''ದರ್ಶನ್ಗೆ ತೊಂದರೆಯಾಗ್ತಿದೆ ಅಂದಾಗ ಖುಷಿ ಪಡುವ ವ್ಯಕ್ತಿ ನಾನಲ್ಲ'' - ಸುದೀಪ್..!
ಕನ್ನಡ ಚಿತ್ರರಂಗದಲ್ಲಿ ಈ ತಲೆಮಾರಿನ ಹೀರೋಗಳ ನಡುವೆ ಕುಚಿಕ್ಕು ಗೆಳೆಯರೆಂದೇ ಪ್ರಸಿದ್ಧರಾಗಿದ್ದವರು ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್. ಆದರೆ ಈ ಸ್ನೇಹ ಕಳೆದ ಏಳೂವರೆ ವರ್ಷಗಳಿಂದ ಗ್ರಹಣ ಕವುಚಿಕೊಂಡಂತೆ ಮಂಕಾಗಿದೆ.
ಒಂದು ವೇಳೆ ರೆಬೆಲ್ ಸ್ಟಾರ್ ಅಂಬರೀಶ್ ಇಂದು ಜೀವಂತವಾಗಿದ್ದಿದ್ದರೆ ಪರಸ್ಪರ ವಿರುದ್ಧ ದಿಕ್ಕುಗಳಂತಾಗಿದ್ದ ಸುದೀಪ್ ಮತ್ತು ದರ್ಶನ್ ಮತ್ತೆ ಒಂದೇ ಬಿಂದುವಿನಲ್ಲಿ ಸಂಧಿಸೋ ಕಾಲ ಕೂಡಿರುತ್ತಿತ್ತು. ಆದರೆ ದುರಾದೃಷ್ಟವಶಾತ್ ಇಂದು ರೆಬೆಲ್ ಸ್ಟಾರ್ ಅಂಬರೀಶ್ ನಮ್ಮ ನಡುವೆ ಇಲ್ಲ. ಕಾಲಾಂತರಗಳ ಈ ಮುನಿಸು ಮುಗಿಯಲಿಲ್ಲ. ಅಂಬರೀಶ್ ಅವರ ಕನಸು ನನಸಾಗಲಿಲ್ಲ.

ಹಾಗಂಥ ಇಬ್ಬರಲ್ಲಿ ಒಬ್ಬರು ಕೂಡ ಸ್ನೇಹದ ಹಸ್ತ ಚಾಚಲಿಲ್ಲ ಅಂತಲ್ಲ. ಕಾಲ ಕಾಲಕ್ಕೆ ಸುದೀಪ್ ತುಂಬಾನೇ ಸಂಯಮದಿಂದ ದರ್ಶನ್ ಅವರ ಬಗ್ಗೆ ಮಾತನಾಡುತ್ತಾನೇ ಬಂದಿದ್ದಾರೆ. ತಮ್ಮ ಸ್ನೇಹದ ಆ ದಿನಗಳನ್ನೂ ಮೆಲುಕು ಹಾಕಿದ್ದಾರೆ. ಸ್ನೇಹದ ಹಸ್ತವನ್ನೂ ಕೂಡ ಚಾಚಿದ್ದಾರೆ. ಆದರೆ ಇಲ್ಲಿಯವರೆಗೆ ಸುದೀಪ್ ಅವರ ಈ ನಡೆ ಮತ್ತು ನುಡಿಗಳಿಗೆ ಆ ಕಡೆಯಿಂದ ಯಾವುದೇ ಸಕಾರಾತ್ಮಕವಾದ ಪ್ರತಿಕ್ರಿಯೆ ಬಂದಿಲ್ಲ. ಆದರೂ, ಸುದೀಪ್ ಈ ಕುರಿತು ಬೇಸರ ಮಾಡಿಕೊಂಡಿಲ್ಲ. ಬದಲಿಗೆ ದರ್ಶನ್ ಬಗ್ಗೆ ಈ ಕ್ಷಣ ಕೂಡ ಯಾರೇ ಪ್ರಶ್ನೆ ಕೇಳಿದರೂ ಕೂಡ ಸುದೀಪ್ ಸಮಾಧಾನದಿಂದನೇ ಉತ್ತರ ನೀಡುತ್ತಾ ಬಂದಿದ್ದಾರೆ. ಇದಕ್ಕೆ ಇನ್ನೊಂದು ಉದಾಹರಣೆ ಸುದೀಪ್ With ಅಜಿತ್ ಕಾರ್ಯಕ್ರಮ.
