ವಿಜಯ್- ಜಡೇಶ್ ಸಿನಿಮಾ ಟೈಟಲ್ ಘೋಷಣೆ; ಅಭಿಮಾನಿಗಳಲ್ಲಿ 'ಸಲಗ'ನ ಮನವಿ ಏನು?
ನಟ ದುನಿಯಾ ವಿಜಯ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಆದರೆ ಅಭಿಮಾನಿಗಳ ಜೊತೆ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಇನ್ನು ವಿಜಯ್ ಹಾಗೂ ಜಡೇಶ್ ಕಾಂಬಿನೇಷನ್ ಸಿನಿಮಾ ಟೈಟಲ್ ಅನಾವರಣವಾಗಿದೆ. ಮತ್ತೊಂದು ಹೊಸ ಸಿನಿಮಾ ಕೂಡ ಘೋಷಣೆ ಆಗಿದೆ.
'ಭೀಮ' ಬಳಿಕ ದುನಿಯಾ ವಿಜಯ್ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ಸಿಟಿ ಲೈಟ್ಸ್' ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ಪುತ್ರಿ ಮೋನಿಷಾ ನಟಿಸುತ್ತಿದ್ದಾರೆ. ವಿನಯ್ ರಾಜ್ಕುಮಾರ್ ಹೀರೊ ಆಗಿ ಬಣ್ಣ ಹಚ್ಚಿದ್ದಾರೆ. ಇನ್ನು 'ಜಂಟಲ್ಮನ್', 'ಗುರುಶಿಷ್ಯರು' ಸಿನಿಮಾಗಳ ಖ್ಯಾತಿಯ ಜಡೇಶ್ ಹಂಪಿ ನಿರ್ದೇಶನದ ಚಿತ್ರದಲ್ಲಿ ವಿಜಯ್ ನಟಿಸುತ್ತಿದ್ದಾರೆ.

ದುನಿಯಾ ವಿಜಯ್ ಹಾಗೂ ಜಡೇಶ್ ಚಿತ್ರಕ್ಕೆ 'ಲ್ಯಾಂಡ್ಲಾರ್ಡ್' ಎಂಬ ಟೈಟಲ್ ಫಿಕ್ಸ್ ಆಗಿದೆ. ವಿಜಯ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಪೋಸ್ಟರ್ ಸಮೇತ ಟೈಟಲ್ ಘೋಷಣೆ ಆಗಿದೆ. ಕೆ. ವಿ ಸತ್ಯಪ್ರಕಾಶ್ ಹಾಗೂ ಪುತ್ರ ಸೂರಜ್ ಗೌಡ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಚಿತಾ ರಾಮ್ ನಾಯಕಿಯಾಗಿ ನಟಿಸುತ್ತಿದ್ದಾರೆ. ದರ್ಶನ್ ನಟನೆಯ 'ಕಾಟೇರ' ಚಿತ್ರಕ್ಕೆ ಜಡೇಶ್ ಕಥೆ ಒದಗಿಸಿದ್ದರು. 90ರ ದಶಕದ ಕಥೆ 'ಲ್ಯಾಂಡ್ಲಾರ್ಡ್' ಚಿತ್ರದಲ್ಲಿದೆ. 'ಕಾಟೇರ' ರೀತಿಯಲ್ಲೇ ಇದು ಕೂಡ ನಮ್ಮ ಮಣ್ಣಿನ ಸಿನಿಮಾ ಎನ್ನುವುದು ಗೊತ್ತಾಗುತ್ತಿದೆ.
ಜಬರ್ದಸ್ತ್ ಪೋಸ್ಟರ್ನಲ್ಲಿ ಖಡಕ್ ಅವತಾರದಲ್ಲಿ ದುನಿಯಾ ವಿಜಯ್ ಕಾಣಿಸಿಕೊಂಡಿದ್ದಾರೆ. ಪಂಚೆ ಮೇಲೆತ್ತಿ ಕಟ್ಟಿ, ಎರಡು ಕೈಗಳಲ್ಲಿ ಕೊಡಲಿಗಳನ್ನು ಹಿಡಿದು ರಕ್ತಸಿಕ್ತರಾಗಿ ದರ್ಶನ ಕೊಟ್ಟಿದ್ದಾರೆ. ಚಿತ್ರದಲ್ಲಿ ರಾಚಯ್ಯ ಎಂಬ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ ಎನ್ನಲಾಗ್ತಿದೆ. ಇನ್ನು ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡುವುದು ಪಕ್ಕಾ ಆಗಿದೆ.

