ದರ್ಶನ್-ಸುದೀಪ್ ವಿಚಾರದಲ್ಲಿ ಹೊಸ ಭರವಸೆ ಮೂಡಿಸಿದ ಜಗ್ಗೇಶ್ ಟ್ವೀಟ್
Recommended Video

ಒಂದು ಕಾಲದಲ್ಲಿ ಅನೂನ್ಯವಾಗಿದ್ದ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ರಮೇಣ ಕಾರಣಾಂತರಗಳಿಂದ ಬೇರ್ಪಟ್ಟರು. ಕಳೆದ ಒಂದೂವರೆ ವರ್ಷದಿಂದ ಮುಖಾಮುಖಿ ಭೇಟಿಯಿಲ್ಲ, ಒಬ್ಬರ ಬಗ್ಗೆ ಒಬ್ಬರು ಮಾತಿಲ್ಲದೇ ತಾವಾಯಿತು, ತಮ್ಮ ಸಿನಿಮಾವಾಯಿತು ಎಂದು ಇದ್ದಾರೆ.
ಆದ್ರೆ, ಅಸಂಖ್ಯಾತ ಅಭಿಮಾನಿಗಳು ಮಾತ್ರ ಇವರಿಬ್ಬರು ಒಂದಾಗಬೇಕು, ಮತ್ತೆ ಇವರನ್ನ ಮೊದಲಿನಂತೆ ನೋಡಬೇಕು ಎಂಬ ಆಸೆಯಿಂದ ಕಾಯುತ್ತಾ ಕೂತಿದ್ದಾರೆ. ಈ ಘಳಿಗೆಗಾಗಿ ಇಬ್ಬರು ಸ್ಟಾರ್ ನಟರ ಅಭಿಮಾನಿಗಳು ಬಕಪಕ್ಷಿಗಳಂತೆ ಕಾಯ್ತಿದ್ದಾರೆ.
ಇದೀಗ, ವಿಶೇಷ ಅಂದ್ರೆ, ದರ್ಶನ್ ಮತ್ತು ಸುದೀಪ್ ವಿಚಾರದಲ್ಲಿ ಅಭಿಮಾನಿಗಳಂತೆ ನವರಸ ನಾಯಕ ಜಗ್ಗೇಶ್ ಕೂಡ ಒಂದೊಳ್ಳೆ ದಿನಕ್ಕಾಗಿ ಕಾಯ್ತಿದ್ದಾರಂತೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ತಮ್ಮ ಆಶಾಭಾವನೆ ಹೊರಹಾಕಿರುವ ಜಗ್ಗೇಶ್ ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿದ್ದಾರೆ.

