ರಾಘವೇಂದ್ರ ಸ್ಟೋರ್ಸ್ ಟ್ರೈಲರ್: 40 ವರ್ಷದ ವರ್ಜಿನ್ಗೆ ವಧು ಬೇಕು; ಹುಡುಗಿಯಾದ್ರೂ ಓಕೆ, ಆಂಟಿಯಾದ್ರೂ ಓಕೆ!
ಕನ್ನಡದ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ನ ಚಿತ್ರವೊಂ ದರ ಟ್ರೈಲರ್ ಬಿಡುಗಡೆಯಾಗುತ್ತಿದೆ ಎಂದರೆ ನಿರೀಕ್ಷೆ ದೊಡ್ಡ ಮಟ್ಟದಲ್ಲಿಯೇ ಇರುತ್ತದೆ. ಪಕ್ಕಾ ಎಂಟರ್ಟೈನ್ಮೆಂಟ್ ಇರುವ ಚಿತ್ರ ಇದಾಗಿರಲಿದೆ, ಟ್ರೈಲರ್ ಚೆನ್ನಾಗಿರಲಿದೆ ಎಂಬ ಮಿನಿಮಮ್ ಗ್ಯಾರಂಟಿ ಸಿನಿ ರಸಿಕರದ್ದು. ಸದ್ಯ ಹೊಂಬಾಳೆ ಫಿಲ್ಮ್ಸ್ ಸಿನಿ ರಸಿಕರಿಗೆ ತನ್ನ ಮೇಲಿರುವ ಈ ಅಭಿಪ್ರಾಯವನ್ನು ತನ್ನ ಮುಂದಿನ ಚಿತ್ರ ರಾಘವೇಂದ್ರ ಸ್ಟೋರ್ಸ್ ಮೂಲಕವೂ ಸಹ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದೇ ಹೇಳಬಹುದು.
ಹೌದು, ಇಂದು ( ಏಪ್ರಿಲ್ 17 ) ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಮುಂದಿನ ಚಿತ್ರ ರಾಘವೇಂದ್ರ ಸ್ಟೋರ್ಸ್ನ ಟ್ರೈಲರ್ ಬಿಡುಗಡೆಗೊಂಡಿದೆ. ಈ ಚಿತ್ರಕ್ಕೆ ಇಂಡಸ್ಟ್ರಿ ಹಿಟ್ ಡೈರೆಕ್ಟರ್ ಎಂದೇ ಖ್ಯಾತಿಯನ್ನು ಪಡೆದಿರುವ ಸಂತೋಷ್ ಆನಂದ್ರಾಮ್ ಆಕ್ಷನ್ ಕಟ್ ಹೇಳಿದ್ದು, ಚಿತ್ರದ ಟ್ರೈಲರ್ ಮತ್ತೊಂದು ಹಿಟ್ ಈ ನಿರ್ದೇಶಕನ ಕಡೆಯಿಂದ ಬರಲಿದೆ ಎಂಬ ವಿಶ್ವಾಸವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ.

ಈಗಾಗಲೇ ಟೀಸರ್, ಹಾಡು ಹಾಗೂ ಪೋಸ್ಟರ್ಗಳಿಂದ ಚಿತ್ರದ ಕಥೆ ನಲವತ್ತು ವರ್ಷವಾದರೂ ಮದುವೆಯಾಗದ ಪುರುಷನ ಸುತ್ತಲಿದೆ ಎಂಬುದನ್ನು ಸ್ಪಷ್ಟಪಡಿಸಡಿದ್ದವು. ಈಗ ಟ್ರೈಲರ್ನಲ್ಲಿ ಆ ಅಂಶವನ್ನು ಇನ್ನೂ ತುಸು ಹೆಚ್ಚು ವಿವರಿಸಿದ್ದಾರೆ ನಿರ್ದೇಶಕರು. ಮೊದಲಿಗೆ ನಾಯಕನಿಗೆ ಮದುವೆ ಬ್ರೋಕರ್ ಒಬ್ಬರು ಮದುವೆಯಾದ ಮೇಲೆ ಯಾರ್ರೀ ಚೆನ್ನಾಗಿ ಬದುಕುತ್ತಿದ್ದಾರೆ ಎಂಬ ಡೈಲಾಗ್ ಮೂಲಕ ಟ್ರೈಲರ್ ಆರಂಭಗೊಳ್ಳಲಿದ್ದು, ನಾಯಕ ಜಗ್ಗೇಶ್ ನಾನು ಹಾಳಾಗ್ ಹೋಗಿ ರೋಡ್ಗೆ ಬಂದ್ರೂ ಪರವಾಗಿಲ್ಲ ನಾನು ಮದುವೆ ಆಗಲೇ ಬೇಕು ಎಂದು ಇದೇ ಡೈಲಾಗ್ಗೆ ಪ್ರತ್ಯುತ್ತರವನ್ನು ನೀಡಿದ್ದಾರೆ.
ಟ್ರೈಲರ್ನ ಆರಂಭದ ಈ ಡೈಲಾಗ್ ಚಿತ್ರದ ಕಥೆಯ ಒನ್ಲೈನ್ ಎಂದೇ ಊಹಿಸಬಹುದಾಗಿದೆ. ಇನ್ನು ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಹಯವದನ ಎಂಬ 40 ವರ್ಷ ವಯಸ್ಸಿನ ಅಡುಗೆಭಟ್ಟನ ಪಾತ್ರದಲ್ಲಿ ನಟಿಸಿದ್ದು, ನಾಯಕನ ತಂದೆ ಪಾತ್ರದಲ್ಲಿ ಗುಂಡಾ ಭಟ್ ಆಗಿ ದತ್ತಣ್ಣ ನಟಿಸಿದ್ದಾರೆ.
ರಸಬಾಳೆ ಎಂಬ ಊರಿನಲ್ಲಿ ರಾಘವೇಂದ್ರ ಸ್ಟೋರ್ಸ್ ಎಂಬ ಸ್ವಂತ ಕೇಟರಿಂಗ್ ವ್ಯವಹಾರವನ್ನು ನಾಯಕ ನೋಡಿಕೊಳ್ಳುತ್ತಿದ್ದು, ಆತ ಅಡುಗೆಭಟ್ಟ ಎಂಬ ಕಾರಣಕ್ಕೆ ಆತನಿಗೆ ಯಾರೂ ಸಹ ಹುಡುಗಿ ಕೊಡುತ್ತಿಲ್ಲ ಎಂಬ ವಿಷಯವನ್ನು ಟ್ರೈಲರ್ನಲ್ಲಿ ಬಹಿರಂಗಪಡಿಸಲಾಗಿದೆ. ಮೊದಲು ಅಡುವೆ ಮಾಡುವುದನ್ನು ಗಂಡಸರು ಹಗುರವಾಗಿ ನೋಡ್ತಿದ್ರು, ಆದರೆ ಈಗ ಓದಿರೋ ಹುಡುಗೀರು ಹಾಗೂ ಹೆಂಗಸರು ಸಹ ಹಗುರವಾಗಿ ನೋಡ್ತಾರೆ ಎಂಬ ಡೈಲಾಗ್ ಇದೊಂದು ಗಂಭೀರ ಸಮಸ್ಯೆ ಎಂಬುದನ್ನು ಮನಮುಟ್ಟುವ ಹಾಗೆ ತಿಳಿಸಿದೆ.

