ದರ್ಶನ್ ಮಾರ್ಕೆಟ್ ಡೌನ್ ಅಂದೋರಿಗೆ ಇಲ್ಲಿದೆ ಉತ್ತರ
''ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಡಿಮ್ಯಾಂಡ್ ಕಮ್ಮಿಯಾಗಿದೆ! 'ಸ್ಯಾಂಡಲ್ ವುಡ್ ಸುಲ್ತಾನ್' ಆಗಿದ್ದ ದರ್ಶನ್, ಈಗ ಸೈಲೆಂಟ್ ಆಗಿ ಸೈಡ್ ನಲ್ಲಿದ್ದಾರೆ. ಗಾಂಧಿನಗರದಲ್ಲಿ 'ದಾಸ'ನ ದರ್ಬಾರ್ ಮುಗಿದಿದೆ. ಇನ್ಮೇಲೇನಿದ್ದರೂ 'ಬೇರೆಯವರ ಹವಾ''.
ಹೀಗಂತ ಗಾಂಧಿನಗರದವ್ರು, ಸಿನಿ ಪ್ರಿಯರು ಮಾತನಾಡಿಕೊಳ್ಳುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ 'ಅಂಬರೀಶ' ಸೋಲು. ಹೆಚ್ಚು ಸಮಯ ತೆಗೆದುಕೊಂಡು ರೆಡಿ ಮಾಡಿದ್ದ 'ಅಂಬರೀಶ' ಚಿತ್ರ ಹೇಳ ಹೆಸರಿಲ್ಲದಂತೆ ಮಾಯವಾಯ್ತು.
ಒಂದು ಚಿತ್ರ ಸೋತಿದ್ದಕ್ಕೆ ದರ್ಶನ್ ರನ್ನ ಕೇಳೋರೇ ಇಲ್ಲ. ನಿರ್ಮಾಪಕರಿಂದ ಬೇಡಿಕೆ ಇಲ್ಲ ಅನ್ನುವ ಅಂತೆ-ಕಂತೆಗಳು ಗಾಂಧಿನಗರದಲ್ಲೀಗ ಎಗ್ಗು ಸಿಗ್ಗಿಲ್ಲದೇ ಹರಿದಾಡುತ್ತಿದೆ. ಅಸಲಿಗೆ ದರ್ಶನ್ ಕೈಯಲ್ಲಿ ಚಿತ್ರಗಳೇ ಇಲ್ವಾ? ದರ್ಶನ್ ಗೆ ನಿಜಕ್ಕೂ ಮಾರ್ಕೆಟ್ ಕುಸಿದಿದೆಯಾ? ಇಂತಹ ತಲೆ-ಬುಡವಿಲ್ಲದ ಸುದ್ದಿಗಳಿಗೆ ದರ್ಶನ್ ಅಭಿಮಾನಿಗಳ ಸಂಘ 'ಡಿ ಕಂಪನಿ' ತಿರುಗೇಟು ನೀಡಿದೆ. ಮುಂದೆ ಓದಿ.....

