'ಈ ದೃಶ್ಯ ಮಾಡಬೇಕಿದ್ರೆ ಹೃದಯ ಬಾಯಿಗೆ ಬಂದಿತ್ತು': ಜಗ್ಗೇಶ್ ಹಳೆಯ ನೆನಪು
ದೇಶದಾದ್ಯಂತ ನಾಗರ ಪಂಚಮಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸಲಾಗುವ ಮೊದಲ ಹಬ್ಬದ ಸಂಭ್ರಮ ಎಲ್ಲೆಲ್ಲೂ ಜೋರಾಗಿದೆ. ಈ ವಿಶೇಷ ದಿನಕ್ಕೆ ಕನ್ನಡದ ಹಿರಿಯ ನಟ ಜಗ್ಗೇಶ್ ಸಹ ಸಾಮಾಜಿಕ ಜಾಲತಾಣದಲ್ಲಿ ಶುಭಕೋರಿದ್ದಾರೆ.
''ಶ್ರೀಕೃಷ್ಣ ಕಾಳಿಂಗ ಸರ್ಪ ಕೊಂದ ದಿನವೇ ನಾಗಪಂಚಮಿ.. ಸರ್ಪ ಕೊಂದ ದೋಷಕ್ಕೆ ಮಕ್ಕಳಾಗದೆ, ಮದುವೆಯಾಗದೆ, ವ್ಯವಹಾರ ಸಂಕಷ್ಟ ಪ್ರಾಪ್ತ! ಕಲ್ಲನಾಗರಿಗೆ ಹಾಲು ಚಲ್ಲಿ ನಿಜ ನಾಗರ ಕೊಲ್ಲಬೇಡಿ ಎಂಬುದು ವೇದಸಾರ ಬಲ್ಲವರ ಹಿತನುಡಿ.. ನಲ್ಮೆಯ ನಾಡಿನ ಸಹೋದರ ಸಹೋದರಿಯರಿಗೆ ನಾಗಪಂಚಮಿ ಹಬ್ಬದ ಶುಭಾಶಯಗಳು...ಇಷ್ಟಾರ್ಥ ಸಿದ್ಧಿರಸ್ತು'' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದರು.
ನಾಗರಪಂಚಮಿ ವಿಶೇಷವಾಗಿ ಜಗ್ಗೇಶ್ ಅವರ ಬೇಡ ಕೃಷ್ಣ ರಂಗಿನಾಟ ಚಿತ್ರದ ದೃಶ್ಯವೊಂದು ವೈರಲ್ ಆಗಿದ್ದು, ಸ್ವತಃ ನವರಸ ನಾಯಕ ಈ ದೃಶ್ಯದ ಅನುಭವ ಹೇಳಿಕೊಂಡಿದ್ದಾರೆ. 'ಬೇಡ ಕೃಷ್ಣ ರಂಗಿನಾಟ' ಚಿತ್ರದ ದೃಶ್ಯವೊಂದರಲ್ಲಿ ನಟ ಜಗ್ಗೇಶ್ ತಮ್ಮ ಪತ್ನಿ ಜೊತೆ ನಾಗರಪಂಚಮಿ ಆಚರಿಸಲು ದೇವಸ್ಥಾನಕ್ಕೆ ಹೋಗಿರುತ್ತಾರೆ. ಈ ವೇಳೆ ಜಗ್ಗೇಶ್ ಅವರ ಹೆಗಲಿಗೆ ನಾಗರಹಾವು ಸುತ್ತಿಕೊಳ್ಳುತ್ತದೆ. ಇದನ್ನು ನೋಡಿದ ಜನರು, ಸಾಕ್ಷತ್ ಪರಮೇಶ್ವರನ ಪ್ರತಿರೂಪ ಎಂದು ಜಗ್ಗೇಶ್ ಅವರಿಗೆ ಪೂಜೆ ಮಾಡಲು ಶುರು ಮಾಡ್ತಾರೆ. ಬಹಳ ಅದ್ಭುತವಾಗಿ ಮೂಡಿ ಬಂದಿದ್ದ ಈ ದೃಶ್ಯ ನೋಡುಗರಿಗೆ ಸಖತ್ ಮಜಾ ಕೊಟ್ಟಿತ್ತು.

ಈ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಸೀನ್ ಮಾಡಬೇಕಾದರೆ ಹೃದಯ ಬಾಯಿಗೆ ಬಂದಿತ್ತು ಎಂದು ಜಗ್ಗೇಶ್ ಹಳೆಯ ನೆನಪು ಮೆಲುಕು ಹಾಕಿದ್ದಾರೆ. ''ಅದ್ಭುತ ದೃಶ್ಯ. ಆದರೆ, ಅಂದು ಹೃದಯ ಬಾಯಿಗೆ ಬಂದಿತ್ತು. ಕಾರಣ ಆ ಹಾವು ಹಿಡಿದು ಮೂರು ದಿನ ಆಗಿತ್ತು ಅಷ್ಟೆ..ಆಡಿರುವುದು ಸಂಭಾಷಣೆ ಅಲ್ಲ ಬಾಯಿಗೆ ಬಂದಂತೆ ಭಯಕ್ಕೆ ನಿರ್ದೇಶಕನ ಬೈದದ್ದು ನಂತರ ಡಬ್ಬಿಂಗ್ ನಲ್ಲಿ ಈ ಸಂಭಾಷಣೆ ಹೇಳಿದ್ದು! ಪಾಪ ಈ ಚಿತ್ರದ ನಿರ್ದೇಶಕ ನಮ್ಮ ಗುರುಗಳು ರಾಜಕಿಶೋರ್.. ಸತ್ತು 17ವರ್ಷ ಆಯಿತು. ಅಮರ ಹಳೆ ನೆನಪು'' ಎಂದು ಟ್ವೀಟ್ ಮಾಡಿದ್ದಾರೆ.
