ಭಗವಾನ್ ಮಾತಿಂದ ಅಣ್ಣಾವ್ರ ಜೊತೆ ನಟಿಸೋ ಅವಕಾಶ ಜಗ್ಗೇಶ್ ಕೈ ತಪ್ಪಿತ್ತಾ? ಆ ಸಿನಿಮಾ ಯಾವ್ದು?
ನವರಸ ನಾಯಕ ಜಗ್ಗೇಶ್ ಡಾ. ರಾಜ್ಕುಮಾರ್ ಅವರ ದೊಡ್ಡ ಅಭಿಮಾನಿ. ಚಿಕ್ಕಂದಿನಿಂದಲೂ ಜಗ್ಗಣ್ಣ ಅಣ್ಣಾವ್ರ ಸಿನಿಮಾಗಳನ್ನು ನೋಡಿಕೊಂಡು ಬೆಳೆದವರು. ಸಾಕಷ್ಟು ಬಾರಿ ಈ ವಿಚಾರವನ್ನು ಜಗ್ಗೇಶ್ ಹೇಳಿಕೊಂಡಿದ್ದಾರೆ. ಆದರೆ ಆರಾಧ್ಯ ದೈವನ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಮಾತ್ರ ಸಿಗಲಿಲ್ಲ. ಸಿಕ್ಕ ಒಂದು ಅವಕಾಶ ಎಸ್. ಕೆ ಭಗವಾನ್ ಕಾರಣಕ್ಕೆ ಕೈ ತಪ್ಪಿತ್ತು.
ಹೌದು ಹಿರಿಯ ನಿರ್ದೇಶಕ ಎಸ್. ಕೆ ಭಗವಾನ್ ಇಂದು ಬೆಳಗಿನ ಜಾವ ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ. ಅವರಿಗೆ ಸಂತಾಪ ಸೂಚಿಸಿ ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ತಮ್ಮದೇ ಸ್ಟೈಲ್ನಲ್ಲಿ ಅಮರ ಅಳೆಯ ನೆನಪು ಎಂದು ಹಳೆಯ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ಡಾ. ರಾಜ್ಕುಮಾರ್ ಒಡನಾಟ ಸಿಗುವುದೇ ಪುಣ್ಯ. ಅಂತಾದ್ದರಲ್ಲಿ ಜಗ್ಗೇಶ್ ಬಹಳ ಸಮಯ ಅವರೊಟ್ಟಿಗೆ ಕಳೆದಿದ್ದಾರೆ. ಗಂಟೆಗಳಗಟ್ಟಲೆ ಏಕಾಂತದಲ್ಲಿ ಕೂತು ಮಾತನಾಡಿದ್ದಾರೆ. ಆದರೆ ಒಟ್ಟಿಗೆ ನಟಿಸುವ ಅವಕಾಶ ಮಾತ್ರ ಸಿಗಲಿಲ್ಲ.
ಜಗ್ಗೇಶ್ ಚಿತ್ರರಂಗಕ್ಕೆ ಬರುವ ವೇಳೆ ಅಣ್ಣಾವ್ರು ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಆಗಿತ್ತು. ಆದರೆ ಅದೊಂದು ಚಿತ್ರದಲ್ಲಿ ಒಂದು ಪುಟ್ಟ ಪಾತ್ರ ನವರಸ ನಾಯಕನನ್ನು ಹುಡುಕಿ ಬಂದಿತ್ತು. ಆದರೆ ಚಿತ್ರದ ನಿರ್ದೇಶಕರಾಗಿದ್ದ ಎಸ್. ಕೆ ಭಗವಾನ್ ಬೇಡ ಎಂದುಬಿಟ್ಟಿದ್ದರಂತೆ.
ಭಗವಾನ್ ಜೊತೆ ಜಗಳ ಮಾಡಿದ್ದೆ
ನಟ ಜಗ್ಗೇಶ್ ಹಿರಿಯ ನಿರ್ದೇಶಕ ಎಸ್. ಕೆ ಭಗವಾನ್ ಅಗಲಿಕೆಗೆ ಸಂತಾಪ ಸೂಚಿಸಿ "ರಾಜಣ್ಣನ ನೆರಳಂತೆ ಜೀವಿಸಿದವರು.. ಜಗ್ಗೇಶ ನಾಯಕನಟ ನಿಮ್ಮ ಜೊತೆ ಕಳ್ಳ ಸೇವಕನ ಪಾತ್ರ ಇವನಿಗೆ ಬೇಡ ಇಮೇಜಿಗೆ ಧಕ್ಕೆ ಬರುತ್ತದೆ ಎಂದು ಟೆನ್ನಿಸ್ ಕೃಷ್ಣನಿಗೆ ಪಾತ್ರ ಹಾಕಿದರು. ಆಗ ಇವರ ಜೊತೆ ಜಗಳ ಮಾಡಿದೆ ಆಗ ರಾಜಣ್ಣ ನನ್ನ ಸಮಾಧಾನ ಮಾಡಿ ಹೌದು ಭಗವಾನ್ ಮಾತಲ್ಲಿ ಅರ್ಥವಿದೆ. ಮುಂದೆ ನಟಿಸೋಣ ಒಟ್ಟಿಗೆ ಎಂದುಬಿಟ್ಟರು. ಅಮರ ಹಳೆ ನೆನಪು. ಓಂ ಶಾಂತಿ" ಎಂದು ಬರೆದುಕೊಂಡಿದ್ದಾರೆ.

