Don't Miss!
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- News Namma Metro Purple Line: ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ, ಕಾರಣಗಳೇನು?
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕವಿಶೈಲಕ್ಕೆ ಭೇಟಿ ನೀಡಿ ಅದ್ಭುತ ಅನುಭವ ಹಂಚಿಕೊಂಡ ಜಗ್ಗೇಶ್
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟ ಜಗ್ಗೇಶ್, ಅಧ್ಯಾತ್ಮ, ತಮ್ಮ ಸಿನಿಮಾ, ಕುಟುಂಬ, ಅಭಿಮಾನಿಗಳು ದಿನನಿತ್ಯದ ಜೀವನ ಇತರೆ ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
Recommended Video
ಇದೀಗ 'ರಾಘವೇಂದ್ರ ಸ್ಟೋರ್ಸ್' ಸಿನಿಮಾದ ಚಿತ್ರೀಕರಣಕ್ಕಾಗಿ ಮಲೆನಾಡಿನಲ್ಲಿ ಬೀಡು ಬಿಟ್ಟಿರುವ ಜಗ್ಗೇಶ್, ಚಿತ್ರೀಕರಣದ ಬಿಡುವಿನ ಸಮಯದಲ್ಲಿ ಕುಪ್ಪಳ್ಳಿಯ ಕುವೆಂಪುರವರ ಕವಿಮನೆಗೆ ಭೇಟಿ ನೀಡಿದ್ದಾರೆ. ಅಲ್ಲಿ ತಮಗೆ ಆದ ಅದ್ಭುತ ಅನುಭೂತಿಯನ್ನು ಪದಗಳಲ್ಲಿ ಹಿಡಿದಿಡುವ ಯತ್ನ ಮಾಡಿದ್ದಾರೆ.
ಕವಿಮನೆ, ಕವಿ ಶೈಲಕ್ಕೆ ಭೇಟಿ ನೀಡಿದಾಗ ತಮ್ಮ ಮನದಲ್ಲಿ ಮೂಡಿದ ಭಾವನೆಗಳಿಗೆ, ಯೋಚನೆಗಳಿಗೆ ಜಗ್ಗೇಶ್ ಅಕ್ಷರ ರೂಪ ನೀಡಿದ್ದು, ಅದು ಹೀಗಿದೆ...
''ರಾಘವೇಂದ್ರ ಸ್ಟೋರ್ಸ್ ಚಿತ್ರೀಕರಣ 2ಘಂಟೆ ವಿರಾಮ ಸಿಕ್ಕಿತು. ಸಮಯ ವ್ಯೆರ್ಥ ಮಾಡಲು ಮನಸ್ಸು ಬರಲಿಲ್ಲಾ. 14ಕಿಮಿ ದೂರದಲ್ಲಿ ನನ್ನ ನೆಚ್ಚಿನ ಕವಿ ಕುವೆಂಪುರವರ ಮನೆ ನೆನಪಾಯಿತು ಹೋಗಿಬಿಟ್ಟೆ. ಅವರ ಮನೆಯ ಆವರಣಕ್ಕೆ ಕಾಲಿಟ್ಟಾಗ ಏನೋ ನನಗರಿಯದೆ ರೋಮಾಂಚನ ಆಯಿತು. ಕುವೆಂಪುರವರ ಮನೆ ಒಂದು ಮೂಲೆಯು ಬಿಡದಂತೆ ತಾಳ್ಮೆಯಿಂದ ಸುತ್ತು ಹಾಕಿದೆ. ಅವರ ಬಾಲ್ಯದಿಂದ ಕೊನೆಯವರೆಗು ಬಳಸಿದ ವಸ್ತು. ಅವರ ಮಗ ಶ್ರೀ ಪೂರ್ಣಚಂದ್ರ ತೇಜಸ್ವಿಯವರು ಕೂಡಿಟ್ಟ ತಮ್ಮ ತಂದೆಯ ಅಮೂಲ್ಯ ಚಿತ್ರ ಭಂಡಾರ. ಕುವೆಂಪು ರವರ ತಾತ ತಂದೆ ತಾಯಿ ಬಂಧುಗಳು ಬಳಸಿದ ಪುರಾತನ ವಸ್ತುಗಳು. ಅವರ ಪ್ರಥಮ ಬರವಣಿಗೆ ಅವರ ಗುರುಗಳಿಗೆ ಅರ್ಪಣೆಯ ನುಡಿಮುತ್ತು. ಅದರಲ್ಲಿ ತಿದ್ದಿ ಬರೆದ ಪದಪುಂಜ ನನ್ನನ್ನು ಅವರ ಕಾಲಕ್ಕೆ ಕರೆದೋಯಿತು. ಅವರು ಹುಟ್ಟಿದ ವರ್ಷ 1904 ಎಂದಾಗ ಅಯ್ಯೋ ಸಾಯಿಬಾಬ ಬದುಕಿದ್ದರೆ ಆಗ ಎಂದು ಮನಚಿಂತಿಸಿತು. ಅವರ ತಂದೆಯ ಜೊತೆ ಕುಳಿತ ಬಾಲಕನ ಚಿತ್ರ ಹಾಗು ಅವರ ತಂದೆಯ ಮುಖ ಲಕ್ಷಣ ಒಬ್ಬ ಪಾಳೆಗಾರನಂತೆ ಭಾಸವಾಯಿತು.
