ಐಪಿಎಲ್ ಸೈಡ್ ಎಫೆಕ್ಟ್ ; ಅವತಾರ ಪುರುಷ 2 ಬಿಡುಗಡೆ ದಿನಾಂಕ ಮುಂದಕ್ಕೆ, ಛೂ ಮಂತರ್ ಕಥೆ ಏನು..?
ಸಿನಿಮಾ ಮಾಡುವುದಷ್ಟೇ ಮುಖ್ಯ ಅಲ್ಲ. ಮಾಡಿದ ಸಿನಿಮಾವನ್ನ ಪ್ರೇಕ್ಷಕರಿಗೆ ತಲುಪಿಸುವುದು ಕೂಡ ಮುಖ್ಯ. ಅದರಲ್ಲಿಯೂ ಯಾವ ಸಿನಿಮಾ ಬಿಡುಗಡೆಯಾಗಿದೆ ಎಂದು ಹುಡುಕಾಡಿ ಪ್ರೇಕ್ಷಕ ಚಿತ್ರಮಂದಿರಕ್ಕೆ ಹೋಗುವಷ್ಟರಲ್ಲಿ, ಎಲ್ಲದಕ್ಕೂ ಪ್ರೇಕ್ಷಕರನ್ನ ಹೊಣೆಯಾಗಿಸಿ ಚಿತ್ರಮಂದಿರಗಳಿಂದ ಚಿತ್ರ ಎತ್ತಂಗಡಿ ಮಾಡುವ ಕಾಲ ಇದು. ಈ ಕಾಲದಲ್ಲಿ ಕ್ವಾಲಿಟಿಯ ಜೊತೆ ಪ್ರಚಾರ ಕೂಡ ಮುಖ್ಯ. ಆದರೆ ನಮ್ಮಲ್ಲಿ ಕ್ವಾಲಿಟಿಯತ್ತ ಗಮನ ಕೊಡುವ ಬಹುತೇಕರು ಪ್ರಚಾರಕ್ಕೆ ಪ್ರಾಶಸ್ತ್ಯ ಕೊಡಲ್ಲ.ಇದಕ್ಕೆ ಮತ್ತೊಂದು ಉದಾಹರಣೆ ಅವತಾರ ಪುರುಷ ಭಾಗ ಎರಡು.
ಹೌದು ನಿಮಗೆ ನೆನಪಿದ್ದರೆ ಕೆಲ ದಿನದ ಹಿಂದೆ ಅವತಾರ ಪುರುಷ ಭಾಗ ಎರಡು ಮಾರ್ಚ್ 22ಕ್ಕೆ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿತ್ತು. ಚಿತ್ರತಂಡದ ಈ ನಿರ್ಧಾರದಿಂದ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನದ ಅಲೆಯೂ ಎದ್ದಿತ್ತು. ಯಾಕೆಂದರೆ ಅವತ್ತು ಅಂದರೆ ಮಾರ್ಚ್ 22ಕ್ಕೆ ಐಪಿಎಲ್ ಕದನ ಆರಂಭವಾಗಲಿದೆ. ಇನ್ನೂ ಮೊದಲನೇ ಪಂದ್ಯ ಇರುವುದು ಸಿಎಸ್ ಕೆ ಹಾಗೂ ಆರ್ಸಿಬಿಯ ನಡುವೆ. ಇನ್ನೂ ಆರ್ಸಿಬಿ ಮೇಲೆ ಸಿಂಪಲ್ ಸುನಿಗೆ ಇರುವ ಅಭಿಮಾನ ಎಲ್ಲರಿಗೂ ಗೊತ್ತಿರುವಂತದ್ದೆ.

