'ಯುವ' ಚಿತ್ರಕ್ಕೆ ಈ ನೈಜ ಘಟನೆಗಳೆಲ್ಲಾ ಪ್ರೇರಣೆ ಆಯ್ತಾ? ಇದನ್ನೆಲ್ಲಾ ನೀವು ಗಮನಿಸಿದ್ರಾ?
ಸಂತೋಷ್ ಆನಂದ್ರಾಮ್ ನಿರ್ದೇಶನದ 'ಯುವ' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಪರಭಾಷಾ ಸಿನಿಮಾಗಳ ಹಾವಳಿ ನಡುವೆಯೂ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುತ್ತಿದೆ. ಸಣ್ಣ ಪುಟ್ಟ ತಪ್ಪುಗಳನ್ನು ಪಕ್ಕಕ್ಕಿಟ್ಟರೆ ಸಿನಿಮಾ ಒಮ್ಮೆ ನೋಡುವಂತಹ ಸಿನಿಮಾ ಎನಿಸಿಕೊಂಡಿದೆ. ಯುವ ರಾಜ್ಕುಮಾರ್ ಪರ್ಫಾರ್ಮೆನ್ಸ್ಗೆ ಒಳ್ಳೆ ಅಂಕ ಸಿಕ್ಕಿದೆ.
ಒಂದು ಅಂದಾಜಿನ ಪ್ರಕಾರ 'ಯುವ' ಸಿನಿಮಾ ಮೊದಲ ದಿನವೇ 3ರಿಂದ 4 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನುವ ಲೆಕ್ಕಾಚಾರ ನಡೀತಿದೆ. ಎರಡನೇ ದಿನವೂ ಚಿತ್ರಕ್ಕೆ ರೆಸ್ಪಾನ್ಸ್ ಚೆನ್ನಾಗಿತ್ತು. ಮೂರನೇ ದಿನವಾದ ಇಂದು ಭಾನುವಾರ ಮತ್ತಷ್ಟು ಒಳ್ಳೆ ಕಲೆಕ್ಷನ್ ಆಗುವ ನಿರೀಕ್ಷೆಯಿದೆ. 'ಮಿ. & ಮಿ. ರಾಮಾಚಾರಿ', 'ರಾಜಕುಮಾರ', 'ಯುವರತ್ನ' ಹಾಗೂ 'ರಾಘವೇಂದ್ರ ಸ್ಟೋರ್ಸ್' ಬಳಿಕ ಸಂತೋಷ್ ಆನಂದ್ ರಾಮ್ ಮತ್ತೊಮ್ಮೆ ಭಾಗಶಃ ಗೆದ್ದಿದ್ದಾರೆ. 'ಯುವ'ನನ್ನು ಗೆಲ್ಲಿಸುವ ಪ್ರಯತ್ನ ಮಾಡಿದ್ದಾರೆ.

ಕಾಲೇಜು ಗ್ಯಾಂಗ್ ವಾರ್, ತಂದೆ- ಮಗನ ಸಂಘರ್ಷ- ಬಾಂಧವ್ಯ, ತಾಯಿ ಹಾಗೂ ಸಹೋದರಿ ಜೊತೆಗಿನ ಬಾಂಧವ್ಯ, ಪ್ರಿನ್ಸಿಪಲ್ ಹಾಗೂ ವಿದ್ಯಾರ್ಥಿ, ಕುಸ್ತಿಪಟು ಹಾಗೂ ತರಬೇತುದಾರನ ಒಡನಾಟ, ಡೆಲಿವರಿ ಬಾಯ್ಗಳ ನೋವು ನಲಿವು ಹೀಗೆ ಸಾಕಷ್ಟು ವಿಚಾರಗಳನ್ನು ಒಟ್ಟಿಗೆ ಸೇರಿಸಿ 'ಯುವ' ಕಥೆ ಕಟ್ಟಲಾಗಿದೆ. ಒಂದಷ್ಟು ನೈಜ ಘಟನೆಗಳಿಂದ ಪ್ರೇರಣೆಗೊಂಡು ನಿರ್ದೇಶಕರು ಕಥೆ ಹೆಣೆದಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ.
'ಯುವ' ಚಿತ್ರದಲ್ಲಿ ಹೈಲೆಟ್ ಆಗಿರುವುದು ತಂದೆ ಮಗನ ನಡುವಿನ ಬಾಂಧವ್ಯ. ಸಾಲದ ಶೂಲಕ್ಕೆ ಸಿಲುಕಿ ತಂದೆ ಮನೆ ಬಿಟ್ಟು ಹೋಗಿಬಿಟ್ಟರೆ ಆ ಕುಟುಂಬದ ಪರಿಸ್ಥಿತಿ ಏನಾಗುತ್ತದೆ? ಅದನ್ನು ಮಗ ಹೇಗೆ ಸರಿ ಮಾಡುತ್ತಾನೆ? ಎನ್ನುವ ಕಥೆ ಇದೆ. ಕೆಫೆ ಕಾಫಿ ಡೇ ಸಂಸ್ಥಾಪಕ, ಮಾಲೀಕ ಸಿದ್ದಾರ್ಥ್ ಅಕಾಲಿಕ ಮರಣ ವಿಚಾರದಿಂದ ಪ್ರೇರಣೆಗೊಂಡು ಈ ಎಪಿಸೋಡ್ ಕಟ್ಟಿಕೊಟ್ಟಿದ್ದಾರಾ? ಎಂದು ಕೆಲವರು ಊಹಿಸಿಕೊಳ್ಳುತ್ತಿದ್ದಾರೆ. ಆದರೆ ಚಿತ್ರದಲ್ಲಿ ಅದನ್ನು ಬೇರೆ ರೀತಿಯಲ್ಲಿ ತೋರಿಸಿದ್ದಾರೆ.
