ದಡ್ಡ ಶಾಸಕ, ನಟ ಪ್ರಕಾಶ್ ರಾಜ್ ಇಂತಹವರು ಆರ್ಎಸ್ಎಸ್ಗೆ ಭೇಟಿ ನೀಡಿ ಮನಸ್ಥಿತಿ ಬದಲಾಯಿಸಿಕೊಳ್ಳಿ- ಜಗ್ಗೇಶ್
ಇತ್ತೀಚೆಗೆ ಆರ್ಎಸ್ಎಸ್ ಬಗ್ಗೆ ಬಹಳ ಚರ್ಚೆ ನಡೀತಿದೆ. ಇತ್ತೀಚೆಗೆ ಸದನದಲ್ಲಿ ಅರಸೀಕೆರೆ ಕಾಂಗ್ರೆಸ್ ಶಾಸಕ ಕೆ. ಎಂ ಶಿವಲಿಂಗೇಗೌಡ ಸಂಘ ಪರಿವಾರದ ಹೆಸರು ಹೇಳಿ ಬಿಜೆಪಿ ನಾಯಕರ ವಿರುದ್ಧ ಕಿಡಿ ಕಾರಿದ್ದರು. ಕಾಂಗ್ರೆಸ್ ಹಿರಿಯ ಮುಖಂಡ ಬಿ. ಕೆ ಹರಿಪ್ರಸಾದ್ ಕೂಡ ಆರ್ಎಸ್ಎಸ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ನಟ ಮತ್ತು ರಾಜ್ಯಸಭಾ ಸದಸ್ಯ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ನಟ, ನಿರ್ದೇಶಕ ಹಾಗೂ ಚಿಂತಕ ಪ್ರಕಾಶ್ ಬೆಳವಾಡಿ ಆರ್ಎಸ್ಎಸ್ ಬಗ್ಗೆ ತಮಗಿದ್ದ ತಪ್ಪು ತಿಳುವಳಿಕೆ ಹೇಗೆ ಬದಲಾಯಿತು ಎಂದು ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ. ಈ ವೀಡಿಯೋ ಲಿಂಕ್ ಹಂಚಿಕೊಂಡು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. "ಇತ್ತೀಚಿಗೆ ಒಬ್ಬ ದಡ್ಡ ಶಾಸಕ ವಿಧಾನಸಭೆಯಲ್ಲಿ ಹಾಗು ಒಬ್ಬ ಅಜ್ಞಾನಿ ಶಾಸಕ ವಿಧಾನಪರಿಷತ್ನಲ್ಲಿ ಆರ್ಎಸ್ಎಸ್ ಬಗ್ಗೆ ಲಘುವಾಗಿ ಮಾತಾಡಿದರು. ಸಂಘದ ಬಗ್ಗೆ ಹೀಗೆ ಅರಿವಿರದ ಅನೇಕರು ಇದ್ದಾರೆ. ಜೊತೆಗೆ ಕಲಾವಿದ ಪ್ರಕಾಶ್ ರಾಜ್ ಇವರಂತೆ ಸಂಘಕ್ಕೆ ಒಮ್ಮೆ ಭೇಟಿಕೊಡಿ ಮನಸ್ಥಿತಿ ಬದಲಾಗಿ ಸಂಘದ ದೇಶ ಚಿಂತನೆ ಅರಿವಾಗುತ್ತೆ" ಎಂದು ಟ್ವೀಟ್ ಮಾಡಿದ್ದಾರೆ.

ಚಿಕ್ಕಂದಿನಲ್ಲಿ ಒಮ್ಮೆ ಆರ್ಎಸ್ಎಸ್ ಶಾಖೆಗೆ ಹೋಗಿದ್ದ ಪ್ರಕಾಶ್ ಬೆಳವಾಡಿ ಮತ್ತೆ ಹೋಗಲ್ಲ ಎಂದುಬಿಟ್ಟಿದ್ದರಂತೆ. ಬಳಿಕ ಬಹಳ ವರ್ಷಗಳ ನಂತರ ಆರ್ಎಸ್ಎಸ್ ಬಗ್ಗೆ ಅಸಲಿ ಸಂಗತಿ ಗೊತ್ತಾಯಿತು. ನಾವು ಅಂದುಕೊಂಡಂತೆ ಅಲ್ಲ ಸಂಘ ಪರಿವಾರ. ಅದನ್ನು ತಪ್ಪಾಗಿ ಚಿತ್ರಿಸಲಾಗುತ್ತಿದೆ. ಸಾಕಷ್ಟು ಜನ ಅದನ್ನೇ ನಿಜ ಎಂದು ನಂಬಿದ್ದಾರೆ ಎಂದು ವಿವರಿಸಿದ್ದಾರೆ.
ನಾನು ಚಿಕ್ಕಂದಿನಲ್ಲಿ ಶಾಖೆಗೆ ಹೋಗಿದ್ದೆ. ಬಳಿಕ ಮನೆಗೆ ಬಂದು ಅಮ್ಮನ ಬಳಿ ಹೇಳಿದ್ದೆ ಇನ್ನು ಮುಂದೆ ಹೋಗಲ್ಲ. ನಿಕ್ಕರ್ ಹಾಕ್ಕೊಂಡು, ಟೋಪಿ ಧರಿಸಿ ಕೋಲು ಹಿಡಿದು ಹೋಗುವುದು ರಾಷ್ಟ್ರೀಯವಾದ ಹೇಗಾಗುತ್ತದೆ ಎಂದಿದ್ದೆ. ಬಳಿಕ ಅಮ್ಮ ಕೂಡ ಸರಿ ಹೋಗುವುದು ಬೇಡ ಬಿಡು ಎಂದು ಹೇಳಿದ್ದಾಗಿ ಪ್ರಕಾಶ್ ಬೆಳವಾಡಿ ನೆನಪಿಸಿಕೊಂಡಿದ್ದಾರೆ.
