ಡೆವಿಲ್ ಪ್ರಚಾರದ ಕಣಕ್ಕೆ ವಿಜಯಲಕ್ಷ್ಮಿ ಎಂಟ್ರಿ ; ಅಸಂಖ್ಯಾತ, ಅಗಣಿತ ಅಭಿಮಾನಿಗಳಿಗೆ ಹೇಳಿದ್ದೇನು ದರ್ಶನ್ ಪತ್ನಿ?
''ಕುಂಟು'' ನೆಪ ಹೇಳಿ ಕಳೆದ ವರ್ಷಾಂತ್ಯದಲ್ಲಿ ದರ್ಶನ್ ಜಾಮೀನು ಪಡೆದು ಹೊರಗಡೆ ಏನೋ ಬಂದಿದ್ದರು. ಆದರೆ.. ''ಇದ್ರೆ ನೆಮ್ಮದಿಯಾಗ್ ಇರಬೇಕ್'' ಅಂತಿದ್ದ ದರ್ಶನ್ ಗೆ ನೆಮ್ಮದಿ ಇರಲಿಲ್ಲ. ಯಾಕೆಂದರೆ ದರ್ಶನ್ ಗೆ ಮುಂದೆ ಎದುರಾಗಬಹುದಾದ ಅಪಾಯದ ಅರಿವು ಇತ್ತು. ಸ್ವತಂತ್ರ ಹಕ್ಕಿಯಾದರು ಕೂಡ ಮತ್ತೆ ಜೈಲು ಹಕ್ಕಿಯಾಗುವ ಭಯ ಇತ್ತು. ಹೀಗಾಗಿಯೇ ಭಯ ಆತಂಕದಲ್ಲಿಯೇ ವಿರಮಿಸದೆ..
ಸಮರೋಪಾದಿಯಲ್ಲಿ ದರ್ಶನ್ ತಮ್ಮ ''ಡೆವಿಲ್'' ಚಿತ್ರದ ಬಾಕಿ ಉಳಿದ ಕೆಲಸಗಳನ್ನು ಮಾಡಿದರು. ತಮ್ಮ ಕರ್ತವ್ಯ ಪೂರೈಸಿದರು. ದುರಾದೃಷ್ಟವಶಾತ್, ಆ ನಂತರ ದರ್ಶನ್ ಅಂದುಕೊಂಡತೆಯೇ ಆಯ್ತು.ಆದರೆ ''ಮಿಲನಾ ಪ್ರಕಾಶ್'' ಅದೃಷ್ಟ ಚೆನ್ನಾಗಿತ್ತು. ಸಿನಿಮಾ ಕೆಲಸ ಮುಗಿದಿತ್ತು.

ಈಗ ಚಿತ್ರ ಬಿಡುಗಡೆಗೆ ಸಿದ್ಧವಿದೆ. ಆದರೆ ಪ್ರಚಾರಕ್ಕೆ ದರ್ಶನ್ ಇಲ್ಲ. ಬಹುಶಃ ''ಡೆವಿಲ್'' ಬಿಡುಗಡೆ ಸಮಯದಲ್ಲಿ ದರ್ಶನ್ ಹೊರಗಡೆ ಬರಲು ಸಾಧ್ಯವೂ ಇಲ್ಲ. ಆದರೇನಂತೆ.. ದರ್ಶನ್ ಬೆನ್ನೆಲುಬಾದ ವಿಜಯಲಕ್ಷ್ಮಿ ಇದ್ದಾರೆ. ಚಿತ್ರದ ಜೊತೆ ದರ್ಶನ್ ಅವರ ಸಹೋದರ ದಿನಕರ್ ಇದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ದರ್ಶನ್ ಸಂಪಾದಿಸಿರುವ ಅಸಂಖ್ಯಾತ.. ಅಗಣಿತ ಅಭಿಮಾನಿಗಳಿದ್ದಾರೆ.
ಹೀಗಾಗಿಯೇ ಡಿಸೆಂಬರ್ ಹನ್ನೆರಡರಂದು ಚಿತ್ರವನ್ನು ಬಿಡುಗಡೆ ಮಾಡಿಯೇ ಸಿದ್ಧ ಎಂದು ಶಪಥ ಮಾಡಿರುವ ನಿರ್ದೇಶಕ ಮತ್ತು ನಿರ್ಮಾಪಕ ಮಿಲನಾ ಪ್ರಕಾಶ್ ಯಾನೆ ಪ್ರಕಾಶ್ ವೀರ್ ಸದ್ಯ ತಮ್ಮ ಚಿತ್ರದ ಪ್ರಚಾರ ಶುರು ಮಾಡಿದ್ದಾರೆ. ಒಂದಾದ ಮೇಲೊಂದು ಹಾಡು ಬಿಡುಗಡೆ ಮಾಡುತ್ತಿದ್ದಾರೆ.
ದರ್ಶನ್ ಮತ್ತೆ ಜೈಲುಪಾಲಾದ ಮರು ಕ್ಷಣದಿಂದಲೇ ಡೆವಿಲ್ ಪ್ರಚಾರಕ್ಕೆ ವಿಜಯಲಕ್ಷ್ಮಿ ಕೂಡ ಕೈ ಜೋಡಿಸಿದ್ದು, ಸದ್ದು ಗದ್ದಲ ಮಾಡದೇ ದರ್ಶನ್ ಅವರ ಅಭಿಮಾನಿಗಳನ್ನು ನಿರ್ದೇಶಕ ಪ್ರಕಾಶ್ ವೀರ್ ಮತ್ತು ತಂಡದ ಜೊತೆ ಭೇಟಿ ಮಾಡಿದ್ದಾರೆ. ಅಭಿಮಾನಿಗಳ ಸಮ್ಮುಖದಲ್ಲಿ ನವೆಂಬರ್ 16ರಂದು ಚಿತ್ರದ ಮೂರನೇ ಹಾಡು ''ಅಲೊಹೊಮೊರ'' ಬಿಡುಗಡೆ ಮಾಡಿದ್ದಾರೆ.
ಹಾಡು ಬಿಡುಗಡೆಯ ನಂತರ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿರುವ ವಿಜಯಲಕ್ಷ್ಮಿ, ''ಡೆವಿಲ್'' ಚಿತ್ರದಲ್ಲಿನ ಈ ಹಾಡು ನನಗೆ ವ್ಯೆಯಕ್ತಿಕವಾಗಿ ತುಂಬಾ ಇಷ್ಟವಾದ ಹಾಡು ಎಂದು ಹೇಳಿದ್ದಾರೆ. ಇದರ ಜೊತೆಯಲ್ಲಿ ತುಂಬಾ ಇಷ್ಟಪಟ್ಟು ಈ ಚಿತ್ರವನ್ನು ಮಾಡಿದ್ದಾರೆ, ನಿಮ್ಮೆಲ್ಲರ ಬೆಂಬಲ ಬೇಕು ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿರುವ ವಿಜಯಲಕ್ಷ್ಮಿ ೀ ಚಿತ್ರಕ್ಕೆ ನೀವೆಲ್ಲಾ ಸ್ವಲ್ಪ ಜಾಸ್ತಿ ಪ್ರೀತಿ ತೋರಿಸಬೇಕಂತೆ ಎಂದು ದರ್ಶನ್ ಹೇಳಿದ್ದ ಸಂದೇಶವನ್ನು ಕೂಡ ರವಾನೆ ಮಾಡಿದ್ದಾರೆ. ಈ ಮೂಲಕ ತಮ್ಮ ಅಸಂಖ್ಯಾತ ಅಗಣಿತ ಅಭಿಮಾನಿಗಳಿಗೆ ಜೈಲಿನಲ್ಲಿದ್ದುಕೊಂಡೆ ದರ್ಶನ್ ''ಡೆವಿಲ್'' ಚಿತ್ರವನ್ನು ತಪ್ಪದೇ ನೋಡುವಂತೆ ಕರೆ ನೀಡಿದ್ದಾರೆ.

