ಅಪ್ಪುಗೆ ತುಂಬಾ ಕ್ಲೋಸ್ ಆಗಿದ್ದ ಜಗ್ಗೇಶ್ 'ಪುನೀತ ಪರ್ವ'ಕ್ಕೆ ಏಕೆ ಬರಲಿಲ್ಲ? ಬಹಿರಂಗವಾಯಿತು ಕಾರಣ
ನಿನ್ನೆ ( ಅಕ್ಟೋಬರ್ 21 ) ಬೆಂಗಳೂರಿನ ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ನಡೆದ ಗಂಧದಗುಡಿ ಪ್ರಿ ರಿಲೀಸ್ ಕಾರ್ಯಕ್ರಮಕ್ಕೆ ದಕ್ಷಿಣ ಭಾರತ ಚಿತ್ರರಂಗದ ಹಲವಾರು ತಾರೆಯರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ವೇದಿಕೆಯನ್ನೇರಿ ಪುನೀತ್ ರಾಜ್ ಕುಮಾರ್ ಅವರ ಜತೆಗಿನ ತಮ್ಮ ಒಡನಾಟ ಮತ್ತು ಗಂಧದ ಗುಡಿ ಚಿತ್ರದ ಕುರಿತಾಗಿ ಮಾತನಾಡಿದರು. ಇನ್ನು ಈ ಕಾರ್ಯಕ್ರಮಕ್ಕೆ ಕಾರಣಾಂತರಗಳಿಂದ ಬರಲಾಗದ ಕಮಲ್ ಹಾಸನ್ ಹಾಗೂ ಅಮಿತಾಬ್ ಬಚ್ಚನ್ ರೀತಿಯ ದಿಗ್ಗಜ ನಟರು ವಿಡಿಯೋ ಮೂಲಕ ಅಪ್ಪು ಕುರಿತು ಮಾತನಾಡಿ ಗಂಧದ ಗುಡಿ ಚಿತ್ರಕ್ಕೆ ಶುಭ ಕೋರಿದರು.
ಹೀಗೆ ಚಂದನವನ ಶಾಶ್ವತವಾಗಿ ನೆನಪಿಟ್ಟುಕೊಳ್ಳುವಂತೆ ನಡೆದ ಈ ಬೃಹತ್ ಪುನೀತ ಪರ್ವ ಕಾರ್ಯಕ್ರಮಕ್ಕೆ ಪುನೀತ್ ರಾಜ್ ಕುಮಾರ್ ಅವರ ಹಲವಾರು ಆಪ್ತರು ಆಗಮಿಸಿದ್ದರು. ಆದರೆ ಕಾರ್ಯಕ್ರಮ ವೀಕ್ಷಿಸಿದ ಹಲವು ಜನರಲ್ಲಿ ಪ್ರಶ್ನೆ ಮೂಡಿಸಿದ್ದು ನಟ ಜಗ್ಗೇಶ್ ಅವರ ಅನುಪಸ್ಥಿತಿ.
ಹೌದು, ಪುನೀತ್ ರಾಜ್ ಕುಮಾರ್ ಮತ್ತು ಜಗ್ಗೇಶ್ ಬಹಳ ಆಪ್ತರು. ಕಾರ್ಯಕ್ರಮಗಳಲ್ಲಿ ಇಬ್ಬರೂ ಎದುರು ಬದುರಾದಾಗ ಒಬ್ಬರನ್ನೊಬ್ಬರು ಹೊಗಳಿ ಮಾತನಾಡಿದ್ದನ್ನು ನಾವೆಲ್ಲರೂ ಸಾಕಷ್ಟು ಬಾರಿ ಕಂಡಿದ್ದೇವೆ. ಹೀಗೆ ಅಪ್ಪು ಕುರಿತು ಅತ್ಯಂತ ಗೌರವ ಹೊಂದಿದ್ದ ಜಗ್ಗೇಶ್ ಯಾಕೆ ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ ಎಂಬ ಕಾರಣವನ್ನು ಸ್ವತಃ ತೆರೆದಿಟ್ಟಿದ್ದಾರೆ.

