ಗಾಂಜಾ ನಶೆಯಲ್ಲಿ ಕೋಮಲ್ ಮೇಲೆ ಹಲ್ಲೆ ಮಾಡಿದ್ದಾರೆ: ಜಗ್ಗೇಶ್
Recommended Video
ಬೆಂಗಳೂರಿನ ಮಂತ್ರಿ ಸ್ಕ್ವಯರ್ ಬಳಿ ನಟ ಕೋಮಲ್ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದು, ಈ ಪ್ರಕರಣ ಈಗ ಮಲ್ಲೇಶ್ವರ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಕಾರಿನಲ್ಲಿ ಚಲಿಸುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಆ ವ್ಯಕ್ತಿ ಏಕಾಏಕಿ ಕೋಮಲ್ ಮೇಲೆ ಮುಗಿಬಿದ್ದು, ಹಲ್ಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ ಜಗ್ಗೇಶ್ ''ಆ ವ್ಯಕ್ತಿ ಗಾಂಜಾ ಸೇವಿಸಿದ್ದ, ಜೊತೆಯಲ್ಲಿ ಹುಡುಗಿ ಇದ್ದಳು, ಮದ್ಯಪಾನ ಕೂಡ ಮಾಡಿದ್ದ'' ಎಂದು ಆರೋಪಿಸಿದ್ದಾರೆ.
ಮಲ್ಲೇಶ್ವರ ಪೊಲೀಸ್ ಠಾಣೆ ಬಳಿ ಭೇಟಿ ನೀಡಿದ ಕೋಮಲ್ ಸಹೋದರ ಜಗ್ಗೇಶ್ ಅವರು ಮಾಧ್ಯಮಗಳ ಬಳಿ ಮಾತನಾಡಿದ್ದು, ''ಕೋಮಲ್ ಮಗಳನ್ನು ಟ್ಯೂಷನ್ಗೆ ಬಿಡಲು ಹೋಗಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಕುಡಿದಿದ್ದ, ಗಾಂಜಾ ಸೇವನೆ ಮಾಡಿದ್ದ, ಜೊತೆಯಲ್ಲಿ ಯಾರೋ ಹುಡುಗಿ ಬೇರೆ ಇದ್ದಳು. ಇವರದ್ದೆಲ್ಲ ಒಂದು ಗ್ಯಾಂಗ್ ಇರುತ್ತೆ. ಬೆಂಗಳೂರಿನಲ್ಲಿ ಇಂತಹ ಜನರ ಅಟ್ಟಹಾಸ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಬೇಕಿದೆ'' ಎಂದು ಹೇಳಿದರು.

''ಈ ಹಲ್ಲೆಯಿಂದ ಚಿತ್ರರಂಗದವರ ಕೈವಾಡ ಇದ್ಯಾ ಅಥವಾ ಬೇರೆ ಯಾರಾದರೂ ಇದ್ದಾರಾ ಹಲವು ಅನುಮಾನ ಬರುತ್ತೆ. ಸದ್ಯಕ್ಕೆ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದೇನೆ. ಇಂತಹವರಿಗೆ ಬುದ್ದಿ ಕಲಿಸಬೇಕಿದೆ'' ಎಂದು ಜಗ್ಗೇಶ್ ಆಹೇಳಿದರು.
''ಬೆಂಗಳೂರಿನಲ್ಲಿ ದಾದಾಗಿರಿ ಹೆಚ್ಚಾಗಿದೆ. ನಾವು ಸಾಧುಗಳ ರೀತಿ ಬದುಕುತ್ತಿದ್ದೇವೆ. ಇದನ್ನ ತಡೆಯಬೇಕು. ಹೇಳುವವರಿಲ್ಲ, ಕೇಳುವವರಿಲ್ಲ ಎಂಬ ಭಂಡತನ ಅವರಲ್ಲಿದೆ. ಇದಕ್ಕೆ ಕೊನೆ ಹಾಡಬೇಕು'' ಎಂದು ಪೊಲೀಸರನ್ನು ಒತ್ತಾಯಿಸಿದರು.
ಸದ್ಯ ಕೋಮಲ್ ಅವರ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನ ಮಲ್ಲೇಶ್ವರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಎಫ್.ಐ.ಆರ್ ದಾಖಲಾಗುವ ಸಾಧ್ಯತೆ ಇದೆ. ಜಗ್ಗೇಶ್ ಅವರು ಕೂಡ ಪೊಲೀಸರ ಬಳಿ ಎಫ್.ಐ.ಆರ್ ದಾಖಲಿಸುವಂತೆ ಮನವಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.


Click it and Unblock the Notifications











