂತೆ ತೋರುತ್ತದೆ. ಇದು ಕೂಡಾ ಶಾಲೆ ಮುಚ್ಚುವ ಸ್ಥಿತಿಗಿಂತ ಹೊರತಲ್ಲ.
ಕಿರುಚಿತ್ರದ ಅವಧಿ ಕಡಿಮೆ ಅನ್ನಿಸಲಿಲ್ಲವೇ?
ಆಕರ್ಷ್: ಸಿನಿಮಾ ಮಾಡಿದಾಗ ಇನ್ನೂ ಹೇಳುವುದು ಬಾಕಿ ಇದೆ ಅನ್ನಿಸಿತು. ಶಾರ್ಟ್ ಫಿಲಂ ಮಾಡುವಾಗ 20 ನಿಮಿಷ ತುಂಬಾ ಲಾಗ್ ಎನ್ನುವವರಿದ್ದಾರೆ. ಹಳ್ಳಿಯವರಿಗೆ ಈ ಬಗ್ಗೆ ಮನವರಿಕೆ ಮಾಡಬಹುದಾಗಿತ್ತು. ಕ್ಲೈಮ್ಯಾಕ್ಸ್ ನಲ್ಲಿ ಮೇಷ್ಟ್ರು ಶಾಲೆ ಮುಚ್ಚುವ ಸ್ಥಿತಿಗೆ ತಂದು ನಿಲ್ಲಿಸಿದ್ದೇವೆ. ದೊಡ್ಡ ಸಿನಿಮಾವಾದರೆ, ಹಳ್ಳಿಯ ರಾಜಕೀಯವನ್ನು ತೋರಿಸಬಹುದಾಗಿತ್ತು.
ಚಿಕ್ಕಬಳ್ಳಾಪುರ ಕಡೆ ಏಕೆ ಮಾಡಿದ್ರಿ?
ನಮಗೆ ಕಾಸರಗೋಡು, ಬೆಳಗಾವಿ ಗಡಿಭಾಗವನ್ನು ಮುಟ್ಟುವ ಮನಸ್ಸಿತ್ತು. ಆದರೆ, ಕೋಲಾರ ಕಡೆ ನಮಗೆ ಹತ್ತಿರವಾಗಿತ್ತು. ಬಜೆಟ್ ಕೂಡಾ ನೋಡಿಕೊಳ್ಳಬೇಕಿತ್ತು. ಅಲ್ಲದೆ, ನಾವು ಚಿತ್ರೀಕರಣ ನಡೆಸಿದ ಶಾಲೆ ಕೂಡಾ ಗಡಿಭಾಗದ ಶಾಲೆಯಾಗಿತ್ತು. ಗೌರಿಬಿದನೂರಿನಲ್ಲಿ ಸ್ಕ್ರೀನ್ ಮಾಡುವ ಐಡಿಯಾ ಇತ್ತು. ವಾಟ್ಸಪ್, ಫೇಸ್ ಬುಕ್ ನಲ್ಲಿ ಒಳ್ಳೆ ರೆಸ್ಪಾನ್ಸ್ ಬಂತು.
ಇದಕ್ಕೆ ಬಂದಿರುವ ಒಳ್ಳೆ ಹಾಗೂ ಕೆಟ್ಟ ಪ್ರತಿಕ್ರಿಯೆ?
ನೆಗಟಿವ್ ಅಂದರೆ, ಇನ್ನಷ್ಟು ವಿಷ್ಯ ತೋರಿಸಬಹುದಿತ್ತು. ಹುಡುಗ ಇನ್ನೂ ಚೆನ್ನಾಗಿ ನಟನೆ ಮಾಡಬಹುದಿತ್ತು ಎಂದಿದ್ದಾರೆ, ನವೀನ್ ಅವರಿಗೆ ಕರೆ ಮಾಡಿ ಇದು ನಮ್ಮ ಶಾಲೆ ಸಮಸ್ಯೆ ಎಂದು ಹೇಳಿದ್ದಾರೆ. ಬಡ ಹುಡುಗ ಅಷ್ಟೊಂದು ಡುಮ್ಮಗಿದ್ದಾನೆ ಎಂದು ಕೆಲವರು ಕೇಳಿದ್ದುಂಟು.
ಚಿತ್ರೀಕರಣ ಸಂದರ್ಭದಲ್ಲಿ ಸಮಸ್ಯೆ, ಗ್ರಾಮಸ್ಥರ ಪ್ರತಿಕ್ರಿಯೆ
ಲೋಕೆಷನ್ ನೋಡಲು ಹಳ್ಳಿಗೆ ಹೋದಾಗ ಕೆಲವರು ಸಹಕಾರ ನೀಡಿ ಮಾಹಿತಿ ನೀಡಿದರು. ಇನ್ನು ಕೆಲವು ಕಡೆ ಕ್ಯಾಮೆರಾ ಬಳಸಬೇಡಿ, ಮಕ್ಕಳ ಬಗ್ಗೆ ಹೇಳಬೇಡಿ ಎಂದರು. ಸುತ್ತಾ ಮುತ್ತಾ ಸಂಪೂರ್ಣ ತೆಲುಗು ವಾತಾವಾರಣ ಇದೆ. ಹತ್ತಿರದಲ್ಲೇ ಕಾನ್ವೆಂಟ್ ಇದೆ. ಎಲ್ಲಾ ಅನುಕೂಲವಿದೆ
ನವೀನ್ : ವಸ್ತು ಸ್ಥಿತಿಯನ್ನು ತೋರಿಸುವುದು ನಮ್ಮ ಉದ್ದೇಶವಾಗಿತ್ತು. ಅದು ಈಡೇರಿದೆ ಎನಿಸಿತು. ಗೌರಿಬಿದನೂರಿನಲ್ಲಿ ಸುಮಾರು 9 ಶಾಲೆಗಳು ಸೇರಿ ನುಡಿಹಬ್ಬದಲ್ಲಿ ಪ್ರದರ್ಶನ ಮಾಡಿ ಮೆಚ್ಚಿಕೊಂಡಿದ್ದಾರೆ.
