ಬೆಳ್ಳಿತೆರೆಯಲ್ಲಿ ಡೆವಿಲ್ ಧಗಧಗ ; ದೀಪಾ ಸನ್ನಿಧಿಯಂತೆ ಕಾಣೆಯಾಗದಿರಲಿ ರಚನಾ ರೈ
ವಿಧಿಲಿಖಿತನಾ ..? ದುರಾದೃಷ್ಟನಾ ..? ಕಾಕತಾಳೀಯನಾ .. ? ಗೊತ್ತಿಲ್ಲ. ಆದರೆ ಗಡಿಯಾರದ ಮುಳ್ಳು ದರ್ಶನ್ ಬದುಕಿನಲ್ಲಿ 14 ವರ್ಷದ ಹಿಂದೆ ಎಲ್ಲಿ ನಿಂತಿತ್ತೋ ಅಲ್ಲಿಯೇ ಬಂದು ನಿಂತಿದೆ. ಆದರೆ .. ಈ ಕಾಲಚಕ್ರದಲ್ಲಿ ಅವತ್ತು ದೀಪಾ ಸನ್ನಿಧಿ ಸಿಲುಕಿದ್ದರು. ಇವತ್ತು ರಚನಾ ರೈ ಸಿಲುಕಿದ್ದಾರೆ. ಹೌದು, ಎಲ್ಲರಿಗೆ ಗೊತ್ತಿರುವಂತೆ 14 ವರ್ಷಗಳ ಹಿಂದೆ ''ಸಾರಥಿ'' ತೆರೆಗೆ ಬಂದಿತ್ತು.
ಅವತ್ತು ಕೂಡ ದರ್ಶನ್ ಜೈಲಿನಲ್ಲಿದ್ದರು. ಈಗ ಡೆವಿಲ್ ಚಿತ್ರ ತೆರೆಗೆ ಬಂದಿದೆ. ಆದರೆ .. ಈ ಬಾರಿ ಕೂಡ ದರ್ಶನ್ ಜೈಲು ಪಾಲಾಗಿದ್ದಾರೆ. ಅಭಿಮಾನಿಗಳ ಅಭಿಮಾನದ ಜಾತ್ರೆಯನ್ನು ಹತ್ತಿರದಲ್ಲಿ ನಿಂತು ಕಣ್ತುಂಬಿಕೊಳ್ಳುವ ಅವಕಾಶದಿಂದ ಮತ್ತೊಮ್ಮೆ ವಂಚಿತರಾಗಿದ್ದಾರೆ. ಆದರೆ.. ದೀಪಾ ಸನ್ನಿಧಿ ಮತ್ತು ರಚನಾ ರೈ ಅವರ ದೌರ್ಭಾಗ್ಯದ ಕುರಿತು ಇದೇ ಸಮಯದಲ್ಲಿ ಚರ್ಚೆ ನಡೆಯುತ್ತಿದೆ.

ಯಾಕೆಂದರೆ.. ''ಸಾರಥಿ'' ದೀಪಾ ಸನ್ನಿಧಿಗೆ ಮೊದಲ ಸಿನಿಮಾ ಆದರೆ ರಚನಾ ರೈ ಅವರಿಗೆ ಕನ್ನಡದಲ್ಲಿ ''ಡೆವಿಲ್'' ಮೊದಲ ಸಿನಿಮಾ. ಸಾಮಾನ್ಯವಾಗಿ ಮೊದಲ ಚಿತ್ರ ಅಂದರೆ ಹಲವರಲ್ಲಿ ಸಂಭ್ರಮ.. ಸಡಗರ.. ಇರುತ್ತೆ.
