ಹೆಂಡತಿ ಪರ ನಿಂತು ಜಗ್ಗೇಶ್ ಚಿತ್ರರಂಗದಲೇ ಬ್ಯಾನ್ ಆಗಿದ್ರು!
Recommended Video
ತಾನಾಯ್ತು.. ತನ್ನ ಸಿನಿಮಾ ಆಯ್ತು ಎಂದು ಸುಮ್ಮನೆ ಕೂರುವ ನಟ ಜಗ್ಗೇಶ್ ಅಲ್ಲ. ಚಿತ್ರರಂಗದ ಬೆಳವಣೆಗೆ ಗಮನಿಸುತ್ತಾ.. ಸಮಸ್ಯೆ ಇದ್ದಾಗ ಎದ್ದು ನಿಂತು ಮಾತನಾಡುವ ರೂಢಿ ಅವರು ಬೆಳೆಸಿಕೊಂಡು ಬಂದಿದ್ದಾರೆ. ಇದೀಗ ಮತ್ತೆ ಚಿತ್ರರಂಗ ಮತ್ತೊಂದು ವಿಷಯದ ಬಗ್ಗೆ ಧ್ವನಿ ಎತ್ತಿದ್ದಾರೆ.
ಇತ್ತೀಚಿಗೆ ಕಲಾವಿದರ ಸಂಘದಲ್ಲಿ ನಡೆದ ಕ್ರಿಟಿಕ್ಸ್ ಅವಾರ್ಡ್ ಕಾರ್ಯಕ್ರಮದಲ್ಲಿ ಜಗ್ಗೇಶ್ ಭಾಗಿಯಾಗಿದ್ದರು. ಈ ವೇಳೆ ಇಂದಿನ ಚಿತ್ರರಂಗದ ಪರಿಸ್ಥಿತಿ ಬಗ್ಗೆ ಅವರು ಮಾತನಾಡಿದರು. ಇವತ್ತು ಚಿತ್ರರಂಗದಲ್ಲಿ ಕಲಾವಿದರ ನಡುವೆ ಒಗ್ಗಟ್ಟು ಇಲ್ಲ ಎಂದು ಜಗ್ಗೇಶ್ ಬೇಸರ ವ್ಯಕ್ತಪಡಿಸಿದರು.
ಅಂದು ರಾಜ್ ಕುಮಾರ್ ಕಾಲದಲ್ಲಿ ಇದ್ದ ಚಿತ್ರರಂಗದ ಒಗ್ಗಟ್ಟಿನ ಬಗ್ಗೆ ಉದಾಹರಣೆ ನೀಡಿದರು. ಚಿತ್ರರಂಗದಿಂದ ಬ್ಯಾನ್ ಆಗಿದ್ದ ತಮ್ಮ ಪರ ಹೇಗೆ ರಾಜ್ ಕುಮಾರ್ ಹಾಗೂ ಇಡೀ ಚಿತ್ರರಂಗ ನಿಂತುಕೊಂಡಿತ್ತು ಎಂದು ತಿಳಿಸಿದರು.

ಹೆಂಡತಿ ಬಗ್ಗೆ ಕೆಟ್ಟ ಮಾತು
ತುಂಬ ವರ್ಷಗಳ ಹಿಂದಿನ ಮಾತು.. ಆಗ ಜಗ್ಗೇಶ್ ಸಿನಿಮಾಗಳ ಮೇಲೆ ಸಿನಿಮಾ ಮಾಡುತ್ತಿದ್ದರು. ಒಮ್ಮೆ ಜಗ್ಗೇಶ್ ಬಳಿ ನಿರ್ಮಾಪಕರೊಬ್ಬರು ಗಲಾಟೆ ಮಾಡಿಕೊಂಡು, ಜಗ್ಗೇಶ್ ಪತ್ನಿ ಪರಿಮಳ ಬಗ್ಗೆ ಕೆಟ್ಟ ಮಾತು ಆಡಿದರಂತೆ. ಸಿನಿಮಾದ ವಿಚಾರಕ್ಕೆ ಪತ್ನಿಯನ್ನು ಬೈದ ನಿರ್ಮಾಪಕನನ್ನು ಕಂಡು ಜಗ್ಗೇಶ್ ಕೋಪಿಸಿಕೊಂಡರು. ಆ ಪರಿಸ್ಥಿತಿಯಲ್ಲಿ ಜಗ್ಗೇಶ್ ಆ ನಿರ್ಮಾಪಕರ ಮೇಲೆ ಕೈ ಮಾಡಿದರು.