ದಚ್ಚು-ಕಿಚ್ಚ ಒಂದಾಗಬೇಕು
ಕನ್ನಡದ ಹೊಸ ದಿಗ್ಗಜರು ಎಂದೇ ಬಿಂಬಿತವಾಗಿದ್ದ ದರ್ಶನ್ ಮತ್ತು ಸುದೀಪ್ ಅವರ ಸ್ನೇಹ ಮತ್ತೊಮ್ಮೆ ಒಂದಾಗಬೇಕು. ಎಲ್ಲವನ್ನ ಮರೆತು ಈ ಇಬ್ಬರು ಒಟ್ಟಾಗಿ ಬರಬೇಕು ಎಂದು ನವರಸ ನಾಯಕ ಜಗ್ಗೇಶ್ ಆಸೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅಭಿಮಾನಿಯೊಬ್ಬ ಮಾಡಿದ ಟ್ವೀಟ್ ಗೆ ಪ್ರತಿಕ್ರಿಯೆ ನೀಡುವ ಮೂಲಕ ಸ್ಟಾರ್ ನಟರ ಭಕ್ತರಲ್ಲಿ ಆಶಾಭಾವನೆ ಮೂಡಿಸಿದ್ದಾರೆ.
ಜಗ್ಗೇಶ್ ಏನಂದ್ರು.?
ಅಭಿಮಾನಿಯೊಬ್ಬ ದರ್ಶನ್ ಮತ್ತು ಸುದೀಪ್ ಒಟ್ಟಿಗೆ ಇರುವು ಫೋಟೋ ಹಾಕಿ ''ದೇವರೆ ಕರುನಾಡಿನ ದ್ವಿತೀಯ ಈ ದಿಗ್ಗಜರು ಮತ್ತೆ ಇರಿತಿ ನೋಡುವುದು ಯಾವಾಗ.?'' ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಜಗ್ಗೇಶ್ ''ನಿಮ್ಮ ಪ್ರೀತಿ ಹಾರೈಕೆಯಿಂದ ಅವರಿಬ್ಬರು ಹೀಗೆ ಇರುತ್ತಾರೆ..ಅನುಮಾನ ಬೇಡ.. ಎಷ್ಟೋ ಬಾರಿ ಅಣ್ಣ-ತಮ್ಮ, ಗಂಡ-ಹೆಂಡತಿ, ಬಂಧು-ಬಳಗ, ದೇಶ-ದೇಶಗಳ ಸ್ನೇಹದ ಮುನಿಸು ಮಳೆ ಬಂದ ಮೇಲೆ ಕರಗೋ ಮೋಡದಂತೆ ಕರಗುತ್ತದೆ..ಮುನಿಸು ಕ್ಷಣಿಕ..ಸ್ನೇಹ ನಿರಂತರ.. ಅವರ ಸ್ನೇಹ ಚಿಗುರಲಿ ಎಂದು ಆಶಾಭಾವದೊಂದಿಗೆ ನಿಮ್ಮಂತೆ ನಾನು ಒಬ್ಬ ಕಾಯುತ್ತಿರುವೆ..'' ಎಂದಿದ್ದಾರೆ.

'ದರ್ಶನ್ ಕನ್ನಡದ ರಜನಿಕಾಂತ್' ಎಂದಿದ್ದ ಜಗ್ಗು
ಇತ್ತೀಚಿಗಷ್ಟೆ ಟಿವಿ ಸಂದರ್ಶನವೊಂದರಲ್ಲಿ ದರ್ಶನ್ ಬಗ್ಗೆ ಮಾತನಾಡಿದ್ದ ಜಗ್ಗೇಶ್ ''ದರ್ಶನ್ ಕನ್ನಡದ ರಜನಿಕಾಂತ್'' ಎಂದು ಹಾಡಿ ಹೊಗಳಿದ್ದರು. ''ದರ್ಶನ್ ಒಂದು ರೀತಿಯಲ್ಲಿ ನನ್ನ ಕ್ಯಾರೆಕ್ಟರ್. ನಾನಾದ್ರು ಸ್ವಲ್ಪ ನೇರ ನುಡಿ ಅಂದು ಬಿಡುತ್ತೇನೆ. ಆದ್ರೆ, ಅವನು ಯಾರಿಗೂ ಏನೂ ಅನ್ನಲ್ಲ. ಒಬ್ಬನೇ ನೋವು ತಿಂತಾನೆ ಒಳಗೆ ಇಟ್ಕೊಂಡು. ನನ್ನ ಪ್ರಕಾರ ಅವನು ಒಪನ್ ಅಪ್ ಆದ್ರೆ, ಅವನು ಕನ್ನಡದ ರಜನಿಕಾಂತ್'' ಎಂದು ಜಗ್ಗೇಶ್ ಅವರು ಹೇಳಿದ್ದರು.

