"ಒಂದು ದಿನ ಇದ್ದದ್ದು ಮತ್ತೊಂದು ದಿನ ಇರದು ಕೃಷ್ಣನ ಮಾತು": ನಟ ಸುನೀಲ್ ನೆನೆದು ಜಗ್ಗೇಶ್ ಟ್ವೀಟ್
ಕನ್ನಡ ಚಿತ್ರರಂಗದ ಸ್ಪುರದ್ರೂಪಿ ನಟ ಸುನೀಲ್ ರಸ್ತೆ ಅಪಘಾತದಲ್ಲಿ ನಿಧನರಾಗಿ 29 ವರ್ಷ ಕಳೆದಿದೆ. ಕೇವಲ ನಾಲ್ಕೈದು ವರ್ಷಗಳಲ್ಲಿ 25ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಮೋಡಿ ಮಾಡಿದ ನಟ ಸುನೀಲ್. 1994ರ ಜೂನ್ 24ರಂದು ಭೀಕರ ರಸ್ತೆ ಅಪಘಾತದಲ್ಲಿ ಸುನೀಲ್ ಮೃತಪಟ್ಟರು. ಮೊನ್ನೆ ಏಪ್ರಿಲ್ 1ರಂದು ಅವರ ಹುಟ್ಟುಹಬ್ಬ. ಈ ವೇಳೆ ಅಭಿಮಾನಿಗಳ ಟ್ವೀಟ್ ಒಂದಕ್ಕೆ ನಟ ಜಗ್ಗೇಶ್ ಪ್ರತಿಕ್ರಿಯಿಸಿ ಸುನೀಲ್ ಜೊತೆಗಿನ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ.
"ನಾವಿಬ್ಬರು ಈತ ಇದ್ದಷ್ಟು ದಿನ ಒಳ್ಳೆಯ ಸ್ನೇಹಿತರು. 'CBI ಶಿವ', 'ಸಿಂಧೂರ ತಿಲಕ' ಚಿತ್ರದಲ್ಲಿ ನಟಿಸಿದ್ದೆವು. ಕೆವಿ ರಾಜುರವರಿಗೆ ಸಂಕೇತ್ ಸ್ಟುಡಿಯೋದಲ್ಲಿ ಈತನ ಪರಿಚಯಿಸಿದ ದಿನವೇ ಸಾರಾ ಗೋವಿಂದ್ರವರ 'ಬೆಳ್ಳಿಕಾಲುಂಗುರ' ಚಿತ್ರದಲ್ಲಿ ಅವಕಾಶ ನೀಡಿದರು. ಬಹಳ ಸುಂದರವಾಗಿದ್ದ ನೋಡಲು. ಒಂದು ದಿನ ಇದ್ದದ್ದು ಮತ್ತೊಂದು ದಿನ ಇರದು ಕೃಷ್ಣನ ಮಾತು" ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಮೂಲತಃ ಉಡುಪಿಯವರಾಗಿದ್ದ ಸುನೀಲ್ 1989ರಲ್ಲಿ 'ಬಿಸಿ ರಕ್ತ' ಎನ್ನುವ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. 'ದ್ರಾಕ್ಷಾಯಿಣಿ', 'ಬೆಳ್ಳಿ ಕಾಲುಂಗುರ', 'ಮೆಚ್ಚಿದ ಮದುಮಗ', 'ಶೃತಿ', 'ಶಾಂಭವಿ', 'ನಗರದಲ್ಲಿ ನಾಯಕರು', 'ಮಾಲಾಶ್ರೀ ಮಾಮಾಶ್ರೀ', 'ಸಿಂಧೂರ ತಿಲಕ', 'ಮರಣ ಮೃದಂಗ', 'ಕಲಿಯುಗ ಸೀತೆ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಸುನೀಲ್ ನಟಿಸಿದ್ದರು. 'ಪಂಜರದ ಗಿಳಿ' ಸುನೀಲ್ ನಟನೆಯ ಕೊನೆಯ ಸಿನಿಮಾ.
ಸುನೀಲ್ ಹಾಗೂ ಮಾಲಾಶ್ರೀ ಜೋಡಿ ಸೂಪರ್ ಹಿಟ್ ಆಗಿತ್ತು. ಅಂದು ರಸ್ತೆ ಅಪಘಾತದಲ್ಲಿ ಸುನೀಲ್ ನಿಧನರಾದಾಗ ಮಾಲಾಶ್ರೀ ಹಾಗೂ ಸುನೀಲ್ ಸಹೋದರ ಸಚಿನ್ ಕೂಡ ಅದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರ ಕಾರಿಗೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿತ್ತು. ಭೀಕರ ಅಪಘಾತದಲ್ಲಿ ಕಾರಿನ ಚಾಲಕ ಸ್ಥಳದಲ್ಲೇ ಮೃತಪಟ್ಟರೆ ನಟ ಸುನೀಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಮಾಲಾಶ್ರೀ ಹಾಗೂ ಸಚಿನ್ ಗಂಭೀರ ಪೆಟ್ಟಾಗಿ ಬದುಕುಳಿದಿದ್ದರು. ಚಿತ್ರದುರ್ಗದಿಂದ 13 ಕಿ. ಮೀ ದೂರದ ಮಾದನಾಯಕನ ಹಳ್ಳಿಯಲ್ಲಿ ಈ ಅಪಘಾತ ನಡೆದಿತ್ತು.
