ಚಿತ್ರನಗರಿ ಅನೇಕ ಮಹನೀಯರ ಕನಸು, ಒಬ್ಬರಿಂದ ಸಾಧ್ಯವಾಗಿಲ್ಲ: ನಟ ಜಗ್ಗೇಶ್
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ 75ನೇ ವರ್ಷದ ಲಾಂಛನ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಈ ಸಮಾರಂಭದಲ್ಲಿ ಹಿರಿಯ ನಟ ಜಗ್ಗೇಶ್, ರವಿಚಂದ್ರನ್, ಜಯಮಾಲಾ ಮತ್ತು ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಾಕಷ್ಟು ಗಣ್ಯರು ಭಾಗಿಯಾಗಿದ್ದರು.
75ನೇ ವರ್ಷದ ಲಾಂಛನವನ್ನು ಬಿಡುಗಡೆ ಮಾಡಲಾಯಿತು. ನಂತರ ಮಾತನಾಡಿದ ಜಗ್ಗೇಶ್ "ಇಲ್ಲಿ ಫೌಂಡೇಶನ್ ಗೆ ಗೌರವ ಕೊಟ್ಟಿದ್ದಾರೆ, ಕಳಶಕ್ಕೆ ಗೌರವ ಕೊಟ್ಟಿಲ್ಲ ಎನ್ನುವುದೇ ನನಗೆ ಸಂತಸ ತಂದಿದೆ" ಎಂದರು. "1944ನೇ ಇಸವಿಯಲ್ಲಿ ಮೈಸೂರು ವಾಣಿಜ್ಯ ಮಂಡಳಿ ಆಗಿತ್ತು. ರಾಜ್ ಕುಮಾರ್, ಅಂಬಿ, ವಿಷ್ಣು ಮತ್ತು ಸಾಕಷ್ಟು ದಿಗ್ಗಜರ ಪರಿಕಲ್ಪನೆಯಲ್ಲಿ ಆಗಿದ್ದು ವಾಣಿಜ್ಯ ಮಂಡಳಿ" ಎಂದರು.
"ಸರ್ಕಾರ ಚಿತ್ರನಗರಿ ನಿರ್ಮಾಣಕ್ಕೆ 500 ಕೋಟಿ ಕೊಡಲಾಗಿದೆ. ಅದರ ಕೀರ್ತಿ ಫೌಂಡೇಶನ್ (ಹಿರಿಯರಿಗೆ) ಸೇರಬೇಕು. ಪ್ರತಿದಿನ ಪ್ರತಿನಿತ್ಯ ಸಿನಿಮಾ ರಂಗದ ಬಗ್ಗೆ ನಮ್ಮ ಚಿತ್ರ ನಗರಿ ಎಂದು ದೊಡ್ಡ ಕನಸನ್ನು ಇಟ್ಟುಕೊಂಡು ಬಂದಂತಹ ಮಹನೀಯರು ಅನೇಕರು ಇದ್ದಾರೆ. ಇದು ಒಬ್ಬರಿಂದ ಸಾಧ್ಯವಾಗಿಲ್ಲ. ತಪ್ಪು ಸಂದೇಶ ಹೋಗಬಾರದು. ಎಂದರು.

ಇನ್ನು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಬಗ್ಗೆ ಮಾತನಾಡಿದ ಜಗ್ಗೇಶ್ ಅತಿಥಿಗಳ ಆಹ್ವಾನ ವಿಚಾರದ ಬಗ್ಗೆ ಬೇಸರ ಹೊರಹಾಕಿದರು. "ಹಿರಿಯರನ್ನು ಕರೆಸಿ ಚರ್ಚೆ ಮಾಡಿ ನಂತರ ನಿರ್ಧಾರ ತೆಗೆದುಕೊಳ್ಳಬೇಕು. ಯಾರನ್ನು ಕರೆಯಬೇಕು, ಯಾರಿಗೆ ಘನತೆ ಗೌರವ ಕೊಡಬೇಕು ಎಂದು ಹಿರಿಯರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು" ಎಂದರು.
"ರವಿಚಂದ್ರನ್, ಶಿವರಾಜ್ ಕುಮಾರ್ ಇನ್ನೂ ಸಾಕಷ್ಟು ಹಿರಿಯರಿದ್ದಾರೆ. ಅವರನ್ನು ಕರೆಸಿ ಮೊದಲು ಚರ್ಚಿಸಿ ಆಯ್ಕೆ ಮಾಡಬೇಕು" ಎಂದರು. ಇನ್ನು ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಪೈರಸಿ ಆಗುತ್ತಿರುವುದರಿಂದ ಸೈಬರ್ ಕ್ರೈಮ್ ಅನ್ನು ಮತ್ತಷ್ಟು ಬಿಗಿಗೊಳಿಸಬೇಕು ಎಂದರು.


Click it and Unblock the Notifications