'ಲ್ಯಾಂಡ್ಲಾರ್ಡ್' ಟೈಟಲ್ಗೆ 'ಇದು ಆಳಿದವರ ಕಥೆಯಲ್ಲ, ಅಳಿದು ಉಳಿದವರ ಕಥೆ' ಎಂಬ ಕ್ಯಾಪ್ಷನ್ ಕೂಡ ಇದೆ. ಕೋಲಾರ ಹಿನ್ನೆಲೆಯಲ್ಲಿ 'ಲ್ಯಾಂಡ್ಲಾರ್ಡ್' ಸಿನಿಮಾ ಮೂಡಿ ಬರುತ್ತಿದೆ. ಇದೇ ವರ್ಷ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ. ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ. ಜಡೇಶ್ ನಿರ್ದೇಶನದ 'ಜಂಟಲ್ಮನ್' ಚಿತ್ರಕ್ಕೂ ಮಾಸ್ತಿ ಕೆಲಸ ಮಾಡಿದ್ದರು.
ಹುಟ್ಟುಹಬ್ಬ ಆಚರಣೆ ಬಗ್ಗೆ ದುನಿಯಾ ವಿಜಯ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. "ಈ ಬಾರಿ ನಿಮ್ಮೊಟ್ಟಿಗೆ ಹುಟ್ಟುಹಬ್ಬ ಆಚರಿಸುವ ಆಸೆ ಇತ್ತು. ಆದರೆ ಕೆಲಸದ ಕಾರಣ ಸಾಧ್ಯವಾಗುತ್ತಿಲ್ಲ. ಜಡೇಶ್ ಹಂಪಿ ನಿರ್ದೇಶನದ ಸಿನಿಮಾ ಚಿತ್ರೀಕರಣದಲ್ಲಿ ಇರುತ್ತೀನಿ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗುತ್ತದೆ. ಶನಿವಾರ ಹಾಗೂ ಭಾನುವಾರ ನಾನು ಊರಿನಲ್ಲಿ ಇರಲ್ಲ. ದಯವಿಟ್ಟು ಯಾರು ಮನೆ ಬಳಿ ಬರಬೇಡಿ" ಎಂದು ವಿಜಯ್ ಪೋಸ್ಟ್ ಮಾಡಿದ್ದಾರೆ.
ಸೂಪರ್ ಹಿಟ್ 'ಸಲಗ' ಕಾಂಬಿನೇಷನ್ನಲ್ಲಿ ಮತ್ತೊಂದು ಸಿನಿಮಾ ಘೋಷಣೆ ಆಗಿದೆ. ಇನ್ನು ಹೆಸರಿಡದ ಚಿತ್ರವನ್ನು ವೀನಸ್ ಎಂಟರ್ಟ್ರೈನರ್ಸ್ ಬ್ಯಾನರ್ ಅಡಿಯಲ್ಲಿ ಕೆ. ಪಿ ಶ್ರೀಕಾಂತ್ ನಿರ್ಮಾಣ ಮಾಡುತ್ತಿದ್ದಾರೆ. 'ಸಲಗ' ಹಾಗೂ 'ಭೀಮ' ಸಿನಿಮಾಗಳನ್ನು ಕಟ್ಟಿಕೊಟ್ಟ ತಂಡವೇ ಕೆಲಸ ಮಾಡಲಿದೆ. ವಿಜಯ್ ಆಪ್ತ ಬಳಗದಲ್ಲಿ ಗುರ್ತಿಸಿಕೊಂಡಿರುವ ವೆಟ್ರಿವೇಲ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.
ಕಾಡ್ಗಿಚ್ಚು. ಕ್ರೂರ ಪ್ರಾಣಿಗಳನ್ನು ಹಿಡಿಯುವ ಪಂಜರ. ಒಳಗೆ ಮಾಂಸದ ತುಂಡು, ಪಂಜರದ ಬಾಗಿಲು ತೆರೆದಿದೆ. VK 30 Reserve ಎಂದು ಅದರ ಮೇಲೆ ಬರೆದು ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಮೊದಲ ನೋಟದಲ್ಲೇ ಪೋಸ್ಟರ್ ಕುತೂಹಲ ಮೂಡಿಸುವಂತಿದೆ. ಮತ್ತೊಂದು ಆಕ್ಷನ್ ಎಂಟರ್ಟೈನರ್ ಸಿನಿಮಾ ಎನ್ನುವುದು ಗೊತ್ತಾಗುತ್ತಿದೆ. ಮುಂದಿನ ವರ್ಷ ಈ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ.


Click it and Unblock the Notifications