ಎರಡು ವರ್ಷಗಳ ಹಿಂದೆ ನಿರ್ದೇಶಕ ರಘುರಾಮ್ ಯೂಟ್ಯೂಬ್ ಸಂದರ್ಶನದಲ್ಲಿ ಸುನೀಲ್ ಸಹೋದರ ಸಚಿನ್ ಮಾತನಾಡಿದ್ದರು. ಅಂದು ಅಪಘಾತವಾದ ದಿನ ಏನೆಲ್ಲಾ ನಡೀತು ಎನ್ನುವುದನ್ನು ಹಂಚಿಕೊಂಡಿದ್ದರು. ಸಿನಿಮಾಗಳ ಶೂಟಿಂಗ್ ಸಂದರ್ಭದಲ್ಲಿ ಸುನೀಲ್ ಜೊತೆ ಸದಾ ಸಹೋದರ ಸಚಿನ್ ಇರುತ್ತಿದ್ದರು. "ನಾವು ನಿರಂತರವಾಗಿ ಜರ್ನಿ ಮಾಡುತ್ತಿದ್ದೆವು. ಎರಡು ಕಾರ್ಯಕ್ರಮಗಳ ನಿಮಿತ್ತ ಸುನೀಲ್ ಅವರು ಹೈದರಾಬಾದ್ನಿಂದ ಕರ್ನಾಟಕಕ್ಕೆ ಬರುತ್ತಿದ್ದರು. ನಮ್ಮ ಡ್ರೈವರ್ ಬೆಂಗಳೂರಿನಿಂದ ಹೈದರಾಬಾದ್ಗೆ ಬಂದು ಸುನೀಲ್ ಅವರನನು ಕರೆದುಕೊಂಡು ಬಂದರು"

"ಒಂದು ಕಾರ್ಯಕ್ರಮ ಮುಗಿಸಿ ರಾತ್ರಿಯೇ ಇನ್ನೊಂದು ಜಾಗಕ್ಕೆ ಹೋದೆವು. ಚಾಲಕನಿಗೆ ಸರಿಯಾಗಿ ನಿದ್ರೆ ಆಗಿರಲಿಲ್ಲ ಅನಿಸುತ್ತದೆ. ಅದೇ ಸಮಸ್ಯೆ ಆಯ್ತು. ನಾವು ಕಾಂಟೆಸಾ ಕಾರಿನಲ್ಲಿ ಚಲಿಸುತ್ತಿದ್ದಾಗ, ನಿನಗೆ ಏನಾದರೂ ನಿದ್ರೆ ಬಂದರೆ ಹೇಳು ಎಂದು ಚಾಲಕನಿಗೆ ಸುನೀಲ್ ಹೇಳಿದರು. ಅಷ್ಟೇ ನನಗೆ ನೆನಪಿರುವುದು. ಆಮೇಲೆ ಎಚ್ಚರಗೊಂಡಾಗ ಆಸ್ಪತ್ರೆಯಲ್ಲಿ ಇದ್ದೆ" ಎಂದು ಆ ದಿನವನ್ನು ನೆನಪು ಮಾಡಿಕೊಂಡಿದ್ದರು.
"ನಾವು ಆ ದಿನ ನಾವು ಹೊರಡಬೇಕು ಎಂದುಕೊಂಡಿರಲಿಲ್ಲ. ಒಂದು ದಿನ ಅಲ್ಲೇ ಉಳಿದುಕೊಳ್ಳೋಣ ಎನಿಸುತ್ತಿತ್ತು. ಆದರೆ ಡ್ರೈವರ್ ಮಗಳ ಹುಟ್ಟುಹಬ್ಬ ಇದೆ ಎನ್ನುವ ಕಾರಣಕ್ಕೆ ನಾವು ಅದೇ ದಿನ ರಾತ್ರಿ ಹೊರೆಟೆವು. ಅಪಘಾತದ ಬಳಿಕ ನಮ್ಮನ್ನು ಬೆಂಗಳೂರಿಗೆ ಶಿಫ್ಟ್ ಮಾಡುವಾಗ ಸುನೀಲ್ ನಿಧನರಾದರು. ನನಗೆ ಎಷ್ಟೋ ದಿನಗಳ ನಂತರ ಪ್ರಜ್ಞೆ ಬಂತು" ಎಂದು ಸಚಿನ್ ಹೇಳಿದ್ದರು.


Click it and Unblock the Notifications











