ಬಕೆಟ್ ಹಿಡಿಯೋನು ಎಂದವರಿಗೆ ನಟ ಜಗ್ಗೇಶ್ ಕೊಟ್ಟ ಖಡಕ್ ಉತ್ತರವಿದು
ಸ್ಯಾಂಡಲ್ ವುಡ್ ನ ಹಿರಿಯ ನಟ ಜಗ್ಗೇಶ್ ಪ್ಯಾನ್ ಇಂಡಿಯಾ ಸಿನಿಮಾದ ಬಗ್ಗೆ ಆಡಿದ ಮಾತುಗಳು ಇದೀಗ ವಿವಾದದ ಕಿಡಿ ಹೊತ್ತಿಸಿದೆ. ಚಿತ್ರರಂಗದಲ್ಲಿ 40 ವರ್ಷ ಪೂರೈಸಿರುವ ಜಗ್ಗೇಶ್ ಈ ಸಲುವಾಗಿ ಇತ್ತೀಚಿಗೆ ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. ಈ ಸಮಯದಲ್ಲಿ ಮಾತನಾಡಿದ್ದ ಜಗ್ಗೇಶ್, ಪ್ಯಾನ್ ಇಂಡಿಯಾ ಸಂಸ್ಕೃತಿ ಕನ್ನಡ ಚಿತ್ರರಂಗಕ್ಕೆ ಅಪಾಯವಾಗುತ್ತಿದೆ ಎಂದು ಹೇಳಿದ್ದರು.
Recommended Video
ಜಗ್ಗೇಶ್ ಅವರಿಗೆ ಈ ಮಾತಿಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾಗುತ್ತಿದೆ. ಅದರಲ್ಲೂ ಸುದೀಪ್ ಮತ್ತು ಯಶ್ ಅಭಿಮಾನಿಗಳು ಜಗ್ಗೇಶ್ ವಿರುದ್ಧ ಮುಗಿಬಿದ್ದಿದ್ದಾರೆ. ಜಗ್ಗೇಶ್ ಕೆಲವು ಹೀರೋಗಳಿಗೆ ಬಕೆಟ್ ಹಿಡಿದು ಇನ್ನು ಕೆಲವು ಹೀರೋಗಳನ್ನು ತೆಗಳುತ್ತಾರೆ ಎಂದು ಅನೇಕರು ಕಿಡಿಕಾರುತ್ತಿದ್ದಾರೆ. ಜಗ್ಗೇಶ್ ಬಕೆಟ್ ಹಿಡಿಯುತ್ತಾರೆ ಎಂದು ಹೇಳಿರುವ ಮಾತಿಗೆ ನವರಸನಾಯಕ ಸಾಮಾಜಿಕ ಜಾಲತಾಣದಲ್ಲಿ ಖಡಕ್ ಉತ್ತರ ನೀಡಿದ್ದಾರೆ.

ಬಕೆಟ್ ಹಿಡಿತಾರೆ ಎಂದವರಿಗೆ ಜಗ್ಗೇಶ್ ಹೇಳಿದ್ದೇನು?
ಜಗ್ಗೇಶ್ ಬಕೆಟ್ ಹಿಡಿಯುತ್ತಾರೆ ಎಂದು ಹೇಳಿರುವ ಮಾತಿಗೆ ನವರಸನಾಯಕ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾಗಿ ಪೋಸ್ಟ್ ಹಾಕಿದ್ದಾರೆ. 'ಎಲ್ಲರ ತಂದೆ ತಾಯಿ ಬಕೆಟ್ ಹಿಡಿದೆ ಅವರ ಮಕ್ಕಳ ಬೆಳೆಸಿರುತ್ತಾರೆ. ಪಾಪ ಯವ್ವನದ ಪೊರೆ ಬಂದಾಗ ಬಿಟ್ಟಿ ಅನ್ನ ತಿನ್ನುವಾಗ ಬಕೆಟ್ ಅರಿವಾಗದು. ತನ್ನ ಸ್ವಂತ ಅನ್ನ ಗಿಟ್ಟಿಸುವಾಗ ಅವರ ಅಪ್ಪ ಅಮ್ಮ ಹಿಡಿದ ಬಕೆಟ್ ಇವರ ಕೈ ಸೇರುವುದು. ಆಗ ಬಕೆಟ್ ಬೆಲೆ ಅರಿವಾಗುವುದು. ಬೆಳಿಗ್ಗೆ ಎದ್ದಾಗ ಹಾಗಾದರೆ ಇವರು ಬಕೆಟ್ ಬಳಸದೆ ತೊಳೆಯಲು ಮಕ್ಕಳಂತೆ ಅಮ್ಮನ ಕರೆಯಬಹುದಾ' ಎಂದು ವ್ಯಂಗ್ಯವಾಡಿದ್ದಾರೆ.

