ಮನೆ ಮುಂದಿನ ಮರ ಕಡಿದಿದ್ದಕ್ಕೆ ತಂದೆ ಕಳೆದುಕೊಂಡಷ್ಟೇ ದುಃಖಿತರಾದ ಜಗ್ಗೇಶ್
ನವರಸ ನಾಯಕ ಜಗ್ಗೇಶ್ ರವರಿಗೆ ಕನ್ನಡ ನಾಡು-ನುಡಿ, ಸಂಸ್ಕೃತಿ ಅಂದ್ರೆ ಪಂಚಪ್ರಾಣ. ಅಷ್ಟೇ ಪ್ರೀತಿ ಪರಿಸರದ ಮೇಲೆಯೂ ಇದೆ. ಒಬ್ಬ ಮನುಷ್ಯನ ಜೀವಕ್ಕೆ ಎಷ್ಟು ಪ್ರಾಮುಖ್ಯತೆ ಇದೆಯೋ ಅಷ್ಟೇ ಪ್ರಾಮುಖ್ಯತೆ ಒಂದು ಸಸ್ಯಕ್ಕೂ ಇದೆ ಎನ್ನುವವರು ಜಗ್ಗೇಶ್.[ಟಿಕೆಟ್ ದರ 200 ರೂ ನಿಗದಿ: ಆದ್ರೆ, ಜಗ್ಗೇಶ್ ಆಸೆಯೇ ಬೇರೆ ಇದೆ!]
ಜಗ್ಗೇಶ್ ರವರು ಅವರ ಮನೆ ಮುಂದೆ 10 ವರ್ಷಗಳಿಂದ ಪೋಷಿಸಿ ಬೆಳೆಸಿದ್ದ ಮರವೊಂದನ್ನು ನಿನ್ನೆಯಷ್ಟೆ (ಮೇ 10) ಅವರ ಅನುಮತಿ ಇಲ್ಲದೇ ವ್ಯಕ್ತಿಯೊಬ್ಬರು ಕಡಿದು ಹಾಕಿದ್ದಾರೆ. ಈ ಘಟನೆಯಿಂದ ಜಗ್ಗೇಶ್ ರವರು ಮನನೊಂದು ವ್ಯಕ್ತಿಗೆ ಛೀಮಾರಿ ಹಾಕಿದ್ದು, ಅವರ ಪರಿಸರ ಪ್ರೇಮ ಎಂತದ್ದು ಎಂಬುದನ್ನು ತೋರಿಸಿದ್ದಾರೆ. ತಾವು ಬೆಳೆಸಿದ್ದ ಮರ ಕಡಿದದ್ದು ನೋಡಿ ತಮ್ಮ ತಂದೆ ಕಳೆದುಕೊಂಡಷ್ಟೇ ನೋವು ಅನುಭವಿಸಿದ ಜಗ್ಗೇಶ್ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಈ ಕೆಳಗಿನಂತೆ ಅಳಲು ತೋಡಿಕೊಂಡಿದ್ದಾರೆ.

ಮರ ಕಡಿದವರು ರಾಕ್ಷಸರು
"ನಾನು ನನ್ನ ತನು ಮನ ಧನ ವ್ಯಯಿಸಿ ಬೆಳಸಿದ ನೆರಳು ನೀಡುವ ಮರವನ್ನ ಕ್ಷುಲ್ಲಕ ಕಾರಣಕ್ಕೆ, ಮನೆ ಮುಂದೆ ಕಾರು ನಿಲ್ಲಿಸಲು 10 ವರ್ಷದ ನನ್ನ ಪರಿಸರದ ಪ್ರೀತಿಯನ್ನ 500 ರೂ ಲಂಚಕ್ಕಾಗಿ ಮರ ಕಡಿದಿದ್ದಾರೆ ರಾಕ್ಷಸರು" ಎಂದು ಜಗ್ಗೇಶ್ ತಮ್ಮ ಫೇಸ್ ಬುಕ್ ನಲ್ಲಿ ನೋವನ್ನು ತೋಡಿಕೊಂಡಿದ್ದಾರೆ.

ಈ ಭೂಮಿ ಮರವಿಲ್ಲದೇ ಬರಡಾಗುತ್ತಿದೆ
"ಮರ ಕಡಿಸಿದವಳು ವಿದ್ಯಾವಂತ ಮಹಿಳೆ. ನೆನಪಿಡಿ ಮಾನ್ಯರೇ... ಈ ಭೂಮಿ ಮರವಿಲ್ಲದೇ ಬರಡಾಗುತ್ತಿದೆ. ನಾನು ನನ್ನ ಮನೆ ಎಂದು ಬಾಳುವ ಬದಲು ಎಲ್ಲರೂ ನನ್ನ ಪರಿಸರ... ನನ್ನ ರಸ್ತೆ... ಅಂತ ಸ್ವಲ್ಪವಾದರು ಚಿಂತಿಸಿ ಬಾಳಿ" -ಜಗ್ಗೇಶ್, ನಟ

ಬೇರೆಯವರ ಪರಿಸರ ಪ್ರೀತಿಯನ್ನು ಕೊಲ್ಲದಿರಿ
"ನಿಮ್ಮ ಸುತ್ತ-ಮುತ್ತಲ ಪರಿಸರ ಎಲ್ಲವೂ ನಿಮ್ಮದೇ ಎಂದು ಭಾವಿಸಿ ಬಾಳಲು ಇಷ್ಟವಿಲ್ಲದಿದ್ದರೇ ಬೇರೆಯವರಿಗೆ ಇರುವ ಕಲ್ಪನೆಯನ್ನು ಕೊಲ್ಲದಿರಿ" ಎಂದು ಪರಿಸರ ಕಾಳಜಿ ಕುರಿತು ಜಗ್ಗೇಶ್ ಫೇಸ್ ಬುಕ್ ನಲ್ಲಿ ತಮ್ಮ ಅಳಲು ತೋಡಿಕೊಂಡಿದ್ದು ಹೀಗೆ.