ಹೌದು, ಸುದೀಪ್ ಸುವರ್ಣ ನ್ಯೂಸ್ಗೆ ವಿಶೇಷ ಸಂದರ್ಶನ ನೀಡಿದ್ದಾರೆ. ತಮ್ಮ ಈ ಸಂದರ್ಶನದಲ್ಲಿ ಹಲವು ವಿಚಾರಗಳ ಕುರಿತು ಮಾತನಾಡಿರುವ ಸುದೀಪ್, ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆಲ್ಲ ನೇರಾನೇರವಾಗಿಯೇ ಉತ್ತರವನ್ನೂ ಕೂಡ ಕೊಟ್ಟಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿರುವ ಸುದೀಪ್, ಸ್ನೇಹದಲ್ಲಿ ನಾನು ದೊಡ್ಡವನು, ನೀನು ದೊಡ್ಡವನು ಎನ್ನುವ ಮಾತು ಬರುವುದಿಲ್ಲ, ಸ್ನೇಹ-ಸ್ನೇಹಿತ ಅಂದರೆ ಅಲ್ಲಿ ಎಲ್ಲವೂ ನಿಷ್ಕಳಂಕ ಆಗಿರಬೇಕಾಗುತ್ತದೆ ಎಂದು ಹೇಳಿದ್ದಾರೆ. ಇನ್ನೂ ಕೆಲವೊಮ್ಮೆ ನಮ್ಮ ಸ್ನೇಹಿತರು ಮಾಡುವ ತಪ್ಪಿಗೆ ತಲೆ ಬಾಗಬೇಕಾಗುತ್ತೆ.ಆದರೆ ಅದು ಅವಮಾನದಿಂದ ಅಲ್ಲ ಪ್ರೀತಿಯಿಂದ ತಲೆ ತಗ್ಗಿಸಬೇಕಾಗುತ್ತೆ ಎಂದಿರುವ ಸುದೀಪ್, ಅನಾವಶ್ಯಕವಾಗಿ ಏನೇನೋ ನಡೆದಾಗ ದೂರ ಇರೋದೇ ಒಳ್ಳೆಯದು ಅನಸುತ್ತೆ, ಇಲ್ಲಿಯವರೆಗೆ ನಾನು ಒಳ್ಳೆಯದೇ ಮಾಡಿದ್ದೇನೇ ಹೊರತು ಕೆಟ್ಟದ್ದು ಬಯಸಿಲ್ಲ, ಸಂದರ್ಶನಗಳಲ್ಲಿ ಕೆಟ್ಟದಾಗಿ ಮಾತನಾಡಿಯೂ ಇಲ್ಲ. ಯಾವತ್ತು ಮಾತನಾಡುವುದು ಇಲ್ಲ ಎಂದು ಹೇಳಿದ್ದಾರೆ.
ಇನ್ನೂ ಯಾರದ್ದೋ ಭುಜದ ಮೇಲೆ ಗನ್ ಇಟ್ಟು ಫೈರ್ ಮಾಡುವ ವ್ಯಕ್ತಿ ನಾನಲ್ಲ, ಕೆಲ ಆಪಾದನೆಗಳೂ ನನ್ನ ಮೇಲೆ ಬಂತು, ಏನೇನೋ ಹೇಳಿದರು, ಆದರೂ ಕೂಡ ನಾನು ಎಲ್ಲಿಯೂ ಮಾತನಾಡಲಿಲ್ಲ ಎಂದಿರುವ ಸುದೀಪ್ ಕೆಲವೊಂದನ್ನು ನಾವು ಮೆಂಟೈನ್ ಮಾಡಬೇಕಾಗುತ್ತೆ, ಅದರಲ್ಲಿ ಸ್ನೇಹವೂ ಒಂದು ಎಂದು ಹೇಳಿದ್ದಾರೆ. ನನಗೆ ನೋವುಗಳು ಇಲ್ಲ ಅಂತಲ್ಲ. ಎಲ್ಲವೂ ಒಳ್ಳೆಯದೇ ನಡೆಯುತ್ತಿರುವಾಗ ದೂರ ಯಾಕಾಗ್ತೀವಿ ಎನ್ನುವ ಪ್ರಶ್ನೆಯನ್ನೂ ಮಾಡಿದ್ದಾರೆ.

ತಮ್ಮ ಈ ಸಂದರ್ಶನದಲ್ಲಿ ಹಿಂದೆ ತಾವು ಸಂದರ್ಶನದಲ್ಲಿ ಮಾತನಾಡಿದ್ದ ಮಾತುಗಳನ್ನು ಕೂಡ ನೆನಪು ಮಾಡಿಕೊಂಡಿರುವ ಸುದೀಪ್, ನಾವು ಕೊಡೋ ಸ್ಥಾನವನ್ನು, ನಾವು ಯಾವತ್ತೂ ಕಿತ್ತುಕೊಳ್ಳಲ್ಲ. ಅದನ್ನು ಕಿತ್ತುಕೊಂಡರೆ ನಾವು ನಾವಾಗಿರಲ್ಲ. ಹಾಗಂತ ನಾವು ಅವರಿಂದ ಅದನ್ನೇ ಬಯಸುವುದಿಲ್ಲ. ಹಾಗಾಗಿ ನಾನು ಹೊರಬಂದೆ ಎಂದು ಹೇಳಿದ್ದಾರೆ. ಈ ಮೂಲಕ ಸ್ನೇಹ ಮುರಿದು ಬಿದ್ದಿದ್ದೇಕೆ ಎನ್ನುವುದಕ್ಕೆ ಉತ್ತರವನ್ನೂ ಕೂಡ ಸುವರ್ಣ ನ್ಯೂಸ್ ಮೂಲಕ ಸುದೀಪ್ ನೀಡಿದ್ದಾರೆ.
