ಬೇಸರದಲ್ಲಿದ್ದ ಜಗ್ಗೇಶ್ಗೆ ಸಂತೋಷ ತಂದ ಅಭಿಮಾನಿಯ ಉಡುಗೊರೆ
ನಟ ಜಗ್ಗೇಶ್ ಕೆಲವು ದಿನಗಳಿಂದ ಬಹಳ ಬೇಸರದಲ್ಲಿದ್ದಾರೆ. ಅವರ ಬೇಸರಕ್ಕೆ ಕಾರಣ ಡ್ರೋಣ್ ಪ್ರತಾಪ್ ಮಾಡಿದ ಮೋಸ.
Recommended Video
ಡ್ರೋಣ್ ಪ್ರತಾಪ್ ಗೆ ನಟ ಜಗ್ಗೇಶ್ ಆರ್ಥಿಕ ಸಹಾಯ ಮಾಡಿದ್ದರು, ಅವರು ಜಡ್ಜ್ ಆಗಿದ್ದ ರಿಯಾಲಿಟಿ ಶೋ ಗೆ ಪ್ರತಾಪ್ ಅನ್ನು ಕರೆಸಿ ಗೌರವಿಸಿದ್ದರು, ಪ್ರಚಾರ ನೀಡಿದ್ದರು. ಆದರೆ ಈಗ ಪ್ರತಾಪ್ ಒಂದೂ ಡ್ರೋನ್ ತಯಾರಿಸಿಲ್ಲ ಎನ್ನಲಾಗುತ್ತಿದೆ, ಇದು ಜಗ್ಗೇಶ್ ಅವರಿಗೆ ತೀವ್ರ ಬೇಸರ ತರಿಸಿದೆ.
ಡ್ರೋನ್ ಪ್ರತಾಪ್ ಸುದ್ದಿ ಕೇಳಿ ಕೆಲವು ದಿನಗಳಿಂದ ಬಹುವಾಗಿ ಬೇಸರಗೊಂಡಿದ್ದ ಜಗ್ಗೇಶ್ ಅವರ ಮುಖದಲ್ಲಿ ಮಂದಹಾಸ ಮೂಡಲು ಕಾರಣವಾಗಿದ್ದು, ಅವರ ಅಭಿಮಾನಿಯೊಬ್ಬ ಜಗ್ಗೇಶ್ ಅವರಿಗೆ ನೀಡಿರುವ ಮೌಲಿಕವಾದ ಉಡುಗೊರೆ.

ಮಹಾಭಾರತ ವಿಮರ್ಶಾ ಕೃತಿ ಸಮರ್ಪಣೆ
ಜಗ್ಗೇಶ್ ಅವರ ಅಭಿಮಾನಿಯೊಬ್ಬರು, ಮಹಾಭಾರತ ಕುರಿತ ವಿಮರ್ಶಾತ್ಮಕ ಕೃತಿಯೊಂದನ್ನು ರಚಿಸಿದ್ದು, ಆ ಕೃತಿಯನ್ನು ಜಗ್ಗೇಶ್ ಅವರಿಗೆ ಅರ್ಪಿಸಿದ್ದಾರೆ. ಇದು ಜಗ್ಗೇಶ್ ಅವರಿಗೆ ಸಂತೋಷ ತಂದಿದೆ. ಈ ಬಗ್ಗೆ ಟ್ವಿಟ್ಟರ್ನಲ್ಲಿ ಜಗ್ಗೇಶ್ ಪ್ರಕಟಿಸಿದ್ದಾರೆ.

'ಕುರುಕ್ಷೇತ್ರ ಮಹಾಯುದ್ಧದಲ್ಲಿ ಭಗವದ್ಗೀತೆ ಏಕೆ ಸೇರ್ಪಡೆಯಾಯಿತು?'
'ಕುರುಕ್ಷೇತ್ರ ಮಹಾಯುದ್ಧದಲ್ಲಿ ಭಗವದ್ಗೀತೆ ಏಕೆ ಸೇರ್ಪಡೆಯಾಯಿತು?' ಎಂಬುದು ಪುಸ್ತಕದ ಹೆಸರಾಗಿದ್ದು, ಇದನ್ನು ವಿಜ್ಞಾನ ಲೇಖಕ ಎಂದು ತಮ್ಮನ್ನು ಕರೆದುಕೊಂಡಿರುವ ಜಿ.ನಾಗೇಂದ್ರನ್ ಅವರು ರಚಿಸಿದ್ದಾರೆ. ಇದೇ ಪುಸ್ತಕವನ್ನು ಜಗ್ಗೇಶ್ ಅವರಿಗೆ ಅರ್ಪಿಸಲಾಗಿದೆ.

ಜಗ್ಗೇಶ್ ಅನ್ನು ದ್ರೋಣರಿಗೆ ಹೋಲಿಸಿದ ಲೇಖಕ
'ಸತ್ಯವಾಗಿ ನಾನೇ ಬರೆದ ಈ ಕೃತಿಯನ್ನು ದ್ರೋಣರಂತೆ ಕೌರವರ ಕಡೆಯಿದ್ದರೂ ಪಾಂಡವರಿಗೆ ಕೆಟ್ಟದ್ದನ್ನು ಬಯಸದ ಹಿರಿಯ ಆಚಾರ್ಯರಿಗೆ ಸಮನಾದ ತಮಗೆ ನನ್ನ ಆತ್ಮ ಸಂತೃಪ್ತಿಗಾಗಿ ಸಮರ್ಪಿಸುತ್ತಿದ್ದೇನೆ' ಎಂದು ಲೇಖಕ ನಾಗೇಂದ್ರನ್ ಬರೆದಿದ್ದಾರೆ.

ಹೃದಯ ಸೇರಿದಿರಿ ಎಂದ ನಟ ಜಗ್ಗೇಶ್
ನಾಗೇಂದ್ರನ್ ಅವರ ಅಭಿಮಾನಕ್ಕೆ ಪ್ರತಿಯಾಗಿ 'ಯಾರೋ ಸ್ವಾರ್ಥಿಗೆ ನನ್ನ ಶ್ರಮ ದೇಣಿಗೆ ನೀಡಿದೆ ಎಂದು ಕೊರಗಿದಾಗ ರಾಯರು ಇನ್ನೊಂದು ರೂಪದಲ್ಲಿ ನನಗೆ ಸಾಂತ್ವನ ಹೇಳಿದ ಬಗೆ. ಇಷ್ಟು ಅದ್ಭುತ ಭಗವದ್ಗೀತ ಸಂಶೋಧನೆ ನನಗೆ ಅರ್ಪಿಸಿದ ಅಭಿಮಾನಿಕಂಡು ಕೃತಾರ್ಥನಾದೆ. ಹೌದು, ಜಗದಲ್ಲಿ ಎಲ್ಲಾ ಗುಣ ಇರುತ್ತದೆ ಅದ ಪರಮಾರ್ಶಿಸಿ ಒಪ್ಪುವ ಜ್ಞಾನ ನಮಗಿರಬೇಕು. ಧನ್ಯವಾದ ನಾಗೇಂದ್ರ ನನ್ನ ಹೃದಯ ಸೇರಿದಿರಿ' ಎಂದು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.


Click it and Unblock the Notifications