ರಾಜ್ ಕಿಶೋರ್ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಜಗ್ಗೇಶ್, ಪಾಯಲ್ ಮಲ್ಹೋತ್ರಾ, ಸಿಂಧುಜಾ, ಶ್ರೀನಾಥ್, ಸುಂದರ್ ರಾಜ್, ಕಿಲ್ಲರ್ ವೆಂಕಟೇಶ್ ಸೇರಿದಂತೆ ಅನೇಕರು ನಟಿಸಿದ್ದರು. 1994ರಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು.
''ಅಣ್ಣಾ ನಿಮಗೆ ತಿಳಿಯದ್ದು ಏನಿದೆ ಸ್ವಲ್ಪ ನನಗೆ ಹೇಳಿ.. ನಿಮಗೂ ಸಹ ನಾಗರಪಂಚಮಿ ಹಬ್ಬದ ಶುಭಾಶಯಗಳು'' ಎಂದು ಅಭಿಮಾನಿಯೊಬ್ಬರು ಜಗ್ಗೇಶ್ ಅವರಲ್ಲಿ ವಿನಂತಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಗ್ಗೇಶ್, ''ಬ್ರಹ್ಮಾಂಡ ತಿಳಿಯುವ ಅಂಶ ನಮ್ಮ ಸನಾತನ ಧರ್ಮ ಉಲ್ಲೇಖಿಸಿದೆ ಗ್ರಂಥಗಳಲ್ಲಿ. ನಮ್ಮ ತಲೆಮಾರು ಅದನ್ನ ಪಕ್ಕಸರಿಸಿ ಮೊಬೈಲ್ ಫೇಕ್ ಸುದ್ಧಿ ಅರಿತು ಸಂಭ್ರಮಿಸಿ ಅದೆ ಸತ್ಯವೆಂದು ಸತ್ಯಕ್ಕೆ ಪರದೆ ಹಿಡಿದು ಅಸತ್ಯ ನಂಬಿ ಬದುಕುತ್ತಿದ್ದೇವೆ. ಓದುವ ಹವ್ಯಾಸ ರೂಡಿಸಿಕೊಳ್ಳಿ ಅದರ ಆನಂದವೆ ಬೇರೆ..ಧನ್ಯವಾದ'' ಎಂದು ಸಲಹೆ ಕೊಟ್ಟರು.
ನಾಗರಪಂಚಮಿ ಹಬ್ಬದ ವಿಶೇಷವಾಗಿ ಚಿತ್ರರಂಗದಿಂದ ಹಲವು ತಾರೆಯರು ಶುಭಕೋರಿದ್ದಾರೆ.
- ''ಕರುಣಾನಿಧಿ ನಾಗ ನಿಮ್ಮ ಕನಸುಗಳನ್ನೆಲ್ಲಾ ನನಸು ಮಾಡಲಿ. ಕಷ್ಟಗಳನ್ನು ದೂರ ಮಾಡಲಿ. ನಾಗರ ಪಂಚಮಿ ಹಬ್ಬದ ಶುಭಾಶಯಗಳು'' ಎಂದು ನಟ ಶರಣ್ ಟ್ವೀಟ್ ಮಾಡಿದ್ದಾರೆ.
- ನಾಡಿನ ಸಮಸ್ತ ಜನರಿಗೆ "ನಾಗರಪಂಚಮಿ"ಹಬ್ಬದ ಶುಭಾಶಯಗಳು ಎಂದು ನಿರ್ದೇಶಕ ಆರ್ ಚಂದ್ರು ಟ್ವೀಟ್ ಮಾಡಿದ್ದಾರೆ.
- ನಾಡಿನ ಸಮಸ್ತರಿಗೂ ಅಣ್ಣ-ತಂಗಿಯರ ಬಾಂಧವ್ಯದ ಬೆಸುಗೆ ಸಂಭ್ರಮಿಸುವ ಶ್ರಾವಣ ಮಾಸದ ಮೊದಲ ಹಬ್ಬ, ನಾಗರ ಪಂಚಮಿಯ ಶುಭಾಶಯಗಳು ಎಂದು ನಟಿ ಹಾಗೂ ಮಂಡ್ಯ ಸಂಸದೆ ಸುಮಲತಾ ಟ್ವೀಟ್ ಮಾಡಿದ್ದಾರೆ.


Click it and Unblock the Notifications