ಮರ ಕಡಿದಿರುವುದಕ್ಕೆ ತಂದೆ ಕಳೆದುಕೊಂಡಷ್ಟೇ ನೊಂದ ಜಗ್ಗೇಶ್
"ಬರಡು ಭೂಮಿಯಂತಿದ್ದ ನನ್ನ ರಸ್ತೆಯಲ್ಲಿ ನಾನು ನನ್ನ ಸಿಬ್ಬಂದಿ ಗಿಡನೆಟ್ಟು ಮನೆಯಿಂದ ನೀರೆರೆದು ಮರಮಾಡಿ ದೇವರು ಕೊಟ್ಟ ಮನುಜನ್ಮ ಸಮರ್ಥವಾಗಿ ಬಳಸಿ ಬಾಳುತ್ತಿದ್ದೇವೆ. ನಾನು ಬೆಳೆಸಿದ ಮರ ಕಡಿದದ್ದು ನೋಡಿ... ನನ್ನ ತಂದೆ ಕಳೆದುಕೊಂಡ ದಿನ ಆದ ದುಃಖವಾಯಿತು" -ಜಗ್ಗೇಶ್, ನಟ

ಪರಿಸರ ಉಳಿಸಿ ಎಂದು ಜಗ್ಗೇಶ್ ಎಲ್ಲರಲ್ಲೂ ಬೇಡಿಕೊಳ್ಳಬೇಕೆ?
ನಟ ಜಗ್ಗೇಶ್ ರವರು ತಾವು ಒಂದು ಮಗುವಿನಂತೆ ಪೋಷಿಸಿ ಬೆಳೆಸಿದ ಮರವನ್ನು ವ್ಯಕ್ತಿಯೊಬ್ಬರು ಕಡಿದಿದ್ದಕ್ಕೆ ನೊಂದು "ದಯಮಾಡಿ ಪರಿಸರ ಉಳಿಸಿ ಮುಂದಿನ ಪೀಳಿಗೆಗೆ ಆದರ್ಶವಾಗಿ.. ಇಲ್ಲದಿದ್ದರೇ ನಾವು ಮನುರೂಪದ ರಾಕ್ಷಸರಾಗಿ ಬಿಡುತ್ತೇವೆ' ಎಂದು ಸಾಮಾಜಿಕ ಜಾಲತಾಣದಲ್ಲಿ ಬೇಡಿಕೊಂಡಿದ್ದಾರೆ. ಆದರೆ ಅವರು ಬೇಡಿಕೊಳ್ಳುವ ಅವಶ್ಯಕತೆ ಇದೆಯೇ. ಪರಿಸರ ಕಾಳಜಿ ಪ್ರತಿಯೊಬ್ಬರ ಕರ್ತವ್ಯ. ಎಲ್ಲರೂ ಸ್ವಯಂಕೃತವಾಗಿ, ಜಗ್ಗೇಶ್ ರವರ ಮನವಿಗೆ ಸ್ಪಂದಿಸಿಯಾದರೂ ಪರಿಸರ ಜಾಗೃತಿ ಬಗ್ಗೆ ಗಮನಹರಿಸಬೇಕಾಗಿದೆ.

ಅಧಿಕಾರಿಗಳಲ್ಲಿ ಜಗ್ಗೇಶ್ ಮನವಿ
"ನಗರಗಳಲ್ಲಿ ಏಕ ಏಕಿಯಾಗಿ ಮರ ಕಡಿಸದೇ ಸಂಬಂಧಪಟ್ಟ ಅಧಿಕಾರಿಗಳೇ ದಯಮಾಡಿ ಮರಗಳನ್ನ ಕಡಿಯದೇ ಟ್ರಿಮ್ ಮಾಡಲು ಆದೇಶ ನೀಡಿ ಪರಿಸರದ ರಕ್ಷಣೆಯ ಪಾಲುದಾರರಾಗಿ ಎಂದು ಬಿಬಿಎಂಪಿ ಕಮಿಷನರ್, ಅರಣ್ಯ ಸಚಿವರು ಮತ್ತು ಮಾನ್ಯ ಮುಖ್ಯಮಂತ್ರಿಗಳಲ್ಲಿ" ಜಗ್ಗೇಶ್ ರವರು ಸಾಮಾಜಿಕ ಜಾಲತಾಣದ ಮುಖಾಂತರ ಮನವಿ ಮಾಡಿದ್ದಾರೆ.
ಮರ ಕಡಿದವರಿಗೆ ಜಗ್ಗೇಶ್ ಛೀಮಾರಿ ಹಾಕಿದ ಫೇಸ್ ಬುಕ್ ಲೈವ್ ವಿಡಿಯೋ ನೋಡಲು ಕ್ಲಿಕ್ ಮಾಡಿ


Click it and Unblock the Notifications