ಆದರೆ.. ದೀಪಾ ಸನ್ನಿಧಿ ಮತ್ತು ರಚನಾ ರೈ ವಿಚಾರದಲ್ಲಿ ಇದಕ್ಕೆ ತದ್ವಿರುದ್ಧವಾದ ವಾತಾವರಣ ಇತ್ತು. ಮೊದಲ ಚಿತ್ರದಲ್ಲಿಯೇ ದರ್ಶನ್ ಅವರಂತಹ ಸೂಪರ್ ಸ್ಟಾರ್ ಜೊತೆ ತೆರೆ ಹಂಚಿಕೊಳ್ಳುವ ಸೌಭಾಗ್ಯ ಸಿಕ್ಕಿದೆ ಎನ್ನುವ ಖುಷಿ ಇಬ್ಬರಲ್ಲಿಯೂ ಇತ್ತಾದರೂ ಚಿತ್ರ ಬಿಡುಗಡೆಯ ಸಮಯದಲ್ಲಿ ದರ್ಶನ್ ಜೈಲು ಪಾಲಾದ ಹಿನ್ನೆಲೆ ದೀಪಾ ಸನ್ನಿಧಿ ಅವರಲ್ಲಿಯೂ ಆತಂಕ ಇತ್ತು. ರಚನಾ ರೈ ಅವರಲ್ಲಿಯೂ ಕೂಡ ಈ ದುಗುಡ ಮನೆ ಮಾಡಿತ್ತು.
ಇನ್ನೂ.. ಚಿತ್ರರಂಗ ಪುರುಷ ಪ್ರಧಾನವಾದದ್ದು. ಇಂತಹ ರಂಗದಲ್ಲಿ ನಾಯಕಿಯರು ಬಹುಕಾಲ ನೆಲೆಯೂರುವುದು.. ಹೆಸರು ಮಾಡುವುದು.. ಕಷ್ಟ ಎನ್ನುವ ಮಾತು ಇದೆ. ಹೀಗಿರುವಾಗ ದೀಪಾ ಮತ್ತು ರಚನಾ ಅವರಿಗೆ ''ಸಾರಥಿ'' ಮತ್ತು ''ಡೆವಿಲ್'' ಮೊದಲ ಪ್ರಯತ್ನ.. ಮೊದಲ ಕನಸು.. ಮೊದಲ ಕನವರಿಕೆ.
ಇನ್ನೇನೂ ಸಕಲ ಖುಷಿ ಕಾಲಡಿ ಬಂದ ಬಿತ್ತು ಎನ್ನುವಷ್ಟರಲ್ಲಿ ಇಬ್ಬರಿಗೆ ಬರಸಿಡಿಸಲು ಬಡಿದಿತ್ತು. ಇನ್ನೂ ದರ್ಶನ್ ಹೊರಗಡೆ ಇದ್ದಿದ್ದರೆ, ಚಿತ್ರದ ಪ್ರಚಾರದ ಬೇರೆ ರೀತಿಯಲ್ಲಿ ಇರುತ್ತಿತ್ತು. ಆದರೆ..ದರ್ಶನ್ ಅನುಪಸ್ಥಿತಿಯಲ್ಲಿ ಪ್ರಚಾರದ ಹೊಣೆಯನ್ನು ಕೂಡ ವಹಿಸಬೇಕಾದ ಜವಾಬ್ಧಾರಿ ಇವರ ಮೇಲೆ ಇತ್ತು. ಇನ್ನು ಎಲ್ಲರಿಗೆ ಗೊತ್ತಿರುವಂತೆ ಮಾಧ್ಯಮದವರ ಜೊತೆ ದರ್ಶನ್ ಸಂಬಂಧ ಅಷ್ಟಕಷ್ಟೇ.

