'ಕಲಾಭಿಮಾನಿ ಇರುವತನಕ ಕಲಾವಿದನಿಗೆ ಸಾವಿಲ್ಲಾ'- ಜಗ್ಗೇಶ್
ರಾಷ್ಟ್ರ ಪ್ರಶಸ್ತಿ ವಿಜೇತ, ದಿವಂಗತ ನಟ ಸಂಚಾರಿ ವಿಜಯ್ ಜೀವನದ ಕುರಿತು 'ಅನಂತವಾಗಿರು' ಎಂಬ ಪುಸ್ತಕ ಹೊರತರಲಾಗುತ್ತಿದೆ. ಈ ಪುಸ್ತಕದ ಬಗ್ಗೆ ಹಿರಿಯ ನಟ ಜಗ್ಗೇಶ್ ಮೆಚ್ಚುಗೆ ವ್ಯಕ್ತಪಡಿಸಿದ್ದು, '''ಕಲಾಭಿಮಾನಿ ಇರುವತನಕ ಕಲಾವಿದನಿಗೆ ಸಾವಿಲ್ಲಾ'' ಎಂದಿದ್ದಾರೆ.
ಸಂಚಾರಿ ವಿಜಯ್ ಪುಸ್ತಕದ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್, ''ಕಲಾವಠಾರ ಪರವಾಗಿ ಹೃದಯಪೂರ್ವಕ ಧನ್ಯವಾದ. ಕೆಲದಿನ ಕೆಲಚಿತ್ರಕ್ಕೆ ಮಾತ್ರ ಕಲಾವಿದನ ಕೃಷಿ ಕಣ್ಮರೆಯಾಗದೆ ಇಂಥ ಅದ್ಭುತ ಕಾರ್ಯದಿಂದ ಕಲಾವಿದ ಜನರಮನದಲ್ಲಿ ಉಳಿಯಲಿ. ನೂರಾರು ಕನಸುಗಳ ತೆರೆಯಮೇಲೆ ಅನಾವರಣ ಮಾಡಬೇಕಿದ್ದ ಆತ್ಮ. ಆಕಸ್ಮಿಕ ನಿರ್ಗಮನ. ಇದರಿಂದ ಪೂರ್ಣವಾಗಿ ಕಲಾವಿದನ ಆತ್ಮ ಸಂತೃಪ್ತಿ ಹೊಂದಲಿ. ಕಲಾಭಿಮಾನಿ ಇರುವತನಕ ಕಲಾವಿದನಿಗೆ ಸಾವಿಲ್ಲಾ'' ಎಂದು ಹೇಳಿದ್ದಾರೆ.
ಈ ಹಿಂದೆ ಅಂಬರೀಶ್, ಕಿಚ್ಚ ಸುದೀಪ್ ಅವರ ಕುರಿತಾದ ಪುಸ್ತಕ ಬರೆದಿದ್ದ ಪತ್ರಕರ್ತ, ರಾಜ್ಯ ಪ್ರಶಸ್ತಿ ವಿಜೇತ ಲೇಖಕ ಶರಣು ಹುಲ್ಲೂರು ಸಂಪಾದಕತ್ವದಲ್ಲಿ 'ಅನಂತವಾಗಿರು' ಎಂಬ ಪುಸ್ತಕ ಹೊರಬರುತ್ತಿದೆ. ಇದರಲ್ಲಿ ಸಂಚಾರಿ ವಿಜಯ್ ಅವರ ಜೀವನದ ಅನೇಕ ಕಥೆಗಳು ಒಳಗೊಂಡಿದೆ.

ಈ ಕುರಿತು ಫಿಲ್ಮಿಬೀಟ್ ಕನ್ನಡದ ಜೊತೆ ಮಾತನಾಡಿದ ಶರಣು ಹುಲ್ಲೂರು, ''ಇದು ಬಯೋಗ್ರಫಿ ಮಾದರಿಯಲ್ಲಿ ರೂಪುಗೊಂಡಿರುವ ಪುಸ್ತಕ. ಇದರಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದನ ಬಾಲ್ಯ, ಜೀವನದ ಬಗ್ಗೆ ಸಹೋದರರು, ಕುಟುಂಬದವರು ಹೇಳಿರುವ ವಿಷಯಗಳಿವೆ. ಕಾಲೇಜು ದಿನಗಳ ಬಗ್ಗೆ ಸಂಚಾರಿ ಸ್ನೇಹಿತರು, ಆಪ್ತರು ಹಂಚಿಕೊಂಡಿರುವ ವಿಚಾರಗಳಿವೆ. ರಂಗಭೂಮಿ, ಸಿನಿಮಾ, ಕಿರುತೆರೆ, ಸಂಗೀತ ಸೇರಿದಂತೆ ವಿಜಯ್ ಅವರು ನಡೆದು ಬಂದ ಜರ್ನಿ ಬಗ್ಗೆ ಗೆಳೆಯರು, ಸಿನಿಮಾ ನಿರ್ದೇಶಕರು, ರಂಗಕರ್ಮಿಗಳು, ಸಹಪಾಠಿಗಳು ಮಾತನಾಡಿದ್ದಾರೆ'' ಎಂದು ತಿಳಿಸಿದರು.
ಖ್ಯಾತ ಲೇಖಕರಾದ ವಸುಧೇಂದ್ರ, ಜೋಗಿ, ಸಂಧ್ಯಾರಾಣಿ, ನಿರ್ದೇಶಕ ಲಿಂಗದೇವರು, ಮಂಸೋರೆ, ಅರವಿಂದ್ ಕುಪ್ಳಿಕರ್, ಕವಿರಾಜ್, ಎಂಎಸ್ ರಮೇಶ್, ರಂಗ ನಿರ್ದೇಶಕಿ ಮಂಗಳಾ, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ, ಲೇಖಕ ಕೆ ಪುಟ್ಟಸ್ವಾಮಿ ಸೇರಿದಂತೆ ವಿಜಯ್ ಜೊತೆ ಒಡನಾಟ ಹೊಂದಿದ್ದ ಸುಮಾರು 32ಕ್ಕೂ ಅಧಿಕ ವ್ಯಕ್ತಿಗಳು ವಿಜಯ್ ಬಗ್ಗೆ ಬರೆದಿರುವ ಬರಹಗಳನ್ನು ಈ ಪುಸ್ತಕ ಒಳಗೊಂಡಿದೆ.


Click it and Unblock the Notifications