ಕೆಲ ವರ್ಷಗಳ ಬಳಿಕ ಮತ್ತೆ ಆರ್ಎಸ್ಎಸ್ ಮೀಟಿಂಗ್ಗೆ ಹೋಗಿದ್ದೆ, ಆಗ ಸಂಘ ಪರಿವಾರದ ಬಗ್ಗೆ ನನಗೆ ಗೊತ್ತಾಯಿತು. ಆರ್ಎಸ್ಎಸ್ನಲ್ಲಿ ಬರೀ ಬ್ರಾಹ್ಮಣರು ಇರುತ್ತಾರೆ ಎನ್ನುವುದು ತಪ್ಪು. ಎಲ್ಲಾ ಸಮುದಾಯದವರು ಅಲ್ಲಿದ್ದಾರೆ. ಉದಾರವಾದಿ ಪ್ರಗತಿಪರ ಚಿಂತಕರು ಇದ್ದಾರೆ ಎಂದು ಪ್ರಕಾಶ್ ಬೆಳವಾಡಿ ವಿವರಿಸಿದ್ದಾರೆ. ಈ ವಿಡಿಯೋವನ್ನು ಜಗ್ಗೇಶ್ ಹಂಚಿಕೊಂಡಿದ್ದಾರೆ.
ಈ ಹಿಂದೆ ಕೂಡ ಆರ್ಎಸ್ಎಸ್ ಬಗ್ಗೆ ಜಗ್ಗೇಶ್ ಮಾತನಾಡಿದ್ದರು. 5 ವರ್ಷಗಳ ಹಿಂದೆ ಸರಣಿ ಟ್ವೀಟ್ ಮಾಡಿದ್ದರು. "ನಾನು ಕಂಡ ಅರ್ ಎಸ್ ಎಸ್, ಜಾತಿ ಧರ್ಮ ಮೀರಿದ ಮಾತೃಹೃದಯಿ ಸಂಘಟನೆ. ಕೊರೋನ ಸಂದರ್ಭವಾಗಲಿ, ನೆರೆಬಂದ ಸಂದರ್ಭವಾಗಲಿ ರಾಷ್ಟ್ರಕ್ಕೆ ಸಂಕಷ್ಟ ಬಂದಾಗ ಆಗಲಿ, ವಿದ್ಯೆ ದಾನಕ್ಕಾಗಲಿ,ಅನ್ನದ ಮಾರ್ಗಕ್ಕಾಗಲಿ ಶಿಸ್ತಿನ ಸೈನ್ಯ ಇಂಥ ಸ್ವಾರ್ಥ ಜಗದಲ್ಲಿ ನಿಸ್ವಾರ್ಥಸೇವೆ ಮಾಡುವ ಮಾತೃಹೃದಯಿ ಸಂಸ್ಥೆ ಎಂದರೆ ಅದು ಆರ್ಎಸ್ಎಸ್ ಒಂದೇ" ಎಂದು ಬರೆದುಕೊಂಡಿದ್ದರು.
"ಆರ್ಎಸ್ಎಸ್ ಸಂಸ್ಥೆಯ ಸಂಪರ್ಕ ದೊರಕಿದರೆ ಅಂಥವರು ತಮಗರಿಯದೆ ಸಾತ್ವಿಕನಾಗಿ ಸ್ವಾರ್ಥಬಿಟ್ಟು ಸಮಾಜಕ್ಕೆ ಹೆಗಲುಕೊಡುವ ಕರ್ಮಯೋಗಿ ಆಗುತ್ತಾನೆ.ದೂರನಿಂತು ಬೆಟ್ಟ ನೋಡುವರಿಗು ಆ ಬೆಟ್ಟ ಏರಿದವರಿಗು ವಿವರಣೆಗೆ ವ್ಯೆತಾಸ ವುಂಟು!ನೋಡುಗರಿಗಿಂತ ಅದರ ಸಾಂಗತ್ಯ ಇರುವವರ ಸಂಖ್ಯೆ ಹೆಚ್ಚು ಕಾರಣ ಅದರ ಮಾತೃರೂಪ ಹಾಗು ಸರ್ವಸಂಗ ಪರಿತ್ಯಾಗಿಗಳು ಕಟ್ಟಿದ ನಿಸ್ವಾರ್ಥ ಸಂಘವಿದು" ಎಂದು ಜಗ್ಗೇಶ್ ತಿಳಿಸಿದ್ದರು.
ತುರುವೆಕೆರೆಯಲ್ಲಿ ಒಮ್ಮೆ ಆರ್ಎಸ್ಎಸ್ ಪಥಸಂಚಲನಲ್ಲಿ ಭಾಗಿಯಾಗಿರುವ ವೀಡಿಯೊವೊಂದನ್ನು ಕೂಡ ಜಗ್ಗೇಶ್ ಹಂಚಿಕೊಂಡಿದ್ದರು. ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದರು.


Click it and Unblock the Notifications