ಅವರ ತಾಯಿ ಬಳಸಿದ ಅಡುಗೆ ಸಾಮಗ್ರಿಗಳು ನನ್ನ ಅಜ್ಜಿಯ ಮನೆ ನೆನಪಿಸಿತು..ವಾವ್ ಎಂಥ ಅದ್ಭುತ ವಂಶ ಅವರದು. ಎಂಥ ಪರಿಸರ ಅವರು ಹುಟ್ಟಿದ ಮನೆ..ಅವರ ಎರಡನೆಯ ಮಗನ ಹೆಂಡತಿ ನೋಡಿ ನನ್ನ ಸೊಸೆ ನೆನಪಾದಳು. ಜಾತಿಗಳ ಲೆಕ್ಕ ತಪ್ಪದೆ ಹೆಜ್ಜೆಹಾಕುವ ಆ ಕಾಲದಲ್ಲಿ ಎಂಥ ವಿಶಾಲ ಹೃದಯವಿತ್ತು ಕವಿಗಳಿಗೆ. ವಿದೇಶಿ ಹೆಣ್ಣನ್ನು ಮನೆಸೊಸೆಯಾಗಿ ಮನೆ ತುಂಬಿಸಿಕೊಂಡು ವಿಶೇಷ ವ್ಯೆಕ್ತಿಯಾಗಿ ಹೃದಯದಲ್ಲಿ ಉಳಿದು ಬಿಟ್ಟರು ಕುವೆಂಪುರವರು. ನಾನು ನಮ್ಮ ತಂದೆಯನ್ನ ಅಣ್ಣ ಎಂದು ಕರೆಯುತ್ತಿದ್ದೆ ಕುವೆಂಪುರವರ ಮಗನು ಅವರ ಅಣ್ಣ ಎಂದು ಕರೆಯುತ್ತಿದ್ದರು ಎಂದಾಗ ನನ್ನ ಮನ ನನ್ನ ಅಪ್ಪನ ಕಡೆ ವಾಲಿತು ಭಾವುಕನಾಗಿಬಿಟ್ಟೆ. ಕುವೆಂಪುರವರು ಅವರ ಪತ್ನಿಯನ್ನು ಎಷ್ಟು ಪ್ರೀತಿಸುತ್ತಿದ್ದರು ಎನ್ನಲು ಅವರ ಮಾತು ತಿಳಿಸುತ್ತದೆ ನನ್ನ ಧರ್ಮ ಪತ್ನಿ ಇದ್ದಿದ್ದರೆ ನಾನು ಶತವರ್ಷ ಬದುಕುತ್ತಿದ್ದೆ ಎಂದದ್ದು. ಎಂಥ ಅರ್ಥಪೂರ್ಣ ದಾಂಪತ್ಯ ಅವರದು ಅಲ್ಲವೆ.
