'ಪ್ಯಾನ್ ಇಂಡಿಯಾ ನಮ್ಮನ್ನ ಉದ್ದಾರ ಮಾಡಲ್ಲ': ನಟ ಜಗ್ಗೇಶ್ ಅಸಮಾಧಾನ
ಇತ್ತೀಚಿನ ವರ್ಷಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಎಂಬ ಪರಿಕಲ್ಪನೆ ಟ್ರೆಂಡ್ ಆಗಿದೆ. ಒಂದು ಭಾಷೆಯಲ್ಲಿ ಸಿನಿಮಾ ತಯಾರಿಸಿದರೂ ಅದನ್ನು ನಾಲ್ಕೈದು ಭಾಷೆಗೆ ಡಬ್ ಮಾಡಿ ಬಿಡುಗಡೆ ಮಾಡುವುದು ಸಂಪ್ರದಾಯವಾಗಿದೆ. ಕಥೆ, ಕಲಾವಿದರು ಯಾವುದರೂ ಬಗ್ಗೆಯೂ ತಲೆಕೆಡಿಸಿಕೊಳ್ಳದ ಮಂದಿ ಪ್ಯಾನ್ ಇಂಡಿಯಾ ಎಂಬ ಟ್ರೆಂಡ್ ಹಿಂದೆ ಹೋಗ್ತಿದ್ದಾರೆ.
Recommended Video
ಸ್ಟಾರ್ ನಟರ ಚಿತ್ರಗಳು ಸೆಟ್ಟೇರುತ್ತಲೇ ಇದು ಪ್ಯಾನ್ ಇಂಡಿಯಾ ಸಿನಿಮಾ ಎಂದು ಪ್ರಚಾರ ಆರಂಭಿಸುತ್ತೀವೆ. ಕೆಜಿಎಫ್, ಕುರುಕ್ಷೇತ್ರ, ಪೈಲ್ವಾನ್ ಚಿತ್ರಗಳು ಬಹುಭಾಷೆಯಲ್ಲಿ ಸಕ್ಸಸ್ ಕಂಡ ಬಳಿಕ ಗಾಂಧಿನಗರದಲ್ಲಿ ಇಂತಹದೊಂದು ಟ್ರೆಂಡ್ ಹೆಚ್ಚಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ರೆ, ಪ್ಯಾನ್ ಇಂಡಿಯಾ ಚಿತ್ರಗಳ ಕುರಿತು ನಟ ಜಗ್ಗೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

ಪ್ಯಾನ್ ಇಂಡಿಯಾ ನಮ್ಮನ್ನ ಉದ್ದಾರ ಮಾಡಲ್ಲ
ಚಿತ್ರರಂಗ ಪ್ರವೇಶಿಸಿ 40 ವರ್ಷ ಪೂರೈಸಿದ ಹಿನ್ನೆಲೆ ನಟ ಜಗ್ಗೇಶ್ ಅವರು ಮಾಧ್ಯಮಗೋಷ್ಠಿ ನಡೆಸಿ ತಮ್ಮ ಅನುಭವ ಹಂಚಿಕೊಂಡರು. ಈ ವೇಳೆ ಕನ್ನಡ ಸಿನಿಮಾರಂಗ ಹಾಗೂ ಕನ್ನಡ ಕಲಾವಿದರನ್ನು ಉಳಿಸುವಂತಹ ಕೆಲಸ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು. ಪ್ಯಾನ್ ಇಂಡಿಯಾ ಪರಿಕಲ್ಪನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನಟ ''ಪ್ಯಾನ್ ಇಂಡಿಯಾ ನಮ್ಮನ್ನ ಉದ್ದಾರ ಮಾಡಲ್ಲ'' ಎಂದು ಖಂಡಿಸಿದರು.

ಯಾರನ್ನೋ ಮೆಚ್ಚಿಸೋಕೆ ಪ್ಯಾನ್ ಇಂಡಿಯಾ
''ಯಾವುದು ಅದು ಪ್ಯಾನ್ ಇಂಡಿಯಾ...? ಪ್ಯಾನ್ ಇಂಡಿಯಾ ಸಿನಿಮಾ ಬಂದು ನಮ್ಮನ್ನ ಉದ್ದಾರ ಮಾಡಲ್ಲ. ಪ್ಯಾನ್ ಇಂಡಿಯಾದಿಂದ ನಮ್ಮ ಕನ್ನಡಿರಿಗೆ ಕೆಲಸ ಇಲ್ಲ..ಯಾರನ್ನೋ ಮೆಚ್ಚಿಸೋಕೆ ಪ್ಯಾನ್ ಇಂಡಿಯಾ ಸಿನಿಮಾ ಮಾಡೋ ಹಾಗಿದೆ. ಇದರಿಂದ ನಮ್ಮ ನೆಲದ ಜನರಿಗೆ ಕೆಲಸ ಇಲ್ಲದಂತಾಗಿದೆ'' ಎಂದು ನಟ ಜಗ್ಗೇಶ್ ಕಿಡಿ ಕಾರಿದರು.

ನಮ್ಮತನ ಉಳಿಸಿಕೊಳ್ಳಿ
ಕನ್ನಡ ಇಂಡಸ್ಟ್ರಿಯ ಹಾಗೂ ಕನ್ನಡ ಮಾಧ್ಯಮಗಳು ನಮ್ಮತನವನ್ನು ಉಳಿಸಿಕೊಳ್ಳಬೇಕಿದೆ. ನಮ್ಮವರ ಬೆಂಬಲಕ್ಕೆ ನಿಲ್ಲಬೇಕಿದೆ. ಮುಂದಿನ ಪೀಳಿಗೆ ಬೆಳೆಯಬೇಕಿದೆ. ಈ ಬಗ್ಗೆ ಗಮನ ಕೊಡಿ ಎಂದು ನಟ ಜಗ್ಗೇಶ್ ಮನವಿ ಮಾಡಿಕೊಂಡರು.

ಪ್ಯಾನ್ ಇಂಡಿಯಾ ಪ್ರಚಾರದ ಅಸ್ತ್ರವಾಗ್ತಿದ್ಯಾ?
ಪ್ಯಾನ್ ಇಂಡಿಯಾ ಎನ್ನುವುದು ಕೇವಲ ಪ್ರಚಾರದ ಅಸ್ತ್ರವಾಗುತಿದ್ಯಾ ಎಂಬ ಅಭಿಪ್ರಾಯವೂ ಇದೆ. ಎಲ್ಲ ಚಿತ್ರಗಳನ್ನು ಪ್ಯಾನ್ ಇಂಡಿಯಾ ಮಾಡುವ ಅಗತ್ಯವಿದ್ಯಾ? ಪ್ಯಾನ್ ಇಂಡಿಯಾ ಸಿನಿಮಾಗಳು ಎಂಬ ಕಾರಣಕ್ಕೆ ಉದ್ಯಮದಲ್ಲಿ ಬೆಲೆ ಹೆಚ್ಚು ಎಂಬ ಕಾರಣಕ್ಕೆ ಇಂತಹದೊಂದು ಪ್ರಚಾರಕ್ಕೆ ಮುಂದಾಗುತ್ತಿದ್ದಾರಾ ಎಂಬ ಪ್ರಶ್ನೆಯೂ ಮೂಡುತ್ತಿದೆ.


Click it and Unblock the Notifications











