ವಿಐಪಿ ಸೆಲ್ನಲ್ಲಿದ್ದಾರೆ, ಜೈಲಿನಲ್ಲಿ ದರ್ಶನ್- ಪ್ರಜ್ವಲ್ ರೇವಣ್ಣ ಭೇಟಿ ಸಾಧ್ಯವಿಲ್ಲ,- ದರ್ಶನ್ ಜೈಲ್ಮೇಟ್
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿ ತಿಂಗಳು ಕಳೆದಿದೆ. ನಟ ದರ್ಶನ್ ಜೈಲಿನಲ್ಲಿ ಹೇಗಿದ್ದಾರೆ ಎನ್ನುವ ಬಗ್ಗೆ ದಿನಕ್ಕೊಂದು ಸುದ್ದಿ ಹರಿದಾಡುತ್ತಿದೆ. ಇನ್ನು ಕುಟುಂಬಸ್ಥರು ಸೇರಿದಂತೆ ಸಾಕಷ್ಟು ಜನ ಆಪ್ತರು ಆಗಾಗ್ಗೆ ಹೋಗಿ ದರ್ಶನ್ ಭೇಟಿ ಮಾಡಿ ಬರುತ್ತಿದ್ದಾರೆ.
ನಟ ದರ್ಶನ್ ಜೈಲಿನಲ್ಲಿ ಹೇಗಿದ್ದಾರೆ? ಅವರು ಯಾವ ಸೆಲ್ನಲ್ಲಿ ಇದ್ದಾರೆ? ಅವರಿಗೆ ಏನೆಲ್ಲಾ ಸೌಕರ್ಯಗಳು ಇವೆ ಎನ್ನುವ ಬಗ್ಗೆ ತುವನೂರು ಸಿದ್ದಾರೂಢ ಎಂಬುವವರು ಮಾತನಾಡಿದ್ದಾರೆ. ಪ್ರಕರಣವೊಂದರಲ್ಲಿ ಬರೋಬ್ಬರಿ 22 ವರ್ಷಗಳ ಕಾಲ ಜೈಲಿನಲ್ಲಿದ್ದ ಇವರು ಇತ್ತೀಚೆಗೆ ಸನ್ನಡತೆ ಆಧಾರದಲ್ಲಿ ಬಿಡುಗಡೆ ಆಗಿ ಹೊರ ಬಂದಿದ್ದಾರೆ. ದರ್ಶನ್ ಅಭಿಮಾನಿ ಕೂಡ ಆಗಿರುವ ತುರುವನೂರು ಸಿದ್ದಾರೂಢಗೆ ನೆಚ್ಚಿನ ನಟನನ್ನು ಜೈಲಿನಲ್ಲಿ ಭೇಟಿ ಮಾಡುವ ಅವಕಾಶ ಸಿಕ್ಕಿತ್ತಂತೆ. ಆ ಬಗ್ಗೆ ಥರ್ಡ್ ಐ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ತುರುವನೂರು ಸಿದ್ದಾರೂಢ ಜೈಲಿನಿಂದ ಬಿಡುಗಡೆ ಆಗುವ ಒಂದೆರಡು ದಿನಗಳ ಹಿಂದೆ ನಟ ದರ್ಶನ್ ಇದ್ದ ವಿಐಪಿ ಸೆಲ್ಗೆ ಭೇಟಿ ನೀಡಿದ್ದರಂತೆ. ಪೊಲೀಸ್ ಅಧಿಕಾರಿಗಳ ಬಳಿ ತಾವು ದರ್ಶನ್ ಅಭಿಮಾನಿ, ಭೇಟಿ ಮಾಡಬೇಕು ಎಂದು ಮನವಿ ಮಾಡಿ ಈ ಅವಕಾಶ ಪಡೆದಿದ್ದಾಗಿ ವಿವರಿಸಿದ್ದಾರೆ.
"ದರ್ಶನ್ ಸರ್ ವಿಐಪಿ ಸೆಲ್ನಲ್ಲಿ ಇದ್ದಾರೆ. ಇತರೆ ಕೈದಿಗಳಿಗಿಂತ ಅಲ್ಲಿ ಕೊಂಚ ಸೌಕರ್ಯ ಇರುತ್ತದೆ. ಹಾಸಿಗೆ, ಎರಡು ಚೇರ್, 20 ಲೀಟರ್ ಕುಡಿಯುವ ನೀರಿನ ಕ್ಯಾನ್ ಇರುತ್ತದೆ. ಸೊಳ್ಳೆ ಪರದೆ ಮತ್ತು ಟಿವಿ ಇರುತ್ತದೆ. ಪೇಪರ್, ಪುಸ್ತಕ ಓದಲು ಸಿಗುತ್ತದೆ. ದರ್ಶನ್ ಅವರು ಬೇರೆ ಕೈದಿಗಳನ್ನು ಭೇಟಿ ಮಾಡುವ ಅವಕಾಶ ಇರುವುದಿಲ್ಲ" ಎಂದು ಹೇಳಿದ್ದಾರೆ.
