ಅತ್ಯಾಚಾರ ಆರೋಪಿಗಳ ಹಿಡಿದ ಪೊಲೀಸರಿಗೆ ಬಹುಮಾನ ಘೋಷಿಸಿದ ಜಗ್ಗೇಶ್
ಮೈಸೂರಿನಲ್ಲಿ ನಡೆದಿರುವ ಸಾಮೂಹಿಕ ಅತ್ಯಾಚಾರ ನಾಡಿನ ಜನರಲ್ಲಿ ತೀವ್ರ ಆಕ್ರೋಶ ಕೆರಳಿಸಿದೆ. ರಾಜಕೀಯ ಮುಖಂಡರು, ಸಿನಿಮಾ ಸೆಲೆಬ್ರಿಟಿಗಳು, ಶ್ರೀಸಾಮಾನ್ಯರು ಮೈಸೂರಿನ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ನಟಿ ಶ್ರುತಿ, ತಾರಾ, ಪೂಜಾ ಗಾಂಧಿ, ಅದಿತಿ ಪ್ರನುದೇವ್, ಪ್ರಣಿತಾ ಸುಭಾಷ್, ಮಾಳವಿಕಾ, ನಟಿ ರಮ್ಯಾ ಇನ್ನೂ ಹಲವು ನಟಿಯರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ನಟ ಹಾಗೂ ರಾಜಕಾರಣಿಯೂ ಆಗಿರುವ ಜಗ್ಗೇಶ್ ಸಹ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದರು.
ಇದೀಗ ಮೈಸೂರು ಪೊಲೀಸರು ಘಟನೆಗೆ ಸಂಬಂಧಿಸಿದ ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ. ಬಹಳ ಕಡಿಮೆ ಮಾಹಿತಿ ಹೊಂದಿದ್ದರೂ ಸಹ ಕಷ್ಟಪಟ್ಟು ಮೈಸೂರು ಪೊಲೀಸರು ಶೀಘ್ರವಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ಅತ್ಯಾಚಾರ ಮಾಡಿದ ಕಿರಾತಕರನ್ನು ಬಂಧಿಸಿರುವ ಪೊಲೀಸರಿಗೆ ನಟ ಜಗ್ಗೇಶ್ ಬಹುಮಾನವನ್ನು ಘೋಷಿಸಿದ್ದಾರೆ.

ಒಂದು ಲಕ್ಷ ರು ಬಹುಮಾನ ಘೋಷಿಸಿದ ಜಗ್ಗೇಶ್
ಈ ಬಗ್ಗೆ ಟ್ವಿಟ್ಟರ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಜಗ್ಗೇಶ್, ''ಕಾಲೇಜು ವಿಧ್ಯಾರ್ಥಿ ಅತ್ಯಾಚಾರ ಮಾಡಿದ ಕಾಮಪಿಪಾಸುಗಳ ಬಂಧಿಸಿದ ನನ್ನ ಕರುನಾಡಿನ ಹೆಮ್ಮೆಯ ಆರಕ್ಷಕರಿಗೆ ನನ್ನ ವೈಯಕ್ತಿಕ ಅಭಿನಂದನೆಗಳು. ನಮ್ಮ ರಾಜ್ಯದ ಪೊಲೀಸ್ ಬಗ್ಗೆ ಹೆಮ್ಮೆ ಇದೆ. ನನ್ನ ಕಡೆಯಿಂದ ಪ್ರಕರಣ ಬೇಧಿಸಿದ ನಲ್ಮೆಯ ನನ್ನ ಪೋಲಿಸರಿಗೆ 1ಲಕ್ಷ ಬಹುಮಾನ. ನಿಮ್ಮ ಸಾರ್ಥಕ ಸೇವೆ ಹೀಗೆ ಮುಂದುವರಿಯಲಿ. ರಾಷ್ಟ್ರಕ್ಕೆ ಮಾದರಿ ನಮ್ಮ ಪೋಲಿಸ್'' ಎಂದಿದ್ದಾರೆ ನಟ ಜಗ್ಗೇಶ್.

