ಕಾಟೇರ ಕಥೆಗೆ ಉಮಾಪತಿ 73000 ಕೊಟ್ಟಿದ್ದು ನಿಜಾನಾ..? ತರುಣ್ ಹೇಳಿದ್ದೇನು..? ರೆಸಾರ್ಟ್, ಹೋಮ್ ಸ್ಟೇ ಕಥೆ ಏನು..?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಉಮಾಪತಿ ಶ್ರೀನಿವಾಸ್ ಅವರ ವಾಕ್ಸಮರದಿಂದ ಅನೇಕರಿಗೆ 'ಸತ್ಯಕ್ಕೆ ಸಾವಿಲ್ಲ.. ಸುಳ್ಳಿಗೆ ಸುಖವಿಲ್ಲ'.. ಎಂಬ ದೊಡ್ಡವರ ಮಾತು ನೆನಪಾಗಿದೆ. ಇಬ್ಬರದಲ್ಲಿ ಸತ್ಯದ ಪರ ಯಾರಿದ್ದಾರೆ. ಸುಳ್ಳನ್ನ ಹೊತ್ತು ಯಾರು ಮೆರೆಸುತ್ತಿದ್ದಾರೆ ಎಂಬ ಜಿಜ್ಞಾಸೆ ಕಾಡುತ್ತಿದೆ. ಈ ಕಾರಣಕ್ಕೆ ಸತ್ಯದ ಸಂಶೋಧನೆಯನ್ನ ಅನೇಕರು ಮಾಡ್ತಿದ್ದಾರೆ. ಕಾಟೇರ ಚಿತ್ರಕ್ಕೆ ಸಂಬಂಧಿಸಿದವರ ಹತ್ತಿರ ನಿಖರವಾದ ಉತ್ತರ ಪಡೆಯುವ ಪ್ರಯತ್ನ ಮಾಡ್ತಿದ್ದಾರೆ. ಇದರ ಒಂದು ಭಾಗವೆಂಬಂತೆ ಕಾಟೇರ ಚಿತ್ರದ ಸೂತ್ರಧಾರ ತರುಣ್ ಸುಧೀರ್ ತಮಗೆ ಉಮಾಪತಿ ಶ್ರೀನಿವಾಸ್ 73 ಸಾವಿರ ಕೊಟ್ಟಿದ್ದು ನಿಜವೆಂದಿದ್ದಾರೆ. ಆದರೆ ವಾದ ಮಾಡುವುದಕ್ಕಿಂತ ಮೊದಲು ಸಂಪೂರ್ಣ ವಿಚಾರವನ್ನ ತಿಳಿದುಕೊಳ್ಳಿ ಎಂಬ ಮನವಿ ಮಾಡಿದ್ದಾರೆ. ಫ್ಲ್ಯಾಶ್ ಬ್ಯಾಕ್ ಕಥೆ ಹೇಳಿದ್ದಾರೆ.
ತರುಣ್ ಸುಧೀರ್ ಹೇಳಿದ ಫ್ಲ್ಯಾಶ್ ಬ್ಯಾಕ್ ಕಥೆ..!
ಅದು ರಾಬರ್ಟ್ ಚಿತ್ರದ ಸಮಯ. ಆಗಿನ್ನೂ ರಾಬರ್ಟ್ ಬಿಡುಗಡೆ ಆಗಿರಲಿಲ್ಲ. ಆಗ ದರ್ಶನ್ ಸರ್ ತರುಣ್ ಇನ್ನೊಂದು ಸಿನಿಮಾ ಮಾಡೋಣ ಅಂತ ಹೇಳಿದ್ದರು. ಉಮಾಪತಿ ಸರ್ ಅವರಲ್ಲಿಯೂ ರಾಬರ್ಟ್ ನಂತರ ಇನ್ನೊಂದು ಸಿನಿಮಾ ಮಾಡುವ ಉತ್ಸಾಹ ಇತ್ತು.

ಇನ್ನೇನು ಇನ್ನೊಂದು ಚಿತ್ರಕ್ಕೆ ಕೆಲಸ ಶುರು ಮಾಡಬೇಕು ಅನ್ನುವಷ್ಟರಲ್ಲಿ ಲಾಕ್ ಡೌನ್ ಆಯಿತು. ಆಗ ನಾವೂ ಮಾಡಿದ್ದ ಮೊದಲ ಕೆಲಸ ಗುರು ಶಿಷ್ಯರು. ಆ ನಂತರ ಗುರು ಶಿಷ್ಯರು ಚಿತ್ರದ ಕಥೆ ಮುಗಿದ ಮೇಲೆ, ನಾನು ಹಾಗೂ ಜಡೇಶ್ ಕುಮಾರ್ ಮತ್ತೊಂದು ಕಥೆಯನ್ನ ಮಾಡಿದ್ವಿ. ಈ ಕಥೆ ಮಾಡುವ ಸಮಯದಲ್ಲಿ ನನಗೆ ಇನ್ನೊಂದು ಎಳೆ ಸಿಕ್ಕಿತ್ತು.
