ವಿನೋದ್ ರಾಜ್ ರನ್ನು ಕಡೆಗಣಿಸಿದವರ ವಿರುದ್ಧ ಜಗ್ಗೇಶ್ ಬೇಸರ
ಚಿತ್ರರಂಗದಲ್ಲಿ ನಡೆಯುವ ಬಹುತೇಕ ಎಲ್ಲ ಬೆಳೆವಣಿಗೆಗಳ ಬಗ್ಗೆ ನಟ ಜಗ್ಗೇಶ್ ಟ್ವೀಟ್ ಮಾಡುತ್ತಾರೆ. ಅನೇಕ ಘಟನೆಗಳ ಕುರಿತು ಧ್ವನಿ ಎತ್ತುತ್ತಾರೆ. ಇದೀಗ ನಟ ವಿನೋದ್ ರಾಜ್ ಬಗ್ಗೆ ಟ್ವೀಟ್ ಮಾಡುವ ಮೂಲಕ ಜಗ್ಗೇಶ್ ತಮ್ಮ ಬೇಸರವನ್ನು ವ್ಯಕ್ತ ಪಡಿಸಿದ್ದಾರೆ.
ನಟ ವಿನೋದ್ ರಾಜ್ ಒಳ್ಳೆಯ ಡ್ಯಾನ್ಸರ್ ಆದರೆ, ಅವರನ್ನು ಕಡೆಗಣಿಸಲಾಗುತ್ತಿದೆ ಎನ್ನುವುದು ಜಗ್ಗೇಶ್ ಅವರ ಬೇಸರವಾಗಿದೆ. ವಿನೋದ್ ರಾಜ್ ರನ್ನು ಬಹಳ ಹಿಂದಿನಿಂದ ನೋಡಿಕೊಂಡು ಬಂದಿರುವ ಜಗ್ಗೇಶ್ ಅವರ ಪ್ರತಿಭೆ ಬಗ್ಗೆ ಮಾತನಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವಿನೋದ್ ರಾಜ್ ಬಗ್ಗೆ ಆದ ಟ್ರೋಲ್ ಗೆ ಜಗ್ಗೇಶ್ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ...

ಡ್ಯಾನ್ಸ್ ಶೋ ಗಳಲ್ಲಿ ವಿನೋದ್ ರಾಜ್ ಇರಬೇಕು
ಕನ್ನಡದ ಬಹುತೇಕ ಎಲ್ಲ ಮನರಂಜನೆ ವಾಹಿನಿಗಳಲ್ಲಿ ಡ್ಯಾನ್ಸ್ ಕಾರ್ಯಕ್ರಮ ಇರುತ್ತದೆ. ಅಂತಹ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕುಳಿತ ಕೆಲವರಿಗೆ ಡ್ಯಾನ್ಸ್ ಬರುವುದಿಲ್ಲ. ಅಂತಹ ತೀರ್ಪುಗಾರರಿಗೆ ಸ್ಥಾನ ನೀಡುವ ಬದಲು ವಿನೋದ್ ರಾಜ್ ರಿಗೆ ಅವಕಾಶ ನೀಡಬೇಕು ಎನ್ನುವುದು ಆಗಾಗ ಚರ್ಚೆ ಆಗುತ್ತಿರುತ್ತದೆ. ಅದೇ ರೀತಿ ಇತ್ತೀಚಿಗೆ ಈ ರೀತಿ ಒಂದು ಟ್ರೋಲ್ ಆಗಿದೆ.

