'ರಂಗನಾಯಕ'ನ ಸೋಲು ; 'ನಂಬಿಕೆ ದ್ರೋಹ'ದ ಪಾಠ ಮಾಡಿದ ನವರಸನಾಯಕ...!
ಕನ್ನಡ ಚಿತ್ರರಂಗದ ಮಿನಿಮಮ್ ಗ್ಯಾರಂಟಿ ನಟ ಜಗ್ಗೇಶ್. ಕನ್ನಡ ಚಿತ್ರರಂಗದಲ್ಲಿ 44 ವರ್ಷಗಳನ್ನ ಪೂರೈಸಿರುವ ಜಗ್ಗೇಶ್ ಇಲ್ಲಿಯವರೆಗೆ ತಮ್ಮ ಬದುಕಿನಲ್ಲಿ ಅನೇಕ ಏರಿಳಿತವನ್ನ ಕಂಡಿದ್ದಾರೆ. ಸೋಲು ಗೆಲುವನ್ನೂ ಸಮಾನವಾಗಿಯೇ ಸ್ವೀಕರಿಸಿದ್ದಾರೆ.
ಆದರೆ ಇಂಥ ಜಗ್ಗೇಶ್, ರಂಗನಾಯಕ ಚಿತ್ರದ ಸೋಲನ್ನ ಮಾತ್ರ ತಮ್ಮ ಸೋಲೆಂದು ಒಪ್ಪಿಕೊಳ್ಳಲಿಲ್ಲ. ಬದಲಿಗೆ ಎಲ್ಲದಕ್ಕೂ ಕನ್ನಡ ಚಿತ್ರರಂಗದ ಸರಸ್ವತಿ ಪುತ್ರ ಗುರು ಪ್ರಸಾದ್ ಕಾರಣವೆಂಬ ಅರ್ಥದಲ್ಲಿ ಮಾತನಾಡಿ ಆ ಚಿತ್ರಕ್ಕೂ ತಮಗೂ ಸಂಬಂಧ ಇಲ್ಲ ಎಂದು ಕೈ ತೊಳೆದುಕೊಂಡರು. ಜಗ್ಗೇಶ್ ಅವರ ಈ ನಡೆ ಹಾಗೂ ನುಡಿ ಬಗ್ಗೆ ಅನೇಕರು ಚಕಾರ ಎತ್ತಿದರು. ಹಿರಿಯ ನಟನಾಗಿ ಈ ತರಹದ ಮಾತು ಬೇಡವಿತ್ತು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದರು. ಇದೆಲ್ಲವೂ ಆಗಿ ನಾಲ್ಕು ದಿನದ ನಂತರ, ಜಗ್ಗೇಶ್ ಇದೀಗ ನಂಬಿಕೆ ದ್ರೋಹ ಹಾಗೂ ವಿಷ ಇಟ್ಟು ಸಂಭ್ರಮಿಸಿದವರ ಕಥೆಯನ್ನ ಹೇಳೀದ್ದಾರೆ

ಹೌದು, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಳೆಯ ಆ ದಿನಗಳ ಫೋಟೋ ಹಂಚಿಕೊಂಡಿರುವ ಜಗ್ಗೇಶ್, ಅದಕ್ಕೆ ಹಳ್ಳಿ ಹುಡುಗನ ಕನಸು ಎಂಬ ಶೀರ್ಷಿಕೆಯನ್ನ ಕೊಟ್ಟಿದ್ದಾರೆ. ಈ ಚಿತ್ರಗಳ ಮೆಲುಕು ಹಾಕಿ ಮತ್ತೊಮ್ಮೆ ನೋಡಿ ನನಗನ್ನಿಸಿದ್ದು ಇವನು ಇಲ್ಲಿಂದ ಬೆಳೆದವ ಎಂದರೆ ಸಿನಿಮಾ ಕಥೆ ಓಕೆ, ಆದರೆ ನಿಜಜೀವನದಲ್ಲಿ ಯಾರು ನಂಬರು. ಬೇರೆಯವರು ಯಾಕೆ? ನನಗೇ ಅನುಮಾನ ಬಂತು ಅಂದಿದ್ದಾರೆ.
