ಧ್ರುವ ಎದುರು 'ಬಾಸ್ ಬಾಸ್ ಡಿಬಾಸ್' ಎಂದು ಕೂಗಿದ ದರ್ಶನ್ ಫ್ಯಾನ್ಸ್; ವೀಡಿಯೋ ವೈರಲ್
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಸದ್ಯ ಟ್ರೈಲರ್ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಮುಂಬೈನಲ್ಲಿ ಭಾರೀ ಸುದ್ದಿಗೋಷ್ಠಿಗೆ ಚಿತ್ರತಂಡ ಮುಂದಾಗಿದೆ. ಈಗಾಗಲೇ ಚಿತ್ರತಂಡ ಮುಂಬೈಗೆ ಹೊರಟಿದೆ.
ಮುಂಬೈ ಮಾರ್ಗಮಧ್ಯೆ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಚಿತ್ರತಂಡ ಭೇಟಿ ನೀಡಿತ್ತು. ಮಠದ ಶ್ರೀಗಳನ್ನು ಭೇಟಿ ಮಾಡಿ, ಆಶೀರ್ವಾದ ಪಡೆದರು. ಈ ವೇಳೆ ಅವರನ್ನು ನೋಡಲು ಅಪಾರ ಸಂಖ್ಯೆ ಜನರು ಜಮಾಯಿಸಿದ್ದರು. ಎ. ಪಿ ಅರ್ಜುನ್ ನಿರ್ದೇಶನದ 'ಮಾರ್ಟಿನ್' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ಅಕ್ಟೋಬರ್ 11ಕ್ಕೆ ಸಿನಿಮಾ ರಿಲೀಸ್ ಎಂದು ಘೋಷಿಸಿದ್ದಾರೆ.

ಬಹುಕೋಟಿ ವೆಚ್ಚದಲ್ಲಿ ಉದಯ್ ಕೆ ಮೆಹ್ತಾ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಸರ್ಜಾ ಚಿತ್ರಕ್ಕೆ ಕಥೆ ಬರೆದಿದ್ದಾರೆ. ದೊಡ್ಡಮಟ್ಟದಲ್ಲಿ ಸಿನಿಮಾ ಮೂಡಿ ಬರ್ತಿದೆ. ಕಳೆದ ವರ್ಷ ಬಂದ ಟೀಸರ್ ಹಿಟ್ ಆಗಿತ್ತು. ಇದೀಗ ಟ್ರೈಲರ್ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇದು ಪ್ಯಾನ್ ವರ್ಲ್ಡ್ ಸಿನಿಮಾ ಎನ್ನುವ ಮಟ್ಟದಲ್ಲಿ ಚಿತ್ರತಂಡ ಪ್ರಮೋಷನ್ ಮಾಡುತ್ತಿದೆ.
ಸಿದ್ಧಗಂಗಾ ಮಠದ ಬಳಿಕ ಚಿತ್ರದುರ್ಗದ ಮುರುಘಾ ಮಠಕ್ಕೂ ಧ್ರುವ ಸರ್ಜಾ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು. ಇನ್ನು ಹಿರಿಯೂರಿನ ಬಳಿಕ ಧ್ರುವ ಸರ್ಜಾ ಕಾರ್ ಏರುವ ಮುನ್ನ ಬಾಸ್ ಬಾಸ್ ಡಿಬಾಸ್ ಎನ್ನುವ ಎಂದು ದರ್ಶನ್ ಅಭಿಮಾನಿಗಳು ಕೂಗಿದ ಘಟನೆಯೂ ನಡೆಯಿತು. ಕೆಲ ದಿನಗಳಿಂದ ದರ್ಶನ್ ಹಾಗೂ ಧ್ರುವ ಸರ್ಜಾ ನಡುವಿನ ಶೀತರಸಮರ ಗೊತ್ತೇಯಿದೆ.