ಇನ್ನು ಇದೇ ಸಮಯದಲ್ಲಿ ಚಿತ್ರದ ಕುರಿತು ಮಾತನಾಡಿರುವ ಚಿತ್ರದ ಕ್ಯಾಪ್ಟನ್ ಪ್ರಕಾಶ್ ವೀರ್, ''ಡೆವಿಲ್'' ಪಕ್ಕಾ ಮಾಸ್ ಸಿನಿಮಾ ಎಂದು ಹೇಳಿದ್ದಾರೆ. ನೆರೆದ ಅಭಿಮಾನಿಗಳಿಗಾಗಿ ದರ್ಶನ್ ಪರವಾಗಿ ಡೆವಿಲ್ ಚಿತ್ರದ ಖಡಕ್ ಡೈಲಾಗ್ ಕೂಡ ಹೊಡೆದಿದ್ದಾರೆ. ಪ್ರಕಾಶ್ ಬಾಯಿಂದ ಡೈಲಾಗ್ ಕೇಳಿ ದರ್ಶನ್ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ. ನಿಮಗೆಲ್ಲಾ ತೃಪ್ತಿ ನೀಡುವಂತಹ ಸಿನಿಮಾ ''ಡೆವಿಲ್'' ಎಂದು ದಿನಕರ ತೂಗುದೀಪ ಇದೇ ಸಮಯದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಹೇಳಿದ್ದಾರೆ.
ಇನ್ನುಳಿದಂತೆ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿರುವ ಮಾಡೆಲ್ ಹಾಗೂ ಉತ್ತಮ ಭರತನಾಟ್ಯ ಕಲಾವಿದೆಯಾಗಿ ಕೂಡ ಹೆಸರು ಮಾಡಿರುವ ಮಂಗಳೂರು ಚೆಲುವೆ ರಚನಾ ರೈ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ.. ಸುಧಾಕರ್ ಜೆ ರಾಜ್ ಛಾಯಾಗ್ರಹಣ ಡೆವಿಲ್ ಚಿತ್ರಕ್ಕೆ ಇದೆ. ಬಾಲಿವುಡ್ ನಟ ಮಹೇಶ್ ಮಂಜ್ರೇಕರ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಸದ್ಯ ಮೊನ್ನೆ ಬಿಡುಗಡೆಯಾದ ''ಅಲೊಹೊಮೊರ'' ಹಾಡು ಯೂಟ್ಯೂಬ್ನಲ್ಲಿ ಟ್ರೆಂಡಿಂಗ್ನಲ್ಲಿದೆ. ಚಿತ್ರದ ಮೇಲಿನ ನಿರೀಕ್ಷೆಗಳನ್ನು ಕೂಡ ಹೆಚ್ಚಿಸಿದೆ. ಚಿತ್ರ ಇದೇ ಡಿಸೆಂಬರ್ 12ರಂದು ತೆರೆಗೆ ಬರಲಿದ್ದು ''ಡೆವಿಲ್'' ಬಾಕ್ಸಾಫೀಸ್ನಲ್ಲಿ ಹೊಸ ಇತಿಹಾಸ ಬರೆಯುವುದು ಪಕ್ಕಾ ಎನ್ನುವ ಮಾತುಗಳು ಸದ್ಯ ನಾಗರಭಾವಿ ಸುತ್ತ ಮುತ್ತ ಕೇಳಿ ಬರುತ್ತಿವೆ.


Click it and Unblock the Notifications