ಅವರ ನೋಡುವ ಅವಕಾಶ ಸಿಗಲಿಲ್ಲಾ ಆದರೆ ಅವರ ಬಿಳಿಮುಡಿ ಕತ್ತರಿಸಿ ಶೇಖರಿಸಿ ಇಟ್ಟದ್ದು ನೋಡಿ ಅವರನ್ನೆ ನೋಡಿದ ಆನಂದವಾಯಿತು..ಅವರ ಮನೆಯ ಮುಂದೆ ಕೂತು ಫೋಟೋ ತೆಗೆಸಿಕೊಳ್ಳಲು ಕೂತಾಗ ಮನಸಲ್ಲಿ ಅವರೊಟ್ಟಿಗೆ ನನ್ನ ಹಿಂದಿನ ಜನ್ಮದಲ್ಲಿ ಕೂತಂತೆ ಭ್ರಮಿಸಿದೆ.
ರಾಮಕೃಷ್ಣ ಪರಮಹಂಸರ ಶಿಷ್ಯರಲ್ಲಿ ಧೀಕ್ಷೆ ಪಡೆದ ವಿಷಯವಂತು ನನ್ನ ಮನಸ್ಸಿಗೆ ಹೇಳಲಾಗದ ಆನಂದವಾಯಿತು. ಕಾರಣ ಆಧ್ಯಾತ್ಮಿಕ ಮಾರ್ಗದಲ್ಲಿ ಸಣ್ಣ ಹೆಜ್ಜೆಹಾಕುತ್ತಿರುವ ನನಗೆ ಗೊತ್ತು ಆ ನಡೆಯ ಆನಂದ.
ಒಟ್ಟಾರೆ ರಾಜ ಮಹಾರಾಜರು ಆಶೀರ್ವಾದ.. ದೇಶವಿದೇಶದಲ್ಲಿ ಓದುಗ ಅಭಿಮಾನಿಗಳು.. ಸತ್ತಮೇಲು ಸಾವಿರ ವರ್ಷ ನೆನಪಲ್ಲಿ ಉಳಿಯುವ ಸಾಧನೆ. ಪ್ರಶಸ್ತಿ ಪುರಸ್ಕಾರಕ್ಕೆ ಇವರಿಂದ ಗೌರವ ಬಂದದ್ದೇನು ಅನ್ನಿಸುವಷ್ಟು ಪ್ರಶಸ್ತಿಗಳು. ಇದನ್ನಲ್ಲವೆ ಹೇಳೋದು ಬದುಕಿದರೆ ರಾಜನಂತೆ ಬದುಕು ಸತ್ತಮೇಲೆ ದೇವರಾಗು ಎಂದು. ಇವರ ಬದುಕೆ ಅದ್ಭುತ ಅನುಕರಣೀಯ ಅಮೋಘ. ಇಂದು ನನ್ನ ಸಮಯ ಸಾರ್ಥಕ ಅನ್ನಿಸಿತು. ಸಮಯಸಿಕ್ಕರೆ ರಸಋಷಿಮನೆಗೆ ನೀವು ಹೋಗಿಬನ್ನಿ''.
ನಟ ಜಗ್ಗೇಶ್ ಪ್ರಸ್ತುತ 'ರಾಘವೇಂದ್ರ ಸ್ಟೋರ್ಸ್' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾವನ್ನು 'ರಾಮಚಾರಿ', 'ರಾಜಕುಮಾರ', 'ಯುವರತ್ನ' ಸಿನಿಮಾಗಳನ್ನು ನಿರ್ದೇಶಿಸಿರುವ ಸಂತೋಶ್ ಆನಂದ್ ರಾಮ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಬಗ್ಗೆ ಜಗ್ಗೇಶ್ಗೆ ಭಾರಿ ನಿರೀಕ್ಷೆ ಇದ್ದು, ''ಈ ಸಿನಿಮಾ ನನ್ನ ವೃತ್ತಿ ಜೀವನದಲ್ಲಿ ನವಿಲುಗರಿಯಂತೆ ಹೊಳೆಯಲಿದೆ'' ಎಂದಿದ್ದಾರೆ. ಸಿನಿಮಾದ ಎರಡನೇ ಹಂತದ ಚಿತ್ರೀಕರಣ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿಗಳಲ್ಲಿ ಭರದಿಂದ ಸಾಗಿದೆ.