ತೆಲುಗು ನಟನಿಂದ ವಿಷ್ಣುವರ್ಧನ್ ತೇಜೋವಧೆ: ಜಗ್ಗೇಶ್ ಕೆಂಡಾಮಂಡಲ
ತೆಲುಗು ನಟನೊಬ್ಬ ಕನ್ನಡ ಖ್ಯಾತ ನಟ ವಿಷ್ಣುವರ್ಧನ್ ವ್ಯಕ್ತಿತ್ವದ ಬಗ್ಗೆ ನೀಚವಾಗಿ ಮಾತನಾಡಿರುವುದು ಕನ್ನಡಿಗರನ್ನು ಕೆಣಕಿದೆ.
ಕೆಲವು ತೆಲುಗು ಸಿನಿಮಾಗಳಲ್ಲಿ ನಟಿಸಿರುವ ವಿಜಯ್ ರಂಗರಾಜು ಎಂಬಾತ, ಸಂದರ್ಶನವೊಂದರಲ್ಲಿ ಕನ್ನಡದ ಖ್ಯಾತ ನಟ ವಿಷ್ಣುವರ್ಧನ್ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದಾನೆ. ಈ ವಿಡಿಯೋ ವಿರುದ್ಧ ಹಲವಾರು ಮಂದಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಹಿರಿಯ ನಟ ಜಗ್ಗೇಶ್ ಸಹ ವಿಷ್ಣುವರ್ಧನ್ ಬಗ್ಗೆ ಮಾತನಾಡಿರುವ ಆ ನಟನ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.
ವಿಷ್ಣುವರ್ಧನ್ ಕುರಿತು ನಾಲಿಗೆ ಹರಿಬಿಟ್ಟ ನಟ ವಿಜಯ್ ರಂಗರಾಜು ಚಿತ್ರವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ನಟ ಜಗ್ಗೇಶ್, 'ಇವನ್ಯಾರೊ ಕಲಾವಿದನಂತೆ, ಈ ದರಿದ್ರ ಮುಖ ಯಾವ ಚಿತ್ರದಲ್ಲು ನೋಡಿದ ನೆನಪಿಲ್ಲಾ. ಕನ್ನಡದ ಹೃದಯಗಳೇ ಇವನ ಅನಿಷ್ಟ ಸೊಲ್ಲು ಅಡುಗುವಂತೆ ಕನ್ನಡಿಗರ ದೂಷಣೆಗೆ ಹಿಂಜರಿಯುವಂತೆ ಉತ್ತರಿಸಿ' ಎಂದು ಕರೆ ನೀಡಿದ್ದಾರೆ ಜಗ್ಗೇಶ್.

ಇವನ ಉದ್ಧಟತನದ ಮಾತಿಗೆ ಕ್ಷಮೆಯಿಲ್ಲ: ಜಗ್ಗೇಶ್
'ನತದೃಷ್ಟ ಶಿಕಾಮಣಿ ಕಾಲವಾದ ಸಾಧಕರ ಬಗ್ಗೆ ಕುಚೇಷ್ಟೆ ಮಾತಾಡುವ ಗುಣದವ ಎಲ್ಲಿಯು ಸಲ್ಲದವ, ಇವನ ಉದ್ದಟತನ ಮಾತಿಗೆ ಕ್ಷಮೆಯಿಲ್ಲಾ ಸತ್ತವರು ದೇವರ ಸಮ. ದುಃಖವಾಯಿತು' ಎಂದಿದ್ದಾರೆ ನಟ ಜಗ್ಗೇಶ್.

ವಿಡಿಯೋ ವಿರುದ್ಧ ಕ್ರಮಕ್ಕೆ ಒತ್ತಾಯಿಸಲು ಕರೆ
ಮತ್ತೊಂದು ಟ್ವೀಟ್ನಲ್ಲಿ, 'ಕೋಟಿ ಸಂಖ್ಯೆಯಲ್ಲಿ ಈ ವೀಡಿಯೋ ವಿರುದ್ಧ ಯೂಟ್ಯೂಬ್ ಗೆ ಕ್ರಮಕ್ಕೆ ಒತ್ತಾಯಿಸಿ, ಈ ತುಣುಕು ತೆಗೆಸಿಹಾಕಿ, ಇನ್ನು ಮುಂದೆ ಇಂಥ ಹೀನ ಕೃತ್ಯ ನಡೆಯದಿರಲಿ, ಕನ್ನಡಿಗರ ಬಗ್ಗೆ ಭಯವಿರಲಿ' ಎಂದಿದ್ದಾರೆ ನಟ ಜಗ್ಗೇಶ್.

ವಿಷ್ಣುಸೇನಾ ದಿಂದ ದೂರು
ಈಗಾಗಲೇ ವಿಷ್ಣುಸೇನಾ ಸಂಘದ ಸದಸ್ಯರು, ವಿಷ್ಣುವರ್ಧನ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ನಟನ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬಳಿ ದೂರು ನೀಡಿದ್ದಾರೆ. ನಿನ್ನೆಯಷ್ಟೆ ಕೆಲವು ಸದಸ್ಯರ ನಿಯೋಗವು ಮಂಡಳಿಯ ಉಪಾಧ್ಯಕ್ಷ ಬಣಕಾರ್ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮಾತನಾಡಿದೆ.
Recommended Video

ಅಕ್ಟೋಬರ್ ನಲ್ಲಿ ನೀಡಿದ್ದ ಸಂದರ್ಶನ
ನಟ ವಿಜಯ್ ರಂಗರಾಜು, ಅಕ್ಟೋಬರ್ ತಿಂಗಳಲ್ಲಿ ತೆಲುಗಿನ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ವಿಷ್ಣುವರ್ಧನ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಆ ವಿಡಿಯೋದ ಕಮೆಂಟ್ಗಳಲ್ಲಿಯೇ ವಿಜಯ್ ರಂಗರಾಜು ಅವರನ್ನು ತೆಗಳಿ ಕಮೆಂಟ್ ಮಾಡಿದ್ದಾರೆ. ವಿಷ್ಣು ಅವರ ಘನತೆ ಬಗ್ಗೆ ನೂರಾರು ಮಂದಿ ಕಮೆಂಟ್ ಮಾಡಿದ್ದಾರೆ.


Click it and Unblock the Notifications