ಗೋಪಾಲಕೃಷ್ಣ, ಶಿಕ್ಷಕನ ಪಾತ್ರದ ಬಗ್ಗೆ ಹೇಳಿ?
ಈ ವಿಷ್ಯವೇ ತುಂಬಾ ಚೆನ್ನಾಗಿದೆ. ಇದಕ್ಕೆಲ್ಲ ಕಾರಣ ಈ ತಂಡ. ಒಬ್ಬ ಆಕ್ಟರ್ ಗೆ ಡೈರೆಕ್ಟರ್ ಗೆ ಒಂದು ಮೀಟಿಂಗ್ ಇರುತ್ತೆ. ಎಲ್ಲಾ ಕೂಡಿ ಬಂದಿತು.
ಸಗ್ಗದ ಸಿರಿ ಹಾಡುವಾಗ ನಮ್ಮ ತಂಡಕ್ಕೆ ಕಣ್ಣೀರು ಬಂದಿತ್ತು. ನಟರಾಜ್ ಹುಳಿಯಾರ್ ನಾಟಕದಲ್ಲಿ ನೋಡಿದ್ವಿ. ಅವರು ಡೈರೆಕ್ಟರ್ಸ್ ಆಕ್ಟರ್.
ಕವನಗಳ ಸಾಲು ಬಳಕೆ, ಪೂರಕವೋ ಅಥವಾ ಹೇರಿಕೆಯೋ?
ಆ ಪಾತ್ರ ಪೋಷಣೆಗೆ ಅದು ಬೇಕಾಯಿತು ಎಂದು ಅನಿಸಿತು. ಕನ್ನಡ ಶಿಕ್ಷಕ ಎಂದರೆ ಸ್ವಗತದಲ್ಲಿ ಕವನಗಳನ್ನು ಗುನುಗುವುದು ಸರಿ ಎನಿಸಿತು. ಅಡಿಗರ ಸಾಲು ಸೂಕ್ತ ಎನಿಸಿತು.
ಮುಂದಿನ ಯೋಜನೆಗಳು?
ಬೇರೆ ಪ್ರದೇಶಗಳಿಗೆ ತಲುಪಿಸಬೇಕು, ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶವಿದೆ. ದೊಡ್ಡ ಸಂಸ್ಥೆಗಳು ಶಾಲೆಗಳನ್ನು ದತ್ತು ತೆಗೆದುಕೊಳ್ಳುವುದು ನಡೆದಿದೆ. ಆದರೆ, ಇದು ಗಡಿನಾಡಿನ ಶಾಲೆಗೆ ಹಬ್ಬಬೇಕು. ಸ್ಕ್ರೀನಿಂಗ್ ಮಾಡಿ ಬಂದ ಮೊತ್ತವನ್ನು ಗಡಿಭಾಗದ ಶಾಲೆಗೆ ನೀಡುವ ಯೋಜನೆ ಇದೆ. ಸ್ಪರ್ಶ ಅವರ ಮ್ಯೂಸಿಕ್ ವಿಡಿಯೋ, ಭಾವಗೀತೆಗಳ ವಿಡಿಯೋಗಳನ್ನು ಕಥನ ಮೂಲಕ ಹೊರತರಲಾಗುವುದು. ನಮ್ಮ ಮೊದಲ ಹೆಜ್ಜೆಯಾಗಿದ್ದರಿಂದ ನಮಗೆ ಇದರಿಂದ ರಿಟರ್ನ್ಸ್ ನಿರೀಕ್ಷೆ ಇಟ್ಟುಕೊಳ್ಳಲೇ ಇಲ್ಲ.ಚಿಂತನೆಗೆ ಹಚ್ಚಬೇಕು, ಭಾಷಾ ಪ್ರೇಮ ಹೆಚ್ಚಾದರೆ ಸಾಕು ಎನಿಸಿತ್ತು. ಅದನ್ನು ತಕ್ಕಮಟ್ಟಿಗೆ ಸಾಧಿಸಿದ ತೃಪ್ತಿಇದೆ.
ಪ್ರೆಸೆಂಟ್ ಸಾರ್ ಕಿರುಚಿತ್ರ ವಿಡಿಯೋ
ಪ್ರೆಸೆಂಟ್ ಸಾರ್ ಕಿರುಚಿತ್ರ ಇನ್ನೂ ನೋಡಿಲ್ಲವಾದರೆ ಇಲಿದೆ ವಿಡಿಯೋ