ದರ್ಶನ್ ಅವರ ಈ ಪರಿಸ್ಥಿತಿಗೆ 'ಪವಿತ್ರ' ಕಾರಣ ಎಂದು ಹೇಳಲು ಆಗಲ್ಲ- ಡಾ.ಶಮಿತಾ ಮಲ್ನಾಡ್...!
ವಿಜಯಲಕ್ಷ್ಮೀ ದರ್ಶನ್ ಮೊನ್ನೆ ದರ್ಶನ್ ಅವರ ಅಸಂಖ್ಯಾತ .. ಅಗಣಿತ ಅಭಿಮಾನಿಗಳಿಗೆ ಸಂದೇಶವೊಂದನ್ನು ಕೊಟ್ಟಿದ್ದರು.ನನ್ನ ಪ್ರೀತಿಯ ಸಹೋದರರೇ, ದರ್ಶನ್ ಅವರಿಗೆ ನೀವು, ತಮ್ಮ ಅಭಿಮಾನಿಗಳು ಎಂದರೆ ಅಪಾರವಾದ ಪ್ರೀತಿ. ನೀವು ಅವರನ್ನು ಪ್ರೀತಿಸುವಷ್ಟೇ ಅವರು ತಮ್ಮ "ಸೆಲೆಬ್ರಿಟಿಗಳನ್ನು" ತನ್ನ ಹೃದಯದಲ್ಲೇ ಹೊತ್ತಿರುವುದು ನಿಮಗೇ ಗೊತ್ತಿದೆ. ಇದೊಂದು ಪರೀಕ್ಷೆಯ ಸಮಯ. ನನಗೆ,ನಿಮಗೆ, ನಮ್ಮೆಲ್ಲರಿಗೆ. ನಾವು ತಾಳ್ಮೆ ಕಳೆದುಕೊಂಡು ಮಾತನಾಡುವುದರಿಂದ ಹಾನಿಯಾಗುವುದು ನಮಗೆ. ಆದ್ದರಿಂದ ತಾಳ್ಮೆ, ಶಾಂತಿಯಿಂದಿರೋಣ.
ನಿಮ್ಮ ಆತಂಕವನ್ನು ನಾನು, ದರ್ಶನರಿಗೆ ತಲುಪಿಸಿದ್ದೇನೆ. ಅವರೂ ನಿಮ್ಮ ಪ್ರತಿ ಕಾಳಜಿ ವ್ಯಕ್ತಪಡಿಸಿದ್ದಾರೆ. ನಾವು ನಮ್ಮ ನ್ಯಾಯಾಲಯಗಳ ಮೇಲೆ ವಿಶ್ವಾಸವಿಡೋಣ. ನಮಗೆ ನ್ಯಾಯ ಸಿಗುವ ಸಂಪೂರ್ಣ ಭರವಸೆ ನನಗಿದೆ. ಇಂತಹ ಕಷ್ಟದ ಸಮದಲ್ಲಿ, ದರ್ಶನರ ಅನುಪಸ್ಥಿತಿಯನ್ನು ದುರುಪಯೋಗ ಪಡೆಸಿಕೊಂಡು ಅವರಿಗೆ ಕೇಡು ಬಯಸುವ/ಮಾಡುವವರನ್ನು ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ. ಒಳ್ಳೆಯ ಸಮಯ ಮತ್ತೆ ಮರಳಿ ಬರಲಿದೆ ಎಂಬ ಸಂದೇಶ ಅದು.
ಈ ಸಂದೇಶ ಸಾಮಾಜಿಕ ಜಾಲತಾಣದ ಮೂಲಕ ಸಮಾಜಕ್ಕೆ ತಲುಪಿದ್ದೇ ತಡ. ಕನ್ನಡ ಚಿತ್ರರಂಗದಲ್ಲಿ ಅಲ್ಲಿವರೆಗೆ ಸುಮ್ಮನೆ ಇದ್ದ ಅನೇಕರು ಧುತ್ತನೆ ಎದ್ದು ಬರಲು ಶುರು ಮಾಡಿದರು. ದರ್ಶನ್ ಪರ ವಕಾಲತ್ತು ವಹಿಸಲು ಆರಂಭ ಮಾಡಿದರು. ಬೆಂಬಲ ಸೂಚಿಸಲು ಶುರು ಮಾಡಿದರು. ಆ ಪೈಕಿ ಕನ್ನಡ ಚಿತ್ರರಂಗದ ಗಾಯಕಿ ಡಾ.ಶಮಿತಾ ಮಲ್ನಾಡ್ ಕೂಡ ಒಬ್ಬರು.
ದರ್ಶನ್ ಮೇಲಿರುವ ಆರೋಪದ ಕುರಿತು ಎರಡು ದಿನದ ಹಿಂದೆಯಷ್ಟೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸುಧೀರ್ಘ ಲೇಖನ ಬರೆದುಕೊಂಡಿದ್ದ ಡಾ.ಶಮಿತಾ ಮಲ್ನಾಡ್ ಈಗ ವಿಸ್ತಾರ ವಾಹಿನಿಯ ಜೊತೆ ಮನದ ಮಾತು ಹಂಚಿಕೊಂಡಿದ್ದಾರೆ. ವಿಜಯಲಕ್ಷ್ಮಿ ಹಾಗೂ ದರ್ಶನ್ ನಡುವೆ ಬೆಟ್ಟದಷ್ಟು ಪ್ರೀತಿ ಇದೆ ಎಂದು ಹೇಳಿದ್ದಾರೆ. ದರ್ಶನ್ ಈ ಪರಿಸ್ಥಿತಿಗೆ ಪವಿತ್ರಾ ಗೌಡ ಕಾರಣ ಅಂತ ದೂಷಿಸೋಕೆ ಆಗಲ್ಲ ಎಂದು ಕೂಡ ಹೇಳಿದ್ದಾರೆ.

ಹೌದು, ದರ್ಶನ್ ಬಂಧನವಾದ ಬಳಿಕ ವಿಜಯಲಕ್ಷ್ಮಿ ಅವರನ್ನು ನಾನು ಭೇಟಿ ಮಾಡಿದ್ದೆ ಎಂದಿರುವ ಡಾ.ಶಮಿತಾ ಮಲ್ನಾಡ್ ವಿಜಯಲಕ್ಷ್ಮಿ ಅವರು ಮಾನಸಿಕವಾಗಿ ಅವರು ತುಂಬಾ ಸ್ಟ್ರಾಂಗ್ ಆಗಿದ್ದಾರೆ ಎಂದು ಹೇಳಿದ್ದಾರೆ. ಇನ್ನೂ ವಿಜಯ ಲಕ್ಷ್ಮೀ ಸಾಮಾನ್ಯ ಹೆಣ್ಣಲ್ಲ, ದರ್ಶನ್ಗೋಸ್ಕರ ಅವರು ತಮಗೆ ಬಂದ ಸುವರ್ಣ ಅವಕಾಶವನ್ನೂ ಕೈ ಚೆಲ್ಲಿದಾರೆ. ಗಂಡ ಮಗ ಇಷ್ಟೇ ಅವರ ಪ್ರಪಂಚ ಎಂದು ಕೂಡ ಹೇಳಿದ್ದಾರೆ
ಇನ್ನೂ ದರ್ಶನ್ ಅವರನ್ನು ಮೊದಲು ನೋಡಿದ್ದು ಮೆಜೆಸ್ಟಿಕ್ ಸಿನಿಮಾದ ಚಿತ್ರದ ಸೆಟ್ನಲ್ಲಿ, ಆದರೆ.. ನಮ್ಮ ನಡುವೆ ಅಣ್ಣ-ತಂಗಿ ಸಂಬಂಧ ಬೆಳೆದಿದ್ದು ಸಾರಥಿ ಚಿತ್ರದಿಂದ ಎಂದಿರುವ ಡಾ.ಶಮಿತಾ ಮಲ್ನಾಡ್ ಸಾರಥಿ ಚಿತ್ರಕ್ಕೆ ನಾನು ಹಾಡಿದ್ದ ಎರಡು ಹಾಡನ್ನು ಉಳಿಸಿಕೊಂಡಿದ್ದು ದರ್ಶನ್ ಅವರೇ ಎಂದಿದ್ದಾರೆ.

ಅಂದ್ಹಾಗೇ ದರ್ಶನ್ ಬಂಧನವಾದ ಬಳಿಕ, ದರ್ಶನ್ ಮನಸ್ಥಿತಿಯ ಕುರಿತು ಮನೋವೈದ್ಯೆ ಚಂದ್ರಿಕಾ ಮಾತನಾಡಿದ್ದರು. ದರ್ಶನ್ ಗೆ ಕೌನ್ಸಲಿಂಗ್ ಅಗತ್ಯ ಇದೆ ಎಂದು ನಾನು ಆಗಲೇ ಹೇಳಿದ್ದೇ ಎಂದಿದ್ದರು. ಚಂದ್ರಿಕಾ ಅವರ ಈ ಅಭಿಪ್ರಾಯದ ಕುರಿತು ಕೂಡ ಮಾತನಾಡಿರುವ ವೃತ್ತಿಯಲ್ಲಿ ದಂತ ವೈದ್ಯೆ ಕೂಡ ಆಗಿರುವ ಡಾ.ಶಮಿತಾ ಮಲ್ನಾಡ್ ನಾನು ಡಾಕ್ಟರ್ ಆಗಿ ಹೇಳ್ತಿದೀನಿ ದರ್ಶನ್ಗೆ ಕೌನ್ಸೆಲಿಂಗ್ ಅಗತ್ಯ ಇಲ್ಲ ಎಂದು ಹೇಳಿದ್ದಾರೆ. ದರ್ಶನ್ ಅವರ ಈ ಪರಿಸ್ಥಿತಿಗೆ ಪವಿತ್ರಾ ಗೌಡ ಕಾರಣ ಅಂತ ದೂಷಿಸೋಕೆ ಆಗಲ್ಲ ಎಂದು ಕೂಡ ಹೇಳಿದ್ದಾರೆ ಡಾ.ಶಮಿತಾ ಮಲ್ನಾಡ್


Click it and Unblock the Notifications