ಅಮೇರಿಕಾದಿಂದ ವಾಪಸ್ ಆಗಲು ಸಿಗಲಿಲ್ಲ ಟಿಕೆಟ್
ಪುನೀತ ಪರ್ವ ಕಾರ್ಯಕ್ರಮಕ್ಕೆ ಆಗಮಿಸದೇ ಇರಲು ಕಾರಣವೇನೆಂಬುದನ್ನು ಜಗ್ಗೇಶ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳುವುದರ ಮೂಲಕ ಬಿಚ್ಚಿಟ್ಟಿದ್ದಾರೆ. ಸದ್ಯ ಅಮೇರಿಕಾದಲ್ಲಿ ಬೀಡುಬಿಟ್ಟಿರುವ ಜಗ್ಗೇಶ್ ಪುನೀತ ಪರ್ವ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಪ್ರಯತ್ನಿಸಿದ್ದಾರೆ ಆದರೆ ವಾಪಸ್ ಆಗಲು ಟಿಕೆಟ್ ಲಭಿಸದ ಕಾರಣ ಬರಲಾಗಲಿಲ್ಲ ಎಂದು ಕಾರಣ ತಿಳಿಸಿದ್ದಾರೆ ಮತ್ತು ಇದರಿಂದಾಗಿ ತುಂಬಾ ದುಃಖವಾಯಿತು ಎಂದೂ ಸಹ ಜಗ್ಗೇಶ್ ಬರೆದುಕೊಂಡಿದ್ದಾರೆ.

ಹೃದಯದಲ್ಲಿ ಉಳಿದದ್ದು ಇಬ್ಬರೇ, ಅಪ್ಪು ಗುರುವಾದ
ಇನ್ನು ತಂದೆ ತಾಯಿ, ಹೆಂಡತಿ ಮಕ್ಕಳು, ಅಕ್ಕ, ತಮ್ಮಂದಿರು ಮತ್ತು ಇತ್ತೀಚಿಗಷ್ಟೆ ಮೊಮ್ಮಗ ಅರ್ಜುನನನ್ನು ಬಿಟ್ಟರೆ ನನ್ನ ಹೃದಯದಲ್ಲಿ ಸ್ಥಾನ ಪಡೆದಿರುವ ಇಬ್ಬರು ವ್ಯಕ್ತಿಗಳೆಂದರೆ ಅದು ಅಣ್ಣಾವ್ರು ಹಾಗೂ ಅಪ್ಪು ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ. ಅಣ್ಣಾವ್ರು ನಿಧನ ಹೊಂದಿದಾಗ ತಂದೆ ಕಳೆದುಕೊಂಡಂತೆ ಅತ್ತಿದ್ದೆ ಹಾಗೂ ಅಪ್ಪು ಹೋದಮೇಲಂತೂ ಆಶಾಭಾವನೆಯೇ ಕೊನೆಯಾಯಿತು, ಬದುಕೇ ನಶ್ವರವೆನಿಸಿತು, ಪುನೀತ್ ನನ್ನ ಬದುಕಿಗೆ ಗುರುವಾದ, ನನ್ನ ಕೋಪವೆಲ್ಲಾ ನಿರ್ನಾಮವಾಯಿತು ಎಂದು ಜಗ್ಗೇಶ್ ಉಲ್ಲೇಖಿಸಿದ್ದಾರೆ.

ಅಪ್ಪು ದೇವರಾದ
ಅಣ್ಣಾವ್ರು ನಟಿಸಿದ್ದ ಗಂಧದಗುಡಿ ಚಿತ್ರದ ಶೀರ್ಷಿಕೆ ಅಡಿಯಲ್ಲಿ ಅಪ್ಪು ಕೊನೆಯ ಚಿತ್ರ ಮೂಡಿಬಂದಿದೆ ಹಾಗೂ ಇದಕ್ಕೆ ಒಳ್ಳೆಯದಾಗಲಿ ಎಂದು ಜಗ್ಗೇಶ್ ಹರಸಿದ್ದಾರೆ. ಎಲ್ಲರೂ ಒಂದಲ್ಲ ಒಂದು ದಿನ ನಿರ್ಗಮಿಸಲೇಬೇಕು, ಈ ಪೈಕಿ ಕೆಲವರು ಮಾತ್ರ ನಿರ್ಗಮನದ ನಂತರವೂ ಉಳಿಯುತ್ತಾರೆ, ಆ ಕೆಲವರಲ್ಲಿ ಅಪ್ಪು ದೇವರಾದ, ಕೊನೆಯ ಉಸಿರು ಇರುವವರೆಗೂ ಅಪ್ಪು ನೆನಪು ಮನಸ್ಸಿನಲ್ಲಿರುತ್ತದೆ ಲವ್ ಯು ಅಪ್ಪು ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.


Click it and Unblock the Notifications