ಕನ್ನಡದಲ್ಲಿ 100 ಕೋಟಿ ಕ್ಲಬ್ ಸೇರೋ ತಾಕತ್ ಇದೆ
''ಕರೆಕ್ಟ್ ಆಗಿ ದರ್ಶನ್ ನ ಹಾಕ್ಕೊಂಡು ಸಿನಿಮಾ ಮಾಡಿದ್ರೆ, ಕನ್ನಡದಲ್ಲಿ ಸಲ್ಮಾನ್ ಖಾನ್ ರೇಂಜ್ ಗೆ, 100 ಕೋಟಿ ಕ್ಲಬ್ ಗೆ ದರ್ಶನ್ ಹೋಗ್ತಾರೆ'' ಎಂದು ಹೆಮ್ಮೆಯಿಂದ ಹೇಳಿದ್ದರು ಜಗ್ಗೇಶ್. ನವರಸ ನಾಯಕನ ಈ ಮಾತುಗಳು ಕನ್ನಡ ನಟರಿಗೆ ಮತ್ತು ಕನ್ನಡ ಚಿತ್ರರಂಗಕ್ಕೆ ಶಕ್ತಿ ತುಂಬಿದಂತಾಗಿದೆ. ಇದುವರೆಗೂ 100 ಕೋಟಿ ಕ್ಲಬ್ ಗೆ ಕನ್ನಡ ಸಿನಿಮಾಗಳು ಸೇರಿಲ್ಲ. ಮುಂದಿನ ದಿನಗಳಲ್ಲಿ ಇದು ಸಾಧ್ಯ ಎಂದು ಜಗ್ಗೇಶ್ ಭವಿಷ್ಯ ನುಡಿದಿದ್ದಾರೆ.

ಸುದೀಪ್ ಜ್ಞಾನದ ಗಣಿ
ಇನ್ನು ಅದೇ ಸಂದರ್ಶನದಲ್ಲಿ ಕಿಚ್ಚ ಸುದೀಪ್ ಬಗ್ಗೆ ಮಾತನಾಡಿದ್ದ ಜಗ್ಗೇಶ್ ''ಸುದೀಪ್ ಜ್ಞಾನದ ಗಣಿ. ಅವರಿಗೆ ಎಷ್ಟು ಗೊತ್ತಿದೆ ಅಂದ್ರೆ ಮೋಸ್ಟ್ ಎಜುಕೇಟೆಡ್ ವ್ಯಕ್ತಿ. ಬಟ್ ಎಲ್ಲೂ ತೋರಿಸಿಕೊಳ್ಳಲ್ಲ. ನನ್ನ ಪ್ರಕಾರ ಸುದೀಪ್ ಕೈಗೆ ಸಿಗಲ್ಲ. ಎಲ್ಲರಿಗೂ ಸಿಗಬೇಕು. ಸಾಮಾಜಿಕ ಕಾರ್ಯಗಳಿಗಾಗಿ ಬರಬೇಕು. ಅದೊಂದು ಪರಿವರ್ತನೆ ಆದ್ರೆ, ಅವರೊಬ್ಬ ಮಾಸ್ ಲೀಡರ್ ಆಗ್ತಾರೆ'' ಎಂಬ ಆಶ್ವಾಸನೆ ವ್ಯಕ್ತಪಡಿಸಿದ್ದರು.

ಇಬ್ಬರು ಬೇರೆ-ಬೇರೆ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿ
ಇತ್ತೀಚಿಗಷ್ಟೆ ಸುದೀಪ್ ಸಾರಥ್ಯದಲ್ಲಿ 'ಕನ್ನಡ ಚಲನಚಿತ್ರ ಕಪ್' ಎಂದು ಕ್ರಿಕೆಟ್ ಟೂರ್ನಿಮೆಂಟ್ ಗೆ ಚಾಲನೆ ಸಿಕ್ಕಿತ್ತು. ಇದರಲ್ಲಿ ಸುದೀಪ್, ಶಿವಣ್ಣ, ಪುನೀತ್, ರಕ್ಷಿತ್ ಶೆಟ್ಟಿ, ರವಿಚಂದ್ರನ್ ಎಲ್ಲರೂ ಭಾಗವಹಿಸಿದ್ದರು. ಆದ್ರೆ, ದರ್ಶನ್ ಇರಲಿಲ್ಲ. ಮತ್ತೊಂದೆಡೆ ಕುರುಕ್ಷೇತ್ರ ಸಿನಿಮಾ ಮುಗಿಸಿ ಯಜಮಾನ ಚಿತ್ರದಲ್ಲಿ ದಚ್ಚು ತೊಡಗಿಕೊಂಡಿದ್ದಾರೆ. ಈ ಕಡೆ ಸುದೀಪ್ 'ದಿ ವಿಲನ್' ಮುಗಿಸಿ 'ಪೈಲ್ವಾನ್' ಸಿನಿಮಾ ಆರಂಭಿಸಿದ್ದಾರೆ.


Click it and Unblock the Notifications