40ವರ್ಷದಲ್ಲಿ 40 ಸಾವಿರ ಜನರ ಜಯಿಸಿ ಬಂದವ ನಾನು- ಜಗ್ಗೇಶ್
ಸಾಲು ಸಾಲು ಟ್ವೀಟ್ ಗಳನ್ನು ಮಾಡಿರುವ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ತನ್ನ ವಿರುದ್ಧ ವ್ಯಕ್ತವಾಗುತ್ತಿರುವ ಟೀಕೆಗೆಳಿಗೆ ಉತ್ತರ ನೀಡಿದ್ದಾರೆ. 'ಸಹೋದರ ಈ ಮಕ್ಕಳ ಬಗ್ಗೆ ಎಳ್ಳಷ್ಟು ನನಗೆ ಬೇಜಾರಿಲ್ಲ ಕಾರಣ ನನಗೆ 34/28 ವರ್ಷದ ಮಕ್ಕಳಿದ್ದಾರೆ. ನನಗೆ ಇಂದಿನ ಉದ್ವೇಗ ಹತಾಶೆ ಸಿಟ್ಟು ಜಿಗುಪ್ಸೆಯ ಮನೋಭಾವ ಸಮುದಾಯದ ಬಗ್ಗೆ ಅರಿವಿದೆ, ಅನುಕಂಪವಿದೆ. ಮಾತು ಅಕ್ಷರ ಅರಿವಾಗದೆ ತಮ್ಮ ಮೂಗಿನ ನೇರಕ್ಕೆ ಅರ್ಥಮಾಡಿಕೊಳ್ಳುವ ಆತುರಗುಣಕ್ಕೆ ಬೇಜಾರು. 40ವರ್ಷ ಇಂಥ 40 ಸಾವಿರ ಜನರ ಜಯಿಸಿ ಬಂದವ ನಾನು' ಎಂದು ಹೇಳಿದ್ದಾರೆ.

ನಮ್ಮನ್ನು ಹುಟ್ಟಿಸಿದ್ದು ಕನ್ನಡ ಕಲಿಸಿದ ತಾಯಿ, ಅನ್ಯರಲ್ಲ
'ನಮ್ಮನ್ನ ಹುಟ್ಟಿಸಿದ್ದು ಹಳ್ಳಿಯಲ್ಲಿ ಕೂಲಿ ಮಾಡಿ ಸಗಣಿ ತಟ್ಟಿ ಹಾಲು ಮಾರಿ ಮಮತೆಯ ರಕ್ತ ಬಸಿದು ಕನ್ನಡ ಕಲಿಸಿದ ತಂದೆ ತಾಯಿ ವಿನಹ ಅನ್ಯರಲ್ಲ. ಹಾಗಾಗಿ ನಮಗೆ ಸಿಂಹಾಸನದ ಮೇಲೆ ಕೂರಲು ಗೊತ್ತು, ಗೋಣಿಚೀಲ ಹಾಸಿ ಮಲಗಲು ಗೊತ್ತು. ಅದಕ್ಕೆ ಕನ್ನಡಿಗರು ನಮ್ಮನ್ನ ಹೃದಯದಲ್ಲಿ ಸಿಂಹಾಸನ ಹಾಕಿ ಕೂರಿಸಿದ್ದಾರೆ. ಅನ್ಯರ ಮೇಲೆ ಒಲವು ಇಲ್ಲಾ. ಬೇಕು ಇಲ್ಲಾ.' ಖಡಕ್ ಆಗಿ ಹೇಳಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಜಗ್ಗೇಶ್ ಮಾತು
'ಪ್ಯಾನ್ ಇಂಡಿಯಾ ಸಿನಿಮಾ ನಮ್ಮನ್ನು ಉದ್ದಾರ ಮಾಡಲ್ಲ. ಯಾರನ್ನೋ ಮೆಚ್ಚಿಸೋಕೆ ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತಿದ್ದಾರೆ' ಎಂದು ಜಗ್ಗೇಶ್ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಹೇಳಿಕೆ ನೀಡಿದ್ದರು. ಜಗ್ಗೇಶ್ ಅವರ ಈ ಹೇಳಿಕೆಗೆ ಕೆಲವರಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಜಗ್ಗೇಶ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


Click it and Unblock the Notifications











