ಸಂಚಾರಿ ವಿಜಯ್ ಸಾವು ವೈಯಕ್ತಿಕವಾಗಿ ಬಹಳ ಕಾಡಿದೆ- ಜಗ್ಗೇಶ್
''ಸಂಚಾರಿ ವಿಜಯ್ ಸಾವು ನನಗೆ ವೈಯುಕ್ತಿಕವಾಗಿ ಬಹಳ ಕಾಡಿತು. ಈ ಸಾವು ನನ್ನ ಹುಟ್ಟು-ಸಾವು ಮೂಲದ ಅನ್ವೇಷಣೆಗೆ ಕೊಂಡೋಗಿತ್ತು'' ಎಂದು ಹಿರಿಯ ನಟ ಜಗ್ಗೇಶ್ ಹೇಳಿದ್ದಾರೆ.
ದಿವಂಗತ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಹುಟ್ಟುಹಬ್ಬದ ಪ್ರಯುಕ್ತ (ಜುಲೈ 17) ರಂದು 'ಅನಂತವಾಗಿರು' ಎಂಬ ಪುಸ್ತಕ ಬಿಡುಗಡೆಯಾಗಿದೆ. ಈ ವಿಚಾರ ಗಮನಿಸಿದ ಜಗ್ಗೇಶ್ ಟ್ವಿಟ್ಟರ್ ಮೂಲಕ ಸಂಚಾರಿ ವಿಜಯ್ ಅವರನ್ನು ಸ್ಮರಿಸಿದ್ದಾರೆ.
''ಈ ಹುಡುಗ (ಸಂಚಾರಿ ವಿಜಯ್) ಹಾಗು ನನ್ನ ಮ್ಯಾನೇಜರ್ ಮಗನ ಸಾವು ನನಗೆ ವೈಯುಕ್ತಿಕವಾಗಿ ಬಹಳ ಕಾಡಿತು. ಇವರ ಸಾವು ನನ್ನ ಹುಟ್ಟು-ಸಾವು ಮೂಲದ ಅನ್ವೇಷಣೆಗೆ ಕೊಂಡೋಗಿ, ನನಗೆ ಅರಿಯದಂತೆ ಬ್ರಹ್ಮಸೂತ್ರ ಅಧ್ಯಾಯನಕ್ಕೆ ಕೂತು ಬಿಟ್ಟೆ. ವಿಸ್ಮಯ ಸೃಷ್ಟಿ ಮೂಲ ಅರಿವು ಆಸೆಯಂಬ ಮಾಯೆ ಕಮರಿ ಸರ್ವ ಆತ್ಮ ಪ್ರೀತಿಸಿ ಬದುಕುವ ನಿರ್ಣಯಕ್ಕೆ ನಿಂತಿದೆ ಮನ. ಜಡ ಶರೀರಕ್ಕೆ ಪ್ರೀತಿಯೇ ದೇವರ ಪೂಜೆ'' ಎಂದು ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್ನಲ್ಲಿ ''ಕಲಾವಠಾರ ಪರವಾಗಿ ಹೃದಯಪೂರ್ವಕ ಧನ್ಯವಾದ. ಕೆಲದಿನ ಕೆಲಚಿತ್ರಕ್ಕೆ ಮಾತ್ರ ಕಲಾವಿದನ ಕೃಷಿ ಕಣ್ಮರೆಯಾಗದೆ ಇಂಥ ಅದ್ಭುತ ಕಾರ್ಯದಿಂದ ಕಲಾವಿದ ಜನರಮನದಲ್ಲಿ ಉಳಿಯಲಿ. ನೂರಾರು ಕನಸುಗಳ ತೆರೆಯಮೇಲೆ ಅನಾವರಣ ಮಾಡಬೇಕಿದ್ದ ಆತ್ಮ. ಆಕಸ್ಮಿಕ ನಿರ್ಗಮನ. ಇದರಿಂದ ಪೂರ್ಣವಾಗಿ ಕಲಾವಿದನ ಆತ್ಮ ಸಂತೃಪ್ತಿ ಹೊಂದಲಿ. ಕಲಾಭಿಮಾನಿ ಇರುವತನಕ ಕಲಾವಿದನಿಗೆ ಸಾವಿಲ್ಲಾ'' ಎಂದು ಅನಂತವಾಗಿರುವ ಪುಸ್ತಕ ಹೊರತರುತ್ತಿರುವುದಕ್ಕೆ ಧನ್ಯವಾದ ಅರ್ಪಿಸಿದ್ದರು.
ಅಪಘಾತದಲ್ಲಿ ವಿಜಯ್ ನಿಧನ
ಜೂನ್ ತಿಂಗಳಲ್ಲಿ ಸ್ನೇಹಿತನ ಜೊತೆ ಬೈಕ್ನಲ್ಲಿ ತೆರಳುತ್ತಿರುವ ವೇಳೆ ನಿಯಂತ್ರಣ ತಪ್ಪಿ ಸಂಭವಿಸಿದ ಅಪಘಾತದಲ್ಲಿ ಸಂಚಾರಿ ವಿಜಯ್ ತಮ್ಮ ಪ್ರಾಣ ಕಳೆದುಕೊಳ್ಳಬೇಕಾಯಿತು. ಸಾವಿನ ಬಳಿಕಯೂ ತಮ್ಮ ದೇಹದ ಅಂಗಾಂಗಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದಿದ್ದರು.

ವಿಜಯ್ ಸಿನಿಮಾಗಳು
2011ರಲ್ಲಿ ತೆರೆಕಂಡ 'ರಂಗಪ್ಪ ಹೊಗ್ಬಿಟ್ನಾ' ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಬಂದರು. 'ನಾನು ಅವನಲ್ಲ ಅವಳು' ಚಿತ್ರದ ಅಭಿನಯಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗಳಿಸಿದ್ದರು.
ನಂತರ ದಾಸವಾಳ, ರಾಮ ರಾಮ ರಘು ರಾಮ, ಹರಿವು, ಒಗ್ಗರಣೆ, ಕಿಲ್ಲಿಂಗ್ ವೀರಪ್ಪನ್, ಸಿನಿಮಾ ಮೈ ಡಾರ್ಲಿಂಗ್, ಸಿಪಾಯಿ, ರಿಕ್ತ, ಅಲ್ಲಮ, ಮಾರಿಕೊಂಡವರು, ನನ್ ಮಗಳೇ ಹೀರೋಯಿನ್, ಅವ್ಯಕ್ತ, ವರ್ತಮಾನ, ಕೃಷ್ಣ ತುಳಸಿ, ಪಾದರಸ, ನಾತಿಚರಾಮಿ, ಆಡುವ ಗೊಂಬೆ, ಜಂಟಲ್ಮ್ಯಾನ್, ಆಕ್ಟ್ 1978 ಅಂತಹ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಬಿಡುಗಡೆಯಾಗಬೇಕಿರುವ ಹಲವು ಸಿನಿಮಾಗಳಿವೆ.


Click it and Unblock the Notifications