ಆಕ್ರೋಶದಿಂದ ಟ್ವೀಟ್ ಮಾಡಿದ್ದ ಜಗ್ಗೇಶ್
ಸಾಮೂಹಿಕ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಾಗ ಆಕ್ರೋಶದಿಂದ ಟ್ವೀಟ್ ಮಾಡಿದ್ದ ಜಗ್ಗೇಶ್, "ಎಂಥ ಕ್ರೂರಿಗಳು. ತಾಯಿ ಹೆಣ್ಣಲ್ಲವೆ?, ಅಕ್ಕ-ತಂಗಿ ಹೆಣ್ಣಲ್ಲವೆ?, ಮಡದಿ ಹೆಣ್ಣಲ್ಲವೆ?, ಹೆಣ್ಣು ಗೌರವಿಸದವರು ರಕ್ಕಸರು, ಈ ಕೃತ್ಯ ಎಸಗಿದ ಕ್ರೂರಿಗಳು ಗಲ್ಲು ಶಿಕ್ಷೆಗೆ ಅರ್ಹರು, ಈ ಕ್ರೂರ ಕೃತ್ಯಕ್ಕೆ ಖಂಡನೆ" ಎಂದಿದ್ದರು. ಇದು ಮಾತ್ರವೇ ಅಲ್ಲದೆ ಈ ಹಿಂದೆಯೂ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳಾದಾಗೆಲ್ಲ ಜಗ್ಗೇಶ್ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಘಟನೆಯನ್ನು ಖಂಡಿಸಿರುವ ನಟಿಯರು
ಮೈಸೂರಿನ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಸ್ಯಾಂಡಲ್ವುಡ್ ನಟಿಯರು ತೀವ್ರವಾಗಿ ಖಂಡಿಸಿದ್ದಾರೆ. ಅದರಲ್ಲಿಯೂ ಕೆಲವು ಸಚಿವರು ಘಟನೆ ಬಗ್ಗೆ ಲಘುವಾಗಿ ಮಾತನಾಡಿದ ಬಳಿಕವಂತೂ ಹಲವರು ಸಾಮಾಜಿಕ ಜಾಲತಾಣದಲ್ಲಿ ತೀಕ್ಷ್ಣ ಪೋಸ್ಟ್ಗಳನ್ನು ಹಾಕಿದ್ದಾರೆ. ''ನಾವು ಇದನ್ನ ಆಗಾಗ ಕೇಳುತ್ತಿರುತ್ತೇವೆ, ಇದು ನಿಮ್ಮ ತಪ್ಪು, ನೀವು ಹಾಗೆ ಹೇಳಬಾರದಿತ್ತು, ನೀವು ಅದನ್ನು ಮಾಡಬಾರದಿತ್ತು, ನೀವು ಅದನ್ನು ಧರಿಸಬಾರದು, ತುಂಬಾ ಬಿಗಿಯಾಗಿ, ತುಂಬಾ ಚಿಕ್ಕದಾಗಿದೆ, ತುಂಬಾ ಆಕರ್ಷಕವಾಗಿದೆ, ತುಂಬಾ ಉದ್ದವಾಗಿದೆ, ನೀವು ತಡರಾತ್ರಿ ಹೊರಗೆ ಹೋಗಬಾರದಿತ್ತು, ನಾವು ಮೇಕಪ್ ಹಾಕಬಾರದು, ಕೆಂಪು ಲಿಪ್ಸ್ಟಿಕ್ ಏಕೆ ಹಾಕುತ್ತೀರಿ, ನಾವು ಕಣ್ಣು ಮಿಟುಕಿಸಬಾರದಿತ್ತು, ನಿಮಗೆ ಅದಿರಬಾರದು, ಇದಿರಬಾದು..ಯಾಕೆ?. ಯಾಕೆಂದರೆ ಪುರುಷರು ಪುರುಷರಾಗಿ ಇರುತ್ತಾರೆ. ನಾವು ಎಲ್ಲದಕ್ಕೂ ರಾಜಿ ಮಾಡಿಕೊಳ್ಳಬೇಕು. ನಾವು ಬದಲಾಗಬೇಕು, ನಾವು ಹೊಂದಿಕೊಳ್ಳಬೇಕು, ನಾವು ಸಹಿಸಿಕೊಳ್ಳಬೇಕು.. ಈ ರೀತಿಯ ನಾನ್ಸೆಸ್ ಗಳಿಗೆ ಮೊದಲು ಫುಲ್ ಸ್ಟಾಪ್ ಹಾಕಬೇಕು" ಎಂದಿದ್ದಾರೆ ನಟಿ ರಮ್ಯಾ.

