Yuva 03: ನಿಂತೇ ಹೋಯ್ತಾ ಸೂರಿ ಜೊತೆ ಸಿನಿಮಾ? ತರುಣ್ ನಿರ್ದೇಶನದಲ್ಲಿ 'ಉಸ್ತಾದ್' ಆಗಿ ಯುವ?
ರಾಘಣ್ಣ ಕಿರಿಮಗ ಯುವ ರಾಜ್ಕುಮಾರ್ ಈಗಾಗಲೇ ಚಿತ್ರರಂಗ ಪ್ರವೇಶಿಸಿದ್ದಾರೆ. 'ಯುವ' ಆಗಿ ದರ್ಬಾರ್ ನಡೆಸಿ ಬಳಿಕ 'ಎಕ್ಕ' ಚಿತ್ರದಲ್ಲಿ ಮಿಂಚಿದ್ದರು. ಮೊದಲ ಸಿನಿಮಾ ಒಂದು ಹಂತಕ್ಕೆ ಸದ್ದು ಮಾಡಿದ್ರು, 2ನೇ ಸಿನಿಮಾ ನಿರಾಸೆ ಮೂಡಿಸಿತ್ತು. 3ನೇ ಚಿತ್ರಕ್ಕೆ ದುನಿಯಾ ಸೂರಿ ಜೊತೆ ಯುವ ಕೈ ಜೋಡಿಸಿದ್ದರು.
ಪಿಆರ್ಕೆ ಪ್ರೊಡಕ್ಷನ್ಸ್, ಜಯಣ್ಣ ಫಿಲ್ಮ್ಸ್ ಹಾಗೂ ಕೆಆರ್ಜಿ ಸ್ಟುಡಿಯೋಸ್ ಒಟ್ಟಾಗಿ ಯುವ03 ಸಿನಿಮಾ ನಿರ್ಮಾಣ ಮಾಡಬೇಕಿತ್ತು. ದುನಿಯಾ ವಿಜಯ್ ಮಗಳು ರಿತನ್ಯಾ ನಾಯಕಿಯಾಗಿ ಆಯ್ಕೆ ಆಗಿದ್ದರು. ಸಿನಿಮಾ ಸೆಟ್ಟೇರಿ ಕಳೆದ ವರ್ಷವೇ ತೆರೆಗೆ ಬರುವ ಲೆಕ್ಕಾಚಾರ ನಡೆದಿತ್ತು. ಆದರೆ ಬಳಿಕ ಆ ಬಗ್ಗೆ ಸುದ್ದಿನೇ ಇಲ್ಲ. ಸೂರಿ ಹಾಗೂ ಯುವ ಕಾಂಬಿನೇಷನ್ ಸಿನಿಮಾ ನಿಂತೇಹೋಯ್ತು ಎನ್ನುವ ಚರ್ಚೆ ಜೋರಾಗಿದೆ.

ಧ್ರುವ ಸರ್ಜಾ ಜೊತೆ ಸಿನಿಮಾ ಮಾಡಲು ಸೂರಿ ಮನಸ್ಸು ಮಾಡಿದ್ದಾರೆ. ಅದಕ್ಕಾಗಿ ಕಥೆ, ಚಿತ್ರಕಥೆ ಸಿದ್ಧಪಡಿಸುತ್ತಿದ್ದಾರೆ. ಚರ್ಚೆ ನಡೆಯುತ್ತಿದೆ ಎನ್ನುವ ಗುಸುಗುಸು ಶುರುವಾಗಿದೆ. ಇತ್ತ ಸೂರಿ ಸಿನಿಮಾ ಮರೆತು ತರುಣ್ ಸುಧೀರ್ ನಿರ್ದೇಶನದಲ್ಲಿ ನಟಿಸೋ ಬಗ್ಗೆ ಯುವ ಉತ್ಸುಕರಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಯುವ-ತರುಣ್ ಕಾಂಬಿನೇಷನ್ ಸಿನಿಮಾ ಘೋಷಣೆ ಆಗುತ್ತದೆ ಎನ್ನುವ ಊಹಾಪೋಹ ಶುರುವಾಗಿತ್ತು. ಆದರೆ ಅಂತಹ ಅಪ್ಡೇಟ್ ಬರಲೇ ಇಲ್ಲ.
ಒಂದು ಸಿನಿಮಾ ಶುರುವಾಗಿ ಚಿತ್ರೀಕರಣ ಮುಗಿಸಿ ತೆರೆಗೆ ಬರುವುದು ಅಷ್ಟು ಸುಲಭವಲ್ಲ. ಈ ಹಾದಿಯಲ್ಲಿ ಕೆಲವೊಮ್ಮೆ ಮಧ್ಯದಲ್ಲೇ ಸಿನಿಮಾಗಳು ನಿಂತು ಹೋಗಿರುವ ಸಾಕಷ್ಟು ಉದಾಹರಣೆಗಳಿವೆ. ಯುವ ರಾಜ್ಕುಮಾರ್ ನಟಿಸಬೇಕಿದ್ದ 'ಯುವ ರಣಧೀರ ಕಂಠೀರವ' ಸಿನಿಮಾ ಕಾರಣಾಂತರಗಳಿಂದ ನಿಂತು ಹೋಗಿತ್ತು. ಹಾಗಾಗಿ ಸಂತೋಷ್ ಆನಂದ್ರಾಮ್ ನಿರ್ದೇಶನದ 'ಯುವ' ಚಿತ್ರದಲ್ಲಿ ನಟಿಸುವಂತಾಗಿತ್ತು.