ದರ್ಶನ್ ಮಾರುಕಟ್ಟೆ ಕುಸಿದಿದೆ.!
''ಕನ್ನಡದ ಸೂಪರ್ ಸ್ಟಾರ್ ದರ್ಶನ್ ಮಾರುಕಟ್ಟೆ ಕುಸಿದಿದೆ! ಅವರ ಬಹುನಿರೀಕ್ಷೆಯ ಚಿತ್ರವಾದ 'ಅಂಬರೀಶ' ಸೋತದ್ದೆ ಸೋತದ್ದು ಅವರ ಬೇಡಿಕೆ ಕಡಿಮೆಯಾಗಿದೆ ಎಂಬುದು ಅಲ್ಲಲ್ಲಿ ಹರಿದಾಡುತ್ತಿರುವ ಸುದ್ದಿ. ಆದರೆ ಅಂಬರೀಶ ಚಿತ್ರದ ಸೋಲು, ದರ್ಶನ್ ಅವರ ಬೇಡಿಕೆ ಕುಸಿಯುವಂತೆ ಮಾಡಿರುವುದೇ ಎಂಬುದು ಪ್ರಶ್ನೆ. ಆದರೆ ನೆನಪಿರಲಿ. ದರ್ಶನ್ ಕೇವಲ ಒಂದು ಚಿತ್ರದಿಂದ ಸ್ಟಾರ್ ಆದ ನಟ ಅಲ್ಲ. ಹಾಗಾಗಿ ಒಂದು ಚಿತ್ರದ ಸೋಲು ಅವರ ಬೇಡಿಕೆ ಕುಸಿಯುವಂತೆ ಮಾಡುತ್ತದೆ ಎಂಬುದು ಶುದ್ಧ ಸುಳ್ಳು.'' ಅಂತ ದರ್ಶನ್ ಅಭಿಮಾನಿಗಳ ಸಂಘ 'ಡಿ' ಕಂಪನಿ ಪ್ರತ್ತ್ಯುತ್ತರ ನೀಡಿದೆ. [ಎ.ಪಿ.ಅರ್ಜುನ್ ವಿರುದ್ಧ ತಿರುಗಿಬಿದ್ದ ದರ್ಶನ್ ಕಂಪನಿ]

ವಿಕೃತ ಆನಂದ ಅನುಭವಿಸುವವರು..!
''ದರ್ಶನ್ ಮಾರುಕಟ್ಟೆ ಕುಸಿದಿಲ್ಲ. ಆದ್ರೆ, ಕೆಲ 'ಸಿನಿ'ಕರು ಈ ತರಹದ ಸುದ್ದಿ ಹರಡಿ ವಿಕೃತ ಆನಂದ ಅನುಭವಿಸುತ್ತಿರುತ್ತಾರೆ. ಅದವರ ಕರ್ಮ...ಅಲ್ಲವೇ...'' - 'ಡಿ' ಕಂಪನಿ [ಹೆಸರಿಗೆ ಮಸಿ ಬಳಿದವರಿಗೆ ಟ್ವಿಟ್ಟರ್ ನಲ್ಲಿ ದರ್ಶನ್ ಟಾಂಗ್]

ದರ್ಶನ್ ಮಿನಿಮಂ ಗ್ಯಾರೆಂಟಿ ನಟ
''ನಟ ದರ್ಶನ್ ಮಿನಿಮಂ ಗ್ಯಾರಂಟಿ ನಟ ಎನಿಸಿಕೊಂಡಿದ್ದವರು. ದರ್ಶನ್ ಅಭಿನಯದ ಚಿತ್ರಗಳಿಗೆ ಹಣ ಸುರಿದರೆ ಹಾಕಿದ ಬಂಡವಾಳಕ್ಕೆ ಖಾತರಿ ಎಂದಷ್ಟೇ ನಿರ್ಮಾಪಕರು ಯೋಚಿಸುತ್ತಿದ್ದರು. ಸ್ವತಃ ದರ್ಶನ್ ಕೂಡ ಅಷ್ಟೇ. ಸ್ಟಾರ್, ಸೂಪರ್ ಸ್ಟಾರ್ ಮುಂತಾದ ಇಮೇಜ್ ಗೆ ಜೋತು ಬೀಳದೆ ಕೈಗೆ ಸಿಕ್ಕ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದರು. ಅವರ ಅಭಿನಯ ಸಾಮರ್ಥ್ಯವನ್ನು ಪಕ್ಕಕ್ಕಿಟ್ಟು ಬರೀ ಹೊಡಿ ಬಡಿ ಚಿತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. 'ನಮ್ಮ ಪ್ರೀತಿಯ ರಾಮು' ಚಿತ್ರದ ಕುರುಡನ ಪಾತ್ರವನ್ನು, 'ಅನಾಥರು' ಚಿತ್ರದಲ್ಲಿನ ಕಳ್ಳನ ಪಾತ್ರವನ್ನು ಇಮೇಜ್ ಗೆ ಕಟ್ಟು ಬೀಳದೆ ನಿರ್ವಹಿಸಿದ್ದರು. ಆದರೆ ಯಶಸ್ಸು ಅವರ ಕೈ ಹಿಡಿಯದೆ ಹೋದಾಗ ದುಷ್ಟ ಸಂಹಾರಕ್ಕೆ ನಿಂತಿದ್ದರು.'' - 'ಡಿ' ಕಂಪನಿ [ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿಕ್ಸ್ ಪ್ಯಾಕ್ ಕಸರತ್ತು?]

