ಪೊಲೀಸ್ ಅಧಿಕಾರಿಗಳಲ್ಲಿ ನಟ ಜಗ್ಗೇಶ್ ಮನವಿ: ಏನದು?
ಸ್ಯಾಂಡಲ್ವುಡ್ನ ಹಿರಿಯ ನಟ ಜಗ್ಗೇಶ್ ಕೊರೊನಾ ಸಂಕಷ್ಟದ ಸಮಯದಲ್ಲಿ ಸಾಕಷ್ಟು ಮಂದಿಗೆ ನೆರವಾಗಿದ್ದಾರೆ. ಆಕ್ಸಿಜನ್, ಬೆಡ್ ಸಿಗದೆ ಪರದಾಡುತ್ತಿರುವ ಜನರ ನೆರವಿಗೆ ಧಾವಿಸುತ್ತಿದ್ದಾರೆ. ತನ್ನ ಸ್ವಂತ ಸಹೋದರ ಕೋಮಲ್ ಕೊರೊನಾ ಸೋಂಕಿಗೆ ತುತ್ತಾದ ಸಮಯದಲ್ಲಿ ಸಹೋದರನನ್ನು ಉಳಿಸಿಕೊಳ್ಳಲು ಜಗ್ಗೇಶ್ ಪರದಾಡಿದ್ದಾರೆ.
Recommended Video
ಕೋಮಲ್ ಕೊರೊನಾ ಗೆದ್ದು ಬಂದ ಬಳಿಕ ಕಷ್ಟದ ದಿನಗಳ ಬಗ್ಗೆ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಪ್ರತಿದಿನ ಸಾಮಾಜಿಕ ಜಾಲತಾಣದ ಮೂಲಕ ಕೊರೊನಾ ಜಾಗೃತಿ ಮೂಡಿಸುತ್ತಿರುವ ನಟ ಜಗ್ಗೇಶ್ ಸದ್ಯ ಪೊಲೀಸ್ ಅಧಿಕಾರಿಗಳಲ್ಲಿ ಒಂದು ಮನವಿ ಮಾಡಿಕೊಂಡಿದ್ದಾರೆ. ಲಾಕ್ ಡೌನ್ ಆಗುತ್ತಿದ್ದಂತೆ ರಸ್ತೆಗಿಳಿಯುವ ಸಾರ್ವಜನಿಕರಿಗೆ ಹೊಡೆಯಬೇಡಿ ಎಂದು ವಿನಂತಿ ಮಾಡಿದ್ದಾರೆ.
ಯುವಕರಾದರೆ ಪರವಾಗಿಲ್ಲ ತಡೆದುಕೊಳ್ಳುತ್ತಾರೆ ಆದರೆ ಸಾಕಷ್ಟು ಮಂದಿ ವಯಸ್ಸಾದವರು, ಕಾಯಿಲೆಯಿಂದ ಬಳಲುವವರು ಇರುತ್ತಾರೆ ಅಂತವರಿಗೆ ತಡೆದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ದಯವಿಟ್ಟು ಹೊಡೆಯಬೇಡಿ ಎಂದು ಕೈ ಮುಗಿದು ಕೇಳಿಕೊಂಡಿದ್ದಾರೆ. ಈ ಬಗ್ಗೆ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

'ರಾಜ್ಯದ ಆರಕ್ಷಕ ಇಲಾಖೆಯ ಮುಖ್ಯಸ್ಥರಿಗೆ ವಿನಂತಿ. ಸರ್ಕಾರ ಹಾಗು ತಮ್ಮ ಆದೇಶ ಪಾಲಿಸದವರಿಗೆ ದಂಡ ಹಾಕಿ ವಾಹನ ಜಪ್ತಿಮಾಡಿ ತೊಂದರೆ ಇಲ್ಲಾ. ಆದರೆ ನಿರ್ದಯವಾಗಿ ಲಾಠಿಯಲ್ಲಿ ಹೊಡೆಯಬೇಡಿ. ಯುವಕರಾದರೆ ಪರವಾಗಿಲ್ಲಾ ತಡೆಯುತ್ತಾರೆ. ಆದರೆ ವಯಸ್ಸಾದವರು ಪಾಪ ಯಾವ ಕಾಯಿಲೆ ಇರುತ್ತದೆ ನಿಮಗೇನು ತಿಳಿದಿರುತ್ತದೆ. ಕೆಲ ಅಧಿಕಾರಿಗಳು ಒಂದು ಏಟುಕೊಟ್ಟು ಭಯಪಡಿಸುವ ಬದಲು ಪ್ರಾಣ ಹೋಗುವಂತೆ ಬಾರಿಸುತ್ತಾರೆ'
'ಈ ಹಾಳಾದ ಕೊರೊನಾ ಮನುಕುಲದ ಅನ್ನ ದುಡಿಮೆ ನೆಮ್ಮದಿಯ ಕಸಿದಿದೆ. ಮನುಷ್ಯರಾಗಿ ನಾವು ಮನುಷ್ಯತ್ವ ಪಾಲಿಸುವ. ಜನತೆಯಲ್ಲು ಮನವಿ ಈ ರೋಗ ಮನುಕುಲದ ಸಾವಿಗಾಗಿಯೇ ಬಂದಿದೆ. ದರೆಯೇ ಹತ್ತಿ ಉರಿಯುತ್ತಿದೆ ದಯಮಾಡಿ ಸ್ವಲ್ಪದಿನ ವೈದ್ಯಲೋಕದ ಮಾತಿನಂತೆ ಕೆಲತಿಂಗಳು ಎಚ್ಚರವಾಗಿ ಇದ್ದುಬಿಡಿ ದುಯವಿಟ್ಟು' ಎಂದು ಬರೆದುಕೊಂಡಿದ್ದಾರೆ.
ನಾಳೆಯಿಂದ (ಮೇ 10) ರಾಜ್ಯದಲ್ಲಿ ಕಠಿಣ ಕ್ರಮ ಜಾರಿಯಾಗಿದೆ. ಸುಖಾಸುಮ್ಮನೆ ರಸ್ತೆಗಿಳಿಯುವ ಜನರಿಗೆ ಪೊಲೀಸರು ಲಾಠಿ ರುಚಿ ತೋರಿಸಲು ಸಜ್ಜಾಗಿದ್ದಾರೆ. ಕಳೆದ ವರ್ಷದ ಲಾಕ್ ಡೌನ್ ಸಮಯದಲ್ಲಿ ಪೊಲೀಸರು ಅನೇಕರಿಗೆ ಲಾಠಿ ಏಟು ನೀಡಿದ್ದರು. ಪೊಲೀಸರ ಏಟಿಗೆ ಜನರು ಸುಸ್ತಾಗಿದ್ದರು. ಹಾಗಾಗಿ ಈ ಬಾರಿಯೂ ಅದು ಮರುಕಳಿಸ ಬಾರದು ಎಂದು ಜಗ್ಗೇಶ್ ಕೇಳಿಕೊಂಡಿದ್ದಾರೆ. ಜಗ್ಗೇಶ್ ಮಾತಿಗೆ ಪೊಲೀಸ್ ಇಲಾಖೆ ಬೆಲೆ ಕೊಡುತ್ತಾ ಕಾದು ನೋಡಬೇಕು.


Click it and Unblock the Notifications