'ಕಾಟೇರ' ಬಳಿಕ ತರುಣ್ ಸುಧೀರ್ ನಿರ್ದೇಶನದ ಯಾವುದೇ ಸಿನಿಮಾ ಶುರುವಾಗಲಿಲ್ಲ. ದರ್ಶನ್ ಹೀರೊ ಆಗಿ ಸಿಂಧೂರ ಲಕ್ಷ್ಮಣ ಬಯೋಪಿಕ್ ಸಿನಿಮಾ ಘೋಷಣೆ ಆಗಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ಸದ್ಯಕ್ಕೆ ಸಿಂಧೂರ ಲಕ್ಷ್ಮಣ ಸಿನಿಮಾ ಕಷ್ಟ ಎನ್ನುವಂತಾಗಿದೆ. ಹಾಗಾಗಿ ತರುಣ್ ಬೇರೆ ಸಿನಿಮಾಗಳ ಕಡೆ ಮುಖ ಮಾಡಿದ್ದಾರೆ. ಯುವ ರಾಜ್ಕುಮಾರ್ ಜೊತೆ ಸಿನಿಮಾ ಮಾಡುತ್ತಾರೆ ಎನ್ನುವ ಮಾತುಗಳು ಬಹಳ ದಿನಗಳಿಂದ ಕೇಳಿಬರ್ತಿದೆ. ಆದರೆ ಯಾವುದೂ ಅಂತಿಮವಾಗಿಲ್ಲ.
'ಉಸ್ತಾದ್' ಅನ್ನೋ ಖಡಕ್ ಟೈಟಲ್ ಇರೋ ಚಿತ್ರದಲ್ಲಿ ಯುವ ಹಾಗೂ ತರುಣ್ ಒಟ್ಟಿಗೆ ಕೆಲಸ ಮಾಡುತ್ತಾರೆ ಎನ್ನುವ ವದಂತಿ ಶುರುವಾಗಿದೆ. ಇದೇ ಯುವ 3ನೇ ಸಿನಿಮಾ ಆಗುತ್ತದೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಪರಭಾಷಾ ನಿರ್ದೇಶಕರು ಯುವ ರಾಜ್ಕುಮಾರ್ ಅವರಿಗೆ ಕಥೆಗಳನ್ನು ಹೇಳುತ್ತಿದ್ದಾರೆ. ಹಾಗಾಗಿ ಅವರ ಮುಂದಿನ ಚಿತ್ರಕ್ಕೆ ತೆಲುಗು ಅಥವಾ ತಮಿಳು ನಿರ್ದೇಶಕರು ಆಕ್ಷನ್ ಕಟ್ ಹೇಳಬಹುದು ಎನ್ನುವ ಊಹಾಪೋಹ ಕೂಡ ಇದೆ. ಯುವ ಹಾಗೂ ಸೂರಿ ಕಾಂಬಿನೇಷನ್ ಸಿನಿಮಾ ನಿಂತು ಹೋಗುತ್ತಾ ಎಂದು ಅಭಿಮಾನಿಗಳು ಬೇಸರಗೊಂಡಿದ್ದಾರೆ.
'ಟಗರು' ಬಳಿಕ ಸೂರಿ ನಿರ್ದೇಶನದ ಯಾವುದೇ ಸಿನಿಮಾ ದೊಡ್ಡದಾಗಿ ಸೌಂಡ್ ಮಾಡಲಿಲ್ಲ. 'ಪಾಪ್ಕಾರ್ನ್ ಮಂಕಿಟೈಗರ್' ಒಂದು ಹಂತಕ್ಕೆ ಗಮನ ಸೆಳೆದಿತ್ತು. ಆದರೆ 'ಬ್ಯಾಡ್ ಮ್ಯಾನರ್ಸ್' ಹೀನಾಯವಾಗಿ ಸೋತಿತ್ತು. ಒಂದೊಳ್ಳೆ ಬ್ರೇಕ್ಗಾಗಿ ಸೂರಿ ಕಾಯುತ್ತಿದ್ದಾರೆ. ಯುವ ಅಥವಾ ಧ್ರುವ, ಇಬ್ಬರಲ್ಲಿ ಯಾರೊಟ್ಟಿಗೆ ಸಿನಿಮಾ ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಯುವ ರಾಜ್ಕುಮಾರ್ ಕೂಡ ಒಂದೊಳ್ಳೆ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಹವಣಿಸುತ್ತಿದ್ದಾರೆ. ತರುಣ್ ನಿರ್ದೇಶನದಲ್ಲಿ 'ಉಸ್ತಾದ್' ಆಗ್ತಾರಾ? ಕಾದು ನೋಡೋಣ.


Click it and Unblock the Notifications











