ನಿರ್ದೇಶಕ ರೇಣುಕಾ ಶರ್ಮಾ, ನಟ ಅರವಿಂದ್ ನಿಧನಕ್ಕೆ ಜಗ್ಗೇಶ್ ಸಂತಾಪ
ಕೊರೊನಾ ವೈರಸ್ ಬಿಕ್ಕಟ್ಟಿನ ಸಮಯದಲ್ಲಿ ಚಿತ್ರರಂಗ ಹಲವು ಚಿತ್ರೋದ್ಯಮಿಗಳನ್ನು ಕಳೆದುಕೊಂಡಿದೆ. ಕಳೆದ ಒಂದು ತಿಂಗಳಲ್ಲಿ ಕೊರೊನಾ ಹಾಗು ಇತರೆ ಕಾಯಿಲೆಗಳಿಂದ ಹಲವು ಗಣ್ಯರು ಇಹಲೋಕ ತ್ಯಜಿಸಿದ್ದಾರೆ.
ಇತ್ತೀಚಿಗಷ್ಟೆ ಹಿರಿಯ ನಿರ್ದೇಶಕ ರೇಣುಕಾ ಶರ್ಮಾ ಹಾಗೂ ಹಿರಿಯ ಕಲಾವಿದ ಶಂಖನಾದ ಅರವಿಂದ್ ಅವರು ಕೊನೆಯುಸಿರೆಳೆದರು. ಈ ಇಬ್ಬರ ಅಗಲಿಕೆಗೆ ನಟ ಜಗ್ಗೇಶ್ ಸಂತಾಪ ಸೂಚಿಸಿದ್ದಾರೆ.
ಟ್ವಿಟ್ಟರ್ನಲ್ಲಿ ಬೇಸರ ವ್ಯಕ್ತಪಡಿಸಿರುವ ಜಗ್ಗೇಶ್ ''ಏನೆಂದು ಅಕ್ಷರ ಠಂಕಿಸಲಿ?? ಯಾವ ಅಕ್ಷರದಲ್ಲಿ ಸಾಂತ್ವನ ಹೇಳಲಿ?? ಯಾವ ಅಕ್ಷರದಿಂದ ಇವರ ಮನೆಯ ನೊಂದವರ ಸಮಾಧಾನ ಪಡಿಸಲಿ?? ಒಂದಂತು ಠಂಕಿಸುವೆ ನಿಮ್ಮಗಳ ಜೊತೆ ನಾ ಕಳೆದ ಸಮಯ ಅವಿಸ್ಮರಣೀಯ!! ನಿಮ್ಮ ಆತ್ಮ ರಾಯರಲ್ಲಿ ಲೀನವಾಗಲಿ!! ನಿಮ್ಮ ಮನೆಯವರಿಗೆ ಧೈರ್ಯ ಆ ರಾಯರೆ ತುಂಬಲಿ!! ಓಂ ಶಾಂತಿ....ಸದ್ಗತಿ...'' ಎಂದಿದ್ದಾರೆ.

ರೇಣುಕಾ ಶರ್ಮಾ ಕುರಿತು
'ಕವಿರತ್ನ ಕಾಳಿದಾಸ', 'ಅಂಜದ ಗಂಡು', 'ಕಿಂದರ ಜೋಗಿ' ಸೇರಿದಂತೆ ಹಲವು ಸಿನಿಮಾಗಳನ್ನು ರೇಣುಕಾ ಶರ್ಮಾ ನಿರ್ದೇಶನ ಮಾಡಿದ್ದರು. 1980 ರಲ್ಲಿ ಮೊದಲ ಬಾರಿಗೆ ರೇಣುಕಾ ಶರ್ಮಾ ನಿರ್ದೇಶನ ಮಾಡಿದರು. ಮೊದಲ ಸಿನಿಮಾ 'ಅನುಪಮಾ'. ತೆಲುಗು, ತಮಿಳಿನಲ್ಲಿಯೂ ಕೆಲಸ ಮಾಡಿರುವ ರೇಣುಕಾ ಶರ್ಮಾ ಜಯಲಲಿತಾ, ಎಎನ್ಆರ್ ಅವರ ಸಿನಿಮಾಗಳಿಗೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ಶಂಖನಾದ ಅರವಿಂದ್ ಕುರಿತು
ಅರವಿಂದ್ ಅವರು ಅಪರಿಚಿತ, ಆಗಂತುಕ, ಬೆಟ್ಟದ ಹೂವು, ಶಂಖನಾದ ಚಿತ್ರಗಳಲ್ಲಿ ನಟಿಸಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು. ಸಾರಾ ಅಬೂಬಕ್ಕರ್ ಅವರ ಕೃತಿ 'ವಜ್ರಗಳು'ನ ಸಿನಿಮಾ ರೂಪ 'ಸಾರಾ ವಜ್ರ'ದಲ್ಲಿ ಮುಸ್ಲಿಂ ಪಾತ್ರದಲ್ಲಿ ನಟಿಸಿದ್ದಾರೆ. ಇದೇ ಅವರು ನಟಿಸಿದ ಕೊನೆಯ ಸಿನಿಮಾ. ಆ ಸಿನಿಮಾ ಇನ್ನೂ ಬಿಡುಗಡೆ ಆಗಿಲ್ಲ.


Click it and Unblock the Notifications