ಆರೋಪಿಗಳನ್ನು ಬಂಧಿಸಿದ್ದು ಹೇಗೆ?
ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಈಗಾಗಲೇ ಐವರು ಆರೋಪಿಗಳನ್ನ ಪೊಲೀಸರ ತಂಡ ಹೆಡೆಮುರಿ ಕಟ್ಟಿ ಮೈಸೂರಿಗೆ ಕರೆತಂದಿದೆ. ಬಂಧಿತ ಆರೋಪಿಗಳನ್ನು ಗೌಪ್ಯ ಸ್ಥಳದಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಇಡೀ ಪ್ರಕರಣ ಭೇದಿಸಿದ್ದಲ್ಲಿ ನಾಲ್ವರು ಪ್ರಮುಖರು. ಹೌದು, ಒಬ್ಬರು ಡಿಸಿಪಿ, ಒಬ್ಬರು ಇನ್ಸ್ಪೆಕ್ಟರ್, ಇಬ್ಬರು ಸಿಡಿಆರ್ ವಿಭಾಗದ ಸಿಬ್ಬಂದಿ.
ಘಟನೆ ನಡೆದ ಬೆನ್ನಲ್ಲೆ ಪ್ರಕರಣ ಇಡಿ ರಾಜ್ಯಾದ್ಯಂತ ಭಾರಿ ಸುದ್ಧಿಯಾಗಿತ್ತು. ಈ ಮಧ್ಯೆ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದ ಮೊದಲ ದಿನವೇ ಬಸ್ ಟಿಕೆಟ್ ಪತ್ತೆಯಾಗಿತ್ತು.

ಮೊಬೈಲ್ ಟವರ್ ಡಂಪಿಂಗ್
ಹೀಗಾಗಿ ಆರೋಪಿಗಳ ಜಾಡು ಹಿಡಿದ ಪೊಲೀಸರು, ಮೊಬೈಲ್ ಟವರ್ ಪತ್ತೆಗೆ ಸಜ್ಜಾದರು.
ಮೈಸೂರಿನಲ್ಲಿ ಘಟನೆ ನಡೆದ ಸ್ಥಳ, ಮತ್ತೊಂದು ಚಾಮರಾಜನಗರ ಒಟ್ಟು ಎರಡು ಕಡೆಗಳಲ್ಲಿ ಮೊಬೈಲ್ ಟವರ್ ಡಂಪ್ ನಡೆಸಲಾಗಿತ್ತು. ಆರೋಪಿಗಳು ತಾಳವಾಡಿಯಿಂದ ಚಾಮರಾಜನಗರಕ್ಕೆ ಬಂದಿದ್ದರು. ಹೀಗಾಗಿ ಪೊಲೀಸರಿಗೆ ಎರಡೂ ಕಡೆಗಳಲ್ಲಿ ಒಂದೇ ಸಿಮಿಲರ್ ನಂಬರ್ ಸಿಕ್ಕಿದ್ದು, ಆ ಒಂದೇ ನಂಬರ್ ಜಾಡು ಹಿಡಿದು ಪೊಲೀಸರು ಪ್ರಕರಣ ಭೇದಿಸಿದ್ದಾರೆ.ಮೈಸೂರಿನಲ್ಲಿ ಆಗಸ್ಟ್ 24 ರ ಸಂಜೆ 7 ರಿಂದ9 ಗಂಟೆ ಸಮಯ. ಚಾಮರಾಜನಗರದಲ್ಲಿ ಅಂದೇ ಮಧ್ಯಾಹ್ನ 2 ರಿಂದ 3 ಗಂಟೆ ಸಮಯದ ಟವರ್ ಡಂಪ್ ನಡೆದಿತ್ತು. ಈ ಮಾರ್ಗದಲ್ಲಿ ಖಾಕಿ ಆರೋಪಿಗಳನ್ನು ಹಡೆಮುರಿ ಕಟ್ಟಿದೆ.


Click it and Unblock the Notifications











