ಸೋತ ಸಹೋದರ, ಮಗನನ್ನು ಮೇಲೆ ಎತ್ತಲು ಜಗ್ಗೇಶ್ ಪ್ಲಾನ್
ಜಗ್ಗೇಶ್ ನಟನೆಯ ಸಿನಿಮಾಗಳು ಹಿಟ್ ಆಗುತ್ತಿವೆ. ಇತ್ತೀಚಿಗೆ ಬಂದ 'ಕಾಳಿದಾಸ ಕನ್ನಡ ಮೇಷ್ಟ್ರು' ಸಿನಿಮಾ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಆದರೆ, ಜಗ್ಗೇಶ್ ಸಹೋದರ ಕೋಮಲ್ ಕುಮಾರ್ ಹಾಗೂ ಮಗ ಗುರುರಾಜ್ ಮಾತ್ರ ಮೇಲೆ ಗೆಲುವು ಕಾಣಲು ಒದ್ದಾಡುತ್ತಿದ್ದಾರೆ.
ಹೀರೋ ಆದ ಕೋಮಲ್ ಯಶಸ್ಸು ಪಡೆಯಲು ಬಹಳ ಕಷ್ಟ ಪಟ್ಟರು. ಅತ್ತ ನಾಯಕನೂ ಆಗದೆ, ಇತ್ತ ಹಾಸ್ಯ ನಟನಾಗಿಯೂ ಅವಕಾಶಗಳನ್ನು ಕಳೆದುಕೊಂಡರು. ಇತ್ತೀಚಿಗಷ್ಟೆ ಬಿಡುಗಡೆಯಾದ ಅವರ 'ಕೆಂಪೇಗೌಡ 2' ಸಿನಿಮಾ ನಿರೀಕ್ಷೆ ಹುಟ್ಟುಹಾಕಿ ನಿರಾಸೆ ಮೂಡಿಸಿತು.
ಮತ್ತೊಂದು ಕಡೆ ಜಗ್ಗೇಶ್ ಪುತ್ರ ಗುರುರಾಜ್ ಕೂಡ ಚಿತ್ರರಂಗದಲ್ಲಿ ಬೆಳೆಯಲು ಆಗುತ್ತಿಲ್ಲ. ಆಗಾಗ ಸಿನಿಮಾ ಅವಕಾಶಗಳು ಬರುತ್ತಿದ್ದರೂ, ಯಾವುದು ಕೈ ಹಿಡಿಯುತ್ತಿಲ್ಲ. ಹೀಗಾಗಿ ಇದೀಗ ಜಗ್ಗೇಶ್ ಹೊಸ ಪ್ಲಾನ್ ಮಾಡಿದ್ದಾರೆ.

ಮತ್ತೆ ನಿರ್ದೇಶನಕ್ಕೆ ಮರಳಿದ ಜಗ್ಗೇಶ್
ಜಗ್ಗೇಶ್ ನಟನೆ ಮಾತ್ರವಲ್ಲದೆ ನಿರ್ದೇಶಕನಾಗಿಯೂ ಗುರುತಿಸಿಕೊಂಡಿದ್ದಾರೆ. ನೂರು ಸಿನಿಮಾಗಳಲ್ಲಿ ನಟನೆ ಮಾಡಿದ ನಂತರ ತಮ್ಮ ಅನುಭವದ ಮೂಲಕ ಡೈರೆಕ್ಟರ್ ಆದರು. 'ಗುರು' ಜಗ್ಗೇಶ್ ನಿರ್ದೇಶನದ ಮೊದಲ ಸಿನಿಮಾ. ಈ ಸಿನಿಮಾ 2012 ರಲ್ಲಿ ಬಿಡುಗಡೆಯಾಯ್ತು. ಆ ಬಳಿಕ 2017ರಲ್ಲಿ 'ಮೇಲುಕೋಟೆ ಮಂಜ' ಸಿನಿಮಾಗೆ ಆಕ್ಷನ್ ಕಟ್ ಹೇಳಿದರು. ಇದೀಗ ಮೂರನೇ ಸಿನಿಮಾವನ್ನು ನಿರ್ದೇಶನ ಮಾಡಲು ಮುಂದಾಗಿದ್ದಾರೆ.