ಕ್ಷಮೆ ಕೋರಿದ ದರ್ಶನ್..!
''ಯಾವಾಗ ಅವರ ಪತ್ನಿಯೊಂದಿಗಿನ ವಿರಸ, ಆನಂತರದ ಘಟನೆಗಳು ಜನರಲ್ಲಿ ದರ್ಶನ್ ಅವರ ನಿಜ ಸ್ವರೂಪವನ್ನು ತೋರಿಸಿಕೊಟ್ಟಿತೋ ದರ್ಶನ್ ಗೆ ತಮ್ಮ ಮೌಲ್ಯದ ಅರಿವಾಯಿತು, ಹಾಗೆಯೇ ಜನರಿಗೂ ದರ್ಶನ್ ಕೌಟುಂಬಿಕ ಜಗಳಕ್ಕಿಂತ ಅವರಲ್ಲಿನ ನೇರವಂತಿಕೆ ಇಷ್ಟವಾಯಿತು. ಒಂದು ತಿಂಗಳ ಸೆರೆವಾಸದ ನಂತರ ಹೊರಬಂದ ದರ್ಶನ್ ನೆರೆದಿದ್ದ ಅಭಿಮಾನಿಗಳ ಎದುರು ಕ್ಷಮೆ ಕೋರಿದರು. 'ಸಾರಥಿ' ಚಿತ್ರಕ್ಕಾಗಿ ಊರೂರು ಅಲೆದರು. ಅಲ್ಲಿಂದ 'ಚಿಂಗಾರಿ' ಚಿತ್ರ ಬರುವಷ್ಟರಲ್ಲಿ ದರ್ಶನ್ ಅಟ್ಟಕ್ಕೇರಿದ್ದರು. 1997 ರಿಂದ 2011 ರವರೆಗಿನ ವೃತ್ತಿ ಜೀವನದಲ್ಲಿನ ದರ್ಶನ್ ಅವರ ಸ್ಟಾರ್ ಗಿರಿ ತೂಕ ಒಂದಾದರೆ, 'ಸಾರಥಿ' ನಂತರದ ತೂಕವೇ ಬೇರೆಯಾಯಿತು.'' - 'ಡಿ' ಕಂಪನಿ

'ಸೂಪರ್ ಸ್ಟಾರ್' ಆಗಿದ್ದು ಹೇಗೆ?
''ಸರಿಸುಮಾರು ನಲವತ್ತೆಂಟು ಚಿತ್ರಗಳಲ್ಲಿ ಅಭಿನಯಿಸಿದ್ದ ದರ್ಶನ್ 'ಸಾರಥಿ' ನಂತರದ ಐದಾರು ಚಿತ್ರಗಳಲ್ಲಿ ಸೂಪರ್ ಸ್ಟಾರ್ ಆಗಿಹೋಗಿದ್ದರು. ಇವತ್ತಿಗೂ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಸ್ಟಾರ್ ನಟ ದರ್ಶನ್ ಅವರ ಸಾಧನೆ ಹಿಂದೆ ನಲವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರ ಒಳ್ಳೆಯತನದ ಕೊಡುಗೆ ಇದೆ. ಅದೆಲ್ಲಾ ಒಂದೇ ಚಿತ್ರದ ಸೋಲಿನಿಂದ ಕೊಚ್ಚಿಕೊಂಡುಹೋಗುತ್ತದೆ ಎಂಬುದು ಸತ್ಯಕ್ಕೆ ದೂರವಾದದ್ದು.''- 'ಡಿ' ಕಂಪನಿ