ಈ ಮೂಲಕ ಚಿತ್ರದಲ್ಲಿ ಅಡುಗೆ ಕೆಲಸ ಮಾಡುವವರಿಗೆ, ಅಲ್ಲದೇ ವೃತ್ತಿ ನೋಡಿ ಕೀಳು ಮಟ್ಟದಲ್ಲಿ ಕಂಡು ಹುಡುಗಿ ಕೊಡದವರಿಗೆ ಸಂದೇಶ ನೀಡುವ ಮತ್ತು ಈ ವಿಷಯಗಳಲ್ಲಿ ಗೇಲಿ ಮಾಡುವವರಿಗೆ ತಿಳಿ ಹೇಳುವ ಕೆಲಸವನ್ನು ಸಂತೋಷ್ ಆನಂದ್ರಾಮ್ ಮಾಡಿರಲಿದ್ದಾರೆ. ರಾಜಕುಮಾರ ಹಾಗೂ ಯುವರತ್ನ ಚಿತ್ರಗಳಲ್ಲಿ ಮೆಸೇಜ್ ನೀಡಿ ಗೆದ್ದಿದ್ದ ಸಂತೋಷ್ ಆನಂದ್ರಾಮ್ ಮತ್ತೊಮ್ಮೆ ಮೋಡಿ ಮಾಡುವ ಮುನ್ಸೂಚನೆ ನೀಡಿದ್ದಾರೆ.
ಇನ್ನು ಹೊಂಬಾಳೆ ಫಿಲ್ಮ್ಸ್ ಚಿತ್ರಕ್ಕೆ ಎಲ್ಲಿಯೂ ಕೊರತೆ ಆಗಲಾರದ ಹಾಗೆ ಎಂದಿನಂತೆ ಬಂಡವಾಳ ಹೂಡಿರುವುದು ಟ್ರೈಲರ್ನ ಪ್ರತಿ ಫ್ರೇಮ್ನಲ್ಲೂ ಕಂಡುಬರುತ್ತಿದ್ದು, ಅಜನೀಶ್ ಬಿ ಲೋಕನಾಥ್ ಸಂಗೀತ ಪ್ರೇಕ್ಷಕರಿಗೆ ಹಿಡಿಸುವ ಮುನ್ಸೂಚನೆ ಸಿಕ್ಕಿದೆ. ಚಿತ್ರದಲ್ಲಿ ನಾಯಕಿಯಾಗಿ ಶ್ವೇತಾ ಶ್ರೀವಾತ್ಸವ್ ನಟಿಸಿದ್ದು, ದತ್ತಣ್ಣ, ಅಚ್ಯುತ್ ಕುಮಾರ್, ರವಿಶಂಕರ್ ಗೌಡ ಹಾಗೂ ಮಿತ್ರ ಸೇರಿದಂತೆ ಹಲವಾರು ಕಲಾವಿದರು ತಾರಾಗಣದಲ್ಲಿದ್ದಾರೆ.
ಚಿತ್ರ ಇದೇ ತಿಂಗಳ 28ರಂದು ತೆರೆಗೆ ಬರಲಿದೆ. ಇನ್ನು ಟ್ರೈಲರ್ನ ಕೊನೆಯಲ್ಲಿ ತಿಳಿಸಿರುವ ಜಾಹೀರಾತಿನಂತೆ 40 ವರ್ಷ ವಯಸ್ಸಿನ ವರ್ಜಿನ್ ಹಯವದನನಿಗೆ ಮದುವೆಯಾಗಲು ಹುಡುಗಿ ಸಿಗ್ತಾಳಾ ಎಂಬುದು ತಿಂಗಳಾಂತ್ಯದಲ್ಲಿ ಗೊತ್ತಾಗಲಿದೆ.


Click it and Unblock the Notifications











