'ಜಗ್ಗೇಶ್ ಮಗ ಅಂತ ಗೊತ್ತಿದ್ದೇ ಚುಚ್ಚಿದ' ಆ ಕಿಡಿಗೇಡಿ.!
ನಟ ಜಗ್ಗೇಶ್ ಪುತ್ರ ಗುರು ಜಗ್ಗೇಶ್ ಮೇಲೆ ಹಲ್ಲೆ ನಡೆದಿದ್ದು, ಈ ಬಗ್ಗೆ ಸ್ವತಃ ಗುರು ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನ ಆರ್.ಟಿ.ನಗರದಲ್ಲಿ ಬೆಳಿಗ್ಗೆ ಮಗುವನ್ನು ಶಾಲೆಗೆ ಬಿಡಲು ಹೋಗುತ್ತಿದ್ದ ಸಂದರ್ಭದಲ್ಲಿ ಗುರು ಜಗ್ಗೇಶ್ ಮೇಲೆ ಹಲ್ಲೆ ಆಗಿತ್ತು.
ಗುರು ಜಗ್ಗೇಶ್ ಅವರ ತೊಡೆ ಭಾಗಕ್ಕೆ ಚಾಕುವಿನಿಂದ ಇರಿಯಲಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಜಗ್ಗೇಶ್ ಮಗ ಎಂದು ಗೊತ್ತಿದ್ದೂ 'ಆ' ಕಿಡಿಗೇಡಿ ಈ ಕೆಲಸ ಮಾಡಿದ್ದಾನಂತೆ. ಹಾಗಂತ, ಘಟನೆಯ ಬಗ್ಗೆ ಮಾಧ್ಯಮಕ್ಕೆ ಗುರು ಮತ್ತು ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ...

ಗುರು ಜಗ್ಗೇಶ್ ಹೇಳಿಕೆ
''ನಾನು ಮತ್ತು ನನ್ನ ಮಗು ಬೆಳಗ್ಗೆ ಕಾರ್ ನಲ್ಲಿ ಹೋಗುವಾಗ ಒಂದು ಬಿಳಿ ಬಣ್ಣದ ಕಾರು ಟಚ್ ಮಾಡಿಕೊಂಡು ಹೋಯ್ತು. ಕೋಪದಲ್ಲಿ ನಾನು ಹೋಗಿ ನಿಲ್ಲಿಸಿದೆ. ಆಮೇಲೆ ವಾದ ವಿವಾದ ಆಗಿ ಚಾಕು ತೆಗೆದು ಅವನು ನನ್ನ ಹೊಟ್ಟೆಗೆ ಚುಚ್ಚಿದ'' - ಗುರು, ಜಗ್ಗೇಶ್ ಪುತ್ರ

ಎಲ್ಲಿ ಹೋಯ್ತು ಮಾನವೀಯತೆ?
''ಅವನು ಒಬ್ಬನೇ ಕಾರಿನಲ್ಲಿ ಇದ್ದ. ಕಾರಿನಿಂದ ಪೋನ್ ತೆಗೆಯುತ್ತಿದ್ದಾನೆ ಎಂದುಕೊಂಡರೆ ಚಾಕು ತೆಗೆದು ಚುಚ್ಚಿದ. ಗಾಡಿಯಲ್ಲಿ ಮಗು ಇರುವುದನ್ನು ನೋಡಿಯೂ ನನಗೆ ಚುಚ್ಚಿದ ಅಂದರೆ ಅವನು ಎಷ್ಟು ಕಟುಕ ಇರಬೇಕು. ಎಲ್ಲಿ ಹೋಯಿತು ಮಾನವೀಯತೆ'' ಎಂದು ಪ್ರಶ್ನಿಸುತ್ತಾರೆ ಜಗ್ಗೇಶ್ ಪುತ್ರ ಗುರು

ಜಗ್ಗೇಶ್ ಮಗ ಅಂತ ಗೊತ್ತಿದ್ದೆ ಚುಚ್ಚಿದ.!
''ವಾದ ವಿವಾದ ನಡೆದಾಗ ನಾನು ಜಗ್ಗೇಶ್ ಮಗ ಅಂತ ಹೇಳಿದೆ. ಆಗ ಹೌದಾ...ಅಂತ ಹೇಳಿ ಬೇಕೆಂದೆ ಚುಚ್ಚಿದ. ಸದ್ಯ ಈಗ 9 ಹೊಲಿಗೆ ಹಾಕಿದ್ದಾರೆ. ದೈಹಿಕವಾಗಿ ನನಗೆ ಗಾಯ ಆಗಿದ್ದರೂ, ಮಾನಸಿಕವಾಗಿ ನೋವಾಯಿತು. ಯಾಕಂದ್ರೆ, ಆಗ ಯಾರೂ ಕೂಡ ನನ್ನ ಸಹಾಯಕ್ಕೆ ಬರಲಿಲ್ಲ. ಅಲ್ಲಿ ಇರುವ ಜನ ನನ್ನ ಸಹಾಯಕ್ಕೆ ಬರದಿದ್ದು ಬೇಜಾರು ಆಯ್ತು'' - ಗುರು, ಜಗ್ಗೇಶ್ ಪುತ್ರ

ಜಗ್ಗೇಶ್ ಹೇಳಿಕೆ
''ಬೆಳಗ್ಗೆ ಮಗುವನ್ನು ಶಾಲೆಗೆ ಬಿಡಲು ಹೋಗಿದ್ದ. ಈ ವೇಳೆ ಟ್ರಾಫಿಕ್ ನಲ್ಲಿ ಸಣ್ಣ ವಿಷ್ಯಕ್ಕೆ ಮಾತಿನ ಜಗಳವಾಗಿದೆ. ಅಷ್ಟಕ್ಕೆ ಚಾಕುವಿನಿಂದ ಇರಿದಿದ್ದಾರೆ. ಅವರು ಯಾರು ಎಂಬುದು ಗೊತ್ತಿಲ್ಲ. ಬಹುಶಃ ರೌಡಿ ವ್ಯಕ್ತಿಗಳು ಇರಬಹುದು. ಸ್ವಲ್ಪ ಮಿಸ್ ಆಗಿದ್ದರೂ ಹೊಟ್ಟೆಯ ಭಾಗಕ್ಕೆ ಚಾಕು ಇರಿಯುತ್ತಿದ್ದರು. ಸದ್ಯ, ಚಿಕಿತ್ಸೆ ನೀಡುತ್ತಿದ್ದಾರೆ. ಆರಾಮಾಗಿದ್ದಾರೆ'' ಎಂದು ಮಾಧ್ಯಮಕ್ಕೆ ತಿಳಿಸಿದ್ದ ಜಗ್ಗೇಶ್ ಟ್ವಿಟ್ಟರ್ ನಲ್ಲಿಯೂ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.


Click it and Unblock the Notifications











