ರೌಡಿಗಳ ಹಗೆತನಕ್ಕೆ 'ಬಲಿ ಕಾ ಬಕ್ರಾ' ಆದ ದಾಸ ? ದರ್ಶನ್ ಫೋಟೋ ಲೀಕ್ ಹಿಂದೆ 'ಸೈಲೆಂಟ್ ಸುನೀಲ'ನ ಕೈವಾಡ?
ಒಂದು ಕಡೆ ಪರಪ್ಪನ ಅಗ್ರಹಾರದಲ್ಲಿ ಕೈಯಲ್ಲಿ ಕಾಫಿ ಮಗ್, ಮತ್ತೊಂದು ಕೈಯಲ್ಲಿ ಸಿಗರೇಟ್ ಹಿಡಿದು ಕುಂತ ದರ್ಶನ್ ಅವರ ದರ್ಶನ ಪಡೆದು ಅವರ ಅಸಂಖ್ಯಾತ, ಅಗಣಿತ ಭಕ್ತಗಣದ ಜೀವನ ಪಾವನವಾಗಿದೆ.
ಮತ್ತೊಂದು ಕಡೆ ಕೊಲೆ ಆರೋಪವನ್ನೊತ್ತು ಪರಪ್ಪನ ಅಗ್ರಹಾರದ ಪಾಲಾದ ಪೊರ್ಕಿಗೆ ಈ ತರಹದ ಐಶಾರಾಮಿ ಜೀವನ ನಡೆಸಲು ಅನುಮತಿಯನ್ನೂ ನೀಡಿದ್ದಾದರೂ ಯಾರು ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಅಧಿಕಾರಿಗಳಾ..? ಆಪ್ತರಾ..? ರೌಡಿಗಳಾ..? ಪ್ರಭಾವಿ ರಾಜಕಾರಣಿಗಳಾ..? ಯಾರ ಕೃಪೆಯಿಂದ ದರ್ಶನ್ ಇಷ್ಟೊಂದು ನೆಮ್ಮದಿಯಾಗಿ ಜೈಲಿನಲ್ಲಿ ಇದ್ದಾರೆ ಎನ್ನುವ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ.ಇದರ ನಡುವೆ ರೌಡಿಗಳ ನಡುವೆ ಇರುವ ಹಗೆತನ, ದ್ವೇಷಕ್ಕೆ ದರ್ಶನ್ 'ಬಲಿ ಕಾ ಬಕ್ರಾ' ಆದರಾ ಅನ್ನುವ ಅನುಮಾನ ಕೂಡ ಹಲವರನ್ನು ಕಾಡುತ್ತಿದೆ. ಸೈಲೆಂಟ್ ಸುನೀಲನ ಹೆಸರು ಈ ಫೋಟೋ ಲೀಕ್ ಹಿಂದೆ ಕೇಳಿ ಬರುತ್ತಿದೆ.

ಹೌದು, ನಿಮಗೆ ಗೊತ್ತಿರಲಿ.. ದರ್ಶನ್ ಪಕ್ಕ ಕುಂತುಕೊಂಡು ಕಿಲ ಕಿಲ ಎಂದು ನಗುತ್ತಿದ್ದ ವಿಲ್ಸನ್ ಗಾರ್ಡನ್ ನಾಗ ಒಂದು ಕಾಲದಲ್ಲಿ ಒಂಟೆ ರೋಹಿತ್ನ ಬಲಗೈ ಬಂಟನಾಗಿದ್ದ. ಇನ್ನೂ ವಿಶೇಷ ಅಂದರೆ ಇದೇ ಒಂಟೆ ರೋಹಿತ್ ಮತ್ತು ಸೈಲೆಂಟ್ ಸುನೀಲ ಆ ಕಾಲದಲ್ಲಿ ಗಳಸ್ಯ ಕಂಠಸ್ಯ ಸ್ನೇಹಿತರಾಗಿದ್ದರು. ಇನ್ನೂ ಒಂಟೆ ರೋಹಿತ್ನಿಗೆ ವಿಲ್ಸನ್ ಗಾರ್ಡನ್ ನಾಗ ಹೇಗೆ ಆಪ್ತನಾಗಿದ್ದನೋ ಅದೇ ರೀತಿ ಸೈಲೆಂಟ್ ಸುನೀಲಗೆ ಡಬಲ್ ರೋಡ್ ಲಿಂಗ ಅತ್ಯಾಪ್ತವಾಗಿದ್ದ.
