ಮೇಯರ್ ಫಂಡ್ ನಿಂದ ಈತನಿಗೆ 5 ಲಕ್ಷ ರೂ. ಬರುವಂತೆ ಶ್ರಮಿಸಿದ್ದೆ: ಶನಿ ಮಹಾದೇವಪ್ಪ ಬಗ್ಗೆ ಜಗ್ಗೇಶ್ ಮಾತು
ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಶನಿ ಮಹಾದೇವಪ್ಪ ನಿನ್ನೆ (ಜನವರಿ 3) ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಕೋವಿಡ್ ಸೋಂಕಿಗೆ ತುತ್ತಾಗಿದ್ದ 90 ವರ್ಷದ ಮಹದೇವಪ್ಪ ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
Recommended Video
ಕನ್ನಡ ಸಿನಿಮಾರಂಗದಲ್ಲಿ ಅನೇಕ ವರ್ಷಗಳಿಂದ ಕಲಾಸೇವೆ ಮಾಡಿರುವ ಮಹಾದೇವಪ್ಪ ಸುಮಾರು 550ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕವಿರತ್ನ ಕಾಳಿದಾಸ, ಭಕ್ತ ಕುಂಬಾರ, ಶ್ರೀನಿವಾಸ ಕಲ್ಯಾಣ ಸೇರಿದಂತೆ, ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ಸಿನಿಮಾಗಳು ಸೇರಿದಂತೆ ಎಲ್ಲಾ ರೀತಿಯ ಚಿತ್ರಗಳಲ್ಲೂ ಮಹಾದೇವಪ್ಪ ನಟಿಸಿದ್ದಾರೆ. ಅದರಲ್ಲೂ ವರನಟ ಡಾ.ರಾಜ್ ಕುಮಾರ್ ಅವರ ಸುಮಾರು 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಶನಿ ಮಹಾದೇವಪ್ಪ ನಿಧನಕ್ಕೆ ಸ್ಯಾಂಡಲ್ ವುಡ್ ನ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ಸುದೀಪ್, ಪುನೀತ್ ರಾಜ್ ಕುಮಾರ್, ಸುಮಲತಾ ಅಂಬರೀಶ್, ಜಗ್ಗೇಶ್ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

ಹಿರಿಯ ನಟ ಜಗ್ಗೇಶ್ ಟ್ವೀಟ್ ಮಾಡಿ, '1984ರಿಂದ ಬಲ್ಲೆ ಈತನ ಮಾವ ಎಂದು ಕರೆಯುತ್ತಿದ್ದೆ, ಅಣ್ಣನ ಆತ್ಮೀಯ. ಸಕ್ಕರೆ ಖಾಯಿಲೆಯಿಂದ ಎರಡು ಕಣ್ಣು ಕಳೆದುಕೊಂಡಿದ್ದ. 10ವರ್ಷ ಹಿಂದೆ ಮೇಯರ್ ಫಂಡ್ ನಿಂದ ಈತನಿಗೆ ವಿಶೇಷ ಪ್ಯಾಕೇಜ್ 5ಲಕ್ಷ ರೂ. ಬರುವಂತೆ ಶ್ರಮಿಸಿದ್ದೆ ಹಾಗು ವೈಯಕ್ತಿಕವಾಗಿ ನಾನು ಬ್ಯಾಂಕ್ ಜನಾರ್ದನ ಜೂತೆಹೋಗಿ ಕೈಲಾದ ಸಹಾಯ ಮಾಡಿದ್ದೆ. 80ವರ್ಷ ವಯಸ್ಸು ದಾಟಿದೆ. ಇವರ ಆತ್ಮಕ್ಕೆ ಶಾಂತಿ' ಎಂದು ಹೇಳಿದ್ದಾರೆ.
ಇನ್ನು ನಟಿ ಮತ್ತು ಸಂಸದೆ ಸುಮಲತಾ, ಅಂಬರೀಶ್ ಜೊತೆ ಇರುವ ಪೋಟೋ ಶೇರ್ ಮಾಡಿ, 'ಇಂದು ನಮ್ಮನ್ನೆಲ್ಲ ಅಗಲಿದ ಹಿರಿಯ ಕಲಾವಿದರಾದ ಶನಿ ಮಹಾದೇವಪ್ಪನವರ (90 ವರ್ಷ) ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುವೆ. ಸರಿ ಸುಮಾರು 550 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವರ ಕಲಾಸೇವೆ ಚಿರಸ್ಥಾಯಿ. ಅವರ ಕುಟುಂಬ ಹಾಗೂ ಪ್ರೀತಿಪಾತ್ರರಿಗೆ ಈ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ' ಎಂದು ಟ್ವೀಟ್ ಮಾಡಿದ್ದಾರೆ.


Click it and Unblock the Notifications











