ನವರಸ ನಾಯಕ ಜಗ್ಗೇಶ್ ಈಗ ಸಾಫ್ಟ್ ವೇರ್ ಗಂಡ
ನವರಸ ನಾಯಕ ಜಗ್ಗೇಶ್ ನಾಯಕ ನಟನಾಗಿ ಅಭಿನಯಿಸಲಿರುವ ಐತೇರಿ ಲಕಡಿ ಪಕಡಿ ಜುಮ್ಮಾ ಶೈಲಿಯ ಮತ್ತೊಂದು ಚಿತ್ರ ಇದು ಎನ್ನಬಹುದು. ಆ ರೀತಿಯ ಚಿತ್ರಗಳನ್ನು ನೋಡಿ ಹೊಟ್ಟೆತುಂಬ ನಗುವ ಅವರ ಅಭಿಮಾನಿ ಬಳಗವೇ ಇದೆ. ಈಗ ಅವರು 'ಸಾಫ್ಟ್ ವೇರ್ ಗಂಡ'ನಾಗಿ ಅಭಿಮಾನಿಗಳ ಮುಂದೆ ಬರಲು ಸಿದ್ಧವಾಗುತ್ತಿದ್ದಾರೆ.
ಮಂಜುನಾಥ ಬಿಎ ಎಲ್ಎಲ್ ಬಿ, ಸಿಐಡಿ ಈಶ ಚಿತ್ರಗಳ ಬಳಿಕ ನವರಸ ನಾಯಕ ಜಗ್ಗೇಶ್ ಸಹಿ ಹಾಕುತ್ತಿರುವ ಚಿತ್ರವಿದು. ಈಗಾಗಲೆ ಅವರ ಅಭಿನಯದ ಕೂಲ್ ಗಣೇಶ, ಅಗ್ರಜ ಹಾಗೂ ನೀರ್ ದೋಸೆ ಚಿತ್ರಗಳು ನಾನಾ ಹಂತಗಳಲ್ಲಿವೆ. ಈಗವರು 'ಸಾಫ್ಟ್ ವೇರ್ ಗಂಡ'ನಾಗಿ ಬರುತ್ತಿದ್ದಾರೆ.
ಚಿತ್ರದ ಹೆಸರೇ ಹೇಳುವಂತೆ ಇದೊಂದು ಔಟ್ ಅಂಡ್ ಔಟ್ ಕಾಡಿಮಿ ಚಿತ್ರ. ಜೊತೆಗೆ ಕೌಟುಂಬಿಕ ಕಥಾಹಂದರದ ಕಥೆಯನ್ನೂ ಒಳಗೊಂಡಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ನವೆಂಬರ್ ಕೊನೆಗೆ ಚಿತ್ರ ಸೆಟ್ಟೇರಲಿದೆ.ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಜಗ್ಗೇಶ್ ಪ್ರಯತ್ನಿಸುತ್ತಿದ್ದಾರೆ. "ಪಕ್ಷ ಏನು ಹೇಳುತ್ತದೋ ನೋಡೋಣ. ಒಂದು ವೇಳೆ ಟಿಕೆಟ್ ಸಿಗಲಿಲ್ಲ ಎಂದರೆ ಚುನಾವಣೆ ಬಳಿಕ ಚಿತ್ರದಲ್ಲಿ ಅಭಿನಯಿಸುತ್ತೇನೆ. ಹಾಗೆಯೇ ಚಿತ್ರಗಳನ್ನೂ ನಿರ್ಮಿಸುತ್ತೇನೆ" ಎಂದಿದ್ದಾರೆ ಜಗ್ಗೇಶ್.
ಜಗ್ಗೇಶ್ ಅಭಿನಯದ 'ನೀರ್ ದೋಸೆ' ಚಿತ್ರೀಕರಣ ರಮ್ಯಾ ಅಭಿನಯಿಸದ ಕಾರಣ ನೆನೆಗುದಿಗೆ ಬಿದ್ದಿದೆ. 'ಅಗ್ರಜ' ಚಿತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಡಬ್ಬಿಂಗ್ ಗಾಗಿ ಕಾಯುತ್ತಿದೆ. 'ಕೂಲ್ ಗಣೇಶ' ಚಿತ್ರ ಸಂಪೂರ್ಣ ರೆಡಿಯಾಗಿದ್ದು ಬಹುಶಃ ಡಿಸೆಂಬರ್ ವೇಳೆಗೆ ತೆರೆ ಕಾಣಬಹುದು. ಅಂದಹಾಗೆ ಸಾಫ್ಟ್ ವೇರ್ ಗಂಡ ಚಿತ್ರದ ನಿರ್ದೇಶಕ, ನಿರ್ಮಾಪಕರೆಲ್ಲರೂ ಹೊಸಬರು. (ಏಜೆನ್ಸೀಸ್)


Click it and Unblock the Notifications