ಇನ್ನೂ ನಾನು ಹುಟ್ಟಿದ್ದು ಸಣ್ಣ ಕುಟುಂಬ, ಆದರೆ ದೊಡ್ಡ ಕನಸು. ನಟನಾಗಬೇಕೆನ್ನುವುದು ಇತ್ತು ಎಂದಿರುವ ಜಗ್ಗೇಶ್, ನೀವೇ ಹೇಳಿ.. ಮಗನ ಈ ಕನಸನ್ನು ಯಾವ ಅಪ್ಪ ಒಪ್ಪುತ್ತಾನೆ? ಹಾಗಾಗಿ ಬೂಟಿನ ಏಟು ಬಾಲ್ಯದ ನಿತ್ಯ ಪೂಜೆಯಾಗಿತ್ತು. ಅಮ್ಮನ ಕಣ್ಣೀರು ನಿತ್ಯದ ಅಭಿಷೇಕವಾಗಿತ್ತು' ಎಂದು ಆ ದಿನಗಳನ್ನ ಮೆಲುಕು ಹಾಕಿದ್ದಾರೆ. ಸಿಟ್ಟು, ರೋಷ, ದ್ವೇಷ ನನ್ನದಾಗಿತ್ತು. ಇದು ನನ್ನ ಬದುಕಾಗಿತ್ತು! ಈಗ ನೆನೆದರೆ ನನ್ನ ಬಗ್ಗೆ ಅನುಮಾನ. ನಾನು ಇಷ್ಟು ದೂರ ನಡೆದು ಬಂದನೆ ಎಂದು? ಸಾಧಿಸುವವರಿಗೆ, ದಾರಿ ಕಾಣದವರಿಗೆ, ಅಸಹಾಯಕರಾದವರಿಗೆ, ಕೊನೆಯ ಘಟ್ಟ ಎಂದುಕೊಂಡವರಿಗೆ ನನ್ನ ಬದುಕಿನಿಂದ ಸಣ್ಣ ಧೈರ್ಯದ ಚಿಲುಮೆ ಚಿಮ್ಮಲಿ ಎಂದಿರುವ ಜಗ್ಗೇಶ್, ಅವರ ಮನ ನನ್ನ ನೋಡಿ ಎಲ್ಲವೂ ಸಾಧ್ಯ, ಯಾವುದೂ ಅಸಾಧ್ಯವಲ್ಲ ಎಂದುಕೊಳ್ಳಲಿ. ಶ್ರೇಷ್ಠ ಚಿಂತನೆಯ ಮನಸಿದ್ದರೆ ಮಾರ್ಗ' ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.
ಇನ್ನೂ ಎಲ್ಲಾ ಸಾಧಿಸಿದ ನನಗೆ ಒಂದು ದುಃಖವಿದೆ. ಎಂದಿರುವ ನವರಸನಾಯಕ ಜಗ್ಗೇಶ್, ಅಂದು ಹಠಮಾಡಿದ ಮಗ ಈಗ ಸಾಧಿಸಿದ್ದಾನೆ. ನೋಡಲು ಅಪ್ಪ-ಅಮ್ಮ ಇಲ್ಲ ಎಂಬ ನೋವನ್ನ ಹೊರಹಾಕಿದ್ದಾರೆ. ಇಂದಿನ ಸಮಯಕ್ಕೆ ಸಾಧನೆ ಶ್ರಮ ತಪಸ್ಸು ಯಶಸ್ಸು ಕಾಮಿಡಿ ಪೀಸು ಅಂದರೆ ಫಾರ್ ಗ್ರ್ಯಾಂಟೆಡ್. ಅಣಕ ಅಪಮಾನವೇ ಯಶಸ್ಸು ಎಂಬ ಕಲ್ಪನೆಯ ಕಾಲದಲ್ಲಿ ಬಂದು ನಿಂತಿರುವೆ ಎಂದಿರುವ ಜಗ್ಗೇಶ್, ಮನಸ್ಸು ಎಂಬ ಮೊಸರನ್ನು ರಾಯರು ಎಂಬ ಕಡೆಗೋಲಿನಿಂದ ಕಡೆದು ತಿಳಿಯಾದ ಮಜ್ಜಿಗೆ ಮಾಡಿಕೊಂಡು ಪ್ರಶಾಂತವೆಂಬ ಸರೋವರ ಮಾಡಿಕೊಂಡಿರುವೆ ಚಂಚಲ ಮನಸ್ಸನ್ನು. ಇಂಥ ಶ್ರಮದ ಬದುಕು ಕಟ್ಟಿಕೊಂಡವ ನಾನು. ನನ್ನಂತೆ ಎಲ್ಲರೂ ಬೆಳೆಯಿರಿ ಎಂದು ಅಪ್ಪಿದರೆ, ಮುತ್ತಿಡುವಂತೆ ನಟಿಸಿ ವಿಷ ಇಟ್ಟು ಕೊಂದು ಸಂಭ್ರಮಿಸುವರು. ಇದರ ಮತ್ತೊಂದು ಹೆಸರೇ ನಂಬಿಕೆ ದ್ರೋಹದ ಕಾಲಮಾನ' ಎಂದಿದ್ದಾರೆ ಜಗ್ಗೇಶ್

ಇನ್ನೂ ಇಂದು ಶ್ರಮಕ್ಕೆ ಬೆಲೆಯಿಲ್ಲ. ಬೆಳಿಗ್ಗೆ ಹುಟ್ಟಿ ಮಧ್ಯಾಹ್ನ ಬೆಳೆದು, ರಾತ್ರಿ ಸಾಯುವ ಕಾಲಘಟ್ಟ ಎಂದಿರುವ ಜಗ್ಗೇಶ್, ಬೆವರು ಸುರಿಸದೇ ಬೆಳೆಯದೇ ಅನುಭವ ಹಂಚುವ ಜಗತ್ತು. ನನ್ನ 40 ವರ್ಷದ ಬೆಳವಣಿಗೆ ಬಳಕೆಗೆ ಉಪಯುಕ್ತ ಅನ್ನಿಸಿದರೆ ಅನುಸರಿಸಿ, ಬೆಳೆಯಿರಿ, ಉಳಿಯಿರಿ ಎಂದು ಹಿತವಚನ ಹೇಳಿದ್ದಾರೆ. ಜನ್ಮಕೊಟ್ಟವರ ಸಮಾಜದ ಮುತ್ತು, ರತ್ನ, ಹವಳ, ಪಚ್ಚೆ, ವಜ್ರವಾಗಿ. ಹಳ್ಳಿಯಿಂದ ಡೆಲ್ಲಿಯ ಬೆವರಿನ ಪ್ರಯಾಣದ ನಿಮ್ಮ ಮನೆಯ ಬಂಧುವಿಗೆ ಹರಸುತ್ತಿರಿ' ಎಂದು ಜಗ್ಗೇಶ್ ತಮ್ಮ ಸಾಲುಗಳಿಗೆ ಪೂರ್ಣವಿರಾಮವನ್ನ ಹಾಕಿದ್ದಾರೆ.
ಜಗ್ಗೇಶ್ ಅವರ ಈ ಮನದ ಮಾತು, ಸಾಮಾಜಿಕ ಜಾಲತಾಣದಲ್ಲಿ ಇನ್ನೊಮ್ಮೆ ಚರ್ಚೆಗೆ ಕಾರಣವಾಗಿದೆ. ಜಗ್ಗೇಶ್ ಹೇಳಿದ ನಂಬಿಕೆ ದ್ರೋಹದ ಕಥೆ ಏನು..? ನಂಬಿಕೆ ದ್ರೋಹ ಮಾಡಿದ್ದು ಯಾರು..? ವಿಷ ಇಟ್ಟು ಕೊಂದು ಸಂಭ್ರಮಿಸಿದವರು ಯಾರು..? ಹೀಗೆ ಹತ್ತಾರು ಪ್ರಶ್ನೆಗಳು ಸದ್ಯಕ್ಕೆ ಅನೇಕರ ತಲೆಯಲ್ಲಿ ಗಿರಕಿ ಹೊಡೆಯುತ್ತಿವೆ. ಪ್ರಶ್ನೆಗಳಿಗೆ ಉತ್ತರವನ್ನ ಜಗ್ಗೇಶ್ ಅವರ ಬಳಿಯೇ ಕೇಳಿ ತಿಳಿದುಕೊಳ್ಳುವ ಕಾರ್ಯಕ್ರಮ ಕೂಡ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.


Click it and Unblock the Notifications