ಆ ಎಳೆಯನ್ನ ಇಟ್ಟುಕೊಂಡು ಹೆಚ್ಚು ಕಡಿಮೆ 02 ಘಂಟೆಗಳ ಕಾಲ ಉಮಾಪತಿ ಸರ್ ಗೆ ಕಥೆಯನ್ನ ವಿವರವಾಗಿ ಹೇಳಿದ್ದೇ. ಆ ನಂತರ ಗೌರಿ ಹಬ್ಬದ ದಿನ ದರ್ಶನ್ ಸರ್ ಅವರಿಗೂ ಕಥೆ ಹೇಳಿದೆ. ಇಬ್ಬರಿಗೂ ಕಥೆ ಇಷ್ಟವಾಯಿತು. ಆಗ ದರ್ಶನ್ ಸರ್ ಅವರೇ ಉಮಾಪತಿ ಸರ್ ಗೆ ನೀವೆ ಮಾಡಿ ಎಂದರು. ಇದೆಲ್ಲವೂ ನಡೆದಿದ್ದು 2020ರಲ್ಲಿ ಎಂದಿದ್ದಾರೆ ತರುಣ್ ಸುಧೀರ್
ಕಥೆ ಮಾಡಿಸೋಕೆ ಅಲ್ಲ. ಕಥೆ ಹೇಳೋದಕ್ಕೆ ಕೊಟ್ಟಿದ್ದು-ತರುಣ್ ಸುಧೀರ್ ..!
ಉಮಾಪತಿ ಸರ್ ಹಾಗೂ ದರ್ಶನ್ ಸರ್ ಅವರಿಗೆ ಕಥೆ ಹೇಳಿದ ನಂತರ, ನನ್ನ ನಿರ್ದೇಶನದ ತಂಡಕ್ಕೆ ಕಥೆ ಹೇಳಬೇಕಿತ್ತು. ಕಥೆ ಹಾಗೂ ಸನ್ನಿವೇಶಗಳ ಬಗ್ಗೆ ಚರ್ಚೆಯನ್ನ ಮಾಡಬೇಕಿತ್ತು. ಈ ಕಾರಣಕ್ಕೆ 02-03 ದಿನ ಗಳ ಕಾಲ ಎಲ್ಲರೂ ಒಂದು ಕಡೆ ಸೇರಿದರೆ, ಕೆಲಸ ಸುಲಭ ಅಂದುಕೊಂಡು ಹಾಸನ ಬಳಿ ಇರುವ ನನ್ನ ಸ್ನೇಹಿತನ ಹೋಮ್ ಸ್ಟೇ ನಲ್ಲಿ ನಾವು 6-7 ಜನ 03 ದಿನಗಳ ಕಾಲ ಮೊಕ್ಕಾಂ ಹೂಡಿದೆವು.

ಅಲ್ಲಿಗೆ ಹೋದಾಗ 73 ಸಾವಿರ ರೂಪಾಯಿ ಖರ್ಚಾಯಿತು. ಅದನ್ನ ಕೊಟ್ಟಿದ್ದು ಉಮಾಪತಿ ಸರ್. ಆದರೆ ದುರಾದೃಷ್ಟ ಆ ಯೋಜನೆ ಮುಂದುವರೆಯಲಿಲ್ಲ. ಯಾಕೆಂದರೆ ಆ ನಂತರ ರಾಬರ್ಟ್ ಬಿಡುಗಡೆ ಆಯಿತು. ಇಬ್ಬರ ಮಧ್ಯೆ ಮನಸ್ತಾಪ ಆಯ್ತು. ಆ ಪಿಕ್ಚರ್ ಮಾಡಲ್ಲ ಅಂತಾಯ್ತು. ನಾವು ಬಿಟ್ವಿ. ಇವತ್ತು ಉಮಾಪತಿ ಸರ್ ಹೇಳ್ತಿದ್ದಾರಲ್ಲ.. ಕಥೆ ಮಾಡಿಸೋಕೆ ಕಳಿಸಿದ್ದೆ ಅಂತ. ಅದು ಕಥೆ ಮಾಡಿಸೋಕೆ ಅಲ್ಲ. ಕಥೆ ಹೇಳೋದಕ್ಕೆ ಕಳಿಸಿದ್ದು ಎಂದಿದ್ದಾರೆ ತರುಣ್ ಸುಧೀರ್.
ಉಮಾಪತಿ ಶ್ರೀನಿವಾಸ್ ಹೇಳಿದ್ದ 73000 ರೂಪಾಯಿ ಕಥೆ ಏನು..?
