ಐಟಿ ರೇಡ್ ಎಫೆಕ್ಟ್: 'ಬಿಗ್' ಸಿನಿಮಾಗಳಿಗೆ ಬಿತ್ತು ತಾತ್ಕಾಲಿಕ ಬ್ರೇಕ್
ಸುದೀಪ್, ಯಶ್, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ವಿಜಯ್ ಕಿರಗಂದೂರ್, ಜಯಣ್ಣ, ಸಿ ಆರ್ ಮನೋಹರ್ ಅವರ ಮನೆ ಮೇಲೆ ನಡೆದಿರುವ ಐಟಿ ದಾಳಿ ಸ್ಯಾಂಡಲ್ ವುಡ್ ಇಂಡಸ್ಟ್ರಿಗೆ ಬಿಸಿ ಮುಟ್ಟಿಸಿದೆ.
ಗುರುವಾರ ಬೆಳ್ಳಂಬೆಳಗ್ಗೆ ಸ್ಟಾರ್ ನಟ ಮತ್ತು ನಿರ್ಮಾಪಕ ಮನೆಗೆ ಐಟಿ ಅಧಿಕಾರಿಗೆ ಪ್ರವೇಶ ಮಾಡ್ತಿದ್ದಂತೆ, ನಿಗದಿಯಾಗಿದ್ದ ಬಹುತೇಕ ಕಾರ್ಯಕ್ರಮಗಳಿಗೆ ಅಡ್ಡಿಯಾಗಿದೆ.
ಹಲವು ಬಿಗ್ ಬಜೆಟ್ ಸಿನಿಮಾಗಳ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿದೆ. ಆಡಿಯೋ ರಿಲೀಸ್ ಗೆ ಆತಂಕ ಎದುರಾಗಿದೆ. ಹಾಗಿದ್ರೆ, ಐಟಿ ದಾಳಿಯಿಂದ ಯಾವ ಚಿತ್ರಗಳಿಗೆ ಸಮಸ್ಯೆಯಾಗಿದೆ? ಎಲ್ಲೆಲ್ಲಿ ಶೂಟಿಂಗ್ ನಿಂತಿದೆ? ಮುಂದೆ ಓದಿ.....

ಆಡಿಯೋ ಲಾಂಚ್ ಗೊಂದಲ
ನಾಳೆ ಸಂಜೆ 5.30ಕ್ಕೆ ಹುಬ್ಬಳ್ಳಿಯಲ್ಲಿ ನಟಸಾರ್ವಭೌಮ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ನಡೆಯಬೇಕಿದೆ. ನಟ ಪುನೀತ್ ಮತ್ತು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮನೆ ಮೇಲೆ ರೇಡ್ ಆಗಿದೆ. ಸದ್ಯದ ಪರಿಸ್ಥಿತಿ ನೋಡಿದ್ರೆ ಇಂದು ರಾತ್ರಿ ಕೂಡ ಪರಿಶೀಲನೆ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ, ಆಡಿಯೋ ಬಿಡುಗಡೆ ಕಾರ್ಯಕ್ರಮ ಗೊಂದಲವಾಗಿದೆ.

'ಪೈಲ್ವಾನ್'ಗೆ ಬ್ರೇಕ್
ಮಂಡ್ಯದ ಪಾಂಡವಪುರದಲ್ಲಿ ಸುದೀಪ್ ಅಭಿನಯಿಸುತ್ತಿರುವ ಪೈಲ್ವಾನ್ ಚಿತ್ರದ ಶೂಟಿಂಗ್ ನಿಲ್ಲಿಸಲಾಗಿದೆ. ಐಟಿ ರೇಡ್ ಸುದ್ದಿ ಕೇಳುತ್ತಿದ್ದಂತೆ ಸುದೀಪ್ ಬೆಂಗಳೂರಿಗೆ ವಾಪಸ್ ಆಗಿದ್ದರು. ಹೀಗಾಗಿ, ಪೈಲ್ವಾನ್ ಚಿತ್ರೀಕರಣ ತಾತ್ಕಲಿಕವಾಗಿ ಸ್ಥಗಿತವಾಗಿದೆ.

'ಕೆಜಿಎಫ್' ಪ್ರಚಾರಕ್ಕೆ ಬ್ರೇಕ್
ಕೆಜಿಎಫ್ ಚಾಪ್ಟರ್ 1 ಯಶಸ್ಸಿನ ಹಿನ್ನೆಲೆ ಮುಂಬೈನಲ್ಲಿ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಯಶ್ ಐಟಿ ರೇಡ್ ಸುದ್ದಿ ಕೇಳಿ ಬೆಂಗಳೂರಿಗೆ ವಾಪಸ್ ಆಗಿದ್ದರು. ಹಾಗಾಗಿ, ಮುಂಬೈ ಕಾರ್ಯಕ್ರಮವನ್ನ ಅರ್ಧಕ್ಕೆ ಮೊಟಕುಗೊಳಿಸಲಾಗಿದೆ. ಈ ಮಧ್ಯೆ ಕೆಜಿಎಫ್ ಚಾಪ್ಟರ್ 2 ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಕ್ಕೂ ಐಟಿ ದಾಳಿ ಬ್ರೇಕ್ ಹಾಕಿದೆ.

ದ್ರೋಣ, ಆನಂದ್, ರುಸ್ತುಂ ಸ್ಥಗಿತ
ಕವಚ ಚಿತ್ರದ ಬಿಡುಗಡೆಗೆ ಕಾಯ್ತಿರುವ ಶಿವಣ್ಣ ಸದ್ಯ ಆನಂದ್, ದ್ರೋಣ, ರುಸ್ತುಂ ಚಿತ್ರಗಳಲ್ಲಿ ತೊಡಗಿಕೊಂಡಿದ್ದರು. ಸತತವಾಗಿ ಮೂರು ಸಿನಿಮಾಗಳ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದರು. ಇದೀಗ ಐಟಿ ರೇಡ್ ಹಿನ್ನೆಲೆ ಈ ಚಿತ್ರಗಳ ಶೂಟಿಂಗ್ ಗೆ ಬ್ರೇಕ್ ಬಿದ್ದಿದೆ.


Click it and Unblock the Notifications











