ಹಳೆಯ ಚಿತ್ರಗಳು ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತಿದ್ದವು? ಜಗ್ಗೇಶ್ ಮಾತಲ್ಲಿ ಕೇಳಿ..
ನವರಸ ನಾಯಕ ನಟ ಜಗ್ಗೇಶ್ ರವರು ತಮ್ಮ ಸಿನಿಮಾಗಳ ಮೂಲಕ ರಂಜಿಸುವುದರ ಜೊತೆಗೆ, ಈಗ ಜೀ ಕನ್ನಡ ವಾಹಿನಿಯ 'ಕಿಲಾಡಿ ಕುಟುಂಬ' ಕಾರ್ಯಕ್ರಮದಲ್ಲಿ ದಿನನಿತ್ಯ ಕಾಣಿಸಿಕೊಳ್ಳುತ್ತ ಕಿರುತೆರೆ ಮೂಲಕವು ಕನ್ನಡನಾಡಿನ ಜನತೆಯನ್ನು ನಗಿಸುತ್ತಿದ್ದಾರೆ.
ಸದಾ ಸಾಮಾಜಿಕ ಜಾಲತಾಣಗಳಲ್ಲಿಯೂ ಆಕ್ಟಿವ್ ಆಗಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುತ್ತಾ, ಸಾಮಾಜಿಕ ಆಗು-ಹೋಗುಗಳ ಬಗ್ಗೆಯೂ ನಟ ಜಗ್ಗೇಶ್ ಪ್ರತಿಕ್ರಿಯಿಸುತ್ತಿರುತ್ತಾರೆ. ಇತ್ತೀಚಿನ ಸಿನಿಮಾಗಳಲ್ಲಿನ ಮತ್ತು ಹಿಂದಿನ ಕಪ್ಪು-ಬಿಳುಪು ಸಿನಿಮಾಗಳಲ್ಲಿನ ಮೌಲ್ಯಯುತ ಅಂಶಗಳ ಬಗ್ಗೆ ವ್ಯತ್ಯಾಸ ಕಂಡುಕೊಂಡಿರುವ ಜಗ್ಗೇಶ್ ರವರು ಹಿಂದಿನ ಸಿನಿಮಾಗಳ ಕುರಿತು ತಮ್ಮ ಮನದಾಳದ ಮಾತನ್ನು ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.
ಕಪ್ಪು-ಬಿಳುಪು ಚಿತ್ರಗಳಿಂದ ಅವರು ಕಲಿತದ್ದು ಏನು?, ಸಿನಿಮಾಗಳನ್ನು ನೋಡಿಯೂ ಜೀವನ ಪಾಠ ಕಲಿಯುವುದು ಸಾಕಷ್ಟು ಇದೆ ಎಂಬುದನ್ನು ಜಗ್ಗೇಶ್ ರವರು ತಮ್ಮದೇ ವಾಕ್ಯದಲ್ಲಿ ನೀಡಿರುವುದು ಈ ಕೆಳಗಿನಂತಿದೆ..

ಜೀವನ ಪಾಠ ಕಲಿಸುತ್ತಿದ್ದ ಚಿತ್ರಗಳು
'ನಮ್ಮ ಸಿನಿಮಾದ ಪೂರ್ವಜ್ಜರು ಒಂದು ಸಿನಿಮಾ ಮಾಡಿದರೆ ಅದು ಪ್ರೇಕ್ಷಕರ ಮೇಲೆ ಪ್ರಭಾವ ಬೀರಿ ಜೀವನಪಾಠ ಆಗಬೇಕು ಎಂದು ಚಿಂತಿಸಿ ಚಿತ್ರಿಸುತ್ತಿದ್ದರು!' ಜಗ್ಗೇಶ್, ನಟ

ಜಗ್ಗೇಶ್ ನಟನಾಗಿದ್ದು ಹಿಂದಿನ ಚಿತ್ರಗಳನ್ನು ನೋಡಿಯೇ..
"ನಮ್ಮ ತಂದೆ-ತಾಯಿ ಸಹ ಹಿಂದಿನ ಅಂತಹ ಪ್ರಭಾವಿ ಚಿತ್ರಗಳನ್ನು ನೋಡಿಬಂದು ನಂತರ ನಮಗೆ ತೋರಿಸುತ್ತಿದ್ದರು! ಆ ಚಿತ್ರ ನೋಡಿ ನಾನು ಒಂದು ದಿನ ನಟನಾಗಿ ಚಿತ್ರದಲ್ಲಿ ನೋಡಿದ ಸ್ಫೂರ್ತಿದಾಯಕ ಸನ್ನಿವೇಶದಲ್ಲಿ ನಟಿಸಬೇಕು ಅಂತ ಕನಸುಕಾಣುತ್ತಿದ್ದೆ. ರಾಯರ ದಯೇ ನಾನು ಅಂದುಕೊಂಡಂತೆ ಆದೆ' ಜಗ್ಗೇಶ್, ನಟ

