ಸಂತ ಹೇಳಿದ ಭವಿಷ್ಯ ನಿಜವಾಯ್ತು: ಜಗ್ಗೇಶ್ ಹಳೆ ನೆನಪು
ಜಗ್ಗೇಶ್ ನಟ, ರಾಜಕಾರಣಿ ಜೊತೆಗೆ ಅಧ್ಯಾತ್ಮದ ಕಡೆ ಅತಿಯಾದ ಒಲವುಳ್ಳ ಅಧ್ಯಾತ್ಮಿಕ ವಿದ್ಯಾರ್ಥಿಯೂ ಹೌದು. ರಾಯರ ಪರಮ ಭಕ್ತರಾಗಿರುವ ಜಗ್ಗೇಶ್ ಆಗಾಗ್ಗೆ ರಾಯರ ಸನ್ನಿಧಿಗೆ ಭೇಟಿ ನೀಡಿ ಸೇವೆ ಸಲ್ಲಿಸುತ್ತಿರುತ್ತಾರೆ.
ಇದೀಗ ಬಹು ಸಮಯದ ಬಳಿಕ ಮತ್ತೆ ರಾಯರ ಸನ್ನಿಧಿಗೆ ಭೇಟಿ ನೀಡಿರುವ ನಟ ಜಗ್ಗೇಶ್, 30-40 ವರ್ಷಗಳ ಹಿಂದೆ ಮಂತ್ರಾಲಯಕ್ಕೆ ಬಂದಾಗ ತಾವು ಉಳಿದುಕೊಳ್ಳುತ್ತಿದ್ದ ಛತ್ರದ ಮುಂದೆ ನಿಂತು ಹಳೆಯ ನೆನಪುಗಳಿಗೆ ಜಾರಿದ್ದಾರೆ. ರಾಯರ ಕೃಪೆಯಿಂದ ತಮ್ಮ ಜೀವನದಲ್ಲಿ ಆದ ಪವಾಡಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ವೃತ್ತಿ ಜೀವನದ ಆರಂಭದಲ್ಲಿ ಅಂದುಕೊಂಡ ಯಾವುದೂ ಕೈಗೂಡದೇ ಇದ್ದ ಸಮಯದಲ್ಲಿ ಮಂತ್ರಾಲಯಕ್ಕೆ ಬಂದಾಗ ಜಗ್ಗೇಶ್ ಹುಬ್ಬಳ್ಳಿ ಛತ್ರದಲ್ಲಿ ಉಳಿದುಕೊಳ್ಳುತ್ತಿದ್ದರಂತೆ. ಈಗ ಅಲ್ಲಿಗೆ ಭೇಟಿ ನೀಡಿ ಛತ್ರದ ಮುಂದೆ ನಿಂತು ಫೋಟೊ ತೆಗೆಸಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಕೆಲವು ಹಳೆಯ ನೆನಪುಗಳನ್ನು ಸಹ ಹಂಚಿಕೊಂಡಿದ್ದಾರೆ.

''1980/81ರಲ್ಲಿ ಸಿನಿಮರಂಗದಲ್ಲಿ ನನಗೆ ಅವಕಾಶ ಸಿಗುತ್ತಿರಲಿಲ್ಲಾ...ಒಂದುದಿನ ಛಾಯಾಗ್ರಹಕ ಹಾಗು ಗುರುಗಳು ಸುಂದರನಾಥ ಸುವರ್ಣ ಅಂಬರೀಶರವರ ಚಿತ್ರ 'ಗಜೇಂದ್ರ' ಅವಕಾಶಕ್ಕಾಗಿ ಸಹನಿರ್ದೇಶಕ ಡಿ.ಬಾಬು ರವರಿಗೆ ಕೇಳಿಕೊಂಡರು ಆದರೆ ನನ್ನ ದೌರ್ಭಾಗ್ಯ ಅವಕಾಶ ಸಿಗಲಿಲ್ಲಾ..ನೊಂದು ನಡೆದು ಬರುವಾಗ ಕೆಂಚಾಂಭ ಲಾಡ್ಜ್ ಬಳಿ ಒಬ್ಬ ಜೋತಿಷಿ ಕಂಡು ಕೇಳಿದಾಗ ನಿನಗೆ ಈ ಪ್ರಪಂಚದಲ್ಲಿ ಸಹಾಯಮಾಡೋದು ಒಬ್ಬರೆ ಅದು ರಾಯರು ಎಂದರು.'' ಎಂದ ನೆನಪು ಮಾಡಿಕೊಂಡಿದ್ದಾರೆ ಜಗ್ಗೇಶ್.
''.ಮನೆಗೆ ಬಂದಾಗ ಅಮ್ಮ ತುಳಸಿಕಟ್ಟೆ ಬಳಿ ಕೂತಿದ್ದವಳು ನನ್ನ ಕಂಡು ಲೇ ಮಗನೆ ನಿನಗೆ ಒಳ್ಳೆಯದು ಆಗಬೇಕು ಎಂದರೆ ರಾಯರ ಬಳಿ ಹೋಗು ಎಂದು ತನ್ನ ಎಲೆಅಡಿಕೆ ಕಡ್ಡಿಪುಡಿಗಾಗಿ ಕೂಡಿಟ್ಟ ಹಣ 500ರೂ ನನಗೆ ಕೊಟ್ಟಳು ಆಶ್ಚರ್ಯವಾಯಿತು.
