ಈ ಇಬ್ಬರು ನಟರ ಹಾಗೆ ಒಳ್ಳೆಯ ಕೆಲಸ ಮಾಡೋದು ತುಂಬಾ ಕಷ್ಟ, ಚಿತ್ರರಂಗಕ್ಕೆ ಬರಲು ಆ ನಟನೇ ಕಾರಣ: ರಿಷಬ್ ಶೆಟ್ಟಿ
ರಿಕ್ಕಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ನಿರ್ದೇಶಕರ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡವರೇ ರಿಷಬ್ ಶೆಟ್ಟಿ. ರಿಕ್ಕಿ ಚಿತ್ರದ ಸಾಧಾರಣ ಯಶಸ್ಸಿನ ಬಳಿಕ ಕಿರಿಕ್ ಪಾರ್ಟಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ರೀತಿಯ ಬಿಗ್ಗೆಸ್ಟ್ ಬ್ಲಾಕ್ಬಸ್ಟರ್ ಚಿತ್ರಗಳನ್ನು ನಿರ್ದೇಶಿಸಿದ ರಿಷಬ್ ಶೆಟ್ಟಿ ಕೆಲ ವರ್ಷಗಳ ಬ್ರೇಕ್ ಬಳಿಕ ಕಾಂತಾರ ನಿರ್ದೇಶಿಸಿ ದೇಶವ್ಯಾಪಿ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.
ಹೌದು, ಕಾಂತಾರ ಚಿತ್ರ ರಿಷಬ್ ಶೆಟ್ಟಿ ಸಿನಿ ಕೆರಿಯರ್ ಅನ್ನೇ ಬದಲಾಯಿಸಿಬಿಟ್ಟಿತು. ಕನ್ನಡ ಚಿತ್ರವಾಗಿ ಸಣ್ಣ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ಕಾಂತಾರ ಬಳಿಕ ಸಿನಿ ರಸಿಕರಿಂದ ಪಡೆದುಕೊಂಡ ಅಭೂತಪೂರ್ವ ಪ್ರತಿಕ್ರಿಯೆಗೆ ಪ್ಯಾನ್ ಇಂಡಿಯಾ ಚಿತ್ರವಾಗಿ ಮಾರ್ಪಟ್ಟಿತು. ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೂ ಸಹ ಕಾಂತಾರ ಡಬ್ ಆಗಿ ಬಿಡುಗಡೆಗೊಂಡಿತು. ಆ ಚಿತ್ರರಂಗಗಳಲ್ಲಿಯೂ ಸಹ ಕಾಂತಾರ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡು ಅಬ್ಬರಿಸಿತು.

ಹೀಗೆ ಕಾಂತಾರ ಬಿಗ್ಗೆಸ್ಟ್ ಹಿಟ್ ಆದ ಬಳಿಕ ರಿಷಬ್ ಶೆಟ್ಟಿ ನ್ಯಾಷನಲ್ ಸ್ಟಾರ್ ಆಗಿದ್ದು, ಕಾಂತಾರ ರೀತಿಯ ಮಾಸ್ಟರ್ಪೀಸ್ ನೀಡಿದ್ದಕ್ಕಾಗಿ ಅವರನ್ನು ವಿವಿಧ ಗೌರವ ಹಾಗೂ ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ರಿಷಬ್ ಶೆಟ್ಟಿಗೆ ಇತ್ತೀಚೆಗಷ್ಟೇ ವಾಷಿಂಗ್ಟನ್ನಲ್ಲಿ ಸಹ್ಯಾದ್ರಿ ಕನ್ನಡ ಸಂಘದವರು ನಡೆಸಿದ ಕಾರ್ಯಕ್ರಮದಲ್ಲಿಯೂ ಸಹ ಪ್ರಶಸ್ತಿ ಲಭಿಸಿದೆ. ಹೌದು, ಈ ಕಾರ್ಯಕ್ರಮಕ್ಕೆ ರಿಷಬ್ ಶೆಟ್ಟಿ ಅವರನ್ನು ಆಹ್ವಾನಿಸಿದ್ದ ಸಹ್ಯಾದ್ರಿ ಕನ್ನಡ ಸಂಘದ ಸದಸ್ಯರು "ವಿಶ್ವ ಶ್ರೇಷ್ಟ ಕನ್ನಡಿಗ 2023" ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಹೀಗೆ ಈ ಪ್ರಶಸ್ತಿಯನ್ನು ಸ್ವೀಕರಿಸಿದ ರಿಷಬ್ ಶೆಟ್ಟಿ ನಂತರ ಅವಾರ್ಡ್ ಕುರಿತು, ಕಾಂತಾರ ಕುರಿತು ಹಾಗೂ ತಾವು ಮಾಡಬೇಕಾಗಿರುವ ಕೆಲಸಗಳ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಕನ್ನಡದ ಇಬ್ಬರು ಮಹಾನ್ ಕಲಾವಿದರು ಮಾಡಿರುವ ಕೆಲಸಗಳನ್ನೂ ಸಹ ರಿಷಬ್ ಶೆಟ್ಟಿ ನೆನೆದರು. "ಯುಎಸ್ಎ ಕನ್ನಡ ಸಾಂಸ್ಕೃತಿಕ ರಾಯಭಾರಿಯಾಗಿ ನೀವು ಬರಬಹುದಾ ಅಂತ ಕೇಳಿದ್ರು. ನಾನು ಸಿನಿಮಾಗೆ ಬರೋಕೆ ತುಂಬಾ ದೊಡ್ಡ ಸ್ಪೂರ್ತಿ ಡಾ. ರಾಜ್ಕುಮಾರ್, ಅಣ್ಣಾವ್ರು. ಅವರು ಮೊದಲು ಸಾಂಸ್ಕೃತಿಕ ರಾಯಭಾರಿಯಾಗಿ ಇದ್ದಂಥವರು. ಕಾಂತಾರವನ್ನು ದೈವ ನರ್ತಕರಿಗೆ ಡೆಡಿಕೇಟ್ ಮಾಡ್ತಾ ಮಾಡ್ತಾ ಯಾವಾಗಲೂ ನಾನು ಹೇಳಿದ್ದು ಇನ್ನೊಬ್ಬ ವ್ಯಕ್ತ ಡಾ ಪುನೀತ್ ರಾಜ್ಕುಮಾರ್ ಅವರು. ಹಾಗಾಗಿ ಅಣ್ಣಾವ್ರು ಹಾಗೂ ಅಪ್ಪು ಸರ್ ಮಾಡಿಕೊಂಡು ಬಂದಂತಹ ಕೆಲಸ ತುಂಬಾ ಭಾರ ಇರುವಂತದ್ದು. ಈ ಹೆಗಲಿಗೆ ಕಷ್ಟವಾಗಬಹುದು. ಆದರೂ ನನ್ನ ಕಡೆಯಿಂದ ಆಗುವ ಅಳಿಲು ಸೇವೆ ಮಾಡ್ತೇನೆ. ಮುಂದಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾಧ್ಯವಾದಷ್ಟು ನಿಮ್ಮ ಜತೆ ಭಾಗವಹಿಸುತ್ತೇನೆ" ಎಂದು ಹೇಳಿಕೆ ನೀಡಿದರು. ಈ ಮೂಲಕ ರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಮಾಡಿರುವ ಕೆಲಸಗಳನ್ನು ಮಾಡುವುದು ಸಿಕ್ಕಾಪಟ್ಟೆ ಕಷ್ಟ ಎಂದು ರಿಷಬ್ ಶೆಟ್ಟಿ ತಿಳಿಸಿದರು.
ಅಲ್ಲದೇ "ವಾಷಿಂಗ್ಟನ್ನಲ್ಲಿನ ಚಿತ್ರಮಂದಿರದಲ್ಲಿ 50 ದಿನಗಳನ್ನು ಪೂರೈಸಿದ ಕಾಂತಾರ ಚಿತ್ರ ಇಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತ ಚಿತ್ರ ಎಂಬ ದಾಖಲೆಯನ್ನು ಮಾಡಿದ್ದು ಖುಷಿ ಕೊಟ್ಟಿತು. ಈ ಚಿತ್ರವನ್ನು ಬೇರೆ ಭಾಷೆಯ ಜನಗಳೂ ಸಹ ನೋಡುವಂತೆ ಮಾಡಿ, ಇಲ್ಲಿ ಚಿತ್ರ 50 ದಿನಗಳನ್ನು ಪೂರೈಸುವಲ್ಲಿ ಕನ್ನಡಿಗರ ಪಾತ್ರ ದೊಡ್ಡದು. ಇನ್ನೊಂದು ವಿಚಾರ ಏನಂದ್ರೆ ಕರ್ನಾಟಕದಲ್ಲಿಯೇ ಕನ್ನಡ ಚಿತ್ರ 2 - 3 ವಾರ ಓಡೋದು ದೊಡ್ಡ ವಿಚಾರ ಆಗಿಬಿಟ್ಟಿದೆ. ಅಂಥದ್ದರಲ್ಲಿ ದೇಶ ಬಿಟ್ಟು ಜೀವನ ಕಟ್ಟಿಕೊಳ್ಳಲು ಇನ್ನೊಂದು ದೇಶದಲ್ಲಿರುವ ನೀವು ಇನ್ನೂ ಸಹ ಕನ್ನಡ ಭಾಷೆಯ ಮೇಲಿನ, ಕನ್ನಡ ಚಿತ್ರಗಳ ಮೇಲಿನ ಪ್ರೀತಿಯಿಂದ ಇಲ್ಲಿ 50 ದಿನ ಓಡುವಂತೆ ಮಾಡಿದ್ದೀರ" ಎಂದು ರಿಷಬ್ ಶೆಟ್ಟಿ ತಮ್ಮ ಚಿತ್ರ ವಾಷಿಂಗ್ಟನ್ನಲ್ಲಿ 50 ದಿನ ಪೂರೈಸಿ ದಾಖಲೆ ಬರೆದಿದ್ದನ್ನು ನೆನಪಿಸಿಕೊಂಡರು.


Click it and Unblock the Notifications