ದರ್ಶನ್ ಕುರ್ಚಿ ಭದ್ರವಾಗಿದೆ..!
''ದರ್ಶನ್ ಕೈತುಂಬಾ ಚಿತ್ರಗಳಿವೆ. ಇವತ್ತಿಗೂ ಅವರ ಚಿತ್ರಗಳಿಗೆ ದಾಖಲೆ ಮೊತ್ತದ ಸ್ಯಾಟೆಲೈಟ್ ರೈಟ್ಸ್ ದೊರೆಯುತ್ತದೆ. ಅವರ ಚಿತ್ರಗಳ ಬಿಡುಗಡೆ ಎಂದರೆ ಜನ ಮುಗಿ ಬೀಳುತ್ತಾರೆ. ಹಾಗಾಗಿ ದರ್ಶನ್ ಕುರ್ಚಿ ಭದ್ರವಾಗಿದೆ. ಅದನ್ನು ಉಳಿಸಿಕೊಳ್ಳುವುದು ಕಷ್ಟದ ಕೆಲಸವಾದರೂ ಅಸಾಧ್ಯದ ಕೆಲಸವಲ್ಲ. ಅದು ದರ್ಶನ್ ಗೆ ಗೊತ್ತಿದೆ.'' - 'ಡಿ' ಕಂಪನಿ [ಚಾಲೆಂಜಿಂಗ್ ಸ್ಟಾರ್ ಗೆ ಚಾಲೆಂಜ್ ಹಾಕಿದ ಪಿ.ಶೇಷಾದ್ರಿ]

ದರ್ಶನ್ ಪರ ಬ್ಯಾಟಿಂಗ್
''ಸ್ಟಾರ್ ಗಿರಿ ಉಳಿಸಿಕೊಳ್ಳುವುದು ಕಷ್ಟವಾದರೂ, ಅಸಾಧ್ಯ ಅಲ್ಲ'' ಅಂತ ಒಪ್ಪಿಕೊಳ್ಳುವ ಮೂಲಕ ಸೋಲು-ಗೆಲುವನ್ನ ಸಮನಾಗಿ ಸ್ವೀಕರಿಸಿರುವ ದರ್ಶನ್ ಕೆಪಾಸಿಟಿಯನ್ನ 'ಡಿ' ಕಂಪನಿ ಸಮರ್ಥಿಸಿಕೊಂಡಿದೆ. 'ಡಿ' ಕಂಪನಿ ಸುದೀರ್ಘ ಪ್ರತಿಕ್ರಿಯೆ ನೀಡಿರುವ ಫೇಸ್ ಬುಕ್ ಲಿಂಕ್ ಇಲ್ಲಿದೆ ನೋಡಿ....

'ಐರಾವತ' ಆಗಲಿದ್ದಾರೆ ದರ್ಶನ್
ಖಡಕ್ ಪೊಲೀಸ್ ಆಫೀಸರ್ ಲುಕ್ ನಲ್ಲಿ ದರ್ಶನ್ 'ಮಿಸ್ಟರ್ ಐರಾವತ' ಆಗಿ ರೆಡಿಯಾಗುತ್ತಿದ್ದಾರೆ. ಕಟ್ಟುಮಸ್ತಾದ ಸಿಕ್ಸ್ ಪ್ಯಾಕ್ ಬಾಡಿ ಬಿಲ್ಡ್ ಮಾಡಿರುವ ದರ್ಶನ್ ನ ತೆರೆಮೇಲೆ ನೋಡುವುದಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ಇದರೊಂದಿಗೆ 'ವಿರಾಟ್', 'ಜಗ್ಗು ದಾದಾ' ಚಿತ್ರಗಳು ದರ್ಶನ್ ಕೈಯಲ್ಲಿವೆ.


Click it and Unblock the Notifications