"ಪ್ರಜ್ವಲ್ ರೇವಣ್ಣ ಹಾಗೂ ದರ್ಶನ್ ಸರ್ ಸೆಲ್ ಬಹಳ ದೂರ ಇದೆ. ಒಬ್ಬರನ್ನೊಬ್ಬರು ಭೇಟಿ ಮಾಡಲು ಸಾಧ್ಯವಿಲ್ಲ. ವಿಐಪಿ ಸೆಲ್ಗೆ ಊಟ ತಂದು ಕೊಡುತ್ತಾರೆ. ದರ್ಶನ್ ಸರ್ ಜೈಲು ಊಟ ಮಾಡುತ್ತಿದ್ದಾರೆ. ನಾನು ನೋಡಿದಾಗ ವಿಗ್ ಇತ್ತು. ಈಗ ಗೊತ್ತಿಲ್ಲ. ನಾನು ಅಧಿಕಾರಿಗಳನ್ನು ಮನವಿ ಮಾಡಿದ್ದಕ್ಕೆ ಅವಕಾಶ ಕೊಟ್ಟರು. ಬೇರೆ ಕೈದಿಗಳಿಗೆ ಅವಕಾಶ ಸಿಗುವುದಿಲ್ಲ"

"ಮೊದಲು ಭೇಟಿಗೆ ಹೋದಾಗ ಕೈ ಕುಲುಕಿ ತಬ್ಬಿಕೊಂಡು ಮಾತನಾಡಿಸಿದರು. ಬಿಸ್ಕೆಟ್ ಕೊಟ್ಟರು. ತಿಂದ ಬಳಿಕ ಬಹಳ ಆತ್ಮೀಯವಾಗಿ ಮಾತನಾಡಿಸಿದರು. ನನ್ನ ಬಗ್ಗೆ ವಿಚಾರಿಸಿದರು. ಏನ್ ಕೇಸ್? ಎಲ್ಲಿಂದ ಬಂದಿದ್ದೀಯಾ ಎಂದರು. ನಾನು ನನ್ನದು ಏನಿದೆ ಅಣ್ಣ, ನಿಮ್ಮ ಬಗ್ಗೆ ಹೇಳಿ ಅಂದೆ. ನನ್ನದೇನಿದೆ? ಎಲ್ಲಾ ಟಿವಿಯಲ್ಲಿ ಬರ್ತಿದೆ ಅಲ್ವಾ? ಅಂದ್ರು. 10 ನಿಮಿಷ ಧ್ಯಾನ ಮಾಡೋಣ, ಈಗ ಬಹಳ ಮುಖ್ಯ ಎಂದೆ. ನನ್ನ ಮಾತಿಗೆ ಗೌರವ ಕೊಟ್ಟು ಧ್ಯಾನ ಮಾಡಿದರು"
"ದರ್ಶನ್ ಅವರು ಕೂಡ ಒಳಗಡೆ ಯಾರಾದರೂ ಮಾತನಾಡಿಸಲಿ ಎಂದು ಕಾಯುತ್ತಿರುತ್ತಾರೆ ಅಂತ ನನಗೆ ಅನ್ನಿಸುತ್ತದೆ. ಕಾರಣ ಒಬ್ಬರೇ ಇದ್ದು ಇದ್ದು ಹಾಗೆ ಅನ್ನಿಸಬಹುದು. ನಾನು ಹೋದಾಗ ಬಹಳ ಆತ್ಮೀಯವಾಗಿ ಮಾತನಾಡಿದರು. ದರ್ಶನ್ ಅವರು ಬಹಳ ಡಲ್ ಆಗಿದ್ದಾರೆ. ಮೊದಲಿನಂತೆ ಇಲ್ಲ. ಬಹುಶಃ ತಪ್ಪು ಮಾಡಿದ್ದೀನಿ ಎನ್ನುವ ಪಶ್ಚಾತಾಪ ಇರಬಹುದು" ಎಂದು ತುರುವನೂರು ಸಿದ್ದಾರೂಢ ವಿವರಿಸಿದ್ದಾರೆ.


Click it and Unblock the Notifications











