ಹೆಣ್ಣು ಮಕ್ಕಳನ್ನು ಗೌರವಿಸದವರು ರಾಕ್ಷಸರು: ನಟ ಜಗ್ಗೇಶ್
ಸಾಂಸ್ಕೃತಿಕ ನಗರಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ರಾಜ್ಯದ ಜನರ ನಿದ್ದೆಗೆಡಿಸಿದೆ. ಈ ಕ್ರೂರ ಕೃತ್ಯವನ್ನು ಅನೇಕರು ಖಂಡಿಸಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸುತ್ತಿದ್ದಾರೆ. ಈ ಬಗ್ಗೆ ಹಿರಿಯ ನಟ ಜಗ್ಗೇಶ್ ಕೂಡ ಪ್ರತಿಕ್ರಿಯೆ ನೀಡಿ ಈ ಕ್ರೂರ ಘಟನೆಯನ್ನು ಖಂಡಿಸಿದ್ದಾರೆ. ಹೆಣ್ಣನ್ನು ಗೌರವಿಸದವರು ರಾಕ್ಷಸರು ಎಂದು ಕಿಡಿಕಾರಿದ್ದಾರೆ.
ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಜಗ್ಗೇಶ್ ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಜಗ್ಗೇಶ್, "ಎಂಥ ಕ್ರೂರಿಗಳು. ತಾಯಿ ಹೆಣ್ಣಲ್ಲವೆ?, ಅಕ್ಕ-ತಂಗಿ ಹೆಣ್ಣಲ್ಲವೆ?, ಮಡದಿ ಹೆಣ್ಣಲ್ಲವೆ?, ಹೆಣ್ಣು ಗೌರವಿಸದವರು ರಕ್ಕಸರು, ಈ ಕೃತ್ಯ ಎಸಗಿದ ಕ್ರೂರಿಗಳು ಗಲ್ಲು ಶಿಕ್ಷೆಗೆ ಅರ್ಹರು, ಈ ಕ್ರೂರ ಕೃತ್ಯಕ್ಕೆ ಖಂಡನೆ" ಎಂದು ಟ್ವೀಟ್ ಮಾಡಿದ್ದಾರೆ.
ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಮೇಲೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈ ಘಟನೆ ಮಂಗಳವಾರ ರಾತ್ರಿ (ಆಗಸ್ಟ್ 24) ಈ ಘಟನೆ ನಡೆದಿದೆ. ಯುವತಿಯನ್ನು ಸದ್ಯ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಅತ್ಯಾಚಾರ ದೂರ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಆರೋಪಿಗಳನ್ನು ಅರೆಸ್ಟ್ ಮಾಡುವಲ್ಲಿ ಪೊಲೀಸರು ವಿಳಂಬ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, "ಅತ್ಯಾಚಾರಕ್ಕೆ ಒಳಗಾಗಿರುವ ವಿದ್ಯಾರ್ಥಿನಿಯ ಹೇಳಿಕೆ ಆಧಾರದ ಮೇಲೆ ದೂರು ದಾಖಲಾಗಿದೆ. ಆರೋಪಿಗಳ ಬಂಧನಕ್ಕೆ ಕಠಿಣ ಕ್ರಮ ಕೈಗೊಳ್ಳಲು ಡಿಜಿಪಿಗೆ ಸೂಚನೆ ನೀಡಿದ್ದೇನೆ" ಎಂದು ಹೇಳಿದ್ದಾರೆ.
ಜಗ್ಗೇಶ್ ದೂರು ದಾಖಲು
ಇತ್ತೀಚಿಗಷ್ಟೆ ತನ್ನ ವಿರುದ್ಧ ನಾಯಿ, ಅಧಮ ಶಬ್ದಗಳ ಪ್ರಯೋಗ ಮಾಡಿದ್ದಾರೆಂದು ಆರೋಪಿಸಿ ಡಿಎಸ್ಎಸ್ ಮುಖಂಡ ಸಿ.ಎಸ್.ರಘು ನಟ ಜಗ್ಗೇಶ್ ವಿರುದ್ಧ ದೂರು ದಾಖಲಿಸಿದ್ದಾರೆ.
ಜಗ್ಗೇಶ್ ಸಹೋದರ, ನಟ ಕೋಮಲ್ ಬಿಬಿಎಂಪಿ ವ್ಯಾಪ್ತಿ ಶಾಲೆ-ಕಾಲೇಜು ಮಕ್ಕಳಿಗೆ ಸ್ವೆಟರ್ ಹಂಚುವ ಟೆಂಡರ್ ಪಡೆದು ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಸಿ.ಎಸ್ ರಘು ನೇತೃತ್ವದಲ್ಲಿ ಬಿಬಿಎಂಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ್ದ ರಘು, ಕೋಮಲ್, ನಟ ಜಗ್ಗೇಶ್, ಸಚಿವ ಆರ್.ಅಶೋಕ್ ಹಾಗೂ ಕೆಲವು ಬಿಬಿಎಂಪಿ ಅಧಿಕಾರಿಗಳು ವಿರುದ್ಧ ಆರೋಪ ಮಾಡಿದ್ದರು.
ರಘು ಆರೋಪಗಳ ಹಿನ್ನೆಯಲ್ಲಿ ನಟ ಜಗ್ಗೇಶ್ ಟ್ವೀಟ್ ಮಾಡಿ, ''ನಾನು ಉತ್ತಮ ಎಂದು ಅಧಮರಿಗೆ ಎದೆ ಬಗೆದು ವ್ಯೆರ್ಥ ತೋರಿಕೆ ಏಕೆಬೇಕು. ಆನೆ ರಾಜಮಾರ್ಗದಲ್ಲಿ ಆಗಲಿ ಗಲ್ಲಿಯಲ್ಲಾಗಲಿ ನಡೆವಾಗ ನಾಯಿ ಬೊಗಳುವುದು ಸಹಜ. ನಮ್ಮಗುಣ ಆನೆಯಂತೆ ಇದ್ದಾಗ ಬೊಗಳುವ ನಾಯಿಗಳ ಸಮಕ್ಕೆ ನಾವು ಇಳಿಯಬಾರದು. ಆಕಸ್ಮಿಕ ಸಿಟ್ಟಿಗೆ ಇಳಿದರೆ ನಮ್ಮ ಆನೆಯ ಸ್ಥಾನ ನಾಯಿಗೆ ಸಮ ಆಗುತ್ತದೆ. ನಾನು ಕಲಿತ ನೀತಿಪಾಠ ಇಂದಿನ ಸಮಾಜದ ನಡೆಗೆ'' ಎಂದು ಖಾರವಾಗಿ ಟ್ವೀಟ್ ಮಾಡಿದ್ದರು.
ಈ ಟ್ವೀಟ್ನಲ್ಲಿ ಜಗ್ಗೇಶ್ ಬಳಸಿರುವ 'ಅಧಮ', 'ನಾಯಿ' ಪದಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಡಿಎಸ್ ಎಸ್ ಮುಖಂಡ ಸಿ.ಎಸ್.ರಘು, ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ಡಾ.ರವೀಂದ್ರನಾಥ್ ಬಳಿ ದೂರು ದಾಖಲಿಸಿದ್ದಾರೆ. ಕೆಲವು ಡಿ ಎಸ್ ಎಸ್ ಸದಸ್ಯರು, ಜಗ್ಗೇಶ್ ತಮ್ಮ ಸಂಘವನ್ನು ನಾಯಿಗೆ ಹೋಲಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.


Click it and Unblock the Notifications











