ಪ್ರಿಯಾಂಕ ತಟ್ಟೆ ತೊಳೆದರೆ ಸುದ್ದಿ, ನಾನು ರಾಯರ ಸೇವೆ ಮಾಡಿದ್ರೆ ಟ್ರೋಲ್ ಮಾಡ್ತೀರಾ? ಜಗ್ಗೇಶ್ ಬೇಸರ
ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಮಹಾನ್ ದೈವಭಕ್ತರು. ಬಹಳ ವರ್ಷಗಳಿಂದ ರಾಯರನ್ನು ಆರಾಧಿಸುತ್ತಾ ಬರ್ತಿದ್ದಾರೆ. ತಮ್ಮ ಯಶಸ್ಸಿಗೆ ರಾಯರೇ ಕಾರಣ ಎಂದು ನಂಬಿದ್ದಾರೆ. ಆಗಾಗ್ಗೆ ಮಂತ್ರಾಲಯಕ್ಕೆ ಭೇಟಿ ನೀಡುತ್ತಾರೆ. ತಾವು ರಾಯರ ಮಠದಲ್ಲಿ ಕಸಗುಡಿಸಿದ ಬಗ್ಗೆ ಟ್ರೋಲ್ ಮಾಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ನಟಿ ಪ್ರಿಯಾಂಕ ಚೋಪ್ರಾ ಸ್ವರ್ಣಮಂದಿರದಲ್ಲಿ ತಟ್ಟೆ ತೊಳೆದ ವೀಡಿಯೋ ವೈರಲ್ ಆಗಿ ಸುದ್ದಿ ಆಗಿತ್ತು. ಅದನ್ನು ಹೋಲಿಸಿ ಜಗ್ಗೇಶ್ ಬೇಸರ ಹೊರ ಹಾಕಿದ್ದಾರೆ.
"ಪ್ರಿಯಾಂಕ ಚೋಪ್ರಾ ಶ್ರೀಮಂತೆ ನಟಿ, ಆದರು ಆಲಯದಲ್ಲಿ ತಟ್ಟೆತೊಳೆದಳು ಎಂದಾಗ ದೊಡ್ಡ ಸುದ್ಧಿ ಆಯಿತು.. ಜಗ್ಗೇಶ ರಾಯರ ಮಠದಲ್ಲಿ ಕಸಗುಡಿಸಿದ ಎಂದಾಗ ಜಾಲತಾಣದಲ್ಲಿ ಅಣಕವಾಯಿತು" ಎಂದು ಜಗ್ಗೇಶ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅಷ್ಟಕ್ಕೂ ತಾವು ಯಾಕೆ ರಾಯರ ಮಠದಲ್ಲಿ ಸೇವೆ ಮಾಡಿದ್ದು ಎನ್ನುವುದನ್ನು ಬಹಿರಂಗಪಡಿಸಿದ್ದಾರೆ. ಮನುಷ್ಯನಾಗಲಿ ಸೇವಕನಂತೆ ಬಾಳಿದರೆ ದೇವರಿಗೆ ಪ್ರಿಯವಾಗಿ ಗ್ರಹ ದೋಷ ನಿವಾರಣೆ ಆಗುತ್ತದೆ.. ನಮ್ಮ ಅಮ್ಮ ಕಲಿಸಿದ ಈ ಪಾಠ ನಾನು ಇಂದು ಪಾಲಿಸಿ ದೇವರ ಕೃಪೆಯಿಂದ ನನ್ನ ಬದುಕು ಶ್ರೀರಾಮಪುರ ಪುಟ್ಪಾತಿನಿಂದ ಶುರುವಾಗಿ ಇಲ್ಲಿಯವರೆಗೂ ತಂದು ನಿಲ್ಲಿಸಿದೆ ಎಂದು ಜಗ್ಗೇಶ್ ತಿಳಿಸಿದ್ದಾರೆ.

ಇತ್ತೀಚೆಗೆ ತಮ್ಮ ಕಾರಿಗೆ ಎರಡು ಬಾರಿ ಅಪಘಾತವಾದ ಬಗ್ಗೆ ಜಗ್ಗೇಶ್ ಮಾಹಿತಿ ಹಂಚಿಕೊಂಡಿದ್ದಾರೆ. ದೆಹಲಿಯಲ್ಲಿ ನಾನು ಚಲಿಸುತ್ತಿದ್ದ ಕಾರಿಗೆ ಮುಂದಿನ ಕಾರು ಏಕಾಏಕಿ ಬ್ರೇಕ್ ಹಾಕಿ ನಮ್ಮ ಕಾರು ಅದಕ್ಕೆ ಗುದ್ದಿ ಹಿಂದಿನ ಕಾರುಗಳು ನಮಗೆ ಗುದ್ದಿ ಘೋರ ಅಪಘಾತವಾಯಿತು ಎಂದಿದ್ದಾರೆ. ಒಳಗಿದ್ದ ನನಗೂ, ನನ್ನ ಪಿಎಗೆ ಪೆಟ್ಟಾಗಲಿಲ್ಲ. ಗಾಡಿ ಮಾತ್ರ ಜಕಂ ಆಯಿತು ಎಂದು ವಿವರಿಸಿದ್ದಾರೆ.