ಇನ್ನು ಪ್ರಚಾರದ ವಿಚಾರಕ್ಕೆ ಬಂದರೆ ಈ ಬಾರಿ ರಚನಾ ರೈ ಅವರಿಗೆ ಕೊನೆ ಪಕ್ಷ ವಿಜಯಲಕ್ಷ್ಮಿ ಆದರೂ ಜೊತೆಯಾದರು. ಆದರೆ.. ದೀಪಾ ಸನ್ನಿಧಿ ವಿಚಾರದಲ್ಲಿ ಖುದ್ದು ವಿಜಯಲಕ್ಷ್ಮಿ ಅವರೇ ಎದುರಾಳಿಯಾಗಿದ್ದರು. ವಿಜಯಲಕ್ಷ್ಮಿ ಸಹಕಾರ ಇಲ್ಲದೆಯೇ.. ದರ್ಶನ್ ಅನುಪಸ್ಥಿತಿಯಲ್ಲಿಯೇ.. ದೀಪಾ ಸನ್ನಿಧಿ ''ಸಾರಥಿ'' ಚಿತ್ರದ ಪ್ರಚಾರ ಮಾಡಿದ್ದರು. ಇವರ ಪ್ರಯತ್ನಕ್ಕೆ ಫಲ ಕೂಡ ಸಿಕ್ಕಿತ್ತು. ಅದೇ ಫಲ ಈಗ ರಚನಾ ರೈ ಅವರಿಗೆ ಸಿಕ್ಕಿದೆ. ವ್ಯತ್ಯಾಸ ಏನೆಂದರೆ ರಚನಾ ರೈ ಅವರ ಈ ಗೆಲುವಿನಲ್ಲಿ ವಿಜಯಲಕ್ಷ್ಮಿ ಅವರ ಸಹಯೋಗ ಮತ್ತು ಪಾತ್ರ ಕೂಡ ಇದೆ.
ಅವತ್ತು ದರ್ಶನ್ ಅನುಪಸ್ಥಿಯಲ್ಲಿ ದೀಪಾ ಸನ್ನಿಧಿ ಅವರನ್ನು ಬಾಯ್ತುಂಬ ಹೊಗಳಿದಂತೆಯೇ ಇವತ್ತು ಹಲವರು ರಚನಾ ರೈ ಅವರನ್ನು ಕೊಂಡಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ರಚನಾ ಕನ್ನಡ ಚಿತ್ರರಂಗದ ಪ್ರಮುಖ ಆಸ್ತಿಯಾಗುತ್ತಾರೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಆದರೆ.. ಹೊಗಳಿಕೆಯ ನಡುವೆ ದೀಪಾ ಸನ್ನಿಧಿ ಆ ನಂತರ ಎಡವಿದರು. ಇವತ್ತು ದೀಪಾ ಸನ್ನಿಧಿ ಎಲ್ಲಿದ್ದಾರೆ..? ಏನ್ಮಾಡ್ತಿದ್ದಾರೆ..? ಎನ್ನುವುದು ಯಾರೆಂದರೆ ಯಾರಿಗೂ ಗೊತ್ತಿಲ್ಲ. ಹೀಗಾಗಿ ದೀಪಾ ಸನ್ನಿಧಿ ಮಾಡಿದ ತಪ್ಪನ್ನು ರಚನಾ ರೈ ಮಾಡದಿರಲಿ ಎಂಬ ಮಾತನ್ನು ಹಲವರು ಆಡುತ್ತಿದ್ದಾರೆ. ದೀಪಾ ಸನ್ನಿಧಿ ತಲುಪಲು ಸಾಧ್ಯವಾಗದ ಸ್ಥಾನವನ್ನು ರಚನಾ ರೈ ತಲುಪಲಿ ಎಂದು ಹಾರೈಸುತ್ತಿದ್ದಾರೆ. ''ಡೆವಿಲ್'' ರಚನಾ ರೈ ಅವರಿಗೆ ಬೇಕಿದ್ದ ಆರಂಭ ನೀಡಿದೆ. ಈ ಆರಂಭ ಮುಂಬರುವ ಹೊಸ ಅಧ್ಯಾಯದ ಮುನ್ನುಡಿಯಾಗುತ್ತಾ..? ಅಥವಾ ರಚನಾ ರೈ ಅವರಿಗೆ ದೀಪಾ ಸನ್ನಿಧಿ ಅವರಂತೆಯೇ ಚಿತ್ರರಂಗದಲ್ಲಿ ಹಿನ್ನೆಡೆಯಾಗುತ್ತಾ..? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











