ಹುಟ್ಟುಹಬ್ಬದ ಸಂಭ್ರಮದಲ್ಲಿ ನವರಸ ನಾಯಕ: ಈ ಹುಟ್ಟುಹಬ್ಬ ಜಗ್ಗಣ್ಣನಿಗೆ ಸಖತ್ ಸ್ಪೆಷಲ್
ನವರಸ ನಾಯಕ ಜಗ್ಗೇಶ್ ಇಂದು(ಮಾರ್ಚ್ 17) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತಮ್ಮ ವಿಭಿನ್ನ ಮ್ಯಾನರಿಸಂ, ನಟನೆಯಿಂದ ದಶಕಗಳಿಂದ ಸಿನಿರಸಿಕರನ್ನು ಜಗ್ಗಣ್ಣ ರಂಜಿಸುತ್ತಿದ್ದಾರೆ. 60ನೇ ವಸಂತಕ್ಕೆ ಕಾಲಿಟ್ಟಿರುವ ನವರಸ ನಾಯಕನಿಗೆ ಅಭಿಮಾನಿಗಳು, ಸೆಲೆಬ್ರೆಟಿಗಳು ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ. ಇವತ್ತಿಗೂ ಜಗ್ಗೇಶ್ ಸಿನಿರಸಿಕರನ್ನು ರಂಜಿಸುವ ಕಾಯಕವನ್ನು ಮುಂದುವರೆಸಿದ್ದಾರೆ.
ಬೆಳ್ಳಿ ಪರದೆಯಲ್ಲಿ ಮಾತ್ರವಲ್ಲದೇ 'ಕಾಮಿಡಿ ಕಿಲಾಡಿಗಳು' ಶೋ ಮೂಲಕ ಇತ್ತೀಚಿನ ವರ್ಷಗಳಲ್ಲಿ ಜಗ್ಗೇಶ್ ಮತ್ತಷ್ಟು ಹತ್ತಿರವಾಗಿದ್ದಾರೆ. ಚಿತ್ರರಂಗದಲ್ಲಿ ಸಾಕಷ್ಟು ಏಳುಬೀಳು ಕಂಡರೂ ಇವತ್ತಿಗೂ ತಮ್ಮ ನವರಸ ನಾಯಕ ತಮ್ಮ ಚಾರ್ಮ್ ಉಳಿಸಿಕೊಂಡಿದ್ದಾರೆ. ಬರೀ ಸಿನಿಮಾರಂಗದಲ್ಲಿ ಮಾತ್ರವಲ್ಲ ಬಿಜೆಪಿ ರಾಜ್ಯಸಭಾ ಸದಸ್ಯರಾಗಿ ರಾಜಕೀಯರಂಗದಲ್ಲೂ ಜಗ್ಗೇಶ್ ಸಕ್ರಿಯರಾಗಿದ್ದಾರೆ. ಸಿನಿಮಾ ಹಾಗೂ ರಾಜಕೀಯ ಎರಡನ್ನೂ ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ. ಜಗ್ಗಣ್ಣದ ಹಾದಿಯಲ್ಲಿ ಸಹೋದರ ಕೋಮಲ್ ಹಾಗೂ ಪುತ್ರರಾದ ಗುರುರಾಜ್ ಹಾಗೂ ಯತಿರಾಜ್ ಕೂಡ ಚಿತ್ರರಂಗಕ್ಕೆ ಬಂದರು.