ಆದರೂ ಕೂಡ ತಮ್ಮ ತಮ್ಮ ಗುರುಗಳು ಪರಮಾಪ್ತರು ಆಗಿದ್ದರೂ ಕೂಡ ಅದ್ಯಾಕೋ ಡಬಲ್ ರೋಡ್ ಲಿಂಗ ಮತ್ತು ವಿಲ್ಸನ್ ಗಾರ್ಡನ್ ನಾಗನ ನಡುವೆ ಮೊದಲಿಂದ ಕಿರಿಕ್ ನಡೆಯುತ್ತಾನೇ ಇತ್ತು. ಹೀಗಿದ್ದೂ ಕೂಡ ಇಬ್ಬರು ಹಲ್ಲು ಕಚ್ಚಿಕೊಂಡು ಸುಮ್ಮನೆ ಇದ್ದರು. ಸೈಲೆಂಟ್ ಸುನೀಲ ಮತ್ತು ಒಂಟೆ ರೋಹಿತ್ ಈ ಇಬ್ಬರನ್ನು ಒಂದು ಮಾಡುವ ಪ್ರಯತ್ನವನ್ನು ಅನೇಕ ಬಾರಿ ಮಾಡಿದ್ದರಾದರೂ ಅದು ಕೈಗೂಡಿರಲಿಲ್ಲ.

ಹೀಗಿರುವಾಗ 2020ರ ಡಿಸೆಂಬರ್ 15ರಂದು ಡಬಲ್ ರೋಡ್ ಲಿಂಗ ಅಲಿಯಾಸ್ ಲಿಂಗರಾಜ್ ಊಹೆಗೂ ನಿಲುಕದ ರೀತಿಯಲ್ಲಿ ಹಾಸನದಲ್ಲಿ ಹೆಣವಾಗಿದ್ದ. ಹಾಸನದ ಫಾರಂಹೌಸ್ ನಲ್ಲಿದ್ದ ಲಿಂಗರಾಜ್ ಮನೆ ಮೇಲೆ ಅವತ್ತು ಡಬಲ್ ಮೀಟರ್ ಮೋಹನ, ನಂಜಪ್ಪ, ವಾಲ್ಟರ್, ನವೀನ, ಪ್ರದೀಪ, ರಮೇಶ, ಪಾರ್ತಿಬನ್, ಕಣ್ಣ, ಸುರೇಶ, ಮನೋಹರ ಮತ್ತು ಸುದೀಪ ಸೇರಿದಂತೆ ಹನ್ನೆರಡು ಜನ ದಾಳಿ ಮಾಡಿದ್ದರು. ಲಿಂಗನ ಮುಖಾಮೂತಿ ನೋಡದೇ ಕೊಚ್ಚಿ ಹಾಕಿದ್ದರು. ಆಗ ಡಬಲ್ ರೋಡ್ ಲಿಂಗನ ಕೊಲೆಯ ಹಿಂದೆ ಇದೇ ವಿಲ್ಸನ್ ಗಾರ್ಡನ್ ನಾಗನ ಕೈವಾಡ ಇದೆ ಎನ್ನುವ ಮಾತು ಕೂಡ ಕೇಳಿ ಬಂದಿತ್ತು.