ಮತ್ತೊಂದು ಅಪಘಾತದಲ್ಲಿ ಚಾಲಕನ ಅಚಾತುರ್ಯದಿಂದ ನನ್ನ ಕಾರ್ ಮರಕ್ಕೆ ಅಪ್ಪಳಿಸಿ ರಿಪೇರಿಗೆ ಲಕ್ಷ ರೂಪಾಯಿ ಖರ್ಚಾಯಿತು.. ಆದರೆ ನನಗೆ ಯಾವ ತೊಂದರೆ ಆಗಲಿಲ್ಲಾ, ಈಗ ಹೇಳಿ ಇದು ಕಾಕತಾಳಿನಾ? ದೇವರ ಸೇವೆಯ ಮಹತ್ವ ಆಪತ್ತಿನ ಸಮಯದಲ್ಲಿ ಅರಿಯಬೇಕು ಎಂದು ಜಗ್ಗೇಶ್ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ. ಯಾರೇ ಆಗಲಿ ದೇವರ ನಂಬಿಕೆ ಇದ್ದವರ ಸೇವೆಯ ಕಾರಣ ಅರಿಯಬೇಕೆ ಹೊರತು, ಕದ್ದು ಚಿತ್ರೀಕರಿಸಿ ಜಾಲತಾಣಕ್ಕೆ ಹಾಕಿ ಬರುವ ಕೆಟ್ಟ ಸಂದೇಶ ನೋಡಿ ವಿಕೃತ ಆನಂದ ಚರ್ಚೆ ಮಾಡಬಾರದು. ದೇವರ ಸೇವೆ ಮಾಡುವ ಮನುಷ್ಯನಿಗೆ ಅಣಕ ಮಾಡಿದಾಗ ಅವನ ದೋಷ ಅಣಕ ಮಾಡಿದವನಿಗೆ ಸುತ್ತಿಕೊಂಡು ಅವನ ಯಶಸ್ಸು ಕುಂಟಿತವಾಗುತ್ತದೆ ಎಂದು ಭಾಗವತ ಉಲ್ಲೇಖವನ್ನು ಜಗ್ಗೇಶ್ ತಿಳಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಮಂತ್ರಾಲಯದಲ್ಲೇ ಜಗ್ಗೇಶ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅಂದರೆ ಹುಟ್ಟುಹಬ್ಬದ ಸಮಯದಲ್ಲಿ ಮಂತ್ರಾಲಯಕ್ಕೆ ಭೇಟಿ ನೀಡುತ್ತಾರೆ. ರಾಜ್ಯಸಭಾ ಸದಸ್ಯರಾಗಿ ಆಯ್ಕೆ ಆಗಿದ್ದಕ್ಕೆ ಕೂಡ ರಾಯರ ಕೃಪೆ ಕಾರಣ ಎಂದು ಜಗ್ಗೇಶ್ ಹೇಳಿಕೊಂಡಿದ್ದರು. ರಜನಿಕಾಂತ್, ಡಾ. ರಾಜ್ಕುಮಾರ್ ಕೂಡ ರಾಯರ ಭಕ್ತರು. ಅಣ್ಣಾವ್ರನ್ನು ಭೇಟಿ ಆಗುತ್ತಿದ್ದ ಸಮಯದಲ್ಲಿ ರಾಯರ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಿದ್ದಾಗಿ ನವರಸ ನಾಯಕ ಹೇಳಿದ್ದಾರೆ.
ಇತ್ತೀಚೆಗೆ ಸಿಖ್ಖರ ಪವಿತ್ರ ದೇವಾಲಯಕ್ಕೆ ಗ್ಲೋಬಲ್ ಸ್ಟಾರ್ ಪ್ರಿಯಾಂಕ ಚೋಪ್ರಾ ಭೇಟಿ ನೀಡಿದ್ದರು. ಈ ವೇಳೆ ಭಕ್ತರು ಊಟ ಮಾಡಿದ್ದ ತಟ್ಟೆಗಳನ್ನು ಪ್ರಿಯಾಂಕ ತೊಳೆದಿದ್ದರು. ಆ ವಿಡಿಯೋ ವೈರಲ್ ಆಗಿತ್ತು. ಇದೇ ವಿಚಾರ ಪ್ರಸ್ತಾಪಿಸಿ ಜಗ್ಗೇಶ್ ಪೋಸ್ಟ್ ಮಾಡಿದ್ದಾರೆ. ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಈಗ ಮದುವೆಯಾಗಿ ಅಮೆರಿಕದ ಬೆವರ್ಲಿ ಹಿಲ್ಸ್ನ ಐಷಾರಾಮಿ ಮನೆಯಲ್ಲಿ ನೆಲೆಸಿದ್ದಾರೆ. ಹಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಾರೆ. ಆದರೂ ಆಗಾಗ್ಗೆ ಭಾರತಕ್ಕೆ ಬರ್ತಾರೆ. ಇಲ್ಲಿನ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ.


Click it and Unblock the Notifications