ದರ್ಶನ್ ಹಾಗೂ ಧ್ರುವ ಅಭಿಮಾನಿಗಳ ನಡುವೆಯೂ ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಕೆಸರೆರಚಾಟ ನಡೆಯುತ್ತಲೇ ಇದೆ. ಇತ್ತೀಚೆಗೆ ರಾಮನಗರ ಕರಗ ಉತ್ಸವದಲ್ಲಿ ಕೂಡ ಅಭಿಮಾನಿಗಳು ಜೈ ಡಿ ಬಾಸ್ ಎಂದು ಕೂಗಿದ್ದರು. ಇದೀಗ ಹಿರಿಯೂರಿನ ಬಳಿ ಧ್ರುವ ಸರ್ಜಾ ಎದುರು ಬಾಸ್ ಬಾಸ್ ಡಿ ಬಾಸ್, ನಮ್ ಬಾಸ್ ಯಾರು ಚಾಲೆಂಜಿಂಗ್ ಸ್ಟಾರ್ ಎಂದು ಕೂಗಿದ್ದಾರೆ. ಆ ವೀಡಿಯೋ ವೈರಲ್ ಆಗುತ್ತಿದೆ.
ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆಯೂ ಧ್ರುವ ಸರ್ಜಾ ಪ್ರತಿಕ್ರಿಯಿಸಿದ್ದಾರೆ. ರೇಣುಕಾಸ್ವಾಮಿಗೆ ನ್ಯಾಯ ಸಿಗಬೇಕು ಎಂದಿದ್ದಾರೆ. ತಮ್ಮ ಅಭಿಮಾನಿಗಳ ಮೂಲಕ ರೇಣುಕಾಸ್ವಾಮಿ ಕುಟುಂಬಕ್ಕೆ ಹಣದ ಸಹಾಯ ಮಾಡಿದ್ದರು. ಅವರೊಟ್ಟಿಗೆ ಫೋನ್ ಮಾಡಿ ಮಾತನಾಡಿ ಸಾಂತ್ವನ ಹೇಳಿದ್ದರು. ಧೈರ್ಯ ತುಂಬಿದ್ದರು.
"ಯಾರೋ ಒಬ್ಬರು ನೋವಲ್ಲಿದ್ದಾರೆ, ಕುಗ್ಗಿದ್ದಾರೆ ಅಂತ ನಾವು ಏನೇನೋ ಮಾತನಾಡೋಕೆ ಆಗಲ್ಲ. ಗುಂಪಲ್ಲಿ ಗೋವಿಂದ ಅಂತ ನಾನೇನೇನೋ ಮಾತನಾಡಲ್ಲ. ದರ್ಶನ್ ಸರ್ ಅವರಿಗೂ ಒಬ್ಬ ಮಗ ಇದ್ದಾನೆ, ಅವರಿಗೂ ಒಂದು ಫ್ಯಾಮಿಲಿ ಇದೆ.. ರೇಣುಕಾ ಸ್ವಾಮಿ ಅವರಿಗೂ ಒಂದು ಕುಟುಂಬ ಇದೆ"
"ಕಾನೂನಿಗಿಂತ ದೊಡ್ಡವರು ಯಾರು ಇಲ್ಲ , ಮೊದಲು ನಿರ್ಧಾರವಾಗಲಿ, ನಾವು ಏನೇನೋ ಮಾತನಾಡುವುದು ಬೇಡ ಅಂದಿದ್ದಾರೆ. ಇದೇ ಸಮಯದಲ್ಲಿ ರೇಣುಕಾಸ್ವಾಮಿ ಅವರಿಗೆ ನ್ಯಾಯ ಸಿಗಬೇಕು" ಎಂದು ಟಿವಿ9 ಸುದ್ದಿವಾಹಿನಿಗೆ ಧ್ರುವ ಸರ್ಜಾ ಪ್ರತಿಕ್ರಿಯಿಸಿದ್ದರು.


Click it and Unblock the Notifications