ಟ್ರೋಲ್ ಗೆ ಜಗ್ಗೇಶ್ ಪ್ರತಿಕ್ರಿಯೆ
ಆ ಟ್ರೋಲ್ ಗೆ ಪ್ರತಿಕ್ರಿಯೆ ನೀಡಿರುವ ಜಗ್ಗೇಶ್ ''ಇಂದಿನ ಡ್ಯಾನ್ಸರ್ ಗಳು ಹುಟ್ಟುವ ಮೊದಲೆ ಕನ್ನಡಿಗರ ಹಾಗು ನನ್ನ 87 ರಲ್ಲೆ ಹುಚ್ಚೆಬ್ಬಿಸಿದ ಪ್ರತಿಭಾವಂತ ನಟ, ನಾಟ್ಯದ ವ್ಯಾಕರಣ. ಅರಿಯದವರ ರಿಯಾಲಿಟಿಗೆ ಶೋ ತೀರ್ಪುಗಾರ ಮಾಡುವ ಬದಲು ವಿನೋದ ರಾಜನನ್ನು ಬಳಸಿ. ನಿಮ್ಮ ಶೋಗಳ ಘನತೆ ಇನ್ನು ಹೆಚ್ಚಾಗುತ್ತೆ. ನನ್ನ ನೇರ ವೈಯಕ್ತಿಕ ಅಭಿಪ್ರಾಯ ಸತ್ಯ ಅನ್ನಿಸಿದರೆ ಒಪ್ಪಿ. ಒಪ್ಪಿಗೆ ಆಗದಿದ್ದರೆ ನಕ್ಕು ಮರೆತುಬಿಡಿ.'' ಎಂದು ಟ್ವೀಟ್ ಮಾಡಿದ್ದಾರೆ.

ಜೀ ಕನ್ನಡಕ್ಕೂ ಜಗ್ಗೇಶ್ ಗೂ ನಂಟು ಇದೆ
ಜೀ ಕನ್ನಡ ವಾಹಿನಿಯ 'ಕಾಮಿಡಿ ಕಿಲಾಡಿಗಳು', 'ಕಿಲಾಡಿ ಕುಟುಂಬ' ಹಾಗೂ 'ಕನ್ನಡದ ಕಣ್ಮಣಿ' ಕಾರ್ಯಕ್ರಮಗಳಲ್ಲಿ ಜಗ್ಗೇಶ್ ತೀರ್ಪುಗಾರರಾಗಿದ್ದಾರೆ. ಹೀಗಾಗಿ ಜೀ ಕನ್ನಡ ವಾಹಿನಿಯ ಜೊತೆಗೆ ಜಗ್ಗೇಶ್ ಗೆ ಒಳ್ಳೆಯ ನಂಟು ಇದೆ. ಇತ್ತೀಚಿಗಷ್ಟೆ ಜೀ ವಾಹಿನಿಯಲ್ಲಿ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕಾರ್ಯಕ್ರಮ ಶುರು ಆಗಿದ್ದು, ಜಗ್ಗೇಶ್ ಈ ಬಗ್ಗೆ ವಾಹಿನಿಗೆ ಮನವಿ ಮಾಡುತ್ತಾರೆಯೇ ತಿಳಿದಿಲ್ಲ.

'ಡ್ಯಾನ್ಸ್ ರಾಜ' ಎಂದು ಖ್ಯಾತಿ ಪಡೆದಿರುವ ವಿನೋದ್ ರಾಜ್
ನಟ ವಿನೋದ್ ರಾಜ್ ಡ್ಯಾನ್ಸ್ ರಾಜ ಎಂದು ಹೆಸರು ಮಾಡಿದ್ದಾರೆ. ಕನ್ನಡ ಚಿತ್ರರಂಗದ ಅಂದಿನ ಕಾಲದ ಬೆಸ್ಟ್ ಡ್ಯಾನ್ಸ್ ಗಳಲ್ಲಿ ಇವರು ಒಬ್ಬರಾಗಿದ್ದರು. ಈ ಹಿಂದೆ 'ರಾಕ್ ಆಂಡ್ ರೋಲ್' ಎನ್ನುವ ಒಂದು ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿದ್ದರು. ಅದೇ ರೀತಿ ಈಗಲು ಅವರ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಬೇಕು ಎನ್ನುವುದು ಅನೇಕರ ಆಸೆ.


Click it and Unblock the Notifications