ಕಳೆದ ಕೆಲ ವರ್ಷಗಳಿಂದ ನಟ ಜಗ್ಗೇಶ್ ಹುಟ್ಟುಹಬ್ಬದ ದಿನ ಮಂತ್ರಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ಹುಟ್ಟುಹಬ್ಬದ ದಿನ ರಾಯರ ಆಶೀರ್ವಾದ ಪಡೆಯುತ್ತಿದ್ದಾರೆ. ಈ ಬಾರಿ ಹುಟ್ಟುಹಬ್ಬಕ್ಕೆ ಕೆಲ ದಿನಗಳು ಬಾಕಿ ಇರುವಂತೆ ಪತ್ನಿ ಪರಿಮಳಾ ಹಾಗೂ ಪುತ್ರ ಯತಿರಾಜ್ ಜೊತೆ ಜಗ್ಗೇಶ್, ಪ್ರಧಾನಿ ಮೋದಿ ಭೇಟಿ ಮಾಡಿದ್ದರು. ಪ್ರಧಾನಿಗೆ ರಾಯರ ವಿಗ್ರಹ ನೀಡಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿದ್ದರು. ಚಿತ್ರರಂಗ ಹಾಗೂ ರಾಜಕೀಯರಂಗದಲ್ಲಿ ಯಶಸ್ಸಿನ ಉತ್ತುಂಗದಲ್ಲಿರುವ ಜಗ್ಗೇಶ್ ಅವರಿಗೆ ಈ ಹುಟ್ಟುಹಬ್ಬ ಸಖತ್ ಸ್ಪೆಷಲ್.
1982ರಲ್ಲಿ 'ಇಬ್ಬನಿ ಕರಗಿತು' ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡುವ ಮೂಲಕ ಚಿತ್ರರಂಗಕ್ಕೆ ಬಂದ ಜಗ್ಗೇಶ್ ಮುಂದೆ ಹೀರೋ ಕೂಡ ಆದರು. 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ. 10 ವರ್ಷಗಳ ಕಾಲ ಪೋಷಕ ಪಾತ್ರಗಳಲ್ಲಿ ನಟಿಸಿದ ಜಗ್ಗೇಶ್ 'ತರ್ಲೆ ನನ್ಮಗ' ಸಿನಿಮಾ ಮೂಲಕ ಹೀರೊ ಆದರು. ಅಲ್ಲಿಂದ ಮುಂದೆ ತಮ್ಮ ವಿಭಿನ್ನ ಅಭಿನಯದಿಂದ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ ಬಂದರು. ಚಿತ್ರರಂಗದಲ್ಲಿ ಮಿನಿಮಮ್ ಗ್ಯಾರೆಂಟಿ ನಟ ಎನಿಸಿಕೊಂಡರು. 'ಮೇಕಪ್' ಎನ್ನುವ ಸಿನಿಮಾ ನಿರ್ಮಾಣ ಮಾಡಿ ನಟಿಸಿ ಕೈ ಸುಟ್ಟುಕೊಂಡರು. ಈ ಸಿನಿಮಾದಿಂದ ಸಾಕಷ್ಟು ನಷ್ಟ ಅನುಭವಿಸಿದರು.

ಚಿತ್ರರಂಗದಲ್ಲಿ ಜಗ್ಗೇಶ್ ಕಥೆ ಮುಗಿದೇ ಹೋಯಿತು ಎನ್ನುವ ಸಮಯದಲ್ಲಿ ಮತ್ತೆ ಫೀನಿಕ್ಸ್ ರೀತಿ ಎದ್ದು ಬಂದರು. 'ಮಠ' ಸಿನಿಮಾದಿಂದ ದೊಡ್ಡ ಕಂಬ್ಯಾಕ್ ಮಾಡಿದರು. ಅಲ್ಲಿಂದ ಮುಂದೆ ಜಗ್ಗಣ್ಣನ ಸೆಕೆಂಡ್ ಇನ್ನಿಂಗ್ಸ್ ಶುರುವಾಯಿತು. ನಟನಾಗಿ ಮಾತ್ರವಲ್ಲದೇ ನಿರ್ದೇಶಕರಾಗಿಯೂ ಜಗ್ಗೇಶ್ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. 'ಗುರು' ಹಾಗೂ 'ಮೇಲ್ಕೋಟೆ ಮಂಜ' ಸಿನಿಮಾಗಳಿಗೆ ಆಕ್ಷನ್ ಕಟ್ ಕೂಡ ಹೇಳಿದರು. ಪುತ್ರನ 'ಗುರು' ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ನಿರ್ಮಾಣ ಮಾಡಿದ್ದರು.
ಸದ್ಯ ಮೂರ್ನಾಲ್ಕು ಸಿನಿಮಾಗಳು ನವರಸ ನಾಯಕನ ಕೈಯಲ್ಲಿದೆ. ಹೊಂಬಾಳೆ ಸಂಸ್ಥೆ ನಿರ್ಮಾಣದ 'ರಾಘವೇಂದ್ರ ಸ್ಟೋರ್ಸ್ಸ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಸಂತೋಷ್ ಆನಂದ್ರಾಮ್ ನಿರ್ದೇಶನದ ಈ ಚಿತ್ರದಲ್ಲಿ ಜಗ್ಗೇಶ್ ಅಡುಗೆ ಭಟ್ಟನ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಗುರುಪ್ರಸಾದ್ ನಿರ್ದೇಶನದ 'ರಂಗನಾಯಕ' ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ವಿಜಯ ಪ್ರಸಾದ್ ನಿರ್ದೇಶನದ 'ತೋತಾಪುರಿ'- 2 ಬಿಡುಗಡೆ ಆಗಬೇಕಿದೆ.


Click it and Unblock the Notifications