ಸೈಲೆಂಟ್ ಸುನೀಲನ ಆಪ್ತ ಲಿಂಗರಾಜ್ ಆ ಕಡೆ ಹೆಣವಾಗಿ ಬಿದ್ದ ನಂತರ ಈ ಕಡೆ ಬೆಂಗಳೂರು ಪಾತಕ ಲೋಕದಲ್ಲಿ ನಂಬಿಕೆ ಎಂಬುದು ಸಮಾಧಿಯಾಗಿತ್ತು. ಅಪಾರ ಪ್ರೀತಿಪಾತ್ರನೂ ಆಗಿದ್ದ ಲಿಂಗನನ್ನು ತಮ್ಮದೇ ಹುಡುಗ ವಿಲ್ಸನ್ ಗಾರ್ಡನ್ ನಾಗ ಕೊಲ್ಲಿಸಿ ಕೆಡವಿದ್ದು ಸೈಲೆಂಟ್ ಸುನೀಲ ಮತ್ತು ಒಂಟೆ ರೋಹಿತ್ ಬೇಸರಕ್ಕೆ ಕಾರಣವಾಗಿತ್ತು. ಈ ಇಬ್ಬರ ಸಂಬಂಧ-ಸ್ನೇಹ ಮುರಿದು ಬಿತ್ತು.

ಇಲ್ಲಿಂದಾಚೆ ವಿಲ್ಸನ್ ಗಾರ್ಡನ್ ನಾಗನನ್ನು ಕಂಡರೆ ಸೈಲೆಂಟ್ ಸುನೀಲ ಒಳಗೊಳಗೆ ಕುದಿಯಲು ಶುರುವಾಗಿದ್ದ. ಇನ್ನೂ ವಿಲ್ಸನ್ ಗಾರ್ಡನ್ ನಾಗ ಹೇಳಿ ಕೇಳಿ ದರ್ಶನ್ ಅವರ ಅಪ್ಪಟ ಅಭಿಮಾನಿ ಎನ್ನುವ ಮಾತು ಇದೆ. ಇದಕ್ಕೆ ಪೂರಕವಾಗಿ ದರ್ಶನ್ ಗೆ ಆತಿಥ್ಯ ನೀಡಲು ಸೈಕಲ್ ರವಿ ಮತ್ತು ವಿಲ್ಸನ್ ಗಾರ್ಡನ್ ನಾಗನ ನಡುವೆ ಪೈಪೋಟಿ ನಡೆದಿದೆ ಎಂಬ ವಿಚಾರವನ್ನು ಹಿಂದೆ ಮಾಧ್ಯಮಗಳು ವರದಿ ಮಾಡಿವೆ. ಹೀಗಾಗಿಯೇ ಆಪ್ತ ಲಿಂಗನನ್ನು ಪರಲೋಕಕ್ಕೆ ಕಳಿಸಿದ್ದಲ್ಲದೇ ದರ್ಶನ್ ಸ್ನೇಹವನ್ನು ಗಿಟ್ಟಿಸಿಕೊಳ್ಳಲು ನಾಗನ ಪ್ರಯತ್ನಗಳನ್ನು ಕಂಡು ಸೈಲೆಂಟ್ ಸುನೀಲ, ಮಾರ್ಕೆಟ್ ವೇಲುನ ಸಹಾಯದಿಂದ ಫೋಟೋ ತೆಗಿಸಿ ಆ ಫೋಟೋ ಲೀಕ್ ಮಾಡಿರಬಹುದು ಎನ್ನುವ ಅನುಮಾನ ಸದ್ಯ ಭೂಗತ ಲೋಕದಲ್ಲಿರುವ ಅನೇಕರನ್ನು ಕಾಡುತ್ತಿದೆ. ಇನ್ನೂ ಇದೆಲ್ಲದರ ನಡುವೆ ರಚಿತಾ ರಾಮ್ ಜೈಲಿಗೆ ಹೋಗಿ ದರ್ಶನ್ ಭೇಟಿ ಮಾಡಿ ಬಂದ ಮಾರನೇ ದಿನಕ್ಕೆಲ್ಲಾ ಫೋಟೋ ಲೀಕ್ ಆಗಿರುವುದು ಕೂಡಾ ಮತ್ತೊಂದು ಮಜಲನ್ನು ಅನಾವರಣಗೊಳಿಸುತ್ತಿದೆ


Click it and Unblock the Notifications