ಕಾಮಿಡಿಯಲ್ಲಿಯೇ ಪ್ರೇಕ್ಷಕರು ಹೆಚ್ಚು ನೋಡಿದರು
"ಆದರೆ ನನ್ನನ್ನು ಪ್ರೇಕ್ಷಕವರ್ಗ ಕಾಮಿಡಿಯಲ್ಲಿಯೇ ನೋಡಲು ಅಭ್ಯಾಸವಾದರು. ಆದರು ನಾನು ಅವಕಾಶ ಸಿಕ್ಕಾಗೆಲ್ಲ ಹಾಸ್ಯದಲ್ಲೇ ಸಂದೇಶ ತುರುಕುವ ಯತ್ನಮಾಡುತ್ತೇನೆ.. ಆಧುನಿಕ ಬರಾಟೆ ಅನ್ನೋ ಸೊಲ್ಲು ಇಂದಿನದಲ್ಲಾ. ಯುವಜನಾಂಗ ಬದಲಾಗಿದೆ ಅನ್ನುವುದು ಇಂದೆ ಅಲ್ಲಾ.. ವಯಸ್ಸಿಗೆ ಅನುಗುಣವಾಗಿ ಒಂದೇ ಗುಣ ತಲಾಂತರವಾಗಿ ಬಂದಿದೆ. ಯಾವಾಗಲು ಯುವಸಮಾಜ ತಮ್ಮ ತಂದೆತಾಯಿಗಿಂತ ಪರಿಸರ ಸ್ನೇಹಿತರ ಪ್ರಭಾವಕ್ಕೆ ಹೊಂದಿಕೊಳ್ಳುತ್ತಾರೆ. ಒಬ್ಬೊಬ್ಬರಿಗೆ ಒಂದೊಂದು ಅಂಶ ಇಷ್ಟವಾಗಿ ಸಹಪಾಟಿಗಳ ಜೊತೆ ಹಂಚಿಕೊಳ್ಳುತ್ತಾರೆ" ಜಗ್ಗೇಶ್, ನಟ

ಸರಿದಾರಿಗೆ ತಂದ ತಾಯಿ
ಇಂದಿಗೂ ಸಹ ಚಿತ್ರ ನೋಡಿ ಬುದ್ದಿ ಕಲಿಯುವುದರ ಬಗ್ಗೆ ಹೇಳಿರುವ ಜಗ್ಗೇಶ್, "ಬುದ್ದಿ ಸಮಯೋಚಿತ ಜ್ಞಾನ ಇದ್ದವ ಕೇಳಿ ನಕ್ಕು ಸುಮ್ಮನಾಗುತ್ತಾನೆ. ವೈಪಲ್ಯಗುಣ ಇದ್ದವ ಕೇಳಿ ಕಲಿತು ದಾಸನಾಗುತ್ತಾನೆ. ನನಗೂ ಬಾಲ್ಯದಲ್ಲಿ ಹುಚ್ಚು ಚಿಂತನೆಯ ಗೆಳೆಯರಿದ್ದರು. ದಾರಿಯು ತಪ್ಪಿದ್ದೆ. ತಾಯಿ ದೇವರಂತೆ ಅಡ್ಡಬಂದು ಅತ್ತುಕರೆದು ಸರಿದಾರಿಗೆ ತಂದಳು. ಅಮ್ಮನ ಆಶೀರ್ವಾದದಿಂದ.. ಈಗ ನಟನ ರೂಪದಲ್ಲಿ ನಿಮ್ಮಮುಂದೆ ಹೀಗಿರುವೆ" ಎಂದಿದ್ದಾರೆ.

ಜೀವನಕ್ಕೆ ಯಾರಾದರು ಮಾರ್ಗದರ್ಶಕ ಇರಲೇಬೇಕು..
'ಬದುಕಲ್ಲಿ ಯಾರಾದರು ಮಾರ್ಗದರ್ಶಕ ಇರಲೇ ಬೇಕು. ಇದ್ದರೆ ಬದುಕು ಸರಿದಾರಿಗೆ. ಇಲ್ಲದಿದ್ದರೆ ಕಡಿವಾಣವಿಲ್ಲದ ಅಶ್ವ ನಮ್ಮಜನ್ಮ. ಅದೃಷ್ಟ ಸರಿಇದ್ದರೆ ಏರಿಗೆ.. ಇಲ್ಲದಿದ್ದರೆ ಮೋರಿಗೆ.." ಎಂದಿದ್ದಾರೆ. ಸಿನಿಮಾಗಳಿಂದಲೂ ಜೀವನ ಪಾಠ ಕಲಿತುಕೊಳ್ಳುವ ಬಗ್ಗೆ ಹೇಳಿರುವ ಜಗ್ಗೇಶ್ ರವರು ಒಂದು ಹಾಡನ್ನು ಕೇಳಿ ಎಂದು ಫೇಸ್ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಆ ಹಾಡನ್ನು ನೋಡಲು ಕ್ಲಿಕ್ ಮಾಡಿ


Click it and Unblock the Notifications