ಇನ್ನೂ ರೇಣುಕಾ ಸ್ವಾಮಿ ಪ್ರಕರಣದ ಕುರಿತು ಮಾತನಾಡಿರುವ ಸುದೀಪ್, ಆರಂಭದಲ್ಲಿ ಇದೆಲ್ಲ ಸುಳ್ಳು ಸುದ್ದಿ ಇರಬಹುದೆಂದು ಅಂದುಕೊಂಡಿದ್ದೆ, ಆ ನಂತರ ಈ ಮಟ್ಟಿಗೆಲ್ಲ ಇರಲು ಸಾಧ್ಯ ಇಲ್ಲ ಎಂದು ತಲೆಗೆ ಬಂತು, ಆ ನಂತರ ಅನುಮಾನಗಳು ಬಂದವು, ಯಾಕೆಂದರೆ ಅಷ್ಟು ದೊಡ್ಡ ವ್ಯಕ್ತಿಯನ್ನು ಪೊಲೀಸರು ಅಷ್ಟು ಸುಲಭಕ್ಕೆ ಕರೆದುಕೊಂಡು ಹೋಗಲು ಸಾಧ್ಯ ಇಲ್ಲ ಎಂದು ಹೇಳಿದ್ದಾರೆ.ಮುಂದುವರೆದು ಕೆಲವು ದಿನ ನಮಗೆ ಮೋಡ ಕವಿದ ವಾತಾವರಣ ಇತ್ತು. ಯಾವುದು ಸತ್ಯ ಯಾವುದು ಸುಳ್ಳು ಎಂಬ ಗೊಂದಲದಲ್ಲಿಯೇ ನಾನು ಇದ್ದೆ ಎಂದಿರುವ ಸುದೀಪ್, ಯಾರನ್ನು ಎಷ್ಟು ಇಷ್ಟಪಡ್ತೀರಿ, ಎಷ್ಟು ದ್ವೇಷ ಮಾಡ್ತೀರಿ ಇದು ವೈಯಕ್ತಿಕ. ಫೈಟ್ ಸಹ ಪರ್ಸನಲ್. ಕಾಂಪಿಟೇಷನ್ ಸಹ ವೈಯಕ್ತಿಕ. ಆ ವ್ಯಕ್ತಿಗೆ ತೊಂದರೆ ಆಗ್ತಿದೆ ಅಂದಾಗ ಖುಷಿ ಪಡೋ ವ್ಯಕ್ತಿ ನಾನಲ್ಲ ಎಂದು ಹೇಳಿದ್ದಾರೆ.

ಕೊನೆಯಲ್ಲಿ ನಾನು ಮತ್ತು ದರ್ಶನ್ ದೂರವಾಗಿ ತುಂಬಾ ವರ್ಷಗಳಾಯಿತು ಎಂದಿರುವ ಸುದೀಪ್, ದರ್ಶನ್ಗೆ ದೂರದಲ್ಲಿ ಇರುವ ವೀಕ್ಷಕ ನಾನು, ಒಳ್ಳೆಯದನ್ನೇ ಬಯಸುತ್ತೇನೆ ಹೊರತು ಕೆಟ್ಟದನ್ನು ಯಾವತ್ತು ಬಯಸುವುದಿಲ್ಲ ಎಂದು ಸುದೀಪ್ ಹೇಳಿದ್ದಾರೆ. ಇನ್ನೂ ನಾವು ಇಬ್ಬರು ತುಂಬ ಬೇರೆ ಬೇರೆ ಆದರೆ ಮನುಷ್ಯತ್ವ ಅನ್ನೋದು ಒಂದಿದೆ. ಎಲ್ಲೋ ಓಡಾಡಿಕೊಂಡು ಖುಷಿಯಾಗಿದ್ದಾರೆ ಅಂದರೆ, ನಾವೂ ಸಹ ನಗಾಡುತ್ತಾ ಇರ್ತಿವಿ, ಆದರೆ ತೊಂದರೆಗಳಾದಾಗ ಒಬ್ಬ ಮನುಷ್ಯನಾಗಿ ನಮಗೆ ಸಹಜವಾಗಿ ನೋವಾಗುತ್ತೆ ಎಂದು ಹೇಳಿರುವ ಸುದೀಪ್, ಅವರ ಬಗ್ಗೆ ಗೌರವ ಇದೆ, ಅದನ್ನು ಬಿಟ್ಟರೆ ಅವರ ವ್ಯೆಯಕ್ತಿಕ ಜೀವನದಿಂದ ನಾನು ದೂರವಾಗಿ ತುಂಬಾ ವರ್ಷವಾಗಿರುವುದಿಂದ ಆ ಬಗ್ಗೆ ನಾನೇನೂ ಹೇಳುವುದಿಲ್ಲ ಎಂದು ತಮ್ಮ ಮಾತು ಮುಗಿಸಿದ್ದಾರೆ.


Click it and Unblock the Notifications











