ಅಣ್ಣಾವ್ರ ಕಡೆ ಪಯಣವನ್ನು ನೆನೆದ ನಟ ಜಗ್ಗೇಶ್
ಇಂದು ಕನ್ನಡ ಜನ ಪ್ರೀತಿಯ ಅಣ್ಣನನ್ನು ಕಳೆದುಕೊಂಡ ದಿನ. ವರನಟ, ನಟ ಸಾರ್ವಭೌಮ ರಾಜ್ ಕುಮಾರ್ ಶಕ್ತಿ ಮರೆಯಾಗಿ 13 ವರ್ಷಗಳು ಕಳೆದಿವೆ.
ರಾಜ್ ಕುಮಾರ್ ಅವರಿಗೆ ಇಡೀ ಕರ್ನಾಟಕದಲ್ಲಿ ಅಭಿಮಾನಿಗಳು ಇದ್ದಾರೆ. ಆದರೆ, ಅಂತಹ ಅಭಿಮಾನಿಗಳಲ್ಲಿ ಕೆಲವರಿಗೆ ಮಾತ್ರ ಅವರನ್ನು ನೋಡುವ, ಅವರ ಜೊತೆಗೆ ಕಾಲ ಕಳೆಯುವ ಅದ್ಭುತ ಅವಕಾಶ ಸಿಕ್ಕಿದೆ. ಆ ರೀತಿಯ ಅವಕಾಶ ಪಡೆದ ಅಪರೂಪದ ಅಭಿಮಾನಿಗಳಲ್ಲಿ ಜಗ್ಗೇಶ್ ಒಬ್ಬರು.
ನಟ ಜಗ್ಗೇಶ್ ರಾಜ್ ಕುಮಾರ್ ಅವರ ದೊಡ್ಡ ಅಭಿಮಾನಿ. ಅದನ್ನು ಅವರು ಅನೇಕ ಬಾರಿ ಹೇಳಿಕೊಂಡಿದ್ದಾರೆ. ರಾಜ್ ಅಗಲಿಕೆಯ ಈ ದಿನ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಅಣ್ಣ ಅಂದ್ರೆ ನಮ್ಮಣ್ಣ
''ಅಣ್ಣ ಅಂದ್ರೆ ನಮ್ಮಣ್ಣ...ಕೆಲವೊಮ್ಮೆ ದೇವರು ಬರಲಾಗದೆ ಮನುಷ್ಯ ರೂಪದಲ್ಲಿ ಬರುತ್ತಾನೆ. ಅವರು ಅಣ್ಣ ರಾಜಣ್ಣ. "ದೈವಂಮಾನುಷರೂಪೇಣಾಂ" ಬಾಲ್ಯದಲ್ಲಿ ಅಮ್ಮ ಜಟಕಾಬಂಡಿಯಲ್ಲಿ ರಾತ್ರಿ ಆಟ ಗೋಪಾಲ್ ಚಿತ್ರಮಂದಿರ 'ಬೇಡರ ಕಣ್ಣಪ್ಪ' ಚಿತ್ರ ನೋಡಲು 1968 ಹೋದದ್ದು ನನಗೆ ಮರೆಯಲಾಗದ ಕ್ಷಣ.''

ರಾಜಣ್ಣನಂತ ಪುಣ್ಯಾತ್ಮನ ಸಂಗ
''ಜಟಕಾಬಂಡಿಯಲ್ಲಿ ನಾನು ಮಹಾದೇವಿ ವಿಜಯಲಕ್ಷ್ಮಿ ಅಕ್ಕಂದಿರು ತಮ್ಮ ರಾಮಣ್ಣ ಇಬ್ಬರು ಚಿಕ್ಕಮ್ಮ ತಾಯಿಯ ತಾಯಿ ಅಜ್ಜಿ ತಿಬ್ಬಮ್ಮ ಇಷ್ಟು ಜನ ಜೊತೆಗೆ ತಿನ್ನಲು ಚಪಾತಿ ಉಪ್ಪಿನಕಾಯಿ ರೈಲುಚಂಬಿನಲ್ಲಿ ಕಾಫಿ, ಅಂದಿನ ಬಡಕುಟುಂಬದ ಸಿನಿಮಾ ನೋಡುವ ಪ್ರಯಾಣ ಕೋಮಲ್ ಹುಟ್ಟಿರಲಿಲ್ಲಾ.! ಅಂಥ ಕುಟುಂಬದಿಂದ ಬಂದ ನಾನು ಒಂದು ದಿನ ಕಲಾವಿದನಾಗಿ ರಾಜಣ್ಣನಂತ ಪುಣ್ಯಾತ್ಮನ ಸಂಗ ಸಿಗುವುದೆಂದು ಊಹಿಸಿಕೊಂಡರೆ ನಂಬಲು ಸ್ವಲ್ಪ ಕಷ್ಟ ಅಲ್ಲವೆ!''