ತಮ್ಮ ಮತ್ತು ಮಗನೇ ನಾಯಕರು
ಜಗ್ಗೇಶ್ ಹೊಸ ಸಿನಿಮಾಗೆ ಕಲಾವಿದರ ಆಯ್ಕೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ನಾಯಕರಾಗಿ ಅವರ ಸಹೋದರ ಕೋಮಲ್ ಕುಮಾರ್ ಹಾಗೂ ಪುತ್ರ ಗುರುರಾಜ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ 'ಗುರು' ಸಿನಿಮಾದಲ್ಲಿ ತಮ್ಮ ಮಗನಿಗೆ ಜಗ್ಗೇಶ್ ಆಕ್ಷನ್ ಕಟ್ ಹೇಳಿದ್ದರು. ಆದರೆ, ಇದೀಗ ಮೊದಲ ಬಾರಿಗೆ ಕೋಮಲ್ ರೊಂದಿಗೆ ನಿರ್ದೇಶಕರಾಗಿ ಜಗ್ಗೇಶ್ ಸಿನಿಮಾ ಮಾಡುತ್ತಿದ್ದಾರೆ.

ಮೇಲೆ ಎತ್ತುವ ಕೆಲಸ
ತಮ್ಮ ಸಿನಿಮಾಗಳು ಹಿಟ್ ಆಗುತ್ತಿವೆ, ಅವಕಾಶಗಳು ಈಗಲೂ ಹುಡುಕಿಕೊಂಡು ಬರುತ್ತಿವೆ. ಆದರೆ, ಮಗ ಹಾಗೂ ಸಹೋದರರ ಕಡೆ ನೋಡಬೇಕಲ್ಲವೇ. ಹೀಗಾಗಿ ಕೋಮಲ್ ಹಾಗೂ ಗುರು ಸಿನಿಮಾದ ಬಗ್ಗೆ ಜಗ್ಗೇಶ್ ಗಮನ ಹರಿಸಿದ್ದಾರೆ. ಬೇರೆ ನಿರ್ದೇಶಕರ ಪ್ರಯತ್ನಗಳ ನಂತರ, ತಾವೇ ಒಂದು ಸಿನಿಮಾ ಮಾಡಿ ಬಿಡೋಣ ಎಂದು ಹೊಸ ಕನಸುಗಳನ್ನು ಹೊತ್ತು ಹೆಜ್ಜೆ ಇಟ್ಟಿದ್ದಾರೆ.

ಯಶಸ್ಸು ಸಿಗಬಹುದೇ?
ಕೋಮಲ್ ಹಾಗೂ ಗುರು ಸಿನಿಮಾಗಳು ಯಶಸ್ಸು ಕಂಡು ಎಷ್ಟೋ ವರ್ಷಗಳು ಕಳೆದಿವೆ. ಈಗ ಜಗ್ಗೇಶ್ ಈ ಇಬ್ಬರಿಗೆ ಶಕ್ತಿ ತುಂಬಲು ಬಂದಿದ್ದಾರೆ. ಹೀಗಾಗಿ ಈ ಹೊಸ ಸಿನಿಮಾ ಈ ಇಬ್ಬರಿಗೆ ಗೆಲುವು ತಂದುಕೊಡುತ್ತದೆಯೇ ಎನ್ನುವ ನಿರೀಕ್ಷೆ ಮೂಡಿದೆ. ಈ ಇಬ್ಬರಿಗೆ ಮಾತ್ರವಲ್ಲದೆ, ನಟ ಜಗ್ಗೇಶ್ ಕೂಡ ಡೈರೆಕ್ಟರ್ ಆಗಿ ಗೆದ್ದು, ಸಾಬೀತು ಮಾಡಬೇಕಾಗಿದೆ. ಎನಿ ವೇ ಈ ಸಿನಿಮಾಗೆ ಆಲ್ ದಿ ಬೆಸ್ಟ್.


Click it and Unblock the Notifications