ಜಗ್ಗಣ್ಣ ಬದಲು ಟೆನ್ನಿಸ್ ಕೃಷ್ಣ
ದೊರೆ ಭಗವಾನ್ ನಿರ್ದೇಶದ 'ಜೀವನ ಚೈತ್ರ' ಅಣ್ಣಾವ್ರ ಎವರ್ಗ್ರೀನ್ ಸಿನಿಮಾಗಳಲ್ಲಿ ಒಂದು. ಈ ಚಿತ್ರದಲ್ಲೇ ಜಗ್ಗೇಶ್ ಪುಟ್ಟ ಪಾತ್ರದಲ್ಲಿ ನಟಿಸಬೇಕಿತ್ತು. 1992ರಲ್ಲಿ ಈ ಸಿನಿಮಾ ನಿರ್ಮಾಣವಾಗಿತ್ತು. ಅದೇ ವರ್ಷ ಜಗ್ಗಣ್ಣ ಹೀರೊ ಆಗಿ ತರ್ಲೆ ನನ್ ಮಗ ಚಿತ್ರದಲ್ಲಿ ನಟಿಸುತ್ತಿದ್ದರು. ಹಾಗಾಗಿಯೇ ನಿರ್ದೇಶಕ ಭಗವಾನ್, ಕಳ್ಳ ಸೇವಕನ ಪಾತ್ರದಿಂದ ಜಗ್ಗೇಶ್ ಇಮೇಜಿಗೆ ಧಕ್ಕೆ ಬರುತ್ತದೆ ಎಂದು ಹೇಳಿದ್ದರು. ನಂತರ ಜಗ್ಗೇಶ್ ಹೀರೊ ಆಗಿ ಗೆದ್ದರು. ಆ ನಂತರ ಅಣ್ಣಾವ್ರು 3 ಸಿನಿಮಾಗಳಲ್ಲಿ ಮಾತ್ರ ನಟಿಸಿದರು. ಹಾಗಾಗಿ ಜಗ್ಗೇಶ್ಗೆ ತಮ್ಮ ಆರಾಧ್ಯ ದೈವನ ಜೊತೆ ತೆರೆ ಹಂಚಿಕೊಳ್ಳುವ ಭಾಗ್ಯ ಸಿಗಲಿಲ್ಲ.

ದೊಡ್ಮನೆ ಅಂದ್ರೆ ಅಭಿಮಾನ
ನಟ ಜಗ್ಗೇಶ್ ಅವರಿಗೆ ಮೊದಲಿನಿಂದಲೂ ಡಾ. ರಾಜ್ಕುಮಾರ್ ಕುಟುಂಬ ಅಂದರೆ ಅಭಿಮಾನ. ಎಷ್ಟರಮಟ್ಟಿಗೆ ಅಂದ್ರೆ ತಮ್ಮ ಮಕ್ಕಳ ಹೆಸರಿನಲ್ಲಿ 'ರಾಜ್' ಎಂದು ಸೇರಿಸಿದ್ದಾರೆ. ಇನ್ನು ಅಣ್ಣಾವ್ರು ಕೂಡ ಜಗ್ಗೇಶ್ ಅವರ ನಟನೆ, ಮಾತುಗಳಿಗೆ ಮರುಳಾಗಿದ್ದರು. ಜಗ್ಗೇಶ್ ಅವರು ನಗುತ್ತಾ ನಗಿಸುತ್ತಾ ಮಾತನಾಡುವುದು ಅಂದ್ರೆ ಬಹಳ ಅಚ್ಚುಮೆಚ್ಚು. ಮೊದಲ ಬಾರಿಗೆ ಪುನೀತ್ ರಾಜ್ಕುಮಾರ್ ಅವರನ್ನು ಜಗ್ಗೇಶ್ ಭೇಟಿ ಮಾಡಿದಾಗ ಅಲ್ಲೇ ಇದ್ದ ಅಣ್ಣಾವ್ರು "ಇವ್ರು ಕರ್ನಾಟಕದ ರಜನಿಕಾಂತ್" ಎಂದು ಪರಿಚಯಿಸಿಕೊಟ್ಟಿದ್ದರಂತೆ.

ದೊರೆ-ಭಗವಾನ್ ಜೋಡಿ ಮೋಡಿ
ಡಾ. ರಾಜ್ಕುಮಾರ್ ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಿಂದ ದೊರೆ ಹಾಗೂ ಭಗವಾನ್ ಡಾ. ರಾಜ್ಕುಮಾರ್ ಆಪ್ತ ಬಳಗದಲ್ಲಿ ಗುರ್ತಿಸಿಕೊಂಡಿದ್ದರು. ಅಣ್ಣಾವ್ರು, ವರದಪ್ಪ, ಚಿ. ಉದಯಶಂಕರ್, ದೊರೆ- ಭಗವಾನ್ ಆತ್ಮೈ ಸ್ನೇಹಿತರಾಗಿದ್ದರು. ಇನ್ನು ದೊರೆ ಹಾಗೂ ಭಗವಾನ್ ನಿರ್ದೇಶಕದ್ವಯರು ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಬಾಂಡ್ ಸಿನಿಮಾಗಳು, ಕಾದಂಬರಿ ಆಧರಿಸಿದ ಸಿನಿಮಾಗಳಿಂದ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದರು.


Click it and Unblock the Notifications