ಪಾರ್ಥಿವದ ಜೊತೆ ಕಡೆ ಪ್ರಯಾಣ
''ನಾನು ಅವರ ಭೇಟಿಯಾದಾಗ ಅವರಿಗೆ 59 ವರ್ಷ..ಅಲ್ಲಿಂದ ಅವರು ನಿರ್ಗಮಿಸುವವರೆಗು ಅವರ ಪುಟ್ಟ ಹೃದಯದಲ್ಲಿ ಸ್ಥಾನ ಪಡೆದ ಹೆಮ್ಮೆಯಿದೆ. ನನ್ನ ಒಡನಾಟ ಅವರ ಜೊತೆ 18ವರ್ಷ. ಅವರು ಕಾಲವಾದಾಗ ಅವರ ಪಾರ್ಥಿವದ ಜೊತೆ ಕಡೆ ಪ್ರಯಾಣ 10ಘಂಟೆ ಮಾಡುವ ಸೌಭಾಗ್ಯ ನನ್ನದಾಯಿತು! ಆ ಕಡೆ ಪ್ರಯಾಣದಲ್ಲಿ ನನಗನ್ನಿಸಿದ್ದು ಒಂದೆ ಇನ್ನೊಂದು ಜನ್ಮ ಬೇಡ ಅಕಸ್ಮಾತ್ ಹುಟ್ಟಿದರೆ ಈ ಮಹನೀಯನ ತಮ್ಮನಾಗಿ ಹುಟ್ಟಬೇಕು ಅನ್ನಿಸಿತು.''

ನಾನು ಇಂದು ಎಂದೆಂದು ನಿಮ್ಮ ಭಕ್ತ
''ನೆಪ ಮಾತ್ರಕ್ಕೆ ಇವರು ನಟ. ಆದರೆ ಯಾವುದೋ ಕಾರಣಕ್ಕೆ ಹುಟ್ಟಿ ಮರೆಯಾದ ಅವಧೂತ.. ಜನ್ಮಾಂತರ ಪುಣ್ಯ ನನ್ನದು ಅವರ ಬಾಯಿಂದ ಬದುಕಿನ ಅತ್ಯಅಮೂಲ್ಯ ಮಾತು ಕೇಳಿ ಕಲಿತ ಕೋಟಿಗೊಬ್ಬ ನಾನೆಂದು.. ನೀವು ಹೋದಿರಿ ನೆಪಮಾತ್ರಕ್ಕೆ..ಆದರೆ ಬಿಟ್ಟುಹೋಗಿದ್ದೀರಿ ನಿಮ್ಮ ಶ್ರೇಷ್ಟ ಕುಡಿಗಳ ಮಕ್ಕಳರೂಪದಲ್ಲಿ ಕಲಾರಾಧನೆ ಮುಂದುವರಿಸಲು ನಿಮ್ಮ ಶ್ರೇಷ್ಟನಡೆಯಂತೆ.. ನಾನು ಇಂದು ಎಂದೆಂದು ನಿಮ್ಮ ಭಕ್ತ ಆಂಜನೇಯ.. ಪ್ರಶಾಂತವಾಗಿ ಸುಖಿಸಲಿ ನಿಮ್ಮ ಆತ್ಮ.. Love you ಅಣ್ಣ..''


Click it and Unblock the Notifications