ಸೆಕೆಂಡ್ ಹಾಫ್ನಲ್ಲಿ ಡೆಲಿವರಿ ಬಾಯ್ಗಳ ಕಷ್ಟಗಳ ಬಗ್ಗೆಯೂ ಚರ್ಚಿಸಲಾಗಿದೆ. ಇಂಜಿನಿಯರಿಂಗ್ ಓದಿದ ಸಾಕಷ್ಟು ಜನ ಒಳ್ಳೆ ಕೆಲಸ ಸಿಗದೇ ಇಂದು ಡೆಲಿವರಿ ಬಾಯ್ಗಳಾಗಿ ಕೆಲಸ ಮಾಡುವಂತಾಗಿದೆ. ನಾಯಕನ ಪಾತ್ರದ ಮೂಲಕವೇ ಅದನ್ನು ಹೇಳುವ ಪ್ರಯತ್ನ ಮಾಡಿದಂತೆ ಕಾಣುತ್ತಿದೆ.
ಡೆಲಿವರಿ ಬಾಯ್ ಎಪಿಸೋಡ್ನಲ್ಲಿ ಮತ್ತೊಂದು ಸನ್ನಿವೇಶವೂ ಗಮನ ಸೆಳೆಯುತ್ತದೆ. ಅದು ಡೆಲಿವರಿ ಬಾಯ್ ಆರ್ಡರ್ಗೆ ಬಂದಿದ್ದ ಆಹಾರವನ್ನು ಕದ್ದು ತಿನ್ನುವುದು. ಆ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಎಪಿಸೋಡ್. 5 ವರ್ಷಗಳ ಹಿಂದೆ ಇದೇ ರೀತಿ ಜೋಮ್ಯಾಟೊ ಫುಡ್ ಡೆಲಿವರಿ ಬಾಯ್ ವಿಡಿಯೋ ವೈರಲ್ ಆಗಿ ಭಾರಿ ಚರ್ಚೆ ಹುಟ್ಟಾಕ್ಕಿತ್ತು. ತೆಲುಗು ನಟ ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಕೂಡ ಆ ಡೆಲಿವರ್ ಬಾಯ್ ವಿರುದ್ಧ ಆಕ್ರೋಶ ಹೊರ ಹಾಕಿದ್ದರು.
ಸಾಮಾನ್ಯವಾಗಿ ಸಿನಿಮಾ ಪ್ರಾರಂಭದಲ್ಲಿ ಇದು ಕೇವಲ ಕಾಲ್ಪನಿಕ, ಒಂದು ವೇಳೆ ಯಾವುದಾದರೂ ಘಟನೆ ನೆನಪಿಸಿದರೆ ಅದು ಕಾಕತಾಳೀಯ ಎಂದು Disclaimer ಹಾಕುತ್ತಾರೆ. ಆದರೆ 'ಯುವ' ಚಿತ್ರದ 'ಒಬ್ಬನೇ ಶಿವ ಒಬ್ಬನೇ ಯುವ' ಹಾಡಿನಲ್ಲಿ ಸಂತೋಷ್ ಆನಂದ್ ರಾಮ್ ವಿಭಿನ್ನವಾದ disclaimer ಹಾಕಿದ್ದರು. "ಈ ಪಾತ್ರ ಕೇವಲ ಕಾಲ್ಪನಿಕವಲ್ಲ. ನೈಜ, ದೃಢ ಮತ್ತು ಧೈರ್ಯ, 'ಯುವ' ಹಾನಿಕಾರಕ" ಎಂದು ಬರೆದು ಹುಬ್ಬೇರಿಸಿದ್ದರು.
ಇನ್ನು ಮೊದಲ ಚಿತ್ರದಲ್ಲೇ ಯುವ ರಾಜ್ಜುಮಾರ್ ಪರ್ಫಾರ್ಮನ್ಸ್ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸ್ಯಾಂಡಲ್ವುಡ್ಗೊಬ್ಬ ಹೊಸ ಸ್ಟಾರ್ ಸಿಕ್ಕ ಎಂದು ಅಭಿಮಾನಿಗಳು ಖುಷಿಯಾಗುತ್ತಿದೆ. ಮುಂದೆ ವಿಭಿನ್ನ ಪಾತ್ರಗಳಲ್ಲಿ ರಾಘಣ್ಣನ ಕಿರಿಮಗನನ್ನು ನೋಡುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