ನಿಜಾ, ಕಾಟೇರ ಟೈಟಲ್ ಕೊಟ್ಟಿದ್ದು ದರ್ಶನ್ ಅವರೇ. ಆದರೆ ಆ ಕಥೆ ಮಾಡುವಾಗ ಇವರು ತಗೆದುಕೊಂಡಿದ್ದು ನನ್ನ ಸಹಾಯವನ್ನೇ ಎಂದಿದ್ದ ಉಮಾಪತಿ ಶ್ರೀನಿವಾಸ್, ತರುಣ್ ಹಾಗೂ ಜಡೇಶ್ ಕಥೆ ಮಾಡಿದ ನಂತರ, ತಂಡದ ಜೊತೆ ಇನ್ನಷ್ಟು ಕೆಲಸ ಮಾಡಲು ರೆಸಾರ್ಟ್ ಗೆ ಕಳಿಸಿಕೊಟ್ಟಿದ್ದೆ ಇದು ನಿಜಾನೇ. ಇವತ್ತಿಗೂ ಅಕೌಂಟ್ಸ್ ಇದೆ.. ತೆಗೆದು ನೋಡಿ.. ರೆಸಾರ್ಟ್ಗೆ ಮಾಡಿರುವ ಬಿಲ್ಸ್ ಎಲ್ಲವೂ ನನ್ನ ಬಳಿಯೇ ಇದೆ' ಅಂದಿದ್ದರು ಉಮಾಪತಿ ಶ್ರೀನಿವಾಸ್. ವರಮಹಾಲಕ್ಷ್ಮೀ ಹಬ್ಬದ ದಿನ ನಾನು ಅಡ್ವಾನ್ಸ್ ಮಾಡಿದ್ದೆ. ಅಂದು ನನ್ನ ಮನೆಯಲ್ಲಿ ಗಲಾಟೆ ಆಗಿತ್ತು. ಹಬ್ಬದ ದಿನ ದುಡ್ಡು ಕೊಡಬಾರದಿತ್ತು ಅಂತ. ಅದನ್ನ ಮೀರಿ ನಾನು ಹಣ ಕೊಟ್ಟಿದ್ದೆ'' ಅಂತ ಮಾಧ್ಯಮಗಳಿಗೆ ತಿಳಿಸಿದ್ದರು ಉಮಾಪತಿ ಶ್ರೀನಿವಾಸ್.
ಧನ್ಯತಾಭಾವ ಬೇಡವಾ..?
'ಕಾಟೇರ' ಟೈಟಲ್ ದರ್ಶನ್ ರೆಫರ್ ಮಾಡಿದ್ಮೇಲೆ ರಿಜಿಸ್ಟರ್ ಮಾಡಿಸಿದ್ದೆ. ಅದಾದ್ಮೇಲೆ ಟೈಟಲ್ ಎಕ್ಸ್ಚೇಂಜ್ ಆಯ್ತು. ಕಥೆಯನ್ನ ಯಾರ ದುಡ್ಡಲ್ಲಿ ಮಾಡಿಸಿದ್ದು? ಒಂದು ಕೃತಜ್ಞತೆಗೆ.. ನನ್ನಿಂದ 1 ರೂಪಾಯಿ ಸಹಾಯ ಆಗಿದ್ಯೋ.. 1 ಸಾವಿರ ಆಗಿದ್ಯೋ.. ಒಂದೇ ಒಂದು ಥ್ಯಾಂಕ್ಸ್.? ನಾವು ದೂರದಲ್ಲಿ ನಿಂತು ಖುಷಿ ಪಡ್ತೀವಿ. ರಾಕ್ಲೈನ್ ಅವರ ಬ್ಯಾನರ್ನಲ್ಲಿ ಸಿನಿಮಾ ಬಂದಿದ್ದು ನನಗೂ ಖುಷಿ ಆಯ್ತು ಎಂದಿದ್ದರು ಉಮಾಪತಿ ಶ್ರೀನಿವಾಸ್.

ಒಟ್ಟಿನಲ್ಲಿ ಒಂದು ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲ್ಲುತ್ತಿದ್ದಂತೇ ಇದು ಯಾರ ಗೆಲುವು ಎಂಬಂಥ ಪ್ರಶ್ನೆ ಏಳುತ್ತದೆ. ಸಾಮಾನ್ಯವಾಗಿ ಬ್ಲಾಕ್ ಬಸ್ಟರ್ ಸಿನಿಮಾ ಎನಿಸಿಕೊಂಡಾದಮೇಲೆ ಆ ಸಿನಿಮಾ ಟೀಮುಗಳು ಚೂರು ಚೂರಾಗಿಬಿಡುತ್ತದೆ. ಅದಕ್ಕೆ ಕಾರಣ ಗೆಲುವಿಗೆ ನಾನು ಕಾರಣ ಅನ್ನೋ ಈಗೋ ಕ್ಲ್ಯಾಶುಗಳು. ಕಾಟೇರ ಚಿತ್ರದ ವಿಚಾರದಲ್ಲಿಯೂ ಇದೇ ಆಗಿದ್ದಾ..? ಉತ್ತರ ಆ ಭಗವಂತನೇ ಬಲ್ಲ


Click it and Unblock the Notifications











