'SSLC ಫಲಿತಾಂಶ ಏನೇ ಇರಲಿ, ಮಕ್ಕಳನ್ನು ಸಿಂಹದಂತೆ ಸಾಕಿ': ಜಗ್ಗೇಶ್ ಕಿವಿಮಾತು
ಕೊರೊನಾ ವೈರಸ್ ಭೀತಿಯ ನಡುವೆಯೂ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲಾಗಿದೆ. ಆಗಸ್ಟ್ 10 ರಂದು 10ನೇ ತರಗತಿಯ ಫಲಿತಾಂಶ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಎಸ್ಎಸ್ಎಲ್ಸಿ ಫಲಿತಾಂಶ ಬಂತಂದ್ರೆ ಮಕ್ಕಳಿಗೆ ಭಯ, ಪೋಷಕರಿಗೂ ಅತಂಕ. ಫಲಿತಾಂಶ ಫೇಲ್ ಆದರೆ ಮಕ್ಕಳು ಅನಾಹುತ ಮಾಡಿಕೊಳ್ಳುವ ಘಟನೆಗಳು ಹೆಚ್ಚು ವರದಿಯಾಗಿದೆ. ಈ ಹಿನ್ನೆಲೆ ನಟ-ರಾಜಕಾರಣಿ ಜಗ್ಗೇಶ್ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಕಿವಿಮಾತೊಂದು ಹೇಳಿದ್ದಾರೆ.
'ಎಸ್ಎಸ್ಎಲ್ಸಿ ಫಲಿತಾಂಶ ಏನೆ ಬರಲಿ ನಿಮ್ಮ ಮಕ್ಕಳ ಸಿಂಹದಂತೆ ಸಾಕಿ...ಮಿಕ್ಕಂತೆ ಜಗತ್ತೆ ಮನುಜನಿಗೆ ಜೀವನ ಪಾಠ ಕಲಿಸುತ್ತದೆ' ಎಂದು ಜಗ್ಗೇಶ್ ಸಲಹೆ ಕೊಟ್ಟಿದ್ದಾರೆ.

''ತಂದೆ ತಾಯಿ ಮಕ್ಕಳನ್ನ ಬರಿ ಓದಿನ ಯಂತ್ರವಾಗಿ ಬೆಳಸದೆ ಜಗದ ಪಾಠ ಕಲಿಸುವ ಯತ್ನ ಮಾಡಿ. ಓದಿದ ಮಕ್ಕಳು ಸರ್ಕಸ್ ಸಿಂಹದಂತೆ, ಓದಿನ ಜೊತೆಗೆ ಜಗದ ಪಾಠ ಕಲಿತವರು ಬೇಟೆಯಾಡುವ ಕಾಡಿನಸಿಂಹದಂತೆ. ಇಂದಿನ ಜಗತ್ತಿಗೆ ಮಕ್ಕಳು ಬೇಟೆಯಾಡುವ ಸಿಂಹದಂತೆ ಬಾಳಬೇಕು. ಕಾರಣ ಜಗ ಕಾಡಿನಂತೆ ಆಗಿದೆ, ಮನುಷ್ಯ ಬೇಟೆಯಾಡುವ ಪ್ರಾಣಿಯಂತೆ. ಇಂಥ ಸಮಯದಲ್ಲಿ ಮಕ್ಕಳು ಕಾಡು ಸಿಂಹವಾದರೆ. ಕೆಣಕುವವರು ದೂರ ಉಳಿಯುತ್ತಾರೆ'' ಎಂದಿದ್ದಾರೆ.
ತಮ್ಮ ಎಸ್ಎಸ್ಎಲ್ಸಿ ಅಂಕಪಟ್ಟಿಯನ್ನು ಹಂಚಿಕೊಂಡ ನಟ ಜಗ್ಗೇಶ್, ''ತಾತ ರಾಜಣ್ಣನಂತೆ ನಟನಾಗು ಎಂದು ತಲೆಯಲ್ಲಿ ಹುಳ ಬಿಟ್ಟ. ಅದು ನನ್ನ ಚಿಂತನೆಯ ಚಿತೆಯಾಯಿತು. ಪರೀಕ್ಷೆ ಅರ್ಧಮನಸ್ಸಲ್ಲೆ ಓದಿಬರೆದೆ. ಯಾಕೋ ಕನ್ನಡ ಮಾತ್ರ ನನ್ನ ಅಚ್ಚುಮೆಚ್ಚಿನ ವಿಷಯವಾಯಿತು. ಕನ್ನಡ ವ್ಯಾಕರಣ ಸಿಹಿ ತಿನಿಸಂತೆ ಪ್ರೀತಿ. ಬಾಲ್ಯದಿಂದ ಕನ್ನಡ ಭಾಷ ಪ್ರೀತಿ ಹುಟ್ಟಿದರೆ ಸಾಯುವವರೆಗು ಅದು ಅವನ ಹೃದಯದ ನಾಡಿಬಡಿತದಂತೆ ಜೊತೆ ಉಳಿಯುತ್ತದೆ. ಸ್ವಾರ್ಥಕ್ಕೆ ಬಳಕೆಯಾದರೆ ಆತ್ಮಧ್ರೋಹವಾಗುತ್ತದೆ'' ಎಂದು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
Recommended Video
ಎಸ್ಎಸ್ಎಲ್ಸಿಯಲ್ಲಿ 600ಕ್ಕೆ 342 ಅಂಕ ಗಳಿಸಿದ್ದರು ಜಗ್ಗೇಶ್. ''ಈ ಅಂಕ ನೋಡಿದ ಅಪ್ಪ ನಡುರೋಡಲ್ಲಿ ಜನ ನೋಡುವಂತೆ ಬೂಟಿನಲ್ಲಿ ಹೊಡೆದುಬಿಟ್ಟರು. ಅಪಮಾನ ಸಹಿಸಲಾಗದೆ ಆತ್ಮಹತ್ಯಗೆ ಯತ್ನಿಸಿದ್ದೆ. ಆಗ ದಿವಂಗತ ಶ್ರೀರಾಮಪುರದ ಕಿಟ್ಟಿ (ಆ ದಿನಗಳು ಕುಖ್ಯಾತಿ) ನನ್ನ ಬಾಚಿ ಎಳೆದು ರೈಲಿನ ಅನಾಹುತ ತಪ್ಪಿಸಿದ. ಆ ವಿಷಯ ತಿಳಿದು ಅಪ್ಪನಿಗೆ ದುಃಖವಾಗಿ ಮನನೊಂದು ಬಂಧು ಮಿತ್ರರ ಮುಂದೆ ಕಣ್ಣೀರು ಇಟ್ಟು ಪಶ್ಚಾತ್ತಾಪಪಟ್ಟರು. ಅಂದು ಅನಾಹುತ ಸಂಭವಿಸಿದ್ದರೆ ಇಂದು ಈಶ್ವರ ಜಗ್ಗೇಶನಾಗಿ ಇರುತ್ತಿರಲಿಲ್ಲಾ. ಬದಲಾಗಿ ಸತ್ತ ಕೋಟಿ ಜನರಲ್ಲಿ ಒಬ್ಬನಾಗುತ್ತಿದ್ದೆ'' ಎಂದು ಘಟನೆ ಸ್ಮರಿಸಿದರು.


Click it and Unblock the Notifications