ಚಿತ್ರರಂಗದಿಂದ ಬ್ಯಾನ್
ನಿರ್ಮಾಪಕನ ಮೇಲೆ ಜಗ್ಗೇಶ್ ಕೈ ಮಾಡಿದರು ಎನ್ನುವ ಕಾರಣಕ್ಕೆ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಲಾಗಿತ್ತು. ಅನೇಕರು ಜಗ್ಗೇಶ್ ಮಾಡಿದ್ದು ತಪ್ಪು ಎಂದು ಸಿನಿಮಾ ಇಂಡಸ್ಟ್ರಿಯಿಂದ ಹೊರ ಹಾಕಿದರು. ನಿರ್ಮಾಪಕನನ್ನು ಹೊಡೆದ ಜಗ್ಗೇಶ್ ರಿಗೆ ಯಾವುದೇ ಅವಕಾಶ ಸಿಗಬಾರದು ಎಂದರು. ಈ ವೇಳೆ ಜಗ್ಗೇಶ್ ತುಂಬ ಬೇಸರಗೊಂಡರು.

ಜಗ್ಗೇಶ್ ಗಾಗಿ ಬಂದ ರಾಜ್ ಕುಮಾರ್
ಬ್ಯಾನ್ ಆದ ಬಳಿಕ ಜಗ್ಗೇಶ್ ನೇರವಾಗಿ ರಾಜ್ ಕುಮಾರ್ ಮನೆಗೆ ಹೋದರು. ಜಗ್ಗೇಶ್ ಪರಿಸ್ಥಿತಿ ಕಂಡ ರಾಜ್ ಕುಮಾರ್ ತಕ್ಷಣ ಎದ್ದು, ಎಲ್ಲರನ್ನು ಸೇರಿಸಿದರು. ಅಂಬರೀಶ್ ಕೂಡ ಬಂದರು. ಎಲ್ಲರೂ ಸೇರಿ ಜಗ್ಗೇಶ್ ಪರವಾಗಿ ಮಾತನಾಡಿದರು. ಒಬ್ಬ ಒಳ್ಳೆಯ ಕಲಾವಿದನನ್ನು ಅವಕಾಶ ನೀಡದೆ ಬ್ಯಾನ್ ಮಾಡುವುದು ಸರಿಯಲ್ಲ ಎಂದು ರಾಜ್ ಹೇಳಿದರು.

ಅಂದಿನ ಒಗ್ಗಟ್ಟು ಈಗ ಇಲ್ಲ
ಈ ಘಟನೆಯ ಉದಾಹರಣೆ ನೀಡಿದ ಜಗ್ಗೇಶ್ ಆಗ ಚಿತ್ರರಂಗದಲ್ಲಿ ಒಗ್ಗಟ್ಟು ಇತ್ತು. ಈಗ ಅದು ಕಾಣುತ್ತಿಲ್ಲ. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಎಂಬ ಪುಣ್ಯಾತ್ಮರು ಇದ್ದ ಚಿತ್ರರಂಗ ಮುಗಿದು ಹೋಯ್ತು. ಆಗ ಯಾರಿಗೆ ಸಮಸ್ಯೆ ಇದ್ದರೆ ಎಲ್ಲರೂ ಬರುತ್ತಿದ್ದರು. ಆದರೆ ಈಗ ಹಾಗಿಲ್ಲ ಎಂದು ಜಗ್ಗೇಶ್ ಬೇಸರ ಹಂಚಿಕೊಂಡಿದರ.


Click it and Unblock the Notifications