ಈ ಕಾರಣಕ್ಕೆ ಮಾರ್ಚ್ 22ಕ್ಕೆ ಅವತಾರ ಪುರುಷ ಭಾಗ ಎರಡನ್ನ ಬಿಡುಗಡೆ ಮಾಡಬೇಡಿ ಎಂಬ ಮನವಿಯನ್ನ ಅನೇಕರು ಮಾಡಿದ್ದರು. ಇನ್ನೂ ಎಲ್ಲಕ್ಕಿಂತ ಹೆಚ್ಚಾಗಿ ಶರಣ್ ಅಭಿನಯದ ಮತ್ತೊಂದು ಸಿನಿಮಾ ಛೂ ಮಂತರ್ ಚಿತ್ರದ ಬಿಡುಗಡೆಗೆ ಏಪ್ರಿಲ್ 05ರಂದು ಮುಹೂರ್ತ ಫಿಕ್ಸ್ ಆಗಿತ್ತು. ಹೀಗಾಗಿ ಕೇವಲ ಹದಿನೈದೇ ದಿನದಲ್ಲಿ ಶರಣ್ ಅವರಂತಹ ಸ್ಟಾರ್ ನಟನ ಸಿನಿಮಾ ಬಂದರೆ ಹೇಗೆ..? ಎಂಬ ಪ್ರಶ್ನೆಯೂ ಎದ್ದಿತ್ತು.
ಈ ಎಲ್ಲ ಅಭಿಪ್ರಾಯಗಳನ್ನ ಸಿಂಪಲ್ ಸುನೀ ಗಮನಿಸಿದ್ದಾರಾ, ಅಳೆದು ತೂಗಿ ಲೆಕ್ಕಾಚಾರ ಸರಿ ಇದೆಯಾ ಎಂದು ನೋಡಿದ್ದಾರಾ ಗೊತ್ತಿಲ್ಲ. ಆದರೆ ಸದ್ಯಕ್ಕೆ ಅವತಾರ ಪುರುಷ ಚಿತ್ರದ ಬಿಡುಗಡೆಯ ದಿನವನ್ನು ಸಿಂಪಲ್ ಸುನೀ ಹಾಗೂ ಪುಷ್ಕರ್ ಮಲ್ಲಿಕಾರ್ಜುನಯ್ಯ ಮುಂದೂಡಿದ್ದಾರೆ. ಏಪ್ರಿಲ್ 05ಕ್ಕೆ ಛೂ ಮಂತರ್ ಬದಲು ಅವತಾರ ಪುರುಷ ಬಿಡುಗಡೆಯಾಗಲಿದೆ ಎಂದಿದ್ದಾರೆ.
ಈ ಬೆಳವಣಿಗೆ ಹಾಗೂ ನಿರ್ಧಾರ ಮೆಚ್ಚುವಂತದ್ದೇ. ಆದರೂ ಕೂಡ ಐಪಿಎಲ್ ನಡುವೆ ಈ ಬಿಡುಗಡೆಯ ಸಾಹಸ ಬೇಕಿರಲಿಲ್ಲ ಅನ್ನುವುದು ಅನೇಕರ ಅಭಿಪ್ರಾಯ. ಇನ್ನೂ ಚಿತ್ರದ ಬಿಡುಗಡೆಗೆ ಬಾಕಿ ಉಳಿದಿರೋದು ಇನ್ನೂ ಹದಿನೈದು ಮಾತ್ರ. ಆದರೆ ಪ್ರಚಾರದ ವಿಚಾರದಲ್ಲಿ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರಲ್ಲಿ ಮೊದಲು ಕಂಡು ಬರುತ್ತಿದ್ದ ಅಗ್ರೆಸಿವ್ ನೆಸ್ ಕಂಡು ಬರುತ್ತಿಲ್ಲ. ಈ ಕಾರಣಕ್ಕೆ ಇನ್ನೂ ತಡವಾದರೂ ಪರವಾಗಿಲ್ಲ, ಸಾಧಕ ಬಾಧಕಗಳನ್ನ ನೋಡಿಯೇ ಬಿಡುಗಡೆ ಮಾಡಿ ಎಂಬ ಮನವಿಯನ್ನ ಕನ್ನಡದ ಕಲಾ ಪ್ರೇಮಿಗಳು ಸಿಂಪಲ್ ಸುನೀ ಹಾಗೂ ಪುಷ್ಕರ್ ಮಲ್ಲಿಕಾರ್ಜುನಯ್ಯ ಇಬ್ಬರಲ್ಲಿಯೂ ಮಾಡಿಕೊಳ್ಳುತ್ತಿದ್ದಾರೆ.

ಇನ್ನೂ ಅವತಾರ ಪುರುಷ ಭಾಗ ಎರಡು ಏಪ್ರಿಲ್ 05ಕ್ಕೆ ತೆರೆಗೆ ಬರುತ್ತಿರುವ ಹಿನ್ನೆಲೆ, ಅವತ್ತು ಬಿಡುಗಡೆಯಾಗಬೇಕಿದ್ದ ಶರಣ್ ಅಭಿನಯದ ಮತ್ತೊಂದು ಸಿನಿಮಾ ಛೂ ಮಂತರ್ ಕಥೆ ಏನು ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಸದ್ಯಕ್ಕೆ ಈ ಪ್ರಶ್ನೆಗೆ ನಿಖರವಾದ ಉತ್ತರ ಇಲ್ಲ. ಗಾಂಧಿನಗರದಲ್ಲಿ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ ಛೂ ಮಂತರ್ ಬಿಡುಗಡೆಯಾಗುವುದು ಲೋಕಸಭೆ ಚುನಾವಣೆಯ ಬಳಿಕವಷ್ಟೇ.
ಒಟ್ಟಿನಲ್ಲಿ ಸದ್ಯಕ್ಕೆ ಅವತಾರ ಪುರುಷ ಮಾರ್ಚ್ 22ರ ಬದಲು ಏಪ್ರಿಲ್ ಐದಕ್ಕೆ ಬಿಡುಗಡೆಯಾಗಲಿದೆ. ಛೂ ಮಂತರ್ ಚಿತ್ರದ ಹೊಸ ಬಿಡುಗಡೆಯ ದಿನಾಂಕ ಇನ್ನೂ ಘೋಷಣೆಯಾಗಬೇಕಿದೆ. ಐಪಿಎಲ್ ಭರಾಟೆಯ ನಡುವೆ ಎರಡು ಚಿತ್ರಗಳಿಗೂ ಸದ್ಯಕ್ಕೆ ಪ್ರಚಾರದ ಕೊರತೆ ಕಂಡು ಬರುತ್ತಿದೆ. ಈ ಕೊರತೆಯನ್ನ ಎರಡು ತಂಡಗಳು ನೀಗಿಸಲಿ, ವ್ಯಕ್ತವಾಗ್ತಿರುವ ಅಭಿಪ್ರಾಯಗಳಂತೆ ಸಾಧಕ ಬಾಧಕಗಳನ್ನೆಲ್ಲ ನೋಡಿ ಚಿತ್ರ ತಂಡಗಳು ಚಿತ್ರಗಳನ್ನ ಬಿಡುಗಡೆ ಮಾಡಲಿ ಅನ್ನುವುದು ಕನ್ನಡ ಕಲಾ ಪ್ರೇಮಿಗಳ ಆಶಯ


Click it and Unblock the Notifications