ಮರುಚಿಂತಿಸದೆ ಮಂತ್ರಾಲಯಕ್ಕೆ ಹೊರಟು ಇರಲು ಈ ಜಾಗ (ಹುಬ್ಬಳ್ಳಿ ಛತ್ರ) ಆಯ್ಕೆ ಮಾಡಿಕೊಂಡೆ. ದಿನಕ್ಕೆ 25ಪೈಸೆ 3ತಿಂಗಳು ಇಲ್ಲಿ ಉಳಿದು ರಾಯರ ಸೇವೆ ಮಾಡಿದೆ'' ಎಂದು ಬರೆದುಕೊಂಡಿದ್ದಾರೆ ಜಗ್ಗೇಶ್.
''ಸೇವೆ ಮಾಡಿ ಮನೆಗೆ ಹೋದಾಗ ಆಶ್ಚರ್ಯವೇನೋ ಎಂಬಂತೆ ಕೆವಿ ಜಯರಾಮ್ ಅವರ 'ಶ್ವೇತಗುಲಾಬಿ' ಸಿನಿಮಾದಲ್ಲಿ ಖಳನಾಯಕನ ಪಾತ್ರ ದೊರಕಿತು. ಅಲ್ಲಿಂದ ನನ್ನ ಬದುಕಲ್ಲಿ ನಂಬಲಾಗದ ರಾಯರ ಪವಾಡ ನಡೆದು ಸಾಮಾನ್ಯ ಹಳ್ಳಿಹುಡುಗ ನವರಸನಾಯಕನಾದೆ'' ಎಂದು ರಾಯರ ಪವಾಡಕ್ಕೆ ಶರಣೆಂದಿದ್ದಾರೆ.
''ಮುಂದೆ ನಾನು ಪರಿಮಳನ ಮದುವೆಯಾಗಿ ಅವಳನ್ನು ಕರೆತಂದು ಇಲ್ಲಿ 1ತಿಂಗಳು ವಾಸಮಾಡಿದೆ. ಇದೆ ಜಾಗದಲ್ಲಿ ಒಬ್ಬ ಸಂತ ಸಿಕ್ಕು ಪರಿಮಳನಿಗೆ ನಿನ್ನ ಗಂಡ ಮುಂದೆ ಬಹಳ ದೊಡ್ಡ ಸಾಧಕನಾಗುತ್ತಾನೆ ಎಂದಾಗ ಜೋರಾಗಿ ನಕ್ಕುಬಿಟ್ಟಳು ಅಂದು...ಇಂದು ಅದ ನೆನದರೆ ಹೇಗಪ್ಪ ಇದೆಲ್ಲಾ ಎನ್ನುತ್ತಾಳೆ'' ಎಂದು ನೆನಪಿಸಿಕೊಂಡಿದ್ದಾರೆ.
''ರಾಯರ ಕಾರುಣ್ಯ ಹಾಗೆ ರಾಯರನ್ನು ಅನನ್ಯವಾಗಿ ನಂಬಿ ಕಾಯವಾಚಮನ ಶುದ್ಧಾತ್ಮನಾಗಿ ಉಳಿದರೆ ಬೇಡಿದ್ದು ನೀಡೋ ಕಾಮಧೇನು. ಕೊರೋನ ಸಂಕಷ್ಟ ಬಂದಾಗಿನಿಂದ ಸಂಕಲ್ಪ ಸೇವೆ ಮಾಡಲು ಆಗಲಿಲ್ಲಾ. 2.5ವರ್ಷದ ಮೇಲೆ ಮತ್ತೆ ಬಂದು ಮಂತ್ರಾಲಯ ನೆಲದಲ್ಲಿ ರಾಯರ ಸೇವೆ ಮಾಡುತ್ತಿರುವೆ. ನಿಮ್ಮ ಜೊತೆ ಹಂಚಿಕೊಳ್ಳ ಬೇಕು ಎಂದು ಮನಸಾಯಿತು ಲಗತ್ತಿಸಿಬಿಟ್ಟೆ ನನ್ನ ಭಾವನೆ...ಸಹಸ್ರದೋಷವಿರಲಿ ಬದುಕಲ್ಲಿ ಕಾಯವಾಚಮನ ರಾಯರ ನಂಬಿ ನಿಮ್ಮ ಬೆನ್ನಹಿಂದೆ ನಿಲ್ಲುವರು. ಬರಲು ಆಗದಿದ್ದರೆ ಮಂತ್ರಾಲಯಕ್ಕೆ ಚಿಂತೆಯಿಲ್ಲಾ ನಿಮ್ಮ ಬಡಾವಣೆಯ ರಾಯರಮಠವೆ ಸಾಕು ನಿಮ್ಮ ಕೂಗಿಗೆ ರಾಯರು ಕಣ್ಣುಬಿಡುತ್ತಾರೆ'' ಎಂದಿದ್ದಾರೆ ಜಗ್ಗೇಶ್.


Click it and Unblock the Notifications











